ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಪ್ರತಿಕಾರವಾಗಿ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಗಲ್ಫ್ ಪ್ರದೇಶದಲ್ಲಿರುವ ಅಮೆರಿಕದ ಯುದ್ಧನೌಕೆ ಹಾಗೂ ಇಸ್ರೇಲ್ ಸೇನಾ ನೆಲೆಗಳ ಮೇಲೆ ತೀವ್ರ ದಾಳಿ ನಡೆಸಿದೆ.
ಅಮೆರಿಕ ಮತ್ತು ಇಸ್ರೇಲ್ನ ಜಂಟಿ ಕಾರ್ಯಾಚರಣೆಯಲ್ಲಿ ಖಮೇನಿ ಹತ್ಯೆಯಾದ ಬೆನ್ನಲ್ಲೇ ಈ ದಾಳಿ ನಡೆದಿದ್ದು, ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ದಟ್ಟವಾಗಿದೆ.
ಖಮೇನಿ ಹತ್ಯೆಯ ಪ್ರತಿಕಾರವಾಗಿ ಅಮೆರಿಕದ ‘ಯುಎಸ್ಎಸ್ ಅಬ್ರಹಾಂ ಲಿಂಕನ್’ ಯುದ್ಧನೌಕೆಯ ಮೇಲೆ ನಾಲ್ಕು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಲಾಗಿದೆ ಎಂದು ಐಆರ್ಜಿಸಿ ಹೇಳಿದೆ. “ಭಯೋತ್ಪಾದಕ ಆಕ್ರಮಣಕಾರರಿಗೆ ಭೂಮಿ ಮತ್ತು ಸಮುದ್ರವು ಮುಂದಿನ ದಿನಗಳಲ್ಲಿ ಸ್ಮಶಾನವಾಗಲಿದೆ” ಎಂದು ಎಚ್ಚರಿಕೆ ನೀಡುವ ಮೂಲಕ, ಈ ವಲಯದಲ್ಲಿರುವ ಅಮೆರಿಕ ಹಾಗೂ ಇಸ್ರೇಲ್ ಸೇನಾ ನೆಲೆಗಳನ್ನು ಗುರಿಯಾಗಿಸುವ ಸುಳಿವನ್ನು ಇರಾನ್ ನೀಡಿದೆ.
ಸರ್ವೋಚ್ಚ ನಾಯಕರ ಹತ್ಯೆಯು ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಈ ಕೃತ್ಯವು ಮುಂದಿನ ದಿನಗಳಲ್ಲಿ ಸಂಘರ್ಷವನ್ನು ಮತ್ತಷ್ಟು ಅಪಾಯಕಾರಿ ಹಾಗೂ ಸಂಕೀರ್ಣಗೊಳಿಸಲಿದೆ. ಆಡಳಿತ ನಿರ್ವಹಣೆಗಾಗಿ ಇಂದು ‘ಪರಿವರ್ತನಾ ಮಂಡಳಿ’ ರಚಿಸಲಾಗಿದೆ. ನಮ್ಮ ರಾಷ್ಟ್ರದ ರಕ್ಷಣೆಗೆ ನಮಗೆ ಯಾವುದೇ ನಿರ್ಬಂಧಗಳಿಲ್ಲ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ತಾನೇ ಸಾಕಿದ ಗಿಣಿ ಹದ್ದಾಗಿ ಕುಕ್ಕಿತಲ್ಲೋ: ಅಫ್ಘಾನ್ ಜೊತೆ ಪಾಕ್ ದೋಸ್ತಿ ಹಳಸಿದ್ದೆಲ್ಲಿ?
