- ಅಮೆರಿಕ, ಸೌದಿ ಅರೆಬಿಯ, ಅರಬ್ ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ ಅಜಿತ್ ದೋವಲ್ ಚರ್ಚೆ
- ಅಮೆರಿಕದಿಂದ ಪಶ್ಚಿಮ ಏಷ್ಯಾ ಮೂಲಕ ದಕ್ಷಿಣ ಏಷ್ಯಾಗೆ ಜಲ ರೈಲು ಮಾರ್ಗ ಸಂಪರ್ಕ ನಿರ್ಮಾಣ
ಸೌದಿ ಅರೆಬಿಯ ಪ್ರವಾಸದಲ್ಲಿರುವ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಆಗಿರುವ ಅಜಿತ್ ದೋವಲ್ ಅವರು ಪ್ರಮುಖ ದೇಶಗಳ ಭದ್ರತಾ ಸಲಹೆಗಾರರೊಂದಿಗೆ ಚರ್ಚಿಸಿದ್ದಾರೆ ಎಂದು ವರದಿಯಾಗಿದೆ.
ಈ ವೇಳೆ ದೋವಲ್ ಅವರು ಭಾನುವಾರ (ಮೇ 7) ಅಮೆರಿಕ, ಸೌದಿ ಅರೆಬಿಯ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ದೇಶದ ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದರು. ಅಜಿತ್ ದೋವಲ್ ಅವರನ್ನು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜ್ಯಾಕ್ ಸುಲ್ಲಿವನ್ ಅವರು ಈ ತಿಂಗಳ ಅಂತ್ಯದಲ್ಲಿ ಆಸ್ಟ್ರೇಲಿಯ ಕ್ವಾಡ್ ಶೃಂಗಸಭೆಯಲ್ಲಿ ಮತ್ತೊಮ್ಮೆ ಭೇಟಿಯಾಗಲಿದ್ದಾರೆ.
ಜನವರಿಯಲ್ಲಿ ಮಹತ್ವಾಕಾಂಕ್ಷೆಯ ಭಾರತ ಅಮೆರಿಕ ಐಸಿಇಟಿ (ಇನಿಶಿಯೇಟಿವ್ ಆನ್ ಕ್ರಿಟಿಕಲ್ ಅಂಡ್ ಎಮರ್ಜಿಂಗ್ ಟೆಕ್ನಾಲಜಿ) ಸಂವಾದವನ್ನು ಪ್ರಾರಂಭಿಸಿದ ನಂತರ ದೋವಲ್ ಮತ್ತು ಸುಲ್ಲಿವಾನ್ ನಡುವಿನ ಮೊದಲ ಸಭೆ ಇದಾಗಿದೆ.
ಅಜಿತ್ ದೋವಲ್ ಅವರು ಜ್ಯಾಕ್ ಸುಲ್ಲಿವಾನ್, ಸೌದಿ ಪ್ರಧಾನಿ ರಾಜಕುವರ ಮೊಹಮ್ಮದ್ ಬಿನ್ ಸಲ್ಮಾನ್, ಯುಎಇ ರಾಷ್ಟ್ರೀಯ ಭದ್ರತಾ ಸಲಹೆಗಾರ ಶೇಖ್ ತಹ್ನೂನ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭಾನುವಾರ ಸೌದಿ ಅರೆಬಿಯದಲ್ಲಿ ಭೇಟಿಯಾದರು.
ಈ ವೇಳೆ ಪಶ್ಚಿಮ ಏಷ್ಯಾ ರಾಷ್ಟ್ರಗಳ ಮತ್ತು ದಕ್ಷಿಣ ಏಷ್ಯಾ ರಾಷ್ಟ್ರಗಳ ನಡುವೆ ಸಮುದ್ರ ಮಾರ್ಗಗಳ ಮೂಲಕ ರೈಲು ಸಂಪರ್ಕ ಕಲ್ಪಿಸುವ ಅಮೆರಿಕ ಪ್ರಸ್ತಾಪದ ಕುರಿತು ಚರ್ಚಿಸಲಾಯಿತು ಎಂದು ಶ್ವೇತಭವನ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಅಜಿತ್ ದೋವಲ್ ಅವರೊಂದಿಗೆ ಪ್ರಾದೇಶಿಕ ವಿಷಯಗಳ ಕುರಿತು ಚರ್ಚಿಸಲು ಶೇಖ್ ತಹ್ನೂನ್ ಮತ್ತು ಸುಲ್ಲಿವಾನ್ ಪ್ರತ್ಯೇಕ ದ್ವಿಪಕ್ಷೀಯ ಸಭೆಗಳನ್ನು ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸಕ್ರಿಯವಾಗಿರುವ ಚೀನಾ ನೌಕಾಪಡೆ ಮೇಲೆ ನಿಗಾ
ಅಜಿತ್ ದೋವಲ್ ಹಾಗೂ ಇತರ ಮೂವರು ನಿಯಮಿತ ಸಮಾಲೋಚನೆಗಳನ್ನು ನಡೆಸಲು ಸಮ್ಮತಿಸಿದ್ದಾರೆ.
ಉಭಯ ದೇಶಗಳು ಪರಸ್ಪರ ಸಹಾಯ ನೀಡಲು ಬದ್ಧರಾಗಿರಬೇಕು. ಯಾವುದೇ ಸಮಸ್ಯೆಗೆ ಸ್ಪಂದಿಸಬೇಕು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ವರದಿಯಾಗಿದೆ.





