ಇಂದು ವಿಶ್ವಮಾನ್ಯ ಕವಿ ಖಲೀಲ್ ಗಿಬ್ರಾನ್ನ ಜನ್ಮದಿನ. ಬದುಕನ್ನು ತೀವ್ರವಾಗಿ ಪ್ರೀತಿಸಿದ, ಕಡು ಕಾವ್ಯ ವ್ಯಾಮೋಹಿ, ಪ್ರೇಮ ಕವಿ ಗಿಬ್ರಾನನ ಕೆಲವು ಝಲಕ್ಗಳು ಇಲ್ಲಿವೆ...
ಪ್ರೀತಿಯ ಅಂಬರಕ್ಕೆ ಸಂಭ್ರಮದ ಆತ್ಮವಿಶ್ವಾಸದ ಉಡುಗೊರೆ ನೀಡಿದ, ಮೊಗೆದಷ್ಟು ಚಿಮ್ಮುವ ಬುಗ್ಗೆಯಂತೆ ಒಲವಿನ ಪಯಣವನ್ನು ಕಾವ್ಯದ ಮೂಲಕ ಉಣಬಡಿಸಿದ ಕಡು ಕಾವ್ಯ ವ್ಯಾಮೋಹಿ, ಪ್ರೇಮ ಕವಿ ಗಿಬ್ರಾನ್. ಜೂಜುಕೋರ ತಂದೆ, ಅನಕ್ಷರಸ್ಥ ತಾಯಿಯ ಮೂರನೆ ಗಂಡನ ನಾಲ್ಕನೆಯ ಮಗನಾಗಿ ಬಿಸ್ಮಾರ್ಕಿನ ಚಕ್ರಾಧಿಪತ್ಯಕ್ಕೆ ಸೇರಿದ ಲೆಬನಾನಿನ ಬ್ರೂಷೋರಿ ಎಂಬ ಹಳ್ಳಿಯಲಿ ಜನವರಿ 6, 1883 ಜನಿಸಿದ. ಗಿಬ್ರಾನ್ ಕೇವಲ 48 ವರ್ಷಗಳ ಕಾಲ ಬದುಕಿದ. ಲಿವರ್ ಸಿರೋಸಿಸ್ ಖಾಯಿಲೆಗೆ ತುತ್ತಾಗಿ ನ್ಯೂಯಾರ್ಕಿನ ಆಸ್ಪತ್ರೆಯಲ್ಲಿ ಏಪ್ರಿಲ್ 10, 1931ರಲ್ಲಿ ಮರಣ ಹೊಂದಿದ.
ಬದುಕನ್ನು ತೀವ್ರವಾಗಿ ಪ್ರೀತಿಸಿದ ಗಿಬ್ರಾನನ ಸಾಲುಗಳಿವು…
ಪ್ರೀತಿಯ ನದಿಯೇ ಜೀವ ನದಿಯೇ
ಸಮುದ್ರ ಸಮೀಪಿಸಿತು
ಭಯಪಡಬೇಡ
ಕೊಚ್ಚು ರೊಚ್ಚು ಬೆಡಗು ಬಿನ್ನಾಣದಿಂದ
ಮೆರೆದ ನಿನ್ನ ಹಿಂದಿನ ದಾರಿಯನು ನೆನೆದು ಕೊರಗಬೇಡ
ನೀನೀಗ ಹಿಂದೆ ಚಲಿಸಲಾರೆ
ಕಡಲೊಳಗೆ ಕರಗು
ಇದು ರೂಪ ನಾಶ ಅಲ್ಲ
ನೀನೇ ಸಮುದ್ರವಾಗುವ ಸುವರ್ಣಾವಕಾಶ…
ನಾನು ಹೇಳುವುದರಲ್ಲಿ ಅರ್ಧ ಅರ್ಥವಿಲ್ಲದ್ದು, ಆದರೂ ಹೇಳುತ್ತೇನೆ. ಉಳಿದ ಅರ್ಧ ನಿನ್ನ ತಲುಪಬಹುದು ಎಂಬ ನಿರೀಕ್ಷೆಯಲ್ಲಿ ಎಂಬಂತಹ ಸಾಲುಗಳನ್ನು ಬರೆದ ಗಿಬ್ರಾನ್ ಜಗತ್ತಿಗೆ ಪ್ರೀತಿಯನ್ನು ಅಭಿವ್ಯಕ್ತಿಸಲು ವಿಶೇಷ ಭಾಷೆಯೊಂದನ್ನು ನೀಡಿದ. ಪ್ರಣಯ, ಸ್ನೇಹ, ಪ್ರೇಮ, ವಿಷಾದದ ದೀಪಗಳನ್ನು ಕಾವ್ಯಾಮೃತದ ಮೂಲಕ ಜಗತ್ತಿಗೆ ನೀಡಿದ.