ಮಧ್ಯ ಇಸ್ರೇಲ್ನ ಬೀಟ್ ಶೆಮೆಶ್ ನಗರದ ಮೇಲೆ ಇರಾನ್ ಸತತ ಕ್ಷಿಪಣಿ ದಾಳಿ ನಡೆಸಿದೆ. ಕಟ್ಟಡವೊಂದರ ಮೇಲೆ ಕ್ಷಿಪಣಿ ಅಪ್ಪಳಿಸಿದ್ದು, ಕನಿಷ್ಠ 6 ಮಂದಿ ಮೃತಪಟ್ಟಿದ್ದಾರೆ ಹಾಗೂ 23 ಜನರು ಗಾಯಗೊಂಡಿದ್ದಾರೆ ಎಂದು ಇಸ್ರೇಲ್ನ ತುರ್ತು ಸೇವೆ ‘ಮೆಗೆನ್ ಡೇವಿಡ್ ಅಡೋಮ್’ ಸ್ಪಷ್ಟಪಡಿಸಿದೆ. ಈ ಹೊಸ ದಾಳಿಯೊಂದಿಗೆ, ಇತ್ತೀಚಿನ ಸಂಘರ್ಷದಲ್ಲಿ ಇಸ್ರೇಲ್ನಲ್ಲಿ ಒಟ್ಟು ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಖಮೇನಿ ಹತ್ಯೆ ಸ್ವಾಗತಿಸಿದ ಗಡೀಪಾರಾದ ಯುವರಾಜ
ಒಂದೆಡೆ ಖಮೇನಿ ಹತ್ಯೆಗೆ ಇರಾನ್ ಪ್ರತಿಕಾರ ತೀರಿಸುತ್ತಿದ್ದರೆ, ಗಡೀಪಾರಾಗಿರುವ ಇರಾನ್ನ ಮಾಜಿ ಯುವರಾಜ ರೆಜಾ ಪಹ್ಲವಿ ಈ ಹತ್ಯೆಯನ್ನು ಸ್ವಾಗತಿಸಿದ್ದಾರೆ. ಖಮೇನಿಯನ್ನು ಪುರಾಣದ ರಾಕ್ಷಸ ‘ಜಹಕ್’ ಎಂದು ಕರೆದಿರುವ ಅವರು, “ಕೆಲವೇ ವಾರಗಳ ಹಿಂದೆ ಇರಾನ್ನ ಸಾವಿರಾರು ಯುವಕ-ಯುವತಿಯರನ್ನು ಹತ್ಯೆ ಮಾಡಲು ಆದೇಶ ನೀಡಿದ್ದ ದುಷ್ಟ ಶಕ್ತಿಯ ಅಂತ್ಯವಾಗಿದೆ. ಇರಾನ್ ಜನತೆಯ ಸಂಕಲ್ಪ ಮತ್ತು ಧೈರ್ಯದಿಂದ ಇಸ್ಲಾಮಿಕ್ ಗಣರಾಜ್ಯದ ಅಂತ್ಯವೂ ಸಮೀಪಿಸಿದ್ದು, ಈ ದುಷ್ಟ ಆಡಳಿತ ಶೀಘ್ರದಲ್ಲೇ ಇತಿಹಾಸದ ಕಸದ ಬುಟ್ಟಿ ಸೇರಲಿದೆ” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಖಮೇನಿ ಹತ್ಯೆಗೆ ಪಾಕ್ ಪ್ರಧಾನಿ ಸಂತಾಪ
ಅಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ತೀವ್ರ ಸಂತಾಪ ಸೂಚಿಸಿದ್ದಾರೆ. “ರಾಷ್ಟ್ರದ ಮುಖ್ಯಸ್ಥರನ್ನು ಗುರಿಯಾಗಿಸುವುದು ಹಿಂದಿನಿಂದ ಬಂದಿರುವ ಅಂತಾರಾಷ್ಟ್ರೀಯ ನಿಯಮಗಳ ಉಲ್ಲಂಘನೆ. ಇರಾನ್ನ ದುಃಖದಲ್ಲಿ ಪಾಕಿಸ್ತಾನದ ಜನತೆಯೂ ಭಾಗಿಯಾಗಲಿದ್ದಾರೆ. ಈ ಅಪಾರ ನಷ್ಟವನ್ನು ಭರಿಸುವ ಶಕ್ತಿಯನ್ನು ದೇವರು ಇರಾನ್ ಜನತೆಗೆ ಕರುಣಿಸಲಿ” ಎಂದು ಟ್ವೀಟ್ ಮಾಡಿದ್ದಾರೆ.
ಹಾರ್ಮುಜ್ ಜಲಸಂಧಿಯಲ್ಲಿ ತೈಲ ಹಡಗು ಮುಳುಗಡೆ
ಅಮೆರಿಕ-ಇಸ್ರೇಲ್ ಪಡೆಗಳೊಂದಿಗಿನ ಸಂಘರ್ಷದ ನಡುವೆಯೇ, ಆಯಕಟ್ಟಿನ ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸಲು ಯತ್ನಿಸಿದ ತೈಲ ಹಡಗಿನ ಮೇಲೆ ಇರಾನ್ ದಾಳಿ ಮಾಡಿದೆ. ಅಕ್ರಮವಾಗಿ ಸಾಗಲು ಯತ್ನಿಸಿದ ಕಾರಣಕ್ಕಾಗಿ ಹಡಗಿನ ಮೇಲೆ ದಾಳಿ ನಡೆಸಲಾಗಿದ್ದು, ಹಡಗು ದಟ್ಟ ಹೊಗೆಯಾಡುತ್ತಾ ಸಮುದ್ರದಲ್ಲಿ ಮುಳುಗುತ್ತಿದೆ ಎಂದು ಇರಾನ್ನ ಸರ್ಕಾರಿ ಟಿವಿ ವರದಿ ಮಾಡಿದೆ.





