ಗಾಜಾ ಮೇಲೆ ಇಸ್ರೇಲ್ ತನ್ನ ಪೈಶಾಚಿಕ ದಾಳಿಯನ್ನು ಮುಂದುವರೆಸಿದೆ. ಹಸಿವಿನಿಂದ ಕಂಗೆಟ್ಟವರ ಮೇಲೆ ಮತ್ತೆ ದಾಳಿ ಮಾಡಿರುವ ಇಸ್ರೇಲ್, ಹಸಿವಿನಿಂದ ಬಳಲಿ ಆಹಾರ ಸಾಮಾಗ್ರಿಗಾಗಿ ಕಾಯುತ್ತಿದ್ದ 77 ಮಂದಿ ಸೇರಿದಂತೆ ಒಟ್ಟು 91 ಮಂದಿ ಪ್ಯಾಲೆಸ್ತೀನಿಯರನ್ನು ನಿರ್ದಾಕ್ಷಿಣ್ಯವಾಗಿ ಗುಂಡಿಕ್ಕಿ ಕೊಂದಿದೆ.
ಗಾಜಾಪಟ್ಟಿಯಲ್ಲಿ ಇಸ್ರೇಲ್ ಮಾಡಿರುವ ದಾಳಿಯ ಬಗ್ಗೆ ಇಸ್ರೇಲ್ ಯಾವುದೇ ಮಾಹಿತಿ ನೀಡಿಲ್ಲ. ಬದಲಾಗಿ, ತಾನು ಬಂಡುಕೋರರನ್ನು ಮಾತ್ರ ಗುರಿ ಮಾಡಿಕೊಂಡು ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ. ಅಷ್ಟೇ ಅಲ್ಲದೇ, ದಟ್ಟ ಜನಸಾಂದ್ರತೆ ಇರುವ ಪ್ರದೇಶಗಳಲ್ಲಿ ಹಮಾಸ್ ಕಾರ್ಯಾಚರಣೆ ನಡೆಸುತ್ತಿದ್ದು, ಪರಿಣಾಮವಾಗಿ ಪ್ಯಾಲೇಸ್ತೀನ್ ನಾಗರಿಕರು ಸಾವನ್ನಪ್ಪುತ್ತಿದ್ದಾರೆ ಎಂದು ಇಸ್ರೇಲ್ ಹೇಳಿದೆ.
ಹಸಿವಿನಿಂದ ಬಳಲುತ್ತಿದ್ದ ಪ್ಯಾಲೆಸ್ತೀನ್ ಜನರು ವಾಯವ್ಯ ಗಾಜಾದಲ್ಲಿರುವ ಝಿಕೀ ಕ್ರಾಸಿಂಗ್ನಿಂದ ನೆರವು ಸಾಮಾಗ್ರಿಗಳನ್ನು ಹೊತ್ತು ತರುತ್ತಿದ್ದ ಟ್ರಕ್ಗಳಿಗಾಗಿ ಕಾಯುತ್ತಿದ್ದರು. ಈ ವೇಳೆ, ಅವರ ಮೇಲೆ ಇಸ್ರೇಲ್ ಪಡೆಗಳು ದಾಳಿ ನಡೆಸಿವೆ. ಈ ಗುಂಡಿನ ದಾಳಿಯಿಂದ 77 ಮಂದಿ ಸಾವನ್ನಪ್ಪಿದ್ದಾರೆ. ದಾಳಿಯಲ್ಲಿ ಮೃತಪಟ್ಟವರ ಪೈಕಿ 12 ಮಂದಿಯ ಶವಗಳನ್ನು ಆಸ್ಪತ್ರೆಗೆ ತರಲಾಗಿದೆ ಎಂದು ಗಾಝಾ ನಗರದ ಶಿಫಾ ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ.
ಅಲ್ಲದೆ, ಜಬಲಿಯಾ ನಿರಾಶ್ರಿತ ಶಿಬಿರ ಹಾಗೂ ಉತ್ತರ ಭಾಗದ ನಗರಗಳಾದ ಬೆಯಿಟ್ ಲಾಹಿಯಾ ಮತ್ತು ಬೆಯಿಟ್ ಹನೂನ್ನಲ್ಲಿಯೂ ಇಸ್ರೇಲ್ ಪಡೆಗಳು ದಾಳಿ ನಡೆಸಿದ್ದು, ಕನಿಷ್ಠ 14 ಮಂದಿ ಸಾವನ್ನಪ್ಪಿದ್ದಾರೆಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಗಾಜಾ ಮೇಲೆ ಸತತವಾಗಿ ಎರಡೂ ವರ್ಷದಿಂದ ಇಸ್ರೇಲ್ ತನ್ನ ಕ್ರೂರತನವನ್ನು ಮೆರೆದಿದೆ. ಮೆರಯುತ್ತಿದೆ. ಇಲ್ಲಿಯವರೆಗೂ ಇಸ್ರೇಲ್ ದಾಳಿಗೆ 60,138 ಮಂದಿ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ. 1,46,269 ಜನರು ಗಾಯಗೊಂಡಿದ್ದಾರೆ.