‘ಈ ಜಗತ್ತಿನಲ್ಲಿ ಪ್ರೀತಿ ಪ್ರೇಮಕ್ಕೆ ಸೋಲದ ಮನಸ್ಸುಗಳಿಲ್ಲ. ದುಖಃ, ವಿಷಾದ, ವಿರಹ, ಉತ್ಕಟವಾದ ಪ್ರೀತಿ, ಆಳವಾದ ಅವಮಾನಗಳನ್ನು ಅನುಭವಿಸದೇ ಪ್ರೀತಿ ಕೈಗೆಟಕುವುದಿಲ್ಲ. ಏಕೆಂದರೆ ಪ್ರೀತಿ ಎಂಬುದು ಎಲ್ಲ ಋತುಮಾನಗಳಲ್ಲೂ ಬೆಳೆದು ಅರಳುವ ಪುಷ್ಪ. ಪ್ರೀತಿಯನ್ನು ಒಂದು ಶಾಸನದಂತೆ ಸ್ವೀಕರಿಸಿದ ಖಲೀಲ್ ಗಿಬ್ರಾನ್ ಅದರ ಶಿಕ್ಷೆಯ ಜೊತೆಗೆ ಪ್ರೀತಿಯನ್ನು ಸುಖಿಸುತ್ತಾನೆ. ಅದಕ್ಕೆ ಅವನು ಪ್ರೀತಿಸಿದ ತಾಯಿ, ಸಹೋದರ, ಸಹೋದರಿ, ಗೆಳತಿಯರನ್ನು ಅಪಾರವಾಗಿ ಗೌರವಿಸುತ್ತಾನೆ. ಅರೆಬಿಕ್, ಇಂಗ್ಲಿಷ್ ಭಾಷೆಗಳನ್ನು ಸಮಾನ ಸಾಮರ್ಥ್ಯದಿಂದ ಬಳಸುತ್ತಿದ್ದ ಗಿಬ್ರಾನ್ ಬರಿ ಪ್ರೇಮಿಯಲ್ಲದೆ, ಚಿರನೂತನ ದಾರ್ಶನಿಕ ಮತ್ತು ಧರ್ಮನಿಷ್ಠ ವ್ಯಕ್ತಿಯಾಗಿದ್ದ.
ಖುಷಿ, ಖುಷಿಯಲ್ಲ
ಮುಖವಾಡ ಕಳಚಿದ ನಿಮ್ಮ ದುಃಖ
ಮತ್ತು ತನ್ನಿಂದ ತಾನೇ ತುಂಬಿಕೊಳ್ಳುವ ಬಾವಿ
ನಿಮ್ಮ ನಗು ಚಿಮ್ಮುವ ಈ ಬಾವಿ
ಬಹುತೇಕ ತುಂಬಿಕೊಂಡಿರುವುದು ಕಣ್ಣೀರಿನಿಂದ.
ಅವನ ಪರವಶಗೊಳಿಸುವ ಪ್ರೇಮ ಕಾವ್ಯ ಓದುಗನನ್ನು ತನ್ನ ಸುಳಿಯಲ್ಲಿ ಸುತ್ತಿ ಸುತ್ತಿ ಸೆಳೆಯುತ್ತದೆ. ಅವನ ಪ್ರೀತಿಯ ಅನುಭವ ಕೆಂಡದಂತೆ ಸುಡುತ್ತದೆ. ಪ್ರೇಮ ಕೇವಲ ವ್ಯಕ್ತಿಗತ ಸುಖ ಸಂವೇದನೆಗೆ ಮೀಸಲಾಗದೆ ಹೃದಯವನ್ನು ಬೆಳಗುವ ದೀಪವಾಗುತ್ತದೆ.
