ವಿಶ್ವಸಂಸ್ಥೆಯಲ್ಲಿ ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಅವರು ಭಾರತ-ಪಾಕ್ ಸಂಘರ್ಷದ ಬಗ್ಗೆ ಭಾಷಣ ಮಾಡಿದ್ದಾರೆ. ಹಿಂದುತ್ವ ಉಗ್ರವಾದದ ಕುರಿತು ಆರೋಪಗಳನ್ನು ಮಾಡಿದ್ದಾರೆ. ಅವರ ಭಾಷಣದ ಕೆಲವು ಗಂಟೆಗಳ ಬಳಿಕ, ಭಾರತವು ಷರೀಫ್ ಮಾತುಗಳಿಗೆ ಆಕ್ರೋಶ ವ್ಯಕ್ತಪಡಿಸಿದೆ. ಪಾಕಿಸ್ತಾನವು ಭಯೋತ್ಪಾದನೆಯನ್ನು ವೈಭವೀಕರಿಸುತ್ತಿದೆ ಎಂದು ಆರೋಪಿಸಿದೆ.
ಪರೀಷ್ ಅವರು “ಭಾರತದ ವಿರುದ್ಧ ಸಂಘರ್ಷದಲ್ಲಿ ಪಾಕಿಸ್ತಾನವು ಗೆಲುವು ಸಾಧಿಸಿದೆ. ಭಾರತದ ಹಿಂದುತ್ವ ಉಗ್ರವಾದವು ಜಾಗತಿಕವಾಗಿ ಬೆದರಿಕೆ ಒಡ್ಡಿದೆ” ಎಂದು ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಸಿರುವ ವಿಶ್ವಸಂಸ್ಥೆಯ ಭಾರತದ ಖಾಯಂ ನಿಯೋಗದ ಮೊದಲ ಕಾರ್ಯದರ್ಶಿ ಪೆಟಲ್ ಗಹ್ಲೋಟ್, “ನಾಶವಾದ ರನ್ವೇಗಳು ಮತ್ತು ಸುಟ್ಟುಹೋದ ಹ್ಯಾಂಗರ್ಗಳು ವಿಜಯದಂತೆ ಕಾಣುತ್ತಿದೆಯೇ? ಪಾಕಿಸ್ತಾನವು ಒಸಾಮಾ ಬಿನ್ ಲಾಡೆನ್ಗೆ ದಶಕಗಳಿಂದ ಆಶ್ರಯ ನೀಡುತ್ತಿದೆ. ಆ ದೇಶವು ಭಯೋತ್ಪಾದನೆಗೆ ನೆಲೆ ನೀಡಿದೆ” ಎಂದು ಆರೋಪಿಸಿದರು.
ಷರೀಫ್ ಹೇಳಿದ್ದೇನು?
ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಭಾರತೀಯ ನಾಗರಿಕರು ಸಾವನ್ನಪ್ಪಿದರು. ಘಟನೆ ನಡೆದ 15 ದಿನಗಳ ನಂತರ, ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಭಯೋತ್ಪಾದಕ ನೆಲೆಗಳ ಮೇಲೆ ‘ಆಪರೇಷನ್ ಸಿಂಧೂರ’ ಹೆಸರಿನಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸಿತು. ಭಾರತದ ಕಾರ್ಯಾಚರಣೆಯಲ್ಲಿ ಯಾವುದೇ ನಾಗರಿಕರಿಗೆ ಹಾನಿಯಾಗಿಲ್ಲ ಎಂದು ಭಾರತ ಪ್ರತಿಪಾದಿಸಿದೆ. ಆದರೆ, ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರು ವಿಭಿನ್ನ ಅಭಿಪ್ರಾಯ ಮಂಡಿಸಿದ್ದಾರೆ. ಭಾರತವು ‘ಪಾಕ್ ನಾಗರಿಕರ’ ಮೇಲೆ ದಾಳಿ ನಡೆಸಿದೆ. ಆದ್ದರಿಂದಲೇ, ಪಾಕ್ ಸೇನೆಯು ಮಧ್ಯಪ್ರವೇಶ ಮಾಡುವಂತಾಯಿತು ಎಂದು ವಾದಿಸಿದ್ದಾರೆ.
