ಪ್ರಾದೇಶಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಸಂಘರ್ಷಗಳ ನಡುವೆ, ಇತ್ತೀಚೆಗೆ ನಡೆದ ದಾಳಿಗಳಿಗೆ ಸಂಬಂಧಿಸಿದಂತೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಶನಿವಾರ ಗಲ್ಫ್ ಹಾಗೂ ನೆರೆ ರಾಷ್ಟ್ರಗಳ ಬಳಿ ಕ್ಷಮೆಯಾಚಿಸಿದ್ದಾರೆ. ಅಲ್ಲದೆ, ಇತರ ಯಾವುದೇ ರಾಷ್ಟ್ರಗಳ ಮೇಲೆ ಅತಿಕ್ರಮಣ ಮಾಡುವ ಉದ್ದೇಶ ಟೆಹ್ರಾನ್ಗೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ದೇಶದ ಜನತೆಯನ್ನು ಉದ್ದೇಶಿಸಿ ಟೆಲಿವಿಷನ್ ಮೂಲಕ ಮಾಡಿದ ಭಾಷಣದಲ್ಲಿ ಮಾತನಾಡಿದ ಪೆಜೆಶ್ಕಿಯಾನ್, “ನಮ್ಮ ಮೇಲೆ ನೇರವಾಗಿ ದಾಳಿ ನಡೆಯದ ಹೊರತು, ನೆರೆ ರಾಷ್ಟ್ರಗಳ ಮೇಲೆ ಯಾವುದೇ ರೀತಿಯ ದಾಳಿಗಳನ್ನು ನಡೆಸದಿರಲು ದೇಶದ ‘ತಾತ್ಕಾಲಿಕ ನಾಯಕತ್ವ ಮಂಡಳಿ’ ನಿರ್ಣಯ ಕೈಗೊಂಡಿದೆ ಮತ್ತು ಈ ನಿರ್ಧಾರಕ್ಕೆ ಒಪ್ಪಿಗೆಯನ್ನು ಸೂಚಿಸಲಾಗಿದೆ” ಎಂದು ತಿಳಿಸಿದ್ದಾರೆ. ನೆರೆಹೊರೆಯ ದೇಶಗಳೊಂದಿಗೆ ಶಾಂತಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಇರಾನ್ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ.
ಇದನ್ನು ಓದಿದ್ದೀರಾ? ಪಶ್ಚಿಮ ಏಷ್ಯಾದಲ್ಲಿ ಅಮೆರಿಕದ ವಿನಾಶಕಾರಿ ನೀತಿ, ಭಾರತೀಯ ವಿಮಾನಯಾನಕ್ಕೆ ದುಃಸ್ವಪ್ನ
ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಬೃಹತ್ ಸೇನಾ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಇದು ಮಧ್ಯಪ್ರಾಚ್ಯದಲ್ಲಿ ತೀವ್ರ ಸ್ವರೂಪದ ಯುದ್ಧಕ್ಕೆ ಕಾರಣವಾಗಿದೆ. ಫೆಬ್ರವರಿ 2026ರ ಅಂತ್ಯದಲ್ಲಿ ಶುರುವಾದ ಈ ಸಂಘರ್ಷದಲ್ಲಿ, ಟೆಹ್ರಾನ್ ಸೇರಿದಂತೆ ಇರಾನ್ನ ಪ್ರಮುಖ ನಗರಗಳ ಮೇಲೆ ನಿರಂತರ ವಾಯುದಾಳಿಗಳು ನಡೆಯುತ್ತಿವೆ. ಈ ಭೀಕರ ದಾಳಿಗಳಲ್ಲಿ ಇರಾನ್ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ ಹಲವು ಪ್ರಮುಖರು ಹತರಾಗಿದ್ದಾರೆ ಹಾಗೂ ಸಾವಿರಾರು ಸಾವು-ನೋವುಗಳು ಸಂಭವಿಸಿವೆ.
ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಇಸ್ರೇಲ್ ಹಾಗೂ ನೆರೆಹೊರೆಯ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ಮೂಲಕ ತೀವ್ರ ತಿರುಗೇಟು ನೀಡುತ್ತಿದೆ. ಈ ಯುದ್ಧದ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಯಾಗಿದ್ದು, ನಿರ್ಣಾಯಕ ವ್ಯಾಪಾರ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ ಮೂಲಕ ನಡೆಯುವ ತೈಲ ಸಾಗಾಟಕ್ಕೆ ಭಾರಿ ಅಡಚಣೆಯಾಗಿದೆ. ಇದರಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಗಣನೀಯವಾಗಿ ಏರಿಕೆಯಾಗಿದ್ದು, ಬಿಕ್ಕಟ್ಟು ಇನ್ನಷ್ಟು ಬಿಗಡಾಯಿಸುವ ಭೀತಿ ಎದುರಾಗಿದೆ.





