ರಷ್ಯಾದ ತೈಲ ನಿರ್ಬಂಧ, ತೈಲ ಆಮದಿನ ಬಗ್ಗೆ ವಿದೇಶಾಂಗ ಸಚಿವಾಲಯ ಶನಿವಾರ ತನ್ನ ನಿಲುವನ್ನು ಪುನರುಚ್ಚರಿಸಿದ್ದು, ಭಾರತದ ಇಂಧನ ಭದ್ರತೆಯು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದೆ.
” 1.4 ಶತಕೋಟಿ ಭಾರತೀಯರ ಇಂಧನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಅತ್ಯುನ್ನತ ಆದ್ಯತೆಯಾಗಿದೆ ಎಂದು ಸರ್ಕಾರ ಹಲವಾರು ಸಂದರ್ಭಗಳಲ್ಲಿ ಸಾರ್ವಜನಿಕವಾಗಿ ಹೇಳಿದೆ” ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನು ಓದಿದ್ದೀರಾ? ಇರಾನ್ನಿಂದ ತೈಲ ಆಮದು ಆರೋಪ: ಭಾರತದ ಆರು ಕಂಪನಿಗಳ ಸೇರಿ 20 ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ
“ವಸ್ತುನಿಷ್ಠ ಮಾರುಕಟ್ಟೆ ಪರಿಸ್ಥಿತಿಗಳು ಮತ್ತು ವಿಕಸನಗೊಳ್ಳುತ್ತಿರುವ ಅಂತಾರಾಷ್ಟ್ರೀಯ ಚಲನಶೀಲತೆಗೆ ಅನುಗುಣವಾಗಿ ನಮ್ಮ ಇಂಧನ ಮೂಲವನ್ನು ವೈವಿಧ್ಯಗೊಳಿಸುವುದು ನಮ್ಮ ಕಾರ್ಯತಂತ್ರವಾಗಿದೆ. ಭಾರತದ ಎಲ್ಲಾ ಕ್ರಮಗಳನ್ನುಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳಲಾಗುತ್ತದೆ” ಎಂದೂ ಹೇಳಿದೆ.
ಈ ನಡುವೆ ನವದೆಹಲಿಯಲ್ಲಿ ನಡೆದ NDTV ಪ್ರಾಫಿಟ್ ಕಾನ್ಕ್ಲೇವ್ 2026 ಕಾರ್ಯಕ್ರಮದಲ್ಲಿ ರಷ್ಯಾದ ತೈಲದ ಕುರಿತು ಮಾತನಾಡಿದ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್, ರಷ್ಯಾದಿಂದ ತೈಲ ಆಮದು ಕಡಿಮೆ ಮಾಡುವುದರ ಹಿಂದೆ ಇರುವ ನಿರ್ಬಂಧಗಳಿಗೆ ಸಂಬಂಧಿಸಿದ ನೈಜ ಕಾರಣಗಳನ್ನು ಮಾಸ್ಕೋ ಅರ್ಥಮಾಡಿಕೊಂಡಿದೆ” ಎಂದು ಹೇಳಿದ್ದಾರೆ.
“ಭಾರತವು ತನ್ನ ಆರ್ಥಿಕ ವ್ಯವಸ್ಥೆಯನ್ನು ಅಂತಾರಾಷ್ಟ್ರೀಯ ನಿರ್ಬಂಧಗಳಿಗೆ ಗುರಿಪಡಿಸಲು ಬಯಸುವುದಿಲ್ಲ ಎಂಬ ಎಚ್ಚರಿಕೆಯ ನಿಲುವನ್ನು ರಷ್ಯಾ ಗೌರವಿಸುತ್ತದೆ. ಇರಾನ್ ಅಥವಾ ಮಧ್ಯಪ್ರಾಚ್ಯದ ಪರಿಸ್ಥಿತಿ ಹದಗೆಡದಿದ್ದರೆ ಮತ್ತು ತೈಲ ಬೆಲೆಗಳು ಸ್ಥಿರವಾಗಿದ್ದರೆ, ರಷ್ಯಾದಿಂದ ತೈಲ ಖರೀದಿ ಪ್ರಮಾಣವನ್ನು ಬದಲಿಸುವುದು ಭಾರತದ ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರದು” ಎಂದೂ ಅಭಿಪ್ರಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ಪಡಿತರ ಚೀಟಿ ರದ್ದಾಗಲು ಮೋದಿ ಸರ್ಕಾರವೇ ಮುಖ್ಯ ಕಾರಣ
“ಭಾರತದ ಇಂಧನ ಅಗತ್ಯಗಳನ್ನು ಪೂರೈಸಲು ಇತರ ದೇಶಗಳಿಂದ (ಅಮೆರಿಕ ಅಥವಾ ವೆನೆಜುವೆಲಾ ಸೇರಿದಂತೆ) ತೈಲವನ್ನು ಆಮದು ಮಾಡಿಕೊಳ್ಳುವ ಸಾಧ್ಯತೆಗಳ ಬಗ್ಗೆ ಯಾವುದೇ ತೀರ್ಮಾನಕ್ಕೆ ಬರುವ ಮೊದಲು ನಿಖರವಾದ ಆರ್ಥಿಕ ಲೆಕ್ಕಾಚಾರಗಳನ್ನು ಮಾಡಬೇಕಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು, “ಭಾರತ ಮತ್ತು ಅಮೆರಿಕ ನಡುವಿನ ಇತ್ತೀಚಿನ ಮಧ್ಯಂತರ ವ್ಯಾಪಾರ ಒಪ್ಪಂದವು ಭಾರತದ ರಫ್ತುಗಳ ಮೇಲಿನ ಸುಂಕಗಳನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಅಮೆರಿಕ ವಿಧಿಸಿದ್ದ ಶೇ. 25ರಷ್ಟು ಹೆಚ್ಚುವರಿ ಸುಂಕವು ಭಾರತೀಯ ಆರ್ಥಿಕತೆಗೆ ಅಡ್ಡಿಯಾಗಿತ್ತು, ಈಗ ಅದು ಶೇ. 18ಕ್ಕೆ ಇಳಿಕೆಯಾಗಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ” ಎಂದೂ ಹೇಳಿಕೊಂಡಿದ್ದಾರೆ.
ರಷ್ಯಾದ ಮೇಲಿನ ಅಮೆರಿಕದ ನಿರ್ಬಂಧಗಳಿಂದಾಗಿ ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಕಡಿಮೆ ಮಾಡಿ, ಅಮೆರಿಕದಿಂದ ಹೆಚ್ಚಿನ ತೈಲವನ್ನು ಖರೀದಿಸಲು ಒಪ್ಪಿಕೊಂಡಿದೆ. 2026ರ ಜನವರಿಯಲ್ಲಿ ರಷ್ಯಾದಿಂದ ಭಾರತಕ್ಕೆ ತೈಲ ರಫ್ತು 34% ರಷ್ಟು ಕುಸಿದಿದೆ.