“ಈ ವರ್ಷದ ಮೇ ತಿಂಗಳಲ್ಲಿ, ನನ್ನ ದೇಶವು (ಪಾಕಿಸ್ತಾನ) ನಮ್ಮ ಪೂರ್ವ ಭಾಗದಿಂದ (ಭಾರತ) ಅಪ್ರಚೋದಿತ ಆಕ್ರಮಣವನ್ನು ಎದುರಿಸಿತು. ಶತ್ರುಗಳು ದುರಹಂಕಾರದಿಂದ ದಾಳಿ ನಡೆಸಿದರು. ನಾವು ಅವರನ್ನು ಹಿಮ್ಮೆಟ್ಟಿದೆವು. ಪಹಲ್ಗಾಮ್ ಘಟನೆಯ ಕುರಿತು ಸ್ವತಂತ್ರ ತನಿಖೆ ನಡೆಸಲು ನನ್ನ ಪ್ರಾಮಾಣಿಕ ಪ್ರಸ್ತಾಪವನ್ನು ತಿರಸ್ಕರಿಸುವ ಮೂಲಕ ಭಾರತವು ಮಾನವ ದುರಂತದಿಂದ ರಾಜಕೀಯ ಲಾಭವನ್ನು ಪಡೆಯಲು ಪ್ರಯತ್ನಿಸಿತು. ನಮ್ಮ ಮುಗ್ಧ ನಾಗರಿಕರನ್ನು ಗುರಿಯಾಗಿಸಿಕೊಂಡು ನಮ್ಮ ನಗರಗಳ ಮೇಲೆ ದಾಳಿ ಮಾಡಿತು. ನಮ್ಮ ಪ್ರಾದೇಶಿಕ ಸಮಗ್ರತೆ ಮತ್ತು ರಾಷ್ಟ್ರೀಯ ಭದ್ರತೆಯನ್ನು ಉಲ್ಲಂಘಿಸಿದಾಗ, ನಮ್ಮ ಪ್ರತಿಕ್ರಿಯೆಯು ವಿಶ್ವಸಂಸ್ಥೆ ನಿಯಮಾವಳಿ 51 ನೇ ವಿಧಿಯ ಅಡಿಯಲ್ಲಿ ಆತ್ಮರಕ್ಷಣೆಯ ಹಕ್ಕಿಗೆ ಅನುಗುಣವಾಗಿತ್ತು” ಎಂದು ಶೆಹಬಾಜ್ ಷರೀಫ್ ಹೇಳಿಕೊಂಡಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದ ಒಂದು ದಿನದ ನಂತರ (ಏಪ್ರಿಲ್ 23) ಭಾರತವು ಪಾಕಿಸ್ತಾನ ಜೊತೆಗಿನ ‘ಸಿಂಧೂ ಜಲ ಒಪ್ಪಂದ’ವನ್ನು ಸ್ಥಗಿತಗೊಳಿವುದಾಗಿ ಘೋಷಿಸಿತ್ತು. ಈ ಬಗ್ಗೆ ಮಾತನಾಡಿದ ಶೆಹಬಾಜ್ ಷರೀಫ್, “ಭಾರತದ ಈ ಕ್ರಮವು ‘ಯುದ್ಧದ ಕೃತ್ಯ’ವಾಗಿದೆ. ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಲು ಭಾರತದ ಏಕಪಕ್ಷೀಯ ಮತ್ತು ಕಾನೂನುಬಾಹಿರ ಪ್ರಯತ್ನವು ಒಪ್ಪಂದದ ನಿಬಂಧನೆಗಳನ್ನು ಹಾಗೂ ಅಂತರರಾಷ್ಟ್ರೀಯ ಕಾನೂನಿನ ಮಾನದಂಡಗಳನ್ನು ಧಿಕ್ಕರಿಸುತ್ತದೆ. ಈ ನೀರಿನ ಮೇಲೆ ನಮ್ಮ ಜನರು ಹೊಂದಿರುವ ಬೇರ್ಪಡಿಸಲಾಗದ ಹಕ್ಕನ್ನು ನಾವು ರಕ್ಷಿಸುತ್ತೇವೆ. ಒಪ್ಪಂದದ ಯಾವುದೇ ಉಲ್ಲಂಘನೆಯು ಯುದ್ಧದ ಕೃತ್ಯವೇ ಆಗಿರುತ್ತದೆ” ಎಂದು ಹೇಳಿದ್ದಾರೆ.
