ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಓಮನ್ ಕರಾವಳಿಯಲ್ಲಿ ಮಾನವರಹಿತ ಡ್ರೋನ್ ಬೋಟ್ ಒಂದು ತೈಲ ಹಡಗಿಗೆ ಡಿಕ್ಕಿ ಹೊಡೆದ ಪರಿಣಾಮ ಹಡಗಿನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಓರ್ವ ಭಾರತೀಯ ಸಿಬ್ಬಂದಿ ಮೃತಪಟ್ಟಿದ್ದಾರೆ. ಹಡಗಿನಲ್ಲಿದ್ದ ಇತರ ಎಲ್ಲಾ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ಖಚಿತಪಡಿಸಿದ್ದಾರೆ.
ಮಾರ್ಚ್ 1ರ ಶನಿವಾರ ಮಸ್ಕತ್ ಗವರ್ನರೇಟ್ನ ಪೋರ್ಟ್ ಸುಲ್ತಾನ್ ಖಬೂಸ್ನಿಂದ ವಾಯುವ್ಯಕ್ಕೆ 52 ನಾಟಿಕಲ್ ಮೈಲಿ ದೂರದಲ್ಲಿ ಈ ಘಟನೆ ನಡೆದಿದೆ ಎಂದು ಓಮನ್ನ ಕಡಲ ಭದ್ರತಾ ಕೇಂದ್ರ ತಿಳಿಸಿದೆ. ದಾಳಿಗೊಳಗಾದ ಹಡಗನ್ನು ‘ಎಂಕೆಡಿ ವ್ಯೋಮ್’ ಎಂದು ಗುರುತಿಸಲಾಗಿದ್ದು, ಇದು ರಿಪಬ್ಲಿಕ್ ಆಫ್ ಮಾರ್ಷಲ್ ಐಲ್ಯಾಂಡ್ಸ್ನ ಧ್ವಜದಡಿ ಸಂಚರಿಸುತ್ತಿತ್ತು. ದಾಳಿಯ ವೇಳೆ ಹಡಗಿನಲ್ಲಿ ಸುಮಾರು 59,463 ಮೆಟ್ರಿಕ್ ಟನ್ ಸರಕು ಇತ್ತು ಎನ್ನಲಾಗಿದೆ.
ಅಧಿಕಾರಿಗಳ ಮಾಹಿತಿಯ ಪ್ರಕಾರ, ಮಾನವರಹಿತ ಡ್ರೋನ್ ಬೋಟ್ ಹಡಗಿಗೆ ಡಿಕ್ಕಿ ಹೊಡೆದ ತಕ್ಷಣವೇ ಮುಖ್ಯ ಎಂಜಿನ್ ಕೋಣೆಯಲ್ಲಿ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ. ಈ ದುರ್ಘಟನೆಯಲ್ಲಿ ಭಾರತೀಯ ಮೂಲದ ಓರ್ವ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಹಡಗಿನಲ್ಲಿ ಒಟ್ಟು 21 ಸಿಬ್ಬಂದಿಯಿದ್ದರು. ಅವರಲ್ಲಿ 16 ಮಂದಿ ಭಾರತೀಯರು, ನಾಲ್ವರು ಬಾಂಗ್ಲಾದೇಶೀಯರು ಮತ್ತು ಓರ್ವ ಉಕ್ರೇನ್ ಪ್ರಜೆ ಸೇರಿದ್ದಾರೆ. ಪ್ರಾಣಾಪಾಯದಿಂದ ಪಾರಾದ ಎಲ್ಲರನ್ನೂ ಕಡಲ ಭದ್ರತಾ ಕೇಂದ್ರದ ಸಮನ್ವಯದೊಂದಿಗೆ ಪನಾಮ ಧ್ವಜದಡಿ ಸಂಚರಿಸುವ ‘ಎಂವಿ ಸ್ಯಾಂಡ್’ ಎಂಬ ವಾಣಿಜ್ಯ ಹಡಗಿನ ಮೂಲಕ ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಇದನ್ನು ಓದಿದ್ದೀರಾ? ಇರಾನ್ನ ‘ಉಕ್ಕಿನ ಮನುಷ್ಯ’ ಆಯತೊಲ್ಲಾ ಅಲಿ ಖಮೇನಿ
ಹಾನಿಗೊಳಗಾದ ತೈಲ ಹಡಗಿನ ಮೇಲ್ವಿಚಾರಣೆಗಾಗಿ ಓಮನ್ನ ರಾಯಲ್ ನೇವಿ ತನ್ನ ನೌಕೆಯನ್ನು ನಿಯೋಜಿಸಿದ್ದು, ಆ ಪ್ರದೇಶದಲ್ಲಿ ಸಂಚರಿಸುವ ಇತರ ಹಡಗುಗಳಿಗೆ ಎಚ್ಚರಿಕೆ ಸಂದೇಶಗಳನ್ನು ರವಾನಿಸುತ್ತಿದೆ. ಆದರೆ, ಈ ದಾಳಿಯ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ.