ಸುಮಾರು 18 ಕೃತಿಗಳನ್ನು ರಚಿಸಿರುವ ಗಿಬ್ರಾನ್ ಕಥೆ, ಕಾದಂಬರಿ ಮತ್ತು ಕಾವ್ಯಗಳ ನಡುವೆ ಇರುವ ಕೃತಕ ಗೆರೆಗಳನ್ನು ಅಳಿಸಿ ಹಾಕುತ್ತಾನೆ. ವೈವಿಧ್ಯಮಯವಾದ ಆಸಕ್ತಿಯನ್ನು ಹೊಂದಿದ ಗಿಬ್ರಾನ್ ಅದ್ಭುತ ರೇಖಾ ಚಿತ್ರಾಕಾರ. 1904ರಲ್ಲಿ ಬೋಸ್ಟನ್ ಸ್ಟುಡಿಯೋದಲ್ಲಿ ಕಲಾ ಪ್ರದರ್ಶನವು ಏರ್ಪಾಟಾಗಿತ್ತು. ಅವನ ಮೊದಲ ಕೃತಿಯೆಂದರೆ ಸಂಗಿತವನ್ನು ಕುರಿತದ್ದಾಗಿತ್ತು. ಊರೂರು ಸುತ್ತುತ್ತಿದ್ದ ಗಿಬ್ರಾನ್ ಪ್ಯಾರಿಸ್ ನಗರಕ್ಕೂ ಭೇಟಿ ನೀಡಿದ್ದ. ಪ್ಯಾರಿಸ್ ನಗರದಲ್ಲಿ ಆ ಕಾಲದ ಪ್ರಸಿದ್ಧ ವ್ಯಕ್ತಿಗಳ ರೇಖಾ ಚಿತ್ರಗಳನ್ನು ಬಿಡಿಸತೊಡಗಿದ. ತಾರುಣ್ಯದಲ್ಲಿ ಆವೇಶ, ಕೋಪ, ತೀವ್ರ ಪ್ರೇಮದ ಭಾವನೆಗಳ ಮೂರ್ತರೂಪದಂತಿದ್ದ ಖಲೀಲ್ ತನಗೆ ಅರಿವಿಲ್ಲದೆಯೇ ತನ್ನೊಳಗೊಬ್ಬ ಸಂತನನ್ನು ರೂಪಿಸಿಕೊಳ್ಳತೊಡಗಿದ್ದ.
ಪ್ಯಾರಿಸ್ನಿಂದ ನ್ಯೂಯಾರ್ಕಿಗೆ ಮರಳಿದ ಗಿಬ್ರಾನ್ ಮುರಿದ ರೆಕ್ಕೆಗಳು (Broken wings) ಎಂಬ ಕೃತಿಯನ್ನು ಅರೇಬಿಕ್ ಭಾಷೆಯಲ್ಲಿ ರಚಿಸಿದ. ಈ ಪುಸ್ತಕವು ಪಾಶ್ಚಿಮಾತ್ಯ ಪ್ರಭಾವದಿಂದ ರಚಿಸಲ್ಪಟ್ಟಿದ್ದರೂ ಗಿಬ್ರಾನ್ ಸ್ಪರ್ಶದಿಂದ ಹೂವಿನಂತೆ ನಳನಳಿಸುತ್ತಿತ್ತು ಎಂದು ವಿಮರ್ಶಕರು ಅಭಿಪ್ರಾಯ ಪಡುತ್ತಾರೆ. ಆಗ ದಿನದಿಂದ ದಿನಕ್ಕೆ ಗಿಬ್ರಾನ್ನ ಜನಪ್ರಿಯತೆ ಹೆಚ್ಚುತ್ತಲೇ ಹೋಯಿತು. ಪೋಯಟ್ರಿ ಸೊಸೈಟಿ ಆಫ್ ಅಮೆರಿಕಾದಲ್ಲಿ ಅವನ ಕವನಗಳು ಓದಲ್ಪಟ್ಟವು. ಇದು ಆತನ ಖ್ಯಾತಿಗೆ ಸಾಕ್ಷಿ.

ಆತನ ನಿರ್ಲಿಪ್ತತನ ಕುರಿತು….
ನಿಮ್ಮಲ್ಲಿ ಕೆಲವರು ನನ್ನನ್ನು, ನಿರ್ಲಿಪ್ತನೆಂದೂ,
ಏಕಾಂಗಿತನದ ಸೊಕ್ಕನ್ನು ತಲೆಗೇರಿಸಿಕೊಂಡವನೆಂದು ತಿಳಿದುಕೊಂಡಿದ್ದೀರಿ.
ಗಿಡ ಮರಗಳು ಕರೆದ ಸಭೆಗೆ ಹೋಗುತ್ತಾನೆಂದೂ
ಮನುಷ್ಯರನ್ನು ನಿರ್ಲಕ್ಷಿಸುತ್ತಾನೆಂದೂ ಮಾತನಾಡಿಕೊಳ್ಳುತ್ತೀರಿ.
