ಬಾಂಗ್ಲಾದೇಶದಲ್ಲಿ ಹಿಂಸಾಚಾರ ಹೆಚ್ಚುತ್ತಿರುವ ನಡುವೆ, ಶನಿವಾರ ಲಕ್ಷ್ಮಿಪುರ ಸದರ್ ಉಪಜಿಲ್ಲೆಯಲ್ಲಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್ಪಿ) ನಾಯಕನ ಮನೆಗೆ ಹೊರಗಿನಿಂದ ಬೀಗ ಹಾಕಿ ಬೆಂಕಿ ಹಚ್ಚಿದ್ದು ಏಳು ವರ್ಷದ ಹೆಣ್ಣು ಮಗು ಸಾವನ್ನಪ್ಪಿದ್ದು, ಮನೆಯಲ್ಲಿದ್ದ ಇತರ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಭಬಾನಿಗಂಜ್ನ ಉದ್ಯಮಿ ಮತ್ತು ಬಿಎನ್ಪಿ ಸಂಘಟನಾ ಕಾರ್ಯದರ್ಶಿ ಬೆಲಾಲ್ ಹೊಸೈನ್ ಅವರ ನಿವಾಸದಲ್ಲಿ ಶನಿವಾರ ಮುಂಜಾನೆ ದಾಳಿ ನಡೆದಿದೆ. ಅವರ ಮಗಳು ಆಯೇಷಾ ಅಕ್ತರ್(7) ಮೃತಪಟ್ಟಿರುವುದಾಗಿ ಪೊಲೀಸರು ಧೃಡಪಡಿಸಿದ್ದಾರೆ.
ಬೆಲಾಲ್ ಅವರ ಉಳಿದ ಇಬ್ಬರು ಮಕ್ಕಳಾದ ಸಲ್ಮಾ ಅಕ್ತರ್ ಮತ್ತು ಸಮಿಯಾ ಅಕ್ತರ್ ತೀವ್ರ ಗಾಯಗೊಂಡಿದ್ದಾರೆ. ಬೆಂಕಿಯ ದಾಳಿಗೆ ಅವರ ಮೈಕೈ ಎಲ್ಲಾ ಸುಟ್ಟು ಹೋಗಿದೆ. ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಢಾಕಾಗೆ ಕಳುಹಿಸಲಾಗಿದೆ.
ಇದನ್ನೂ ಓದಿ : ಜನಸಾಮಾನ್ಯರ ನಾಯಕ ಷರೀಫ್ ಒಸ್ಮಾನ್ ಹಾದಿ ನಿರ್ಗಮನ
ಬೇಲಾಲ್ ಅವರ ತಾಯಿ ಹಜೇರಾ ಬೇಗಂ ಮಾತನಾಡಿ, ದುಷ್ಕರ್ಮಿಗಳು ಎರಡೂ ಬಾಗಿಲುಗಳನ್ನು ಲಾಕ್ ಮಾಡಿ ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಹಚ್ಚಿದರು. “ನಾನು ಊಟದ ನಂತರ ಮಲಗಿದ್ದೆ. ಬೆಳಗಿನ ಜಾವ 1:00 ಗಂಟೆ ಸುಮಾರಿಗೆ, ನಾನು ಎಚ್ಚರಗೊಂಡು ಕಿಟಕಿಯ ಮೂಲಕ ನೋಡಿದಾಗ ನನ್ನ ಮಗನ ಮನೆ ಬೆಂಕಿಯಲ್ಲಿ ಹೊತ್ತಿಕೊಂಡಿರುವುದನ್ನು ನೋಡಿದೆ.
“ನಾನು ಕಿರುಚುತ್ತಾ ಹೊರಗೆ ಓಡಿಹೋದೆ. ಆದರೆ ನಮ್ಮ ಮನೆಯ ಎರಡೂ ಬಾಗಿಲುಗಳು ಹೊರಗಿನಿಂದ ಲಾಕ್ ಆಗಿರುವುದನ್ನು ಕಂಡೆ. ನನಗೆ ಹೊರಗೆ ಹೋಗಲು ಸಾಧ್ಯವಾಗಲಿಲ್ಲ. ಕೊನೆಗೆ ನನ್ನ ಮಗ ಬಾಗಿಲು ಮುರಿದು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ. ಅವನ ಹೆಂಡತಿ ನಜ್ಮಾ ಕೂಡ ತಮ್ಮ ನಾಲ್ಕು ತಿಂಗಳ ಮಗು ಅಬೀರ್ ಹೊಸೈನ್ ಮತ್ತು ಆರು ವರ್ಷದ ಮಗ ಹಬೀಬ್ ಜೊತೆ ಹೊರಬರುವಲ್ಲಿ ಯಶಸ್ವಿಯಾದಳು,” ಎಂದು ಅವರು ಹೇಳಿದರು.
“ನನ್ನ ಮೊಮ್ಮಗಳು, ಸಲ್ಮಾ, ಸಾಮಿಯಾ ಮತ್ತು ಆಯೇಷಾ ಒಂದು ಕೋಣೆಯಲ್ಲಿ ಮಲಗಿದ್ದರು. ಅವರಲ್ಲಿ ಇಬ್ಬರು ತೀವ್ರ ಸುಟ್ಟಗಾಯಗಳಿಂದ ರಕ್ಷಿಸಲ್ಪಟ್ಟರು, ಆದರೆ ಕಿರಿಯ ಹುಡುಗಿ (ಆಯೇಷಾ) ಒಳಗೆ ಸುಟ್ಟು ಕರಕಲಾಗಿದ್ದಳು” ಎಂದು ಅವರು ದುಖಃದಿಂದ ಹೇಳಿದರು.
ಲಕ್ಷ್ಮಿಪುರ ಜಿಲ್ಲಾ ಬಿಎನ್ಪಿಯ ಸಂಚಾಲಕರಾದ ಹಸಿಬುರ್ ರೆಹಮಾನ್ ಈ ಘಟನೆಯನ್ನು ಖಂಡಿಸಿದರು. ಅಪರಾಧಿಗಳನ್ನು ಪತ್ತೆಹಚ್ಚಿ ಶಿಕ್ಷೆ ಕೊಡಬೇಕು ಎಂದು ಆಗ್ರಹ ಮಾಡಿದರು.
ಬಾಂಗ್ಲಾದೇಶದ ಯುವನಾಯಕ ಹಾದಿ ಅವರ ಹತ್ಯೆಯ ನಂತರ ಇಡೀ ಬಾಂಗ್ಲಾದೇಶವೇ ಹೊತ್ತಿ ಉರಿಯುತ್ತಿದೆ. ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದ ಅಡಿಯಲ್ಲಿ ಬಾಂಗ್ಲಾದೇಶದಾದ್ಯಂತ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವ ಮಧ್ಯೆ ಈ ಘಟನೆ ದುರ್ಘಟನೆ ನಡೆದಿದೆ.





