ಸಿಂಧೂ ನದಿ ಹರಿವು ನಿಲ್ಲಿಸಿರುವ ಭಾರತ ಇದೀಗ ರಾವಿ ನೀರಿನ ಹರಿವು ಕಡಿಮೆ ಮಾಡಿ ಸಾಧಿಸಲು ಹೊರಟಿರುವುದೇನು? ಈ ಜಲಯುದ್ಧ ಪಾಕಿಸ್ತಾನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಪ್ರಶ್ನೆಗಳು ಸದ್ಯ ಹಲವರನ್ನು ಕಾಡುತ್ತಿದೆ.
ಈ ಹಿಂದೆ 2025ರ ಏಪ್ರಿಲ್ 23ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಭಾರತವು ಸಿಂಧೂ ಜಲ ಒಪ್ಪಂದವನ್ನು ಅಧಿಕೃತವಾಗಿ ತಡೆಹಿಡಿದಿದೆ. ಪಾಕಿಸ್ತಾನದ ಶೇ. 80-90ರಷ್ಟು ಕೃಷಿ ಸಿಂಧೂ ನದಿ ವ್ಯವಸ್ಥೆಯನ್ನೇ ಅವಲಂಬಿಸಿದೆ. ನೀರಿನ ಹರಿವು ಕಡಿಮೆಯಾಗಿರುವುದರಿಂದ ಪಾಕಿಸ್ತಾನದ ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯಗಳಲ್ಲಿ ಬೆಳೆಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಇದೀಗ ಪಂಜಾಬ್ ಮತ್ತು ಜಮ್ಮು-ಕಾಶ್ಮೀರ ಗಡಿಯಲ್ಲಿರುವ ಶಹಪುರ ಕಂಡಿ ಅಣೆಕಟ್ಟು (Shahpur Kandi Dam) ಯೋಜನೆಯು 2026ರ ಮಾರ್ಚ್ 31ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಇದರ ನಂತರ ಪಾಕಿಸ್ತಾನಕ್ಕೆ ಹರಿಯುತ್ತಿದ್ದ ಹೆಚ್ಚುವರಿ ರಾವಿ ನದಿ ನೀರನ್ನು ಭಾರತ ಸಂಪೂರ್ಣವಾಗಿ ಸ್ಥಗಿತಗೊಳಿಸಲು ಮುಂದಾಗಿದೆ.
ಬಹಳ ದಿನಗಳಿಂದ ವಿಳಂಬವಾಗಿದ್ದ ಶಹಪುರ್ ಕಂಡಿ ಅಣೆಕಟ್ಟು ಮಾರ್ಚ್ 31ರೊಳಗೆ ಪೂರ್ಣಗೊಳ್ಳಲಿದೆ. ಈ ಕಾರಣದಿಂದಾಗಿ ಪಾಕಿಸ್ತಾನಕ್ಕೆ ನೀರಿನ ಪ್ರವೇಶವನ್ನು ಇನ್ನಷ್ಟು ತಡೆಹಿಡಿಯಲು ಸರ್ಕಾರ ಸಜ್ಜಾಗಿದೆ. ಈ ಅಣೆಕಟ್ಟು ರಾವಿ ನದಿಯಿಂದ ನೆರೆಯ ರಾಷ್ಟ್ರಕ್ಕೆ ಹೆಚ್ಚುವರಿ ನೀರಿನ ಹರಿವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಸದ್ಯ ಬೇಸಿಗೆ ಬಹುತೇಕ ಆರಂಭವಾಗಿದ್ದು, ಪಾಕಿಸ್ತಾನದಲ್ಲಿ ಬೇಸಿಗೆಯಲ್ಲಿ ತಾಪಮಾನ ತ್ರೀವ್ರ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ಹಾಗಿರುವಾಗ ಇಂತಹ ಸಂದರ್ಭದಲ್ಲಿ ನೀರಿನ ಹರಿವು ನಿಲ್ಲಿಸುವುದರಿಂದಾಗಿ ಪಾಕಿಸ್ತಾನದಲ್ಲಿ ನೀರಿನ ಕೊರತೆಯನ್ನು ಇನ್ನಷ್ಟೂ ಹೆಚ್ಚಿಸುವ, ಪರಿಸ್ಥಿತಿಯನ್ನು ಮತ್ತಷ್ಟೂ ಹದಗೆಡಿಸುವ ಸಾಧ್ಯತೆಯಿದೆ.
