ಬಾಂಗ್ಲಾದೇಶದಲ್ಲಿ ಯುವ ನಾಯಕನೊಬ್ಬನ ಹತ್ಯೆಯಾದ ಬಳಿಕ ಹಿಂಸಾಚಾರ ಭುಗಿಲೆದ್ದಿದೆ. ಮಾತ್ರವಲ್ಲದೆ, ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಆಶ್ರಯ ನೀಡಿರುವ ಭಾರತದ ವಿರೋಧಿ ದ್ವೇಷವೂ ಹೆಚ್ಚಾಗಿದೆ. ಹಿಂಸಾಚಾರ ನಡೆಯುತ್ತಿರುವ ನಡುವೆಯೇ, ಧರ್ಮನಿಂದನೆ ಮಾಡಿದ್ದಾರೆಂಬ ಆರೋಪದ ಮೇಲೆ ದೀಪು ಚಂದ್ರದಾಸ್ ಎಂಬ ಯುವಕನನ್ನು ಪ್ರತಿಭಟನಾಕಾರರು ಕ್ರೂರವಾಗಿ ಹತ್ಯೆಗೈದಿದ್ದಾರೆ.
ಬಾಂಗ್ಲಾದ ಮೈಮೆನ್ಸಿಂಗ್ ಜಿಲ್ಲೆಯ ಭಾಲುಕಾದಲ್ಲಿ ದೀಪು ಚಂದ್ರ ದಾಸ್ ಅವರನ್ನು ಹತ್ಯೆಗೈಯ್ಯಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ದೀಪು ಚಂದ್ರದಾಸ್ ಅವರು ಭಾಲುಕಾಪುರದ ಗಾರ್ಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಬಾಡಿಗೆ ಮನೆಯಲ್ಲಿ ವಾಸಿಸವಾಗಿದ್ದರು. ಅವರು ಪ್ರವಾದಿ ಮುಹಮ್ಮದ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ, ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ.
ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಸಹ ಕಾರ್ಮಿಕರು ದೀಪು ವಿರುದ್ಧ ನಿಂದನೆ ಆರೋಪ ಮಾಡಿದ್ದರು. ಈ ಆರೋಪಗಳಿವೆ ಯಾವುದೇ ಪುರಾವೆಗಳು ಇರಲಿಲ್ಲ. ಆರೋಪದ ಕುರಿತು ತನಿಖೆಯನ್ನೂ ನಡೆಸಲಾಗಿಲ್ಲ. ಆದರೆ, ಗುಂಪೊಂದು ಅವರನ್ನು ಸುತ್ತುವರೆದು ದೊಣ್ಣೆಗಳಿಂದ ಅಮಾನುಷವಾಗಿ ಥಳಿಸಿ ಕೊಂದಿದೆ. ಮಾತ್ರವಲ್ಲದೆ, ಅವರ ಮೃತದೇಹವನ್ನು ಮರಕ್ಕೆ ಕಟ್ಟಿ, ಬೆಂಕಿ ಹಚ್ಚಿದೆ ಎಂದು ಆರೋಪಿಸಲಾಗಿದೆ.
ಈ ಲೇಖನ ಓದಿದ್ದೀರಾ?: ಸಂಸತ್ತಿನಲ್ಲಿ ಸುಳ್ಳು ಹೇಳಿದ ಶಾ! ಸ್ಥಾನದ ಘನತೆ ಕಳೆದ ಗೃಹಸಚಿವ
ಘಟನೆಯನ್ನು ಪಶ್ಚಿಮ ಬಂಗಾಳದ ಬಿಜೆಪಿ ಖಂಡಿಸಿದೆ. “ಬಾಂಗ್ಲಾದೇಶದಲ್ಲಿ ಧರ್ಮನಿಂದೆಯ ಆರೋಪದ ಮೇಲೆ ಹಿಂದು ಯುವಕ ದೀಪು ಚಂದ್ರ ದಾಸ್ನನ್ನು ಇಸ್ಲಾಮಿಸ್ಟ್ಗಳು ಕ್ರೂರವಾಗಿ ಹೊಡೆದು ಕೊಂದಿದ್ದಾರೆ. ಇಸ್ಲಾಮಿಕ್ ಉಗ್ರವಾದವನ್ನು ನಿಯಂತ್ರಿಸಲಾಗದ ಪರಿಣಾಮ ಇಂತಹ ಭಯಾನಕ ಘಟನೆಗಳು ನಡೆಯುತ್ತಿವೆ” ಎಂದು ಹೇಳಿದ್ದಾರೆ.
2025ರ ಡಿಸೆಂಬರ್ 12ರಂದು ಬಾಂಗ್ಲಾದೇಶದ ಯುವ ನಾಯಕ ಮತ್ತು ‘ಇಂಕಿಲಾಬ್ ಮಂಚ’ ಸಂಘಟನೆಯ ಸಂಚಾಲಕರಾಗಿದ್ದ ಶರೀಫ್ ಓಸ್ಮಾನ್ ಹಾದಿ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಆರಂಭದಲ್ಲಿ ಢಾಕಾದಲ್ಲಿ ಚಿಕಿತ್ಸೆ ಪಡೆಯುತ್ತದ್ದ ಶರೀಫ್ ಆರೋಗ್ಯ ಸ್ಥಿತಿ ಹದಗೆಟ್ಟ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಹಾದಿ ಗುರುವಾರ(ಡಿ.18) ಸಾವನ್ನಪ್ಪಿದ್ದಾರೆ. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಬಾಂಗ್ಲಾದೇಶದಾದ್ಯಂತ ತೀವ್ರ ಹಿಂಸಾಚಾರ, ಪ್ರತಿಭಟನೆಗಳು ಭುಗಿಲೆದ್ದಿದೆ.




