ನೇಪಾಳದಲ್ಲಿ ಇತ್ತೀಚಿನ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಪ್ರಕರಣವಾಗಿದೆ. ಮಹತ್ವದ ಬೆಳವಣಿಗೆ ನಡೆದಿದೆ. ನೇಪಾಳ ರಾಜಧಾನಿ ಕಠ್ಮಂಡುವಿನ ಪಾಲಿಕೆಯ ಮಾಜಿ ಮೇಯರ್ ಬಲೇಂದ್ರ ಶಾ ಅವರ ಆರ್ಎಸ್ಪಿ ಪಕ್ಷ ಭಾರಿ ಮುನ್ನಡೆ ಸಾಧಿಸಿದೆ. ಇದೀಗ, ಶಾ ಅವರು ನೇಪಾಳದ ಮುಂದಿನ ಪ್ರಧಾನಿಯಾಗಲಿದ್ದಾರೆ.
ನೇಪಾಳದಲ್ಲಿ ಕಳೆದ 18 ವರ್ಷಗಳಿಂದ ರಾಜಕೀಯ ಅಸ್ಥಿರತೆ ಎದ್ದು ಕಾಣುತ್ತಿತ್ತು. ಬೇಸತ್ತ ಯುವಜನರು ‘ಝನ್-ಜೀ’ ಪ್ರತಿಭಟನೆ ನಡೆಸಿ ಹಿಂದಿನ ಪ್ರಧಾನಿ ಕೆ.ಪಿ ಶರ್ಮಾ ಓಲಿ ಅವರ ಸರ್ಕಾರವನ್ನು ಉರುಳಿಸಿದ್ದರು. ಆನಂತರ ನಡೆದ ಚುನಾವಣೆಯಲ್ಲಿ ಮತದಾರರು ಮತ್ತು ಜನಸಾಮಾನ್ಯರು ಸ್ಥಾಪಿತ ಪಕ್ಷಗಳನ್ನು ತಿರಸ್ಕರಿಸಿ, 35 ವರ್ಷದ ಬಲೇಂದ್ರ ಶಾ ಅವರನ್ನು ಬೆಂಬಲಿಸಿದ್ದಾರೆ.
ನೇಪಾಳದ ಒಟ್ಟು 165 ನೇರ ಚುನಾವಣಾ ಕ್ಷೇತ್ರಗಳ ಪೈಕಿ ಆರ್ಎಸ್ಪಿ 116 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಬಲೇಂದ್ರ ಶಾ ಅವರು ಝಾಪಾ-5 ಕ್ಷೇತ್ರದಲ್ಲಿ ನಾಲ್ಕು ಬಾರಿ ಪ್ರಧಾನಿಯಾಗಿದ್ದ ಸಿಪಿಎನ್-ಯುಎಂಎಲ್ ಅಧ್ಯಕ್ಷ ಕೆ.ಪಿ. ಶರ್ಮಾ ಓಲಿ ಅವರ ವಿರುದ್ಧ ಗೆದ್ದಿದ್ದಾರೆ.
ಬಲೇಂದ್ರ ಶಾ ಅವರು ಕರ್ನಾಟಕದೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬುದು ಗಮನಾರ್ಹ. ಅವರು ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಿವಿಲ್ ಮತ್ತು ಸ್ಟ್ರಕ್ಚರಲ್ ಎಂಜಿನಿಯರಿಂಗ್ ಅಧ್ಯಯನ ಮಾಡಿ, ಅಲ್ಲಿ ಸ್ಟ್ರಕ್ಚರಲ್ ಎಂಜಿನಿಯರಿಂಗ್ನಲ್ಲಿ ಎಂಟೆಕ್ ಪದವಿ ಪಡೆದರು. 2016 ಮತ್ತು 2018 ರ ನಡುವೆ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದರು.