ಬೆಟ್ಟ ಗುಡ್ಡಗಳ ಮೇಲೆ ಕುಳಿತು ನಮ್ಮ ಊರನ್ನು ಕೀಳಾಗಿ ಕಾಣುತ್ತಾನೆಂದು ಭಾವಿಸಿರುತ್ತೀರಿ.
ಹೌದು ನಿಜ, ನಾನು ಬೆಟ್ಟಗಳನ್ನೇರಿದ್ದು ದರ್ಗಮ ಜಾಗಗಳಲ್ಲಿ ಓಡಾಡಿದ್ದು
ಅಷ್ಟು ಮೇಲೆ ಹತ್ತದೆ, ಅಷ್ಟು ದೂರ ಹೋಗದೆ
ನಿಮನ್ನೆಲ್ಲ ನೋಡುವುದು ಸಾಧ್ಯವಿತ್ತೆ?
ದೂರ ಹೋಗದ ಹೊರತು
ಹತ್ತಿರವಾಗೋದು ಹೇಗೆ ಸಾಧ್ಯ?
ಗಿಬ್ರಾನ್ನಿಗೆ 1921ರ ವೇಳೆಗೆ ಆರೋಗ್ಯ ಕೈಕೊಡಲಾರಂಭಿಸಿತು. ವೈದ್ಯರು ಅವನನ್ನು ನಗರದಿಂದ ದೂರವಿರುವಂತೆ ಸಲಹೆ ಕೊಟ್ಟರು. ಸಮುದ್ರ ತೀರದ ಕಾಟೇಜ್ ಒಂದರಲ್ಲಿ ವಾಸಿಸತೊಡಗಿದ ಗಿಬ್ರಾನ್, ಅರೇಬಿಕ್ ಭಾಷೆಯಲ್ಲಿ ಶ್ರೇಷ್ಠ ಕಾವ್ಯವನ್ನು ರಚಿಸಿದ ಎಂದು ಬಲ್ಲವರು ಹೇಳುತ್ತಾರೆ.
ಇಂದಿಗೂ ಗಿಬ್ರಾನ್ನನ್ನು ನೆನೆಸಿಕೊಳ್ಳುವುದು ಆತನ ಮುಖ್ಯ ಕೃತಿ ‘ದಿ ಪ್ರಾಫೆಟ್’ ಕಾರಣಕ್ಕಾಗಿ. ಆ ಕೃತಿಯು ಆತನನ್ನು ಜನಪ್ರಿಯತೆಯ ತುತ್ತತುದಿಗೆ ಏರಿಸಿತು. ಆ ಸಂದರ್ಭದಲ್ಲಿಯೇ ಬರ್ಬೊರ ಯೆಂಗ್ ಎಂಬ ಯುವ ಕವಯತ್ರಿಯನ್ನು ಭೇಟಿಯಾದ. ಅವನು ಬದುಕಿರುವವರೆಗೂ ಆತನ ಕಾರ್ಯದರ್ಶಿಯಾಗಿ ಆಕೆ ಕಾರ್ಯನಿರ್ವಹಿಸಿದಳು.
ಧರ್ಮ, ದೇವ ಯಾವುದಾದರೂ ಇದೆಯೇ?
ಹೊಟ್ಟೆ ತುಂಬಿಸುವ ಧರ್ಮ ಯಾವುದಾದರೂ ಇದೆಯೇ?
ದೇವನನ್ನು ತೋರಿಸುವ ಒಬ್ಬನಾದರೂ ಪುರೋಹಿತನಿದ್ದಾನೆಯೇ?
ನಾನಂತೂ ಕಾಣೆ.
ಸ್ಯಾಂಡ್ ಅಂಡ್ ಫೋಮ್ ಮತ್ತು ಜೀಸಸ್ ಸನ್ ಆಫ್ ಎ ಮ್ಯಾನ್, ಈತನ ಕೊನೆಗಾಲದ ಕೃತಿಗಳು. ಆತ ಬದುಕಿದ್ದಾಗ ಮತ್ತೊಂದು ಮಹತ್ವದ ಕೃತಿಯಾದ ದಿ ಅರ್ಥ್ ಆಫ್ ದಿ ಗಾಡ್ ಪ್ರಕಟವಾಯಿತು. ಅತಿಯಾದ ಕುಡಿತ, ತೀವ್ರ ಅನಾರೋಗ್ಯದಿಂದ ತೀರಿಕೊಂಡ. ತನ್ನ ಮಾತೃಭೂಮಿ ಲೆಬನಾನ್ನಲ್ಲಿಯೇ ತನ್ನ ಅಂತ್ಯಕ್ರಿಯೆಯನ್ನು ನಡೆಸಬೇಕೆಂಬ ಗಿಬ್ರಾನ್ನ ಆಸೆಯನ್ನು ಈಡೇರಿಸಲಾಯಿತು. ಆತನ ಪುಸ್ತಕಗಳಿಂದ ಬಂದ ಹಣವನ್ನು ಆತನ ಹುಟ್ಟಿದ ಊರಿನ ಅಭಿವೃದ್ಧಿ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ.
