ಇಥಿಯೋಪಿಯಾದಲ್ಲಿ ಸುಮಾರು 10 ಸಾವಿರ ವರ್ಷಗಳ ನಂತರ ಸಂಭವಿಸಿದ ಬೃಹತ್ ಜ್ವಾಲಾಮುಖಿ ಸ್ಫೋಟದಿಂದಾಗಿ ಕೇರಳದ ಕಣ್ಣೂರಿನಿಂದ ಅಬುಧಾಬಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ 6E 1433 ಅನ್ನು ತುರ್ತಾಗಿ ಗುಜರಾತ್ನ ಅಹಮದಾಬಾದ್ ಕಡೆಗೆ ಮಾರ್ಗ ಬದಲಾಯಿಸಲಾಯಿತು. ವಿಜ್ಞಾನಿಗಳು ಜ್ವಾಲಾಮುಖಿಯನ್ನು ಈ ಪ್ರದೇಶದಲ್ಲಿ ದಾಖಲಾದ ಅತ್ಯಂತ ಅಸಮಾನ್ಯ ಘಟನೆಗಳಲ್ಲಿ ಒಂದೆಂದು ತಿಳಿಸಿದ್ದಾರೆ.
ಏರ್ಬಸ್ ವಿಮಾನವು ಅಹಮದಾಬಾದ್ನಲ್ಲಿ ಸಂಪೂರ್ಣ ಸುರಕ್ಷಿತವಾಗಿ ಇಳಿದಿದೆ. ಇಂಡಿಗೋ ಕಂಪನಿಯು ತನ್ನ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದು, ಅವರನ್ನು ಮತ್ತೆ ಕಣ್ಣೂರಿಗೆ ವಾಪಸ್ ಕಳುಹಿಸಲು ವಿಶೇಷ ವ್ಯವಸ್ಥೆ ಮಾಡುವುದಾಗಿ ತಿಳಿಸಿದೆ.
ಸುಮಾರು 10 ಸಾವಿರ ವರ್ಷಗಳಲ್ಲಿ ಮೊದಲ ಬಾರಿಗೆ ಭಾನುವಾರ ಸ್ಫೋಟಗೊಂಡ ಇಥಿಯೋಪಿಯಾದ ಹೈಲಿ ಗುಬ್ಬಿ ಜ್ವಾಲಾಮುಖಿಯ ಬೂದಿಯ ದೊಡ್ಡ ಮೋಡಗಳು ಗಾಳಿಯೊಂದಿಗೆ ಈಗ ಉತ್ತರ ಭಾರತದ ಕಡೆಗೆ ಬರುವ ಸಾಧ್ಯತೆ ಇದೆ. ಹೀಗಾಗಿ ಆ ಭಾಗದಲ್ಲಿ ಹಾರಾಟ ನಡೆಸುವ ವಿಮಾನಗಳಿಗೆ ತೊಂದರೆಯಾಗಬಹುದು ಎಂಬ ಆತಂಕ ಇದ್ದು, ಅನೇಕ ವಿಮಾನಗಳ ಮಾರ್ಗವನ್ನು ಬದಲಾಯಿಸಲಾಗುತ್ತಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಾಧ್ಯಮಗಳ ವಿರುದ್ಧ ಡಿಸಿಎಂ ಡಿ.ಕೆ. ಶಿವಕುಮಾರ್ ಸಿಟ್ಟಿಗೆದ್ದದ್ದು ಏಕೆ?
ಸೋಮವಾರ ಸಂಜೆಯಿಂದ ದೆಹಲಿ ಮತ್ತು ಜೈಪುರದಲ್ಲಿ ವಿಮಾನ ಕಾರ್ಯಾಚರಣೆಗಳ ಮೇಲೆ ಉಂಟಾಗುವ ಸಂಭಾವ್ಯ ಪರಿಣಾಮವನ್ನು ಭಾರತೀಯ ವಿಮಾನಯಾನ ಅಧಿಕಾರಿಗಳು ಮತ್ತು ವಿಮಾನಯಾನ ಸಂಸ್ಥೆಗಳು ಗಮನಿಸುತ್ತಿವೆ. ಕೆಲವು ವಿಮಾನಗಳು ಈಗಾಗಲೇ ಜ್ವಾಲಾಮುಖಿ ಬೂದಿಯ ಮೋಡಗಳನ್ನು ತಪ್ಪಿಸಲು ಪರ್ಯಾಯ ಮಾರ್ಗಗಳನ್ನು ಅನುಸರಿಸುತ್ತಿವೆ.
ಆಕಾಶ್ ಏರ್ ವಿಮಾನ ಕಂಪನಿಯು ತಿಳಿಸಿರುವಂತೆ, ಜ್ವಾಲಾಮುಖಿ ಸ್ಫೋಟದ ಚಟುವಟಿಕೆಯನ್ನು ಅಂತಾರಾಷ್ಟ್ರೀಯ ನಿಯಮಗಳಂತೆ ನಿಕಟವಾಗಿ ಗಮನಿಸಲಾಗುತ್ತಿದೆ. ಪ್ರಯಾಣಿಕರ ಸುರಕ್ಷತೆ ಯಾವಾಗಲೂ ತಮ್ಮ ಮೊದಲ ಮತ್ತು ಅತ್ಯಂತ ಮುಖ್ಯ ಆದ್ಯತೆ ಎಂದು ಕಂಪನಿಯು ತಿಳಿಸಿದೆ.
ಇಥಿಯೋಪಿಯಾದ ಎರ್ಟಾ ಅಲೆ ಶ್ರೇಣಿಯಲ್ಲಿರುವ ಹೈಲಿ ಗುಬ್ಬಿ ಜ್ವಾಲಾಮುಖಿ ಭಾನುವಾರ ಬೆಳಿಗ್ಗೆ ಸ್ಫೋಟಗೊಂಡಿತು. ಟೌಲೌಸ್ ಜ್ವಾಲಾಮುಖಿ ಬೂದಿ ಸಲಹಾ ಕೇಂದ್ರದ ಮಾಹಿತಿ ಪ್ರಕಾರ, ಈ ಬೂದಿ 10 ರಿಂದ 15 ಕಿಲೋಮೀಟರ್ ಎತ್ತರಕ್ಕೆ ತಲುಪಿ, ಕೆಂಪು ಸಮುದ್ರದ ಕಡೆಗೆ ಸಾಗುತ್ತಿದೆ. ಬೂದಿಯ ಮೋಡವು ಈಗಾಗಲೇ ಒಮಾನ್ ಮತ್ತು ಯೆಮೆನ್ ಪ್ರದೇಶಗಳ ಮೇಲೆ ಪರಿಣಾಮ ಬೀರಿದ್ದು, ಪರಿಸರ ಮತ್ತು ವಾಯುಯಾನ ಸಲಹೆಗಳನ್ನು ನೀಡಲಾಗಿದೆ.
ಖಲೀಜ್ ಟೈಮ್ಸ್ ಪ್ರಕಾರ, ಒಮಾನ್ನ ಪರಿಸರ ಪ್ರಾಧಿಕಾರವು ಜ್ವಾಲಾಮುಖಿ ಅನಿಲ ಮತ್ತು ಬೂದಿಯಿಂದ ಉಂಟಾಗುವ ಸಂಭಾವ್ಯ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದೆ.