ಇದನ್ನು ಓದಿದ್ದೀರಾ? ಸಿಂಧೂ ನದಿ ನೀರನ್ನು ತಡೆಹಿಡಿಯಲು ನಮ್ಮಲ್ಲಿ ಸಾಕಷ್ಟು ಅಣೆಕಟ್ಟುಗಳಿವೆಯೇ: ಕೇಂದ್ರಕ್ಕೆ ಖರ್ಗೆ ಪ್ರಶ್ನೆ
ಪಾಕಿಸ್ತಾನದ ಮೇಲೆ ಪ್ರಭಾವವೇನು?
ಸಿಂಧೂ ನದಿ ಹರಿವು ನಿಲ್ಲಿಸಿರುವ ಭಾರತ ಇದೀಗ ರಾವಿ ನೀರಿನ ಹರಿವು ಕಡಿಮೆ ಮಾಡಿ ಸಾಧಿಸಲು ಹೊರಟಿರುವುದೇನು? ಈ ಜಲಯುದ್ಧ ಪಾಕಿಸ್ತಾನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಪ್ರಶ್ನೆಗಳು ಸದ್ಯ ಹಲವರನ್ನು ಕಾಡುತ್ತಿದೆ.
ಅಡಿಪಾಯ ಹಾಕಿದ ಸುಮಾರು ಮೂರು ದಶಕಗಳ ನಂತರ, ಸದ್ಯ ಶಹಪುರ್ ಕಂಡಿ ಅಣೆಕಟ್ಟು ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಶಹಪುರ್ ಕಂಡಿ ಅಣೆಕಟ್ಟನ್ನು ಮೊದಲು 1979ರಲ್ಲಿ ಯೋಜಿಸಲಾಗಿತ್ತು, ಮಾಜಿ ಪ್ರಧಾನಿ ಇಂದಿರಾ ಗಾಂಧಿ 1982ರಲ್ಲಿ ಅಡಿಪಾಯ ಹಾಕಿದ್ದರು. ಆದಾಗ್ಯೂ, ಪಂಜಾಬ್ ಮತ್ತು ಜಮ್ಮು-ಕಾಶ್ಮೀರ ಸರ್ಕಾರಗಳ ನಡುವಿನ ಆಂತರಿಕ ವೈರುಧ್ಯದಿಂದಾಗಿ ನಿರ್ಮಾಣವನ್ನು ಸ್ಥಗಿತಗೊಳಿಸಲಾಗಿತ್ತು. ಅಂತಿಮವಾಗಿ, 2008ರಲ್ಲಿ, ಅಣೆಕಟ್ಟಿನ ನಿರ್ಮಾಣವನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲಾಯಿತು.

ಈ ಯೋಜನೆಯ ವೆಚ್ಚ 3,394.49 ಕೋಟಿ ರೂ.ಗಳಾಗಿದ್ದು, ಇದರಲ್ಲಿ ‘ಐದು ನದಿಗಳ ನಾಡು’ ಎಂದು ಕರೆಯಲಾಗುವ ಪಂಜಾಬ್ 2,694.02 ಕೋಟಿ ರೂ.ಗಳನ್ನು ಕೊಡುಗೆಯಾಗಿ ನೀಡುತ್ತಿದೆ. ಉಳಿದದ್ದನ್ನು ಭಾರತ ಸರ್ಕಾರ ಹೂಡಿಕೆ ಮಾಡುತ್ತದೆ. ಈ ಅಣೆಕಟ್ಟು 55.5 ಮೀಟರ್ ಎತ್ತರವಿದ್ದು, 7.7 ಕಿಮೀ ಉದ್ದದ ಜಲಮಾರ್ಗವನ್ನು ಒಳಗೊಂಡಿದೆ. ಸೋಮವಾರ (ಫೆಬ್ರವರಿ 16) ಜಮ್ಮು-ಕಾಶ್ಮೀರ ಸಚಿವ ಜಾವೇದ್ ಅಹ್ಮದ್ ರಾಣಾ ಅವರು ಶಹಪುರ್ ಕಂಡಿ ಅಣೆಕಟ್ಟು ಮಾರ್ಚ್ 31ರೊಳಗೆ ಪೂರ್ಣಗೊಳ್ಳಲಿದೆ ಮತ್ತು ಹೀಗಾಗಿ, ರಾವಿ ನದಿಯಿಂದ ಹೆಚ್ಚುವರಿ ನೀರು ಪಾಕಿಸ್ತಾನಕ್ಕೆ ಹರಿಯುವುದನ್ನು ನಿಲ್ಲಿಸಲಾಗುತ್ತದೆ ಎಂದು ಘೋಷಿಸಿದ್ದಾರೆ.