ಗಿಬ್ರಾನ್ನ ತೀವ್ರ ವ್ಯಾಮೋಹ, ಅಂತರಗಂಗೆಯಂತೆ ಚಿಮ್ಮುವ ಪ್ರೀತಿಯನ್ನು ಕಾಣಬೇಕೆಂದರೆ ಮೇರಿ ಹಸ್ಕಲ್ಗೆ ಅವನು ಬರೆದಿರುವ ಪತ್ರಗಳನ್ನು ಓದಬೇಕು. ಮೇರಿ ಹಸ್ಕಲ್ ತನ್ನ ಪ್ರಿಯತಮನ ನೆನಪಿಗಾಗಿ ಆತನ ಎಲ್ಲ ಪುಸ್ತಕ ಮತ್ತು ಕಲಾಕೃತಿಗಳನ್ನು ಜಾರ್ಜಿಯಾದ ಟೇಲಿಫೇರ್ ಮ್ಯೂಸಿಯಂ ಆಫ್ ಆರ್ಟ್ಸ್ಗೆ ದಾನ ಮಾಡಿದಳು. ಅದು ಈಗ ಗಿಬ್ರಾನ್ನನ್ನು ಕುರಿತ ಅತಿ ದೊಡ್ಡ ಮ್ಯೂಸಿಯಂ ಆಗಿದೆ.
ಗಿಬ್ರಾನ್ ಅರೇಬಿಕ್ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ. ಪ್ರಾಫೆಟ್ ಪುಸ್ತಕ ನೂರಕ್ಕೂ ಹೆಚ್ಚು ಭಾಷೆಗಳಲ್ಲಿ ಪ್ರಕಟವಾಗಿದೆ. ಏಳುನೂರಕ್ಕೂ ಹೆಚ್ಚು ವ್ಯಕ್ತಿಗಳ ಛಾಯಾಚಿತ್ರ ಬಿಡಿಸಿದ ದಾಖಲೆಯೊಂದಿಗೆ ಶೇಕ್ಸ್ಪಿಯರ್, ಲಾವೋಟ್ಸೆ ಬಿಟ್ಟರೆ ಅತಿ ಹೆಚ್ಚು ಓದಲ್ಪಡುವ ಕವಿ ಖಲೀಲ್ ಗಿಬ್ರಾನ್.
ಪ್ರೇಮ ಮಧುರಾಕ್ಷರ, ಪ್ರೇಮ ಅಜರಾಮರ, ಈ ಜಗತ್ತಿನಲ್ಲಿ ಪ್ರೀತಿಗೆ, ಪ್ರೇಮಕ್ಕೆ ಸೋಲದ ಮನಸ್ಸಿಲ್ಲ, ಮನುಷ್ಯನಿಲ್ಲ, ಪ್ರೇಮಕ್ಕಾಗಿ ಇಡೀ ಜೀವಮಾನವನ್ನೇ ಸವೆಸಿದ, ಮುಡಿಪಾಗಿಟ್ಟ ಲಕ್ಷಾಂತರ ಮನಸ್ಸುಗಳನ್ನು ಒಮ್ಮೆ ಕೇಳಿ ನೋಡಿ, ನೀವು ಯಾರನ್ನಾದರೂ ಲವ್ ಮಾಡಿದ್ದೀರಾ ಅಂತ, ಅವರು ತಟ್ಟನೆ ದಶಕಗಳ ಕಾಲ ಹಿಂದಕ್ಕೆ ಹೋಗಿ ಗತಕಾಲದ ಪ್ರೇಮವನ್ನು ನೆನೆದು ಒಮ್ಮೆ ಖುಷಿ, ನಿಟ್ಟುಸಿರು, ವಿಷಾದದ ಛಾಯೆಯಲ್ಲಿ… ಅದೊಂದು ಅಮೂಲ್ಯ, ಅಮೃತ ಗಳಿಗೆ ಎಂದೇ ಉದ್ಗರಿಸುತ್ತಾರೆ.
