ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಬಂಧಿತರಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಇಂದು ಅವರ ಸಹೋದರಿ ಡಾ. ಉಜ್ಮಾ ಖಾನಮ್ ಭೇಟಿಯಾದರು.
20 ನಿಮಿಷಗಳ ಕಾಲ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉಜ್ಮಾ ಖಾನಮ್, “ಇಮ್ರಾನ್ ಅವರು ದೈಹಿಕವಾಗಿ ಆರಾಮಾಗಿದ್ದಾರೆ. ಆದರೆ ಮಾನಸಿಕವಾಗಿ ತೀವ್ರ ಚಿತ್ರಹಿಂಸೆಗೊಳಗಾಗುತ್ತಿದ್ದಾರೆ. ದಿನವಿಡೀ ಸೆರೆಮನೆಯಲ್ಲಿ ಒಂಟಿಯಾಗಿ ಕೂಡಿಹಾಕಲಾಗಿದ್ದು, ಯಾರೊಂದಿಗೂ ಮಾತುಕತೆ ನಡೆಸಲು ಅವಕಾಶವಿಲ್ಲ” ಎಂದು ತಿಳಿಸಿದ್ದಾರೆ.
ಇಮ್ರಾನ್ ಖಾನ್ ಅವರ ಬಂಧನ ಮತ್ತು ಪ್ರಸ್ತುತ ಸ್ಥಿತಿಗೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್ ಅವರೇ ಕಾರಣ ಎಂದು ಇಮ್ರಾನ್ ತಿಳಿಸಿರುವುದಾಗಿ ಉಜ್ಮಾ ಖಾನಮ್ ಈ ಸಂದರ್ಭದಲ್ಲಿ ತಿಳಿಸಿದರು.
ಕಳೆದ ಕೆಲವು ವಾರಗಳಿಂದ ಇಮ್ರಾನ್ ಖಾನ್ ಅವರ ಆರೋಗ್ಯದ ಬಗ್ಗೆ ಗಂಭೀರ ಊಹಾಪೋಹಗಳು ಹರಡಿದ್ದವು. ಕುಟುಂಬ ಸದಸ್ಯರನ್ನು ಭೇಟಿಗೆ ಅವಕಾಶ ನೀಡದೇ ತಡೆಯಲಾಗಿತ್ತು. ಅವರ ಮಕ್ಕಳು “ತಂದೆಯ ಸ್ಥಿತಿ ಗಂಭೀರವಾಗಿದ್ದು, ಅದನ್ನು ಮರೆಮಾಚುತ್ತಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದ್ದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ವರ್ತಮಾನದ ತಲ್ಲಣಗಳಿಗೆ ನಾರಾಯಣ ಗುರು – ಗಾಂಧಿಯೇ ಉತ್ತರ
ಕಳೆದ 25 ದಿನಗಳಲ್ಲಿ ಕುಟುಂಬ ಅಥವಾ ಪಾಕಿಸ್ತಾನ ಪಿಟಿಐ ನಾಯಕರೊಂದಿಗೆ ಯಾವುದೇ ಭೇಟಿ ನಡೆದಿರಲಿಲ್ಲ. ಇದರಿಂದ “ಇಮ್ರಾನ್ ಖಾನ್ ಮೃತಪಟ್ಟಿದ್ದಾರೆ, ಅದನ್ನು ಮರೆಮಾಚಲಾಗುತ್ತಿದೆ” ಎಂಬ ಊಹಾಪೋಹಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡಿದ್ದವು.
ಪಿಟಿಐ ನಾಯಕ ಸೆನೆಟರ್ ಖುರ್ರಮ್ ಝೀಷಾನ್ ಅವರು “ಇಮ್ರಾನ್ ಖಾನ್ ಅವರ ಜನಪ್ರಿಯತೆಯಿಂದ ಹೆದರಿರುವ ಶೆಹಬಾಝ್ ಷರೀಫ್ ಸರ್ಕಾರ ಅವರನ್ನು ಒಂಟಿಯಾಗಿ ಇರಿಸಿ ಒತ್ತಡ ಹೇರುತ್ತಿದೆ. ಅವರು ದೇಶ ತೊರೆಯುವಂತೆ ಮಾಡಲು ಇದೊಂದು ತಂತ್ರ” ಎಂದು ಆರೋಪಿಸಿದ್ದಾರೆ.
72 ವರ್ಷದ ಇಮ್ರಾನ್ ಖಾನ್ 2023ರ ಆಗಸ್ಟ್ನಿಂದ ಜೈಲಿನಲ್ಲಿದ್ದಾರೆ.





