ಇರಾನ್ನಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ಸರ್ಕಾರದ ವಿರುದ್ಧ ನಿರಂತರ ಪ್ರತಿಭಟನೆ ನಡೆಯುತ್ತಿದೆ. ಈ ನಡುವೆ ಪ್ರಸ್ತುತ ಇರಾನ್ನಲ್ಲಿರುವ ಭಾರತದ ನಾಗರಿಕರು, ಭಾರತೀಯ ಮೂಲದವರಿಗೆ, ಇರಾನ್ಗೆ ಪ್ರಯಾಣಿಸಲು ಮುಂದಾಗಿರುವ ನಾಗರಿಕರಿಗೆ ವಿದೇಶಾಂಗ ಸಚಿವಾಲಯವು ಪ್ರಯಾಣ ಸಲಹೆಯನ್ನು ನೀಡಿದೆ. ಸೂಕ್ತ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದೆ.
ಈ ಬಗ್ಗೆ ವಿದೇಶಾಂಗ ಸಚಿವಾಲಯವು ಅಧಿಸೂಚನೆ ಹೊರಡಿಸಿದ್ದು, “ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ಸೂಚನೆ ಬರುವವರೆಗೂ ಭಾರತೀಯ ಪ್ರಜೆಗಳು ಇಸ್ಲಾಮಿಕ್ ಗಣರಾಜ್ಯ ಇರಾನ್ಗೆ ತೀರ ಅನಿವಾರ್ಯವಿಲ್ಲದೆ ಪ್ರಯಾಣಿಸುವುದನ್ನು ತಪ್ಪಿಸಬೇಕು” ಎಂದು ಸೂಚಿಸಿದೆ.
ಇದನ್ನು ಓದಿದ್ದೀರಾ? ಶರಣಾಗುವ ಪ್ರಶ್ನೆಯೇ ಇಲ್ಲ: ಇರಾನ್ ಪರಮೋಚ್ಚ ನಾಯಕ ಗುಡುಗು
“ಪ್ರಸ್ತುತ ಇರಾನ್ನಲ್ಲಿರುವ ಭಾರತೀಯ ನಾಗರಿಕರು ಮತ್ತು ಭಾರತೀಯ ಮೂಲದವರು ಎಚ್ಚರಿಕೆ ವಹಿಸಿ. ಪ್ರತಿಭಟನೆಗಳು ಅಥವಾ ಪ್ರದರ್ಶನಗಳು ನಡೆಯುವ ಸ್ಥಳಕ್ಕೆ ಹೋಗದಿರಿ. ಟೆಹ್ರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ನೀಡುವ ಮಾಹಿತಿಯನ್ನು ವೆಬ್ಸೈಟ್ ಮತ್ತು ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳ ಮೂಲಕ ಸೂಕ್ಷ್ಮವಾಗಿ ಗಮನಿಸಿ” ಎಂದು ತಿಳಿಸಿದೆ.
“ಇರಾನ್ನಲ್ಲಿ ನಿವಾಸ ವೀಸಾಗಳ ಹೊಂದಿರುವ ಭಾರತೀಯ ಪ್ರಜೆಗಳು ಈಗಾಗಲೇ ಭಾರತೀಯ ರಾಯಭಾರ ಕಚೇರಿಯಲ್ಲಿ ನೋಂದಾಯಿಸದಿದ್ದರೆ, ನೋಂದಾಯಿಸಿಕೊಳ್ಳಿ” ಎಂದೂ ಸೂಚಿಸಲಾಗಿದೆ.
ಇರಾನ್ನಲ್ಲಿ ಹದಗೆಡುತ್ತಿರುವ ಆರ್ಥಿಕ ಪರಿಸ್ಥಿತಿ, ಹಣದುಬ್ಬರ, ಹೆಚ್ಚುತ್ತಿರುವ ಜೀವನ ವೆಚ್ಚ ಮತ್ತು ನಿರುದ್ಯೋಗದ ವಿರುದ್ಧ ಜನರು ಆಕ್ರೋಶಗೊಂಡಿದ್ದು ವ್ಯಾಪಾರಸ್ಥರು ಮತ್ತು ಯುವಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಇರಾನ್ನ 31 ಪ್ರಾಂತ್ಯಗಳ ಪೈಕಿ 26 ಪ್ರಾಂತ್ಯಗಳಲ್ಲಿ ಕಳೆದ 9 ದಿನಗಳಿಂದ ಪ್ರತಿಭಟನೆಗಳು ನಡೆಯುತ್ತಿದೆ.
ಪ್ರತಿಭಟನೆಗಳ ವೇಳೆ ಹಿಂಚಾಚಾರ ನಡೆದಿದ್ದು ಸುಮಾರು 20ರಿಂದ 31 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಮೂವರು ಮಕ್ಕಳು ಸೇರಿದ್ದಾರೆ ಎನ್ನಲಾಗಿದೆ. ಭದ್ರತಾ ಪಡೆಗಳು ಸುಮಾರು 1,000ಕ್ಕೂ ಹೆಚ್ಚು ಜನರನ್ನು ಬಂಧಿಸಿವೆ.