ಗಿಬ್ರಾನನ ಸಾಲುಗಳನ್ನು ನೋಡಿ… ಬದುಕಿನ ಪವಿತ್ರ ಭಾವದಿಂದ ನೀನೊಬ್ಬಳೇ ಜಗತ್ತಿನ ಭಾಗದಿಂದ ಬಂದ ಗೆಳತಿಯಾಗಿರುವೆ, ನೀನು ಎಲ್ಲ ಒಳ್ಳೆಯದಕ್ಕೂ ಒಡನಾಡಿ, ನಿನ್ನ ಇರುವಿಕೆಯ ಅಂತರ ಎಷ್ಟೆ ದೂರದ್ದಾದರೂ ಹೃದಯಕ್ಕೆ ಬಹಳ ಹತ್ತಿರ ಇರುವೆ.
ಗಿಬ್ರಾನನ ಗೋರಿಕಲ್ಲಿನ ಮೇಲೆ ಬರೆದಿರುವ ಅಕ್ಷರ ಸಾಲುಗಳು… ‘ನಾನು ಸಜೀವ, ನಿಮ್ಮಂತೆ ನಿಂತಿರುವೆ ನಿಮ್ಮ ಬಳಿಯೇ, ಒಂದರೆಕ್ಷಣ ಕಣ್ಮುಚ್ಚಿ ಸುತ್ತ ನೋಡಿ ನಿಮ್ಮೆದುರೇ ನಿಂತ ನನ್ನ ಕಾಣುವಿರಿ’. ಗಿಬ್ರಾನನ ಕಾವ್ಯದ ಘನತೆಯನ್ನು ಅರಿಯಬೇಕಾದರೆ ಆತನ ಪ್ರವಾದಿ ಪುಸ್ತಕದ ಸಾಲುಗಳನ್ನು ಓದಬೇಕು. ಪ್ರೇಮದ ದಿವ್ಯತೆಯಲ್ಲಿಯೂ ಚೆಲುವಿನ ಬೆಳಕಿನಲ್ಲಿಯೂ ಬದುಕಲೆಂದೇ ನಾನು ಬಂದೆ ಮಾನವತೆಯೇ ಬುವಿಯ ಮೇಲಿನ ದೈವಿ ಆತ್ಮವಾಗಿದೆ. ನೀವು ನಿಮ್ಮ ನುಡಿಗಳಾಳಕ್ಕಿಂತಲೂ ಆಳವಾದ ತಳಕ್ಕಿಳಿಯುವಿರಿ, ಸಕಲ ನಾದಕ್ಕಿಂತಲೂ ಆಳವಾದ ಆಳವದು. ಅದು ಭೂತಾಯಿಯ ಹೃದಯದಾಳದಲ್ಲಿಡಗಿದೆ. ಅಲ್ಲಿ ನೀವು ಅವನೊಡನೆ ಏಕಾಂಗಿಯಾಗುವಿರಿ, ಆ ‘ಅವ’ ಬಾನೊಳಗಿನ ಆಕಾಶಗಂಗೆ ಪಥದಲ್ಲಿಯೂ ನಡೆದಾಡಬಲ್ಲವ. ಯಾವುದನ್ನಿಂದು ನನ್ನ ನಾಲಿಗೆಯು ನುಡಿಯುತ್ತಿರುವುದೋ ಅದನ್ನೆ ನಾಳಿನ ಅಸಂಖ್ಯ ನಾಲಗೆಗಳು ನುಡಿದಾವು! ‘ನಾನು ಹೇಳುವುದರಲ್ಲಿ ಅರ್ಧ ಅರ್ಥವಿಲ್ಲದ್ದು, ಆದರೂ ಹೇಳುತ್ತೇನೆ. ಉಳಿದರ್ಧ ನಿನ್ನ ತಲುಪಬಹುದೆಂಬ ನಿರೀಕ್ಷೆಯಲ್ಲಿ.’
ಗೆಳೆಯನಿಗೆ ಹೇಳಿದೆ,
‘ನೋಡು ಆಕೆ ಹೇಗೆ ಅವನ ತೋಳ ಮೇಲೆ ಒರಗಿಕೊಂಡಿದ್ದಾಳೆ?
