ಸೌದಿ ಅರೇಬಿಯಾದ ಜಿದ್ದಾದಲ್ಲಿ ಕಳೆದ ತಿಂಗಳು ನಡೆದ ಪೊಲೀಸ್ ಮತ್ತು ಮದ್ಯ ಕಳ್ಳ ಸಾಗಾಣಿಕೆದಾರರ ನಡುವಿನ ಗುಂಡಿನ ಚಕಮಕಿಯಲ್ಲಿ ಜಾರ್ಖಂಡ್ನ ಗಿರಿಡಿ ಜಿಲ್ಲೆಯ ದುಧಾಪಾನಿಯಾ ಗ್ರಾಮದ 27 ವರ್ಷದ ವಿಜಯ್ ಕುಮಾರ್ ಮಹತೋ ಪ್ರಾಣ ಕಳೆದುಕೊಂಡಿದ್ದಾರೆ.
ಹುಂಡೈ ಎಂಜಿನಿಯರಿಂಗ್ ಮತ್ತು ಕನ್ಸ್ಟ್ರಕ್ಷನ್ ಕಂಪನಿಯಲ್ಲಿ ಟವರ್ ಲೈನ್ ಫಿಟ್ಟರ್ ಆಗಿ ಕೆಲಸ ಮಾಡುತ್ತಿದ್ದ ವಿಜಯ್, ಕಚ್ಚಾ ವಸ್ತು ತರಲು ಕಂಪನಿ ಹಿರಿಯ ಅಧಿಕಾರಿಯ ಸೂಚನೆಯಂತೆ ತಾಣಕ್ಕೆ ತೆರಳಿದ್ದರು. ಆ ಸಮಯದಲ್ಲಿ ಪೊಲೀಸರು ಕಳ್ಳರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದು, ದಾರಿಯಲ್ಲಿ ಹಾದು ಹೋಗುತ್ತಿದ್ದ ವಿಜಯ್ಗೆ ಆಕಸ್ಮಿಕವಾಗಿ ಗುಂಡು ತಗುಲಿದೆ. ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಕ್ಟೋಬರ್ 24ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು.
ಗಾಯಗೊಂಡ ತಕ್ಷಣ ವಿಜಯ್ ತಮ್ಮ ಪತ್ನಿ ಬಸಂತಿ ದೇವಿಗೆ ವಾಟ್ಸಾಪ್ನಲ್ಲಿ ಧ್ವನಿ ಸಂದೇಶ ಕಳುಹಿಸಿ, “ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿದ್ದೇನೆ” ಎಂದು ತಿಳಿಸಿದ್ದರು. ಆದರೆ ಕುಟುಂಬಸ್ಥರು ಆರಂಭದಲ್ಲಿ ಅವರು ಗುಣಮುಖರಾಗುತ್ತಿದ್ದಾರೆ ಎಂದು ಭಾವಿಸಿದ್ದರು. ಕಂಪನಿಯಿಂದ ಅಧಿಕೃತ ಸಾವಿನ ಸುದ್ದಿ ಬಂದ ನಂತರವೇ ಸತ್ಯ ತಿಳಿದು ಆಘಾತಕ್ಕೊಳಗಾದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಹಾರದಲ್ಲಿ ಕೋಟಿ ಉದ್ಯೋಗದ ಭರವಸೆ; ಹಳೆಯ ಭರವಸೆ ಎಲ್ಲಿ ಹೋಯಿತು ಮೋದೀಜೀ?
ಡುಮ್ರಿ ಶಾಸಕ ಜೈರಾಮ್ ಕುಮಾರ್ ಮಹತೋ ಅವರು ಭಾರತೀಯ ರಾಯಭಾರ ಕಚೇರಿಗೆ ಪತ್ರ ಬರೆದು, ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ, ಮೃತದೇಹವನ್ನು ಶೀಘ್ರದಲ್ಲೇ ತಾಯ್ನಾಡಿಗೆ ತರಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಕುಟುಂಬಕ್ಕೆ ಕಾನೂನು ಮತ್ತು ಆರ್ಥಿಕ ಸಹಾಯ ಒದಗಿಸುವಂತೆಯೂ ಕೋರಿದ್ದಾರೆ.
ಜಾರ್ಖಂಡ್ ಕಾರ್ಮಿಕ ಇಲಾಖೆಯ ಮೈಗ್ರೆಂಟ್ ಕಂಟ್ರೋಲ್ ಸೆಲ್ ತಂಡದ ನಾಯಕಿ ಶಿಖಾ ಲಕ್ರಾ ಅವರು, ಭಾರತೀಯ ರಾಯಭಾರ ಕಚೇರಿ ಮತ್ತು ಜಿದ್ದಾ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದು, ಕಾನೂನು ಕ್ರಮಗಳನ್ನು ಪೂರ್ಣಗೊಳಿಸಿ ಮೃತದೇಹವನ್ನು ಗ್ರಾಮಕ್ಕೆ ತರುವ ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರವಾಸಿ ಕಾರ್ಮಿಕರ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಸಾಮಾಜಿಕ ಕಾರ್ಯಕರ್ತ ಸಿಕಂದರ್ ಅಲಿ ಅವರು, ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ, ಕುಟುಂಬಕ್ಕೆ ಸೌದಿ ಸರ್ಕಾರದಿಂದ ಪರಿಹಾರ ಒದಗಿಸುವಂತೆ ಒತ್ತಡ ಹೇರಿದ್ದಾರೆ.
ವಿಜಯ್ ಅವರು ಪತ್ನಿ ಬಸಂತಿ ದೇವಿ, ಐದು ವರ್ಷದ ರಿಷಿ ಕುಮಾರ್, ಮೂರು ವರ್ಷದ ರೋಶನ್ ಕುಮಾರ್, ತಂದೆ ಸೂರ್ಯನಾರಾಯಣ ಮಹತೋ ಮತ್ತು ತಾಯಿ ಸಾವಿತ್ರಿ ದೇವಿ ಅವರನ್ನು ಅಗಲಿದ್ದಾರೆ.





