ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಸದಸ್ಯರು ಜುಲೈ 14 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶದಿಂದ ವಾಪಸ್ಸಾಗಲಿದ್ದಾರೆ ಎಂದು ನಾಸಾ ಘೋಷಿಸಿದೆ.
ಜೂನ್ 25 ರಂದು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಆಕ್ಸಿಯಮ್-4 ಮಿಷನ್ ಉಡಾವಣೆಗೊಂಡಿತು. 28 ಗಂಟೆಗಳ ಪ್ರಯಾಣದ ನಂತರ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಮರುದಿನ ಬಾಹ್ಯಾಕಾಶ ನಿಲ್ದಾಣ ತಲುಪಿತ್ತು.
ಶುಭಾಂಶು ಶುಕ್ಲಾ, ಪೆಗ್ಗಿ ವಿಟ್ಸನ್, ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಹಾಗೂ ಟಿಬೋರ್ ಕಾಪು ಅವರನ್ನೊಳಗೊಂಡ ಗಗನಯಾತ್ರಿಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) 230 ಸೂರ್ಯೋದಯಗಳನ್ನು ಕಂಡಿದ್ದಾರೆ. ಕಕ್ಷೆಯ ಪ್ರಯೋಗಾಲಯದಲ್ಲಿ ಎರಡು ವಾರಗಳ ಕೊನೆಯಲ್ಲಿ ಬಾಹ್ಯಾಕಾಶದಲ್ಲಿ ಸುಮಾರು 100 ಲಕ್ಷ ಕಿ.ಮೀ. ಪ್ರಯಾಣಿಸಿದ್ದಾರೆ.
ಭೂಮಿಯಿಂದ ಸುಮಾರು 250 ಮೈಲುಗಳಷ್ಟು ಎತ್ತರದಲ್ಲಿರುವ ಗಗನಯಾತ್ರಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಚಿತ್ರಗಳು ಮತ್ತು ವೀಡಿಯೊಗಳನ್ನು ಸೆರೆಹಿಡಿಯುವುದು, ಭೂಮಿಯ ನೋಟವನ್ನು ವೀಕ್ಷಿಸುವುದು ಮತ್ತು ಪ್ರೀತಿಪಾತ್ರರನ್ನು ಸಂಪರ್ಕಿಸಿ ಸಮಯ ಕಳೆಯುವ ಕೆಲಸ ಮಾಡಿದ್ದಾರೆಂದು ಆಕ್ಸಿಯಮ್ ಸ್ಪೇಸ್ ಹೇಳಿಕೆ ತಿಳಿಸಿದೆ.
ವಿಶೇಷ ಗಾಜಿನ ತಟ್ಟೆಯಲ್ಲಿ ಚಿಗುರೊಡೆದ ಮೆಂತೆ ಮತ್ತು ಹೆಸರು ಬೀಜಗಳು ಹಾಗೂ ಅವುಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿನ ಶೀತಲಗ್ರಹದಲ್ಲಿ ಸಂಗ್ರಹಿಸಿಡುವ ಚಿತ್ರ ತೆಗೆದು ಸಂಭ್ರಮಿಸಿದ್ದಾರೆ. ಗುರುತ್ವರಹಿತ ಪ್ರದೇಶದಲ್ಲಿ ಕಾಳುಗಳ ಮೊಳಕೆಯೊಡೆಯುವಿಕೆ ಮತ್ತು ಗಿಡದ ಬೆಳವಣಿಗೆ ಮೇಲೆ ಅದು ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಪ್ರಯೋಗ ಮಾಡಿದ್ದಾರೆ.
ಗ್ರೂಪ್ ಕ್ಯಾಪ್ಟನ್ ಶುಕ್ಲಾ ಅವರು ಭಾರತಕ್ಕೆ ಸಂಬಂಧಿಸಿದ ಏಳು ಪ್ರಯೋಗಗಳನ್ನು ಮಾಡಿದರು. ಆಕ್ಸಿಯಂ-4 ಅಥವಾ ಮಿಷನ್ ‘ಆಕಾಶ್ ಗಂಗಾ’, ಭಾರತದ ಗಗನಯಾನ, ಮಾನವ ಬಾಹ್ಯಾಕಾಶ ಹಾರಾಟದ ಮೊದಲ ದೃಢವಾದ ಹೆಜ್ಜೆಯಾಗಿದೆ. ಈ ಮಿಷನ್ ಭಾರತದ ಭವಿಷ್ಯದ ಬಾಹ್ಯಾಕಾಶ ಯೋಜನೆಗಳಿಗೆ ದಾರಿದೀಪವಾಗಿದೆ.
ಶುಭಾಂಶು ಶುಕ್ಲಾ ಅವರು ಕಳೆದ ಎರಡು ವಾರಗಳಲ್ಲಿ 230 ಸೂರ್ಯೋದಯಗಳಿಗೆ ಸಾಕ್ಷಿಯಾಗಿದ್ದಾರೆ. ಜತೆಗೆ, ಬಾಹ್ಯಾಕಾಶದಲ್ಲಿ ಇದುವರೆಗೂ 100 ಲಕ್ಷ ಕಿ.ಮೀ ಅಂತರ ಕ್ರಮಿಸಿದ್ದಾರೆ ಎಂದು ಆ್ಯಕ್ಸಿಯಂ ಸ್ಪೇಸ್ ಪ್ರಕಟಣೆಯಲ್ಲಿ ತಿಳಿಸಿದೆ.





