ಭಾನುವಾರ ನಡೆದ ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದು, ಇದು ಪಶ್ಚಿಮ ಏಷ್ಯಾ ಮಾತ್ರವಲ್ಲದೆ ಭಾರತದಲ್ಲೂ ತೀವ್ರ ಸಂಚಲನ ಮೂಡಿಸಿದೆ. ಖಮೇನಿ ಸಾವನ್ನು ಖಂಡಿಸಿ ಶಿಯಾ ಸಮುದಾಯದ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಜಮ್ಮು ಮತ್ತು ಕಾಶ್ಮೀರದ ಶ್ರೀನಗರ, ಬದ್ಗಾಮ್, ಪುಲ್ವಾಮಾಗಳಲ್ಲಿ ಬೃಹತ್ ಪ್ರತಿಭಟನೆಗಳು ನಡೆದಿವೆ. ಇದರ ಜೊತೆಗೆ, ಲಖನೌ, ಪಂಜಾಬ್, ದೆಹಲಿ, ಬಿಹಾರ ಮತ್ತು ತೆಲಂಗಾಣದ ಹಲವೆಡೆಯೂ ಪ್ರತಿಭಟನೆಗಳು ವರದಿಯಾಗಿದ್ದು, ರಾಜಕೀಯ ಮತ್ತು ಧಾರ್ಮಿಕ ಮುಖಂಡರು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.
ಖಮೇನಿ ಅವರು ಇರಾನ್ನಲ್ಲಿ ಜನಿಸಿ ಅಧಿಕಾರಕ್ಕೆ ಬಂದರೂ, ಭಾರತದೊಂದಿಗೆ ವಿಶೇಷ ಒಡನಾಟ ಹೊಂದಿದ್ದರು. 1980ರ ದಶಕದ ಆರಂಭದಲ್ಲಿ ಕಾಶ್ಮೀರಕ್ಕೆ ಭೇಟಿ ನೀಡಿದ್ದ ಅವರು, ಶಿಯಾ ಮತ್ತು ಸುನ್ನಿ ಸಮುದಾಯಗಳ ನಡುವೆ ತೀವ್ರ ಕಂದಕವಿದ್ದ ಆ ಕಾಲದಲ್ಲಿ, ಶ್ರೀನಗರದ ಪ್ರಮುಖ ಸುನ್ನಿ ಮಸೀದಿಯಲ್ಲಿ ಮಿರ್ವಾಜ್ ಮೌಲವಿ ಫಾರೂಕ್ ಅವರೊಂದಿಗೆ ಶುಕ್ರವಾರದ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಭಾಷಣ ಮಾಡಿದ್ದರು. ಈ ಐತಿಹಾಸಿಕ ನಡೆಯು ಕಾಶ್ಮೀರದಲ್ಲಿ ಎರಡೂ ಸಮುದಾಯಗಳ ನಡುವಿನ ಬಿರುಕನ್ನು ಕಡಿಮೆ ಮಾಡಲು ಮತ್ತು ಪರಸ್ಪರ ವಿಶ್ವಾಸ ಮೂಡಿಸಲು ದೊಡ್ಡ ಮಟ್ಟದಲ್ಲಿ ಸಹಕಾರಿಯಾಯಿತು ಎಂದು ಹೋರಾಟಗಾರ ಕಲ್ಬಿ ಹುಸೇನ್ ರಿಜ್ವಿ ಸ್ಮರಿಸಿದ್ದಾರೆ.
ಖಮೇನಿ ಹತ್ಯೆಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಶೋಕಾಚರಣೆ ನಡೆಸುವವರಿಗೆ ಶಾಂತಿಯುತವಾಗಿ ದುಃಖಿಸಲು ಅವಕಾಶ ನೀಡಬೇಕು ಹಾಗೂ ಆಡಳಿತ ಮತ್ತು ಪೊಲೀಸರು ಗರಿಷ್ಠ ಸಂಯಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಇತ್ತ, ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಈ ದಾಳಿಯನ್ನು ‘ಇತಿಹಾಸದ ಅತ್ಯಂತ ನಾಚಿಕೆಗೇಡಿನ ಕ್ಷಣ’ ಎಂದು ಕರೆದಿದ್ದು, ಅಮೆರಿಕ ಮತ್ತು ಇಸ್ರೇಲ್ ನಡೆಯನ್ನು ತೀವ್ರವಾಗಿ ಖಂಡಿಸುವ ಜೊತೆಗೆ ಇರಾನ್ ಜನರ ಬೆಂಬಲಕ್ಕೆ ನಿಲ್ಲುವುದಾಗಿ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಲಖನೌ ಸಮೀಪವಿರುವ ‘ಕಿಂತೂರು’ ಎಂಬ ಹಳ್ಳಿಗೂ ಮತ್ತು ಇರಾನ್ ದೇಶವನ್ನು ಆಳಿದ ನಾಯಕರ ವಂಶಕ್ಕೂ ಬಹಳ ಹಳೆಯ ನಂಟಿದೆ. ಸುಮಾರು 300 ವರ್ಷಗಳ ಹಿಂದೆ ಇರಾನ್ನಿಂದ ಭಾರತಕ್ಕೆ ಬಂದಿದ್ದ ‘ಮೂಸವಿ’ ಕುಟುಂಬವು ಇದೇ ಕಿಂತೂರು ಗ್ರಾಮದಲ್ಲಿ ಬಂದು ನೆಲೆಸಿತ್ತು. ಇರಾನ್ನ ನಾಯಕ ಅಲಿ ಖಮೇನಿ ಅವರಿಗೆ ನೇರವಾಗಿ ಈ ಹಳ್ಳಿ ಸಂಬಂಧವಿಲ್ಲದಿದ್ದರೂ, ಇರಾನ್ನಲ್ಲಿ ಕ್ರಾಂತಿ ಮಾಡಿದ ಅವರ ಹಿಂದಿನ ತಲೆಮಾರಿನ ನಾಯಕರು ಇದೇ ಊರಿನ ಹಿನ್ನೆಲೆ ಹೊಂದಿದವರು.