ಸದ್ಯ ಈ ಯೋಜನೆ ಪೂರ್ಣಗೊಂಡ ನಂತರ, ಅಣೆಕಟ್ಟು ಭಾರತಕ್ಕೆ ಲಾಭ ಉಂಟು ಮಾಡುವ ನಿರೀಕ್ಷೆಯಿದೆ. ಅಣೆಕಟ್ಟು ರೈತರಿಗೆ ಹೆಚ್ಚುವರಿ 91,856 ಎಕರೆ ಕೃಷಿ ಭೂಮಿಗೆ, ವಿಶೇಷವಾಗಿ ರಾಜಸ್ಥಾನದ ಬಾರಿ ದೋಬ್ ಕಾಲುವೆ (Upper Bari River) ಮೂಲಕ ನೀರಾವರಿ ಮಾಡಲು ಅವಕಾಶ ನೀಡುತ್ತದೆ ಎಂದು ಪಂಜಾಬ್ ಸರ್ಕಾರ ಯೋಜಿಸಿದೆ.
ಇದನ್ನು ಓದಿದ್ದೀರಾ? ಸಿಂಧೂ ನದಿ ನೀರು ನಿಲ್ಲಿಸಲು 20 ವರ್ಷ ಬೇಕು; ಮೋದಿ ಸರ್ಕಾರ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದೆ: ಶಂಕರಾಚಾರ್ಯ ಸ್ವಾಮೀಜಿ
ಶಹಪುರ್ ಕಂಡಿ ಅಣೆಕಟ್ಟು ಯೋಜನೆಯಿಂದಾಗಿ ಪಂಜಾಬ್ಗೆ 12,355 ಎಕರೆ ಕೃಷಿ ಭೂಮಿ, ಜಮ್ಮು-ಕಾಶ್ಮೀರಕ್ಕೆ 79,501 ಎಕರೆ ಕೃಷಿ ಭೂಮಿ ಸೇರಲಿದೆ ಎಂಬುದು ಸರ್ಕಾರ ನಿರೀಕ್ಷೆ. ಇದಲ್ಲದೆ, ಈ ಅಣೆಕಟ್ಟು ಭಾರತದಲ್ಲಿ 206 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಹಕಾರಿಯಾಗಲಿದೆ. ಕೃಷಿ ಮತ್ತು ವಿದ್ಯುತ್ ಪ್ರಯೋಜನ ಪಡೆಯುವ ಜತೆಗೆ ಶಹಪುರ್ ಕಂಡಿ ಅಣೆಕಟ್ಟು ಉತ್ತರ ಭಾರತದಾದ್ಯಂತ ಜಲ ಕ್ರೀಡೆಗಳನ್ನು ಉತ್ತೇಜಿಸುವಲ್ಲಿ ಭಾರಿ ಉತ್ತೇಜನವನ್ನು ನೀಡುತ್ತದೆ.
ಪಾಕಿಸ್ತಾನದ ಮೇಲೆ ಪರಿಣಾಮವೇನು?
ಶಹಪುರ್ ಕಂಡಿ ಅಣೆಕಟ್ಟು ಪೂರ್ಣವಾದ ಬಳಿಕ ಭಾರತಕ್ಕೆ ಲಾಭವಾದರೆ ಪಾಕಿಸ್ತಾನದ ಮೇಲೆ ಗಮನಾರ್ಹ ಕೆಟ್ಟ ಪರಿಣಾಮ ಬೀರುತ್ತದೆ. ಏಕೆಂದರೆ ಇಲ್ಲಿಯವರೆಗೆ, ರಾವಿ ನದಿಯಿಂದ ಹೆಚ್ಚುವರಿ ನೀರು ಮಾಧೋಪುರದ ಮೂಲಕ ಪಾಕಿಸ್ತಾನಕ್ಕೆ ಹರಿಯುತ್ತಿತ್ತು. ರಾವಿ ನದಿಯು ಭಾರತದ ಗಡಿ ದಾಟಿ ಪಾಕಿಸ್ತಾನವನ್ನು ಪ್ರವೇಶಿಸುವ ಮೊದಲ ಜಿಲ್ಲೆ ನರೋವಾಲ್ ಆದರೂ ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಒಂದಾದ ಲಾಹೋರ್ ರಾವಿ ನದಿಯ ನೀರಿನ ಮೇಲೆ ಹೆಚ್ಚು ಅವಲಂಬಿತವಾಗಿದೆ. ಲಾಹೋರ್ನ ಅಂತರ್ಜಲ ಪೂರೈಕೆಗೆ ಈ ನದಿ ನಿರ್ಣಾಯಕವಾಗಿದೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸುಮಾರು 5.2 ಕೋಟಿ ಜನರು ಈ ನದಿ ವ್ಯವಸ್ಥೆಯನ್ನು ಜೀವನಾಡಿಯಾಗಿ ಅವಲಂಬಿಸಿದ್ದಾರೆ. ಪ್ರಾಂತ್ಯದ ಕೃಷಿ ಭೂಮಿಯ ಶೇ. 75ರಷ್ಟು ಭಾಗವು ಈ ನದಿ ನೀರನ್ನು ಬಳಸುತ್ತಿದೆ. ಇದಲ್ಲದೆ, ರಾವಿ ನದಿಯನ್ನು ಪುನರುಜ್ಜೀವನಗೊಳಿಸಲು ಮತ್ತು ಅದರ ದಡದಲ್ಲಿ ನಗರಾಭಿವೃದ್ಧಿಯನ್ನು ಉತ್ತೇಜಿಸಲು ಪಾಕ್ನ ಲಾಹೋರ್ ಆಡಳಿತ ಈಗಾಗಲೇ ರಾವಿ ನಗರಾಭಿವೃದ್ಧಿ ಪ್ರಾಧಿಕಾರ (RUDA) ನಂತಹ ಉಪಕ್ರಮವನ್ನು ನಡೆಸುತ್ತಿದೆ. ಈ ಯೋಜನೆಗಳಿಗೆ ಹಿನ್ನಡೆ ಉಂಟಾಗುವ ಸಾಧ್ಯತೆಯಿದೆ.