ಒಂದು ರಾಷ್ಟ್ರದಲ್ಲಿ ಯಾವುದೇ ವ್ಯಕ್ತಿ ಅಥವಾ ಯಾವುದೇ ಧರ್ಮದ ವಿರುದ್ಧ ಹಿಂಸಾಚಾರಕ್ಕೆ ಅವಕಾಶ ಇರಬಾರದು. ಆದರೆ, ‘ಭಾರತದ ಹಿಂದುತ್ವ-ಚಾಲಿತ ಉಗ್ರವಾದ’ ಮತ್ತು ‘ದ್ವೇಷ ಭಾಷಣ’ವು ಇಡೀ ಜಗತ್ತಿಗೆ ಅಪಾಯವನ್ನುಂಟುಮಾಡುತ್ತದೆ” ಎಂದು ಷರೀಫ್ ಹೇಳಿದ್ದಾರೆ.
ಕಾಶ್ಮೀರ ಸಮಸ್ಯೆಯನ್ನು ಉಲ್ಲೇಖಿಸಿದ ಅವರು, “ನಾನು ಕಾಶ್ಮೀರಿ ಜನರಿಗೆ ಅವರೊಂದಿಗೆ ನಿಲ್ಲುತ್ತೇನೆ, ಪಾಕಿಸ್ತಾನ ಅವರೊಂದಿಗೆ ನಿಲ್ಲುತ್ತದೆ ಹಾಗೂ ಒಂದು ದಿನ ಶೀಘ್ರದಲ್ಲೇ ಕಾಶ್ಮೀರದಲ್ಲಿ ಭಾರತದ ದಬ್ಬಾಳಿಕೆ ನಿಲ್ಲುತ್ತದೆ ಎಂಬ ಭರವಸೆ ನೀಡಲು ಬಯಸುತ್ತೇನೆ” ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಷರೀಫ್, “ಪಾಕಿಸ್ತಾನಿ ಪಡೆಗಳು ಏಳು ಭಾರತೀಯ ಜೆಟ್ಗಳನ್ನು ಹೊಡೆದುರುಳಿಸಿವೆ. ಅವುಗಳನ್ನು ‘ಸ್ಕ್ರ್ಯಾಪ್ ಅಂಡ್ ಡ್ಯೂಸ್ಟ್’ ಮಾಡಲು ಕಳುಹಿಸಿಲಾಗಿದೆ. ನಮ್ಮ ವೀರ ಸಶಸ್ತ್ರ ಪಡೆಗಳು ಅದ್ಭುತ ಕಾರ್ಯಾಚರಣೆಯನ್ನು ನಡೆಸಿ, ಶತ್ರುಗಳ ದಾಳಿಯನ್ನು ಹಿಮ್ಮೆಟ್ಟಿಸಿದವು. ನಮ್ಮ ಯುದ್ಧ ವಿಮಾನಗಳು ಹಾರಾಟ ನಡೆಸಿ ಆಕಾಶದಾದ್ಯಂತ ತಮ್ಮ ಉತ್ತರವನ್ನು ನೀಡಿದವು” ಎಂದು ಹೇಳಿಕೊಂಡಿದ್ದಾರೆ.
ಭಾರತದ ಪ್ರತಿಕ್ರಿಯೆ
ಆಪರೇಷನ್ ಸಿಂಧೂರ ಸಮಯದಲ್ಲಿ ಐದು ಪಾಕಿಸ್ತಾನಿ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಭಾರತೀಯ ವಾಯುಪಡೆ ಈ ಹಿಂದೆಯೇ ಹೇಳಿಕೊಂಡಿದೆ. ಐದು ಜೆಟ್ಗಳ ಜೊತೆಗೆ, ಒಂದು ದೊಡ್ಡ ಆರಂಭಿಕ ಎಚ್ಚರಿಕಾ ವಿಮಾನವನ್ನು [large Airborne Early Warning and Control (AEW&C)] ಸಹ ನಾಶಪಡಿಸಲಾಗಿದೆ ಎಂದು ವಾಯುಪಡೆಯ ಮುಖ್ಯಸ್ಥ ಎಪಿ ಸಿಂಗ್ ಕಳೆದ ತಿಂಗಳು ಘೋಷಿಸಿದ್ದಾರೆ.