ಇದನ್ನು ಓದಿದ್ದೀರಾ? ತಾನೇ ಸಾಕಿದ ಗಿಣಿ ಹದ್ದಾಗಿ ಕುಕ್ಕಿತಲ್ಲೋ: ಅಫ್ಘಾನ್ ಜೊತೆ ಪಾಕ್ ದೋಸ್ತಿ ಹಳಸಿದ್ದೆಲ್ಲಿ?
ಇರಾನ್ ಕ್ರಾಂತಿಯ ನಾಯಕರ ಅಜ್ಜ ‘ಸೈಯದ್ ಅಹ್ಮದ್ ಮೂಸವಿ’ ಅವರು ಹುಟ್ಟಿದ್ದು ಇದೇ ಕಿಂತೂರು ಗ್ರಾಮದಲ್ಲಿಯೇ. ಆದರೆ, 1830ರ ಹೊತ್ತಿಗೆ ಅವರು ಭಾರತವನ್ನು ಬಿಟ್ಟು ಮತ್ತೆ ಇರಾನ್ಗೆ ವಾಪಸ್ ಹೋದರು. ಹೀಗೆ ಕಿಂತೂರಿನಲ್ಲಿ ಹುಟ್ಟಿ ಇರಾನ್ಗೆ ಮರಳಿ ಹೋದ ಆ ಕುಟುಂಬವೇ, ಮುಂದೆ ಇಡೀ ಇರಾನ್ ದೇಶವನ್ನು ಆಳಿತು. ಹಿಂದೆ ದೊಡ್ಡ ಊರಾಗಿದ್ದ ಈ ಕಿಂತೂರು ಹಳ್ಳಿಯಲ್ಲಿ, ಈಗ ಕೇವಲ ಕೆಲವೇ ಕೆಲವು ಶಿಯಾ ಮುಸ್ಲಿಂ ಕುಟುಂಬಗಳು ಮಾತ್ರ ಉಳಿದುಕೊಂಡಿವೆ.
ಉತ್ತರ ಭಾರತವಷ್ಟೇ ಅಲ್ಲದೆ, ಖಮೇನಿ ಅವರು ಕರ್ನಾಟಕದೊಂದಿಗೂ ಬಹುಕಾಲದ ಹಾಗೂ ವಿಶಿಷ್ಟವಾದ ನಂಟನ್ನು ಹೊಂದಿದ್ದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಶಿಯಾ ಮುಸ್ಲಿಂ ಬಾಹುಳ್ಯದ ‘ಅಲಿಪುರ’ ಗ್ರಾಮವೇ ಈ ನಂಟಿನ ಕೊಂಡಿಯಾಗಿದೆ. 1981-82ರಲ್ಲಿ ಇರಾನ್ ಸರ್ಕಾರದ ನೆರವಿನಿಂದ ನಿರ್ಮಿಸಲಾಗಿದ್ದ ಆಸ್ಪತ್ರೆಯೊಂದನ್ನು ಉದ್ಘಾಟಿಸಲು ಖಮೇನಿ ಅವರು ಖುದ್ದಾಗಿ ಈ ಅಲಿಪುರ ಗ್ರಾಮಕ್ಕೆ ಭೇಟಿ ನೀಡಿದ್ದರು.
ಖಮೇನಿ ಅವರ ಆ ಭೇಟಿಯ ನಂತರ ಈ ಪುಟ್ಟ ದಕ್ಷಿಣ ಭಾರತದ ಗ್ರಾಮ ಹಾಗೂ ಇರಾನ್ ನಡುವಿನ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ. ಇರಾನ್ ಸಂಸ್ಥೆಗಳ ಬೆಂಬಲದೊಂದಿಗೆ ಇಲ್ಲಿ ಹಲವು ಸಂಸ್ಥೆಗಳು ಸ್ಥಾಪನೆಯಾಗಿವೆ. ಇದೀಗ ಖಾಮಿನೈ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅಲಿಪುರ ಗ್ರಾಮವು ಸ್ವಯಂಪ್ರೇರಿತ ಬಂದ್ ಆಚರಿಸಿದ್ದು, ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಿರುವ ಗ್ರಾಮಸ್ಥರು ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸುವ ಮೂಲಕ ತಮ್ಮ ನೆಚ್ಚಿನ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.