ಈ ಲೇಖನ ಓದಿದ್ದೀರಾ?: ಭಾರತದ ನಗರಗಳು ಹಾಲಿ ಜೀವನ ವೆಚ್ಚಗಳಿಗೆ ಯೋಗ್ಯವೇ?
ಇಸ್ರೇಲ್ನ ಕ್ರೂರತ್ವಕ್ಕೆ ಗಾಜಾದ ಜನರು ನಲುಗಿ ಹೋಗಿದ್ದಾರೆ. ಜನರು ತುತ್ತು ಅನ್ನಕ್ಕೂ ಕೂಡ ಪರಡಾಡುವ ಸ್ಥಿತಿಗೆ ದೂಡಿದೆ. ಇಸ್ರೇಲ್ನ ಕ್ರೂರತ್ವಕ್ಕೆ ಕೊನೆ ಇಲ್ಲದಂತಾಗಿದೆ. ಇರಾನ್, ಸಿರಿಯಾ, ಯೆಮೆನ್, ಲೆಬನಾನ್ ಮೇಲೂ ಇಸ್ರೇಲ್ ತನ್ನ ದಾಳಿ ನಡೆಸಿ, ಕ್ರೂರತ್ವ ಮೆರೆದಿದೆ. ಆದಾಗ್ಯೂ, ಇರಾನ್ ಕೊಟ್ಟ ಪ್ರತ್ಯುತ್ತರಕ್ಕೆ ಇಸ್ರೇಲ್ ಕಂಗಾಲಾಗಿತ್ತು. ಆದರೂ, ಈಗ ಗಾಜಾ ಮೇಲೆ ಮತ್ತೆ ತನ್ನ ದಾಳಿಯನ್ನು ಮುಂದುವರೆಸಿದೆ.
ಉದ್ದೇಶಪೂರ್ವಕವಾಗಿ ಸಾವಿರಾರು ಸ್ಥಳಾಂತರಗೊಂಡ ಜನರು ಸೇರಿದ್ದ ಆಶ್ರಯ ತಾಣಗಳ, ನೆರವು ಕೇಂದ್ರಗಳು, ನೆರವು ಸಾಮಾಗ್ರಿ ಪಡೆಯಲು ತೆರಳಿದ್ದ ಜನರ ಮೇಲೆ ಇಸ್ರೇಲ್ ಬಾಂಬ್ ದಾಳಿ ನಡೆಸುತ್ತಿದೆ. ಜನರು ಮಲಗಿದ್ದಾಗಲೂ ಕೂಡ ಇಸ್ರೇಲ್ ಬಾಂಬ್ ದಾಳಿ ನಡೆಸುತ್ತಿದೆ. ಪ್ಯಾಲೆಸ್ತೀನಿಯರನ್ನು ಕೊಲ್ಲುವುದು, ಶಾಲೆಗಳು ಮತ್ತು ಆಸ್ಪತ್ರೆಗಳನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆಸುವುದು, ಬಂಧಿತರ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಅವರಿಗೆ ಚಿತ್ರಹಿಂಸೆ ನೀಡುವುದು ಸೇರಿದಂತೆ ಪ್ಯಾಲೇಸ್ತೀನಿಯರ ಜೀವನವನ್ನು ನಾಶ ಮಾಡಲು ಇಸ್ರೇಲ್ ಮುಂದಾಗಿದೆ.
ಗಾಜಾ ಜನರು ಹಸಿವಿನಿಂದ ಸಾಯುವಂತೆ ಇಸ್ರೇಲ್ ಮಾಡುತ್ತಿದೆ. ಸಹಾಯ ಹಸ್ತ ಚಾಚುವವರ ಕೈಯನ್ನ ಸಹ ಕಟ್ಟಿ ಹಾಕುತ್ತಿದೆ. ಇದೀಗ ಹಸಿವಿನಿಂದ ಕಂಗೆಟ್ಟವರು ತುತ್ತು ಅನ್ನಕ್ಕಾಗಿ ಕಾಯುತ್ತಿರುವಾಗ ಅವರ ಮೇಲೂ ಕೂಡ ತನ್ನ ಕ್ರೂರತ್ವ ಮೆರೆದಿದೆ.