ಇಸ್ಲಾಮಿಕ್ ರಿಪಬ್ಲಿಕ್ (ಇರಾನ್) ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಭಾರೀ ವೈಮಾನಿಕ ದಾಳಿಯ ನಂತರ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ದಟ್ಟವಾಗಿದೆ. ಇದರ ಬೆನ್ನಲ್ಲೇ, ಪರ್ಷಿಯನ್ ಕೊಲ್ಲಿಯ ಕಿರಿದಾದ ಪ್ರವೇಶ ದ್ವಾರವಾದ ಹಾರ್ಮುಜ್ ಜಲಸಂಧಿಯನ್ನು ಸಮೀಪಿಸುವ ಹಡಗುಗಳಿಗೆ ಇರಾನ್ ಎಚ್ಚರಿಕೆ ನೀಡಿದ್ದು, ಇತ್ತೀಚಿನ ಕಡಲ ದಾಳಿಗಳ ಹಿಂದೆ ಇರಾನ್ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.
ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ಬಳಿಕ ಮಧ್ಯಪ್ರಾಚ್ಯದಾದ್ಯಂತ ಉದ್ವಿಗ್ನತೆ ಭುಗಿಲೆದ್ದಿದ್ದು, ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳ ಮೇಲೆ ನಡೆಯುತ್ತಿರುವ ಎರಡನೇ ದಾಳಿ ಇದಾಗಿದೆ.
ಇದಕ್ಕೂ ಮುನ್ನ, 15 ಮಂದಿ ಭಾರತೀಯ ಸಿಬ್ಬಂದಿಯನ್ನು ಒಳಗೊಂಡಿದ್ದ ಪಲಾವು ದೇಶದ ಧ್ವಜ ಹೊಂದಿದ್ದ ‘ಸ್ಕೈಲೈಟ್’ ಎಂಬ ತೈಲ ಹಡಗಿನ ಮೇಲೆ ಓಮನ್ನ ಮುಸಂದಮ್ ಪರ್ಯಾಯ ದ್ವೀಪದ ಬಳಿ ದಾಳಿ ನಡೆಸಲಾಗಿತ್ತು. ಈ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದರು. ಮುಸಂದಮ್ನ ಖಸಬ್ ಬಂದರಿನಿಂದ ಉತ್ತರಕ್ಕೆ ಐದು ನಾಟಿಕಲ್ ಮೈಲಿ ದೂರದಲ್ಲಿ ಈ ದಾಳಿ ನಡೆದಿದ್ದು, ಹಡಗಿನಲ್ಲಿದ್ದ 20 ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿತ್ತು ಎಂದು ಓಮನ್ ಕಡಲ ಭದ್ರತಾ ಕೇಂದ್ರ ‘ಎಕ್ಸ್’ (X) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿತ್ತು. ಆದರೆ, ಆ ದಾಳಿಯಲ್ಲಿ ಬಳಸಲಾದ ಶಸ್ತ್ರಾಸ್ತ್ರದ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ.