ನಿನ್ನೆ ಆಕೆ ನನ್ನ ತೋಳಿನಲ್ಲಿದ್ದಳು’
ಅವನಂದ, ‘ನಾಳೆ ಆಕೆ ನನ್ನ ತೋಳಿನಲ್ಲಿರುತ್ತಾಳೆ’
ಗೆಳೆಯನಿಗೆ ಹೇಳಿದೆ,
‘ನೋಡು ಆಕೆ ಹೇಗೆ ಅವನ ಪಕ್ಕ ಕೂತುಕೊಂಡಿದ್ದಾಳೆ?
ನಿನ್ನೆ ಆಕೆ ನನ್ನ ಬಳಿ ಕೂತಿದ್ದಳು’
ಅವನಂದ, ‘ನಾಳೆ ಆಕೆ ನನ್ನ ಪಕ್ಕ ಕೂಡುತ್ತಾಳೆ’
ಗೆಳೆಯನಿಗೆ ಹೇಳಿದೆ
‘ನೋಡು ಆಕೆ ಹೇಗೆ ಅವನ ಕಪ್ನಲ್ಲಿ ಕುಡಿಯುತ್ತಿದ್ದಾಳೆ?
ನಿನ್ನೆ ಆಕೆ ನನ್ನ ಕಪ್ ಎಂಜಲು ಮಾಡಿದ್ದಳು’
ಅವನಂದ, ‘ನಾಳೆ ಆಕೆ ನನ್ನ ಕಪ್ಗೆ ತುಟಿ ಒಡ್ಡುತ್ತಾಳೆ’
ಗೆಳೆಯನಿಗೆ ಹೇಳಿದೆ
‘ನೋಡು ಆಕೆ ಹೇಗೆ ಅವನ ಉನ್ಮತ್ತಳಾಗಿ ನೋಡುತ್ತಿದ್ದಾಳೆ?
ನಿನ್ನೆ ಆಕೆ ನನ್ನ ಕಣ್ಣಲ್ಲಿ ಕಣ್ಣಿಟ್ಟಿದ್ದಳು’
ಅವನಂದ, ‘ನಾಳೆ ಆಕೆ ನನ್ನ ಕಣ್ಣ ಕದಿಯುತ್ತಾಳೆ’
ಗೆಳೆಯನಿಗೆ ಹೇಳಿದೆ
‘ನೋಡು ಆಕೆ ಹೇಗೆ ಅವನ ಕಿವಿಯಲ್ಲಿ ಪ್ರೇಮಗೀತೆ ಹಾಡುತ್ತಿದ್ದಾಳೆ?
ನಿನ್ನೆ ಆಕೆ ಅದೇ ಹಾಡನ್ನ ನನ್ನ ಕಿವಿಯಲ್ಲಿ ಹಾಡಿದ್ದಳು’
ಅವನಂದ, ‘ನಾಳೆ ಆಕೆ ನನ್ನ ಕಿವಿಯಲ್ಲಿ ಅದೇ ಹಾಡ ಗುಣುಗುಣಿಸುತ್ತಾಳೆ’
ಗೆಳೆಯನಿಗೆ ಹೇಳಿದೆ
‘ನೋಡು ಆಕೆ ಹೇಗೆ ಅವನ ಅಪ್ಪಿಕೊಂಡಿದ್ದಾಳೆ?
ನಿನ್ನೆ ಆಕೆ ನನ್ನ ತಬ್ಬಿಕೊಂಡಿದ್ದಳು’
ಅವನಂದ, ‘ನಾಳೆ ಆಕೆ ನನ್ನ ತೋಳ ಬಳಸುತ್ತಾಳೆ’
ಗೆಳೆಯನಿಗೆ ಹೇಳಿದೆ,
ಎಂಥ ವಿಚಿತ್ರ ಹೆಣ್ಣು ಆಕೆ?