ಭಯೋತ್ಪಾದನೆಗೆ ನೆಲೆ ಮತ್ತು ಪ್ರೋತ್ಸಾಹ ನೀಡುವಲ್ಲಿ ಪಾಕಿಸ್ತಾನದ ಪಾತ್ರವನ್ನು ಭಾರತ ಬಹಳ ಹಿಂದಿನಿಂದಲೂ ಗಮನಿಸಿದೆ. ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸುವ ರಾಜತಾಂತ್ರಿಕರು ಶೆಹಬಾಜ್ ಷರೀಫ್ ಅವರ ಹೇಳಿಕೆಗಳನ್ನು ಟೀಕಿಸಿದ್ದು, ಪಾಕಿಸ್ತಾನವು ಒಸಾಮಾ ಬಿನ್ ಲಾಡೆನ್ ಅವರನ್ನು ಹೇಗೆ ಆಶ್ರಯಿಸಿತು ಮತ್ತು ಭಯೋತ್ಪಾದನೆಗೆ ಹೇಗೆ ನೆರುವ ನೀಡುತ್ತಿದೆ ಎಂಬುದರ ಬಗ್ಗೆ ವಿವರಿಸಿದ್ದಾರೆ.
“ಭಯೋತ್ಪಾದನೆಯ ವಿರುದ್ಧದ ಯುದ್ಧದಲ್ಲಿ ಪಾಲುದಾರನಂತೆ ನಟಿಸುತ್ತಾ, ಒಂದು ದಶಕದ ಕಾಲ ಪಾಕಿಸ್ಥಾನವು ಒಸಾಮಾ ಬಿನ್ ಲಾಡೆನ್ಗೆ ಆಶ್ರಯ ನೀಡಿತ್ತು ಎಂಬುದನ್ನು ನೆನಪಿಸಿಕೊಳ್ಳೋಣ. ಪಾಕ್ ಸಚಿವರು ಇತ್ತೀಚೆಗೆ ದಶಕಗಳಿಂದ ಭಯೋತ್ಪಾದಕ ಶಿಬಿರಗಳಿಗೆ ಸಹಾಯ ನೆರವು ನೀಡಿರುವುದಾಗಿ ಒಪ್ಪಿಕೊಂಡಿದ್ದಾರೆ” ಎಂದು ನಿರ್ವಹಿಸುತ್ತಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ” ಎಂದು ಪೆಟಲ್ ಗೆಹ್ಲೋಟ್ ಹೇಳಿದ್ದಾರೆ.
ಭಾರತದೊಂದಿಗೆ ಸಂಯೋಜಿತ, ಸಮಗ್ರ ಹಾಗೂ ಫಲಿತಾಂಶ-ಆಧಾರಿತ ಮಾತುಕತೆಗೆ ಕರೆಕೊಟ್ಟಿದ್ದ ಎಂಬ ಶೆಹಬಾಜ್ ಷರೀಫ್ ಅವರ ವಾದಕ್ಕೆ ಪ್ರತಿಕ್ರಿಯಿಸಿದ ಗೆಹ್ಲೋಟ್, “ಪಾಕಿಸ್ತಾನವು ಎಲ್ಲ ಭಯೋತ್ಪಾದಕ ಶಿಬಿರಗಳನ್ನು ಮುಚ್ಚಿಹಾಕಬೇಕು. ಭಾರತಕ್ಕೆ ಬೇಕಾದ ಭಯೋತ್ಪಾದಕರನ್ನು ಗಡಿಪಾರು ಮಾಡಬೇಕು ಎಂದು ಹೇಳಿದ್ದಾರೆ.




