ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ಮೇಲೆ ಭಾರಿ ದಾಳಿ ನಡೆಸುತ್ತಿದ್ದು, ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮತ್ತಷ್ಟು ತೀವ್ರಗೊಂಡಿದೆ. ಇರಾನ್ನ ಉನ್ನತ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆ ಮಾಡಿರುವ ಇಸ್ರೇಲ್, ಇದೀಗ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾಗುವ ಯಾವುದೇ ನಾಯಕನಿಗೂ ಹತ್ಯೆಯ ಎಚ್ಚರಿಕೆ ನೀಡಿದೆ. ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಈ ಕುರಿತು ‘ಎಕ್ಸ್’ (X) ನಲ್ಲಿ ಪ್ರತಿಕ್ರಿಯಿಸಿದ್ದು, “ಇಸ್ರೇಲ್ ನಾಶಕ್ಕೆ ಸಂಚು ರೂಪಿಸುವ, ಅಮೆರಿಕ ಹಾಗೂ ಮುಕ್ತ ಪ್ರಪಂಚಕ್ಕೆ ಬೆದರಿಕೆ ಒಡ್ಡುವ ಯಾವುದೇ ವ್ಯಕ್ತಿಯಾದರೂ, ಆತ ಎಲ್ಲೇ ಅಡಗಿದ್ದರೂ ನಮ್ಮ ನಿಶ್ಚಿತ ಗುರಿಯಾಗಲಿದ್ದಾನೆ” ಎಂದು ಗುಡುಗಿದ್ದಾರೆ.
ಮತ್ತೊಂದೆಡೆ, ಇಸ್ರೇಲ್ ಸೇನೆಯು ಇರಾನ್ ರಾಜಧಾನಿ ಟೆಹರಾನ್ನಾದ್ಯಂತ ಇರುವ ಹತ್ತಾರು ಭದ್ರತಾ ಕಮಾಂಡ್ ಕೇಂದ್ರಗಳು ಹಾಗೂ ಅರೆಸೈನಿಕ ಪಡೆ ನೆಲೆಗಳ ಮೇಲೆ ತಾನು ಯಶಸ್ವಿಯಾಗಿ ವೈಮಾನಿಕ ದಾಳಿಗಳನ್ನು ಪೂರ್ಣಗೊಳಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ. ಈ ಭಾರಿ ದಾಳಿಯಲ್ಲಿ ಮೃತಪಟ್ಟ ಉನ್ನತ ನಾಯಕ ಖಮೇನಿ ಅವರ ಅಂತಿಮ ದರ್ಶನಕ್ಕೆ ಇರಾನ್ ಸಿದ್ಧತೆ ನಡೆಸಿದೆ. ಬುಧವಾರ ರಾತ್ರಿ 10 ಗಂಟೆಗೆ ಟೆಹರಾನ್ನ ಇಮಾಮ್ ಖೊಮೇನಿ ಪ್ರಾರ್ಥನಾ ಮೈದಾನದಲ್ಲಿ ಅಂತಿಮ ನಮನ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದ್ದು, ಸತತ ಮೂರು ದಿನಗಳ ಕಾಲ ನಡೆಯಲಿದೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.
ಈ ಉದ್ವಿಗ್ನತೆಯ ನಡುವೆ, ಆಯಕಟ್ಟಿನ ಪ್ರದೇಶವಾದ ‘ಹಾರ್ಮುಜ್ ಜಲಸಂಧಿ’ಯನ್ನು ಸಂಪೂರ್ಣವಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿರುವುದಾಗಿ ಇರಾನ್ನ ರೆವಲ್ಯೂಷನರಿ ಗಾರ್ಡ್ಸ್ ಘೋಷಿಸಿದೆ. ಈ ಜಲಮಾರ್ಗದಲ್ಲಿ ಸಂಚರಿಸುವ ಯಾವುದೇ ಹಡಗುಗಳು ಡ್ರೋನ್ ಅಥವಾ ಕ್ಷಿಪಣಿ ದಾಳಿಗೆ ತುತ್ತಾಗುವ ಅಪಾಯವಿದೆ ಎಂದು ನೌಕಾಪಡೆ ಅಧಿಕಾರಿ ಮೊಹಮ್ಮದ್ ಅಕ್ಬರ್ಜಾದೆ ಎಚ್ಚರಿಕೆ ನೀಡಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ಇರಾನ್ ನಡೆಸಿದ ಪ್ರತಿದಾಳಿಯಿಂದಾಗಿ ಕುವೈತ್ನಲ್ಲಿ ಸಿಡಿತಲೆಯ ಚೂರುಗಳು ತಗುಲಿ 11 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಇದಲ್ಲದೆ, ಕುವೈತ್ನಲ್ಲಿರುವ 4 ಅಮೆರಿಕನ್ ಯೋಧರು ಮೃತಪಟ್ಟಿದ್ದು, ಅಮೆರಿಕದ ರಾಯಭಾರಿ ಕಚೇರಿ ಹಾಗೂ ಇಂಧನ ಮೂಲಸೌಕರ್ಯಗಳ ಮೇಲೆ ಡ್ರೋನ್ ದಾಳಿ ನಡೆದಿದೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಫಿಫಾ ವಿಶ್ವಕಪ್ 2026 | ಯುದ್ಧಗಳ ಕಾರ್ಮೋಡದ ನಡುವೆ ಫುಟ್ಬಾಲ್ ಹಬ್ಬಕ್ಕೆ 100 ದಿನಗಳ ಕ್ಷಣಗಣನೆ
ಈ ಸಂಘರ್ಷವು ಲೆಬನಾನ್ ಮತ್ತು ಇರಾಕ್ಗೂ ವ್ಯಾಪಿಸಿದೆ. ಇಸ್ರೇಲ್ ಸೇನೆಯು ಮುನ್ನೆಚ್ಚರಿಕೆ ನೀಡಿದ ಬೆನ್ನಲ್ಲೇ ದಕ್ಷಿಣ ಬೈರುತ್ನಲ್ಲಿರುವ ಹಿಜ್ಬುಲ್ಲಾ ನೆಲೆಯ ಮೇಲೆ ಭಾರಿ ವೈಮಾನಿಕ ದಾಳಿ ನಡೆದಿದೆ. ಈ ಹಿಂದೆ ಲೆಬನಾನ್ನ ಬೈರುತ್ ಅಧ್ಯಕ್ಷೀಯ ಅರಮನೆ ಸಮೀಪ ಹಾಗೂ ಬಾಲ್ಬೆಕ್ ನಗರದ ಮೇಲೆ ನಡೆದ ಸರಣಿ ದಾಳಿಯಲ್ಲಿ 11 ಮಂದಿ ಸಾವನ್ನಪ್ಪಿದ್ದರು.
ಇತ್ತ ಅಮೆರಿಕದ ರಾಜತಾಂತ್ರಿಕ ಕಚೇರಿ ಹಾಗೂ ಮಿಲಿಟರಿ ನೆಲೆಯನ್ನು ಹೊಂದಿರುವ ಇರಾಕ್ನ ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಡ್ರೋನ್ ಒಂದನ್ನು ಹೊಡೆದುರುಳಿಸಲಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪಶ್ಚಿಮ ಏಷ್ಯಾದಲ್ಲಿ ಭುಗಿಲೆದ್ದಿರುವ ಈ ಒಟ್ಟಾರೆ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಪರಿಸ್ಥಿತಿಯನ್ನು ನಿಭಾಯಿಸಲು ಹಾಗೂ ಭಾರತೀಯರ ನೆರವಿಗಾಗಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ವಿಶೇಷ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.