ಅವನಂದ, ‘ಆಕೆಯ ಹೆಸರು ಬದುಕು’
ಪ್ರಸ್ತುತ ಪರಿಸ್ಥಿತಿಯಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್, ದಲಿತ, ಜೈನ, ಬುದ್ಧ, ಪಾರ್ಸಿ ಜಗತ್ತಿನ ಅನೇಕ ಧರ್ಮ-ಧರ್ಮಗಳ ನಡುವೆ ನಡೆಯುತ್ತಿರುವ ಧರ್ಮದ ಹೆಸರಿನ ಆಂತರಿಕ ಯುದ್ಧ ಮತ್ತು ಹೋರಾಟಗಳು, ಕೇವಲ ಅಸ್ತಿತ್ವದ ಪ್ರಶ್ನೆಯಾಗಿ ತೋರುವುದಿಲ್ಲ. ಈ ದೇಶ ಒಂದು ಧರ್ಮದ ಜನರಿಗಾಗಿ ಮಾತ್ರ, ಎಂಬ ಇರುವಿಕೆಯನ್ನು ಕಲ್ಪಿಸಿಕೊಳ್ಳಲಾಗದ ಕೆಟ್ಟ ಮನಸ್ಥಿತಿಯ ಪ್ರಸ್ತುತ ಪರಿಸ್ಥಿತಿಗೆ ಉತ್ತರ- ಬಲಿಗಂಬದ ಮೇಲೆ ಕೊರಳನ್ನಿಡುವ ತನಕ ದಂಗೆ ಏಳದ ನಾಡನ್ನು ಕಂಡು ದುಃಖವಾಗುತ್ತಿದೆ ನನಗೆ… ಎಂದು ಪ್ರೇಮಕವಿ ಬರೆಯುತ್ತಾನೆ.
ಪೀಡಕನನ್ನೇ ನಾಯಕನೆಂದು ತಿಳಿದಿರುವ
ಮಿನುಗು ಮಾತುಗಳನ್ನಾಡಿ ದೋಚುವ
ಲೂಟಿಕೋರನನ್ನೇ ದಾನಶೂರನೆಂದು
ತಿಳಿದಿರುವ ಈ ದೇಶಕ್ಕಾಗಿ ಮರುಕ ಪಡು!

ಇಡೀ ವಿಶ್ವವೇ ನನ್ನ ಮಾತೃಭೂಮಿ ಮತ್ತು ಎಲ್ಲ ಮನುಷ್ಯರು ನನ್ನ ದೇಶಿವಾಸಿಗಳು. ‘ನೀನು ನನ್ನ ಸಹೋದರ, ನಾ ನಿನ್ನ ಪ್ರೀತಿಸುತ್ತೇನೆ, ಯಾವಾಗ ನೀನು ನಿನ್ನ ಮಸೀದಿಯಲ್ಲಿ ಕಿಬ್ ಲಾಕ್ಕೆ ನೇರ ನಿಲ್ಲುವಿಯೋ, ದೇವರಿಗೆ ದೀರ್ಘದಂಡ ನಮಸ್ಕರಿಸುವೆಯೊ, ನಿನ್ನ ಚರ್ಚಿನಲ್ಲಿ ಮೊಣಕಾಲೂರಿ ಕೂರುವೆಯೋ ಆಗ ನಾನು ನೀನು ಇಬ್ಬರೂ ಒಂದೇ. ಒಂದೇ ಜಾತಿ, ಒಂದೇ ಧರ್ಮ, ಒಂದೇ ಕುಲ, ಅದು ವಿಶ್ವಮಾನವ ಧರ್ಮದವರು. ವಿಶ್ವ ಚೈತನ್ಯದ ಮಕ್ಕಳು. ಜಾತಿ, ಧರ್ಮ, ಸಂಸ್ಕೃತಿ, ವೇದ ಪುರಾಣ, ಬೈಬಲ್, ಖುರಾನ್, ಗ್ರಂಥ ಸಾಹಿಬ್ ಯಾವುದಾದರೂ ಕೊನೆಗೆ ಉಳಿಯುವುದು ಬಾಳಬೇಕಾದ ನೆಲದ ಮೇಲಿನ ಬದುಕೇ ಎಂದು ನಂಬಿಕೆಯನ್ನು ಪ್ರತಿವಾದಿಸುವ ವಿಶ್ವಮಾನ್ಯ ಕವಿ ಖಲೀಲ್ ಗಿಬ್ರಾನ್.

ಡಾ. ಎಂ. ಯೇಸುದಾಸ್ ಪರಯ
ಲೇಖಕರು, ನಿವೃತ್ತ ದೈಹಿಕ ಶಿಕ್ಷಣ ಪ್ರಾಧ್ಯಾಪಕರು, ನಿರ್ದೇಶಕರು. ಪ್ರಕಟಿತ ಕೃತಿಗಳು: ದೈಹಿಕ ಶಿಕ್ಷಣದ ತಾತ್ವಿಕ ಅಡಿಪಾಯಗಳು, ಜ್ಞಾನದೇವಿಗೆ, ಜ್ಞಾನಬುತ್ತಿ. ವಿಶೇಷ ಆಸಕ್ತಿಯ ಕ್ಷೇತ್ರ- ಸಮಾಲೋಚನೆ.




