ಕೆನಡಾದಲ್ಲಿ ವಾಸಿಸುತ್ತಿರುವ ಭಾರತೀಯರ ಸುರಕ್ಷತೆಯ ಬಗ್ಗೆ ಭಾರತದ ನೂತನ ಹೈಕಮಿಷನರ್ ದಿನೇಶ್ ಕೆ ಪಟ್ನಾಯಕ್ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಸಿಟಿವಿ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ, ರಾಯಭಾರಿಯಾಗಿರುವ ನನಗೂ ಭದ್ರತೆ ಅಗತ್ಯವಾಗಿದೆ” ಎಂದು ಹೇಳಿದ್ದಾರೆ. ಈ ಹೇಳಿಕೆಯು ಇತ್ತೀಚಿನ ದಿನಗಳಲ್ಲಿ ಕೆನಡಾದಲ್ಲಿ ಭಾರತೀಯ ಸಮುದಾಯದ ಮೇಲೆ ನಡೆಯುತ್ತಿರುವ ದಾಳಿಗಳು ಮತ್ತು ಅಸುರಕ್ಷಿತ ವಾತಾವರಣದ ಬಗ್ಗೆ ಚರ್ಚೆಯನ್ನು ತೀವ್ರಗೊಳಿಸಿದೆ.
ದಿನೇಶ್ ಪಟ್ನಾಯಕ್ ಅವರು 1990ರ ಬ್ಯಾಚ್ನ ಭಾರತೀಯ ವಿದೇಶಾಂಗ ಸೇವೆ (ಐಎಫ್ಎಸ್) ಅಧಿಕಾರಿಯಾಗಿದ್ದು, ಸ್ಪೇನ್ನಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ ನಂತರ ಆಗಸ್ಟ್ 2025ರಲ್ಲಿ ಕೆನಡಾದ ಹೈಕಮಿಷನರ್ ಆಗಿ ನೇಮಕಗೊಂಡರು. ಭಾರತ-ಕೆನಡಾ ಸಂಬಂಧಗಳು ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದ ಆರೋಪಗಳಿಂದಾಗಿ ಕಳೆದ ವರ್ಷಗಳಲ್ಲಿ ತೀವ್ರ ಹದಗೆಟ್ಟಿದ್ದವು. ಆದರೆ ಇತ್ತೀಚೆಗೆ ಉಭಯ ದೇಶಗಳು ಸಂಬಂಧಗಳನ್ನು ಸಾಮಾನ್ಯಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿವೆ. ಕೆನಡಾದ ಹೊಸ ಪ್ರಧಾನಿ ಮಾರ್ಕ್ ಕಾರ್ನೆಯವರ ನಾಯಕತ್ವದಲ್ಲಿ ಈ ಪ್ರಕ್ರಿಯೆ ವೇಗ ಪಡೆದುಕೊಂಡಿದ್ದು, ಪಟ್ನಾಯಕ್ ಅವರ ನೇಮಕವು ಇದಕ್ಕೆ ಸಾಕ್ಷಿಯಾಗಿದೆ.