ದಕ್ಷಿಣ ಏಷ್ಯಾದ ಭದ್ರತೆ, ರಾಜಕೀಯ ಮತ್ತು ಆರ್ಥಿಕ ವ್ಯವಹಾರಗಳ ಬಗ್ಗೆ ವಿಶ್ಲೇಷಣೆ ನೀಡುವ ಆನ್ಲೈನ್ ವೇದಿಕೆ ಸೌತ್ ಏಷ್ಯನ್ ವಾಯ್ಸಸ್ (South Asian Voices – SAV) ಪ್ರಕಾರ ಭಾರತವು ರಾವಿಯಿಂದ ಪಾಕಿಸ್ತಾನಕ್ಕೆ ಹರಿಯುವ ಎಲ್ಲಾ ನೀರನ್ನು ನಿರ್ಬಂಧಿಸಿದರೆ, ಲಾಹೋರ್ ದಕ್ಷಿಣ ಆಫ್ರಿಕಾದ ಕೇಪ್ ಟೌನ್ ಅಥವಾ ಕೇಪ್ ಪಟ್ಟಣದಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಕೇಪ್ ಪಟ್ಟಣದಲ್ಲಿ ಕುಡಿಯುವ ನೀರಿನ ಕೊರತೆಯಿಂದಾಗಿ ಜನರು ದೀರ್ಘ ಸರತಿ ಸಾಲುಗಳಲ್ಲಿ ನಿಂತು ಕುಡಿಯುವ ನೀರು ಪಡೆಯಬೇಕಾಗಿದೆ. ಪಾಕಿಸ್ತಾನದಲ್ಲಿಯೂ ಇಂತಹ ಪರಿಸ್ಥಿತಿ ಉಂಟಾದರೆ ಸಾರ್ವಜನಿಕರ ಆಕ್ರೋಶ ಇನ್ನಷ್ಟೂ ಹೆಚ್ಚಾಗಬಹುದು ಎಂಬುದು ಸದ್ಯ ಪಾಕಿಸ್ತಾನ ಸರ್ಕಾರಕ್ಕೆ ಕಳವಳ.
ಈಗಾಗಲೇ ಸಿಂಧೂ ನದಿ ವಿಚಾರದಲ್ಲಿ ಭಾರತದ ಜಲಯುದ್ಧವನ್ನು ‘ನೀರಿನ ಆಯುಧೀಕರಣ’ ಎಂದು ಕರೆದಿರುವ ಪಾಕಿಸ್ತಾನ ನ್ಯಾಯಾಲಯದ ಕದ ತಟ್ಟಿದೆ. ಭಾರತ ಮಾತ್ರ ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಬಿಡಲಾಗುವುದಿಲ್ಲ ಎಂದಿದೆ. ಉಭಯ ರಾಷ್ಟ್ರಗಳ ಜಲಯುದ್ಧದಲ್ಲಿ ಸಾಮಾನ್ಯ ಜನರು ಸಂಕಷ್ಟಕ್ಕೆ ಗುರಿಪಡಿಸುವುದು ಎಷ್ಟು ಸರಿ ಎಂಬ ಪ್ರಶ್ನೆಯೂ ಇಲ್ಲಿ ಹುಟ್ಟಿದೆ. ಬೃಹತ್ ಮಾನವೀಯ ಬಿಕ್ಕಟ್ಟಿಗೆ ಕಾರಣವಾಗುವ ಈ ನದಿ ನೀರು ತಡೆಯುವ ಕ್ರಮವು ಅಂತಾರಾಷ್ಟ್ರೀಯವಾಗಿ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಯಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