ಪಟ್ನಾಯಕ್ ಅವರು ಸಂದರ್ಶನದಲ್ಲಿ, “ಇಲ್ಲಿರುವ ಭಾರತೀಯರಿಗೆ ಕೆನಡಾ ಸುರಕ್ಷಿತವೇ? ಕೆನಡಾ ಸ್ವತಃ ಸುರಕ್ಷಿತವೇ? ಏಕೆಂದರೆ ಕೆನಡಾ ಇದನ್ನು ಭಾರತೀಯರ ಸಮಸ್ಯೆಯಾಗಿ ನೋಡಬಾರದು. ಇದು ಕೆನಡಾದ ಸಮಸ್ಯೆ. ದಕ್ಷಿಣ ಏಷ್ಯನ್ನರು ಮತ್ತು ಭಾರತೀಯರು ಇಲ್ಲಿ ಅಭದ್ರತೆಯನ್ನು ಎದುರಿಸುತ್ತಿದ್ದಾರೆ. ಭಾರತದಲ್ಲಿ ಕೆನಡಾದ ಹೈಕಮಿಷನರ್ಗೆ ಭದ್ರತೆ ಅಗತ್ಯವಿಲ್ಲ. ಆದರೆ ಕೆನಡಾದಲ್ಲಿ ಭಾರತೀಯ ಹೈಕಮಿಷನರ್ಗೆ ಭದ್ರತೆಯ ಅಗತ್ಯವಿದೆ ಎಂದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸಂಘಪರಿವಾರದ ಹುನ್ನಾರಗಳನ್ನು ಅರಿತ ದಲಿತರು
ಈ ಆತಂಕಕ್ಕೆ ಕಾರಣವಾಗಿರುವ ಪ್ರಮುಖ ಘಟನೆಗಳಲ್ಲಿ ಒಂದು ವ್ಯಾಂಕೋವರ್ನಲ್ಲಿ ಭಾರತೀಯ ಮೂಲದ ಕೆನಡಿಯನ್ ಪ್ರಜೆ ಕಪಿಲ್ ಶರ್ಮಾ ಅವರ ಕೆಫೆ ಮೇಲೆ ನಡೆದ ದಾಳಿ. ಪಟ್ನಾಯಕ್ ಅವರು ಉಲ್ಲೇಖಿಸಿದಂತೆ, “ವ್ಯಾಂಕೋವರ್ನಲ್ಲಿ ಇಂದು ಮೂರನೇ ಬಾರಿ ಒಂದು ರೆಸ್ಟೋರೆಂಟ್ ಮೇಲೆ ದಾಳಿ ನಡೆದಿದೆ. ರೆಸ್ಟೋರೆಂಟ್ ಮಾಲೀಕರಾಗಿರುವ ಭಾರತೀಯರೊಬ್ಬರ ಮೇಲೆ ಗುಂಡಿನ ದಾಳಿ ನಡೆದಿದೆ. ಇದು ಇತ್ತೀಚಿನ ದಿನಗಳಲ್ಲಿ ಭಾರತೀಯರ ಮೇಲೆ ನಡೆಯುತ್ತಿರುವ ಹಲವು ದಾಳಿಗಳಲ್ಲಿ ಒಂದು. ಕೆನಡಾದಲ್ಲಿ ಭಾರತೀಯರ ಮೇಲೆ ನಡೆಯುತ್ತಿರುವ ಈ ದಾಳಿಗಳ ಹಿಂದೆ ಬಿಷ್ನೋಯ್ ಗ್ಯಾಂಗ್ ಮತ್ತು ಖಲಿಸ್ತಾನಿ ಉಗ್ರರ ಸಂಬಂಧವಿರುವುದಾಗಿ ಆರೋಪಗಳಿವೆ.
ಕೆನಡಾದಲ್ಲಿ ಸುಮಾರು 4 ಲಕ್ಷಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಮತ್ತು ವೃತ್ತಿಪರರು ವಾಸಿಸುತ್ತಿದ್ದಾರೆ. ಆದರೆ 2024ರಲ್ಲಿ 1,997 ಭಾರತೀಯರನ್ನು ಬಲವಂತವಾಗಿ ದೇಶಭ್ರಷ್ಟರನ್ನಾಗಿ ಮಾಡಲಾಗಿದ್ದು, 2025ರ ಜುಲೈ ವರೆಗೆ 1,891 ಮಂದಿಯನ್ನು ಹೊರದೂಡಲಾಗಿದೆ ಎಂದು ಕೆನಡಾ ಬಾರ್ಡರ್ ಸರ್ವಿಸಸ್ ಏಜೆನ್ಸಿ (ಸಿಬಿಎಸ್ಎ) ಮಾಹಿತಿ ತಿಳಿಸಿದೆ. ಇದು 2019ರಲ್ಲಿ 625ರಿಂದ ತೀವ್ರ ಹೆಚ್ಚಳವನ್ನು ತೋರಿಸುತ್ತದೆ. ಇದರ ಜೊತೆಗೆ, ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಹಲ್ಲೆಗಳು ಮತ್ತು ಸಾವುಗಳಿಂದಾಗಿ (2024ರಲ್ಲಿ ಕನಿಷ್ಠ 172 ಮಂದಿ ಕೆನಡಾದಲ್ಲಿ ಮೃತಪಟ್ಟಿದ್ದಾರೆ) ಸಮುದಾಯದಲ್ಲಿ ಭಯದ ವಾತಾವರಣ ಸೃಷ್ಟಿಸಿವೆ.





