ಕದನ ವಿರಾಮ ಘೋಷಿಸಿ ಹಲವು ತಿಂಗಳುಗಳಾದ ನಂತರ ಮೊದಲ ಬಾರಿಗೆ ಇಸ್ರೇಲ್ ಲೆಬನಾನ್ ರಾಜಧಾನಿ ಬೈರುತ್ ನಲ್ಲಿರುವ ಹೆಜ್ಬುಲ್ಲಾ ಸಂಘಟನೆಯ ಕೇಂದ್ರ ಕಚೇರಿಯ ಮೇಲೆ ದಾಳಿ ನಡೆಸಿದೆ.
ಸೋಮವಾರ ನಡೆಸಿದ ದಾಳಿಯಲ್ಲಿ ಇಸ್ರೇಲ್ ಸೇನೆಯು ಹೆಜ್ಬುಲ್ಲಾ ಸಂಘಟನೆಯ ಮುಖ್ಯಸ್ಥ ಹೈತಮ್ ಅಲಿ ಅಲ್-ತಬ್ತಬಾಯಿ ಅವರನ್ನು ಕೊಂದಿದೆ. ಈ ವೈಮಾನಿಕ ದಾಳಿಯಲ್ಲಿ ಕನಿಷ್ಠ ಐದು ಮಂದಿ ಸಾವನ್ನಪ್ಪಿದ್ದು, 28 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ತಿಳಿಸಿದೆ.
ದಕ್ಷಿಣ ಲೆಬನಾನ್ ನಲ್ಲಿರುವ ಪ್ಯಾಲೆಸ್ತೀನ್ ಸಂತ್ರಸ್ತರ ಶಿಬಿರದ ಮೆಲೆ ಇಸ್ರೇಲ್ ಕಳೆದ ಮಂಗಳವಾರ ವೈಮಾನಿಕ ದಾಳಿ ನಡೆಸಿತ್ತು. ವರ್ಷದ ಹಿಂದೆಯೇ ಅಮೆರಿಕ ಮತ್ತು ಫ್ರಾನ್ಸ್ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ – ಹಿಜ್ಬುಲ್ಲಾ ಯುದ್ಧದಲ್ಲಿ ಕದನ ವಿರಾಮ ಘೋಷಣೆಯಾದ ಬಳಿಕ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ.
ಹಿಜ್ಬೊಲ್ಲಾ ತಬ್ತಬಾಯಿಯ ಸಾವನ್ನು ದೃಢಪಡಿಸಿದ್ದು, ಗಡಿಯಲ್ಲಿರುವ ಕೆಂಪು ರೇಖೆಯನ್ನು ದಾಟಿದೆ ಎಂದು ಆರೋಗ್ಯ ಸಚಿವಾಲಯ ಆರೋಪ ಮಾಡಿದೆ.
ದಾಳಿಯ ನಂತರ ಪ್ರತಿಕ್ರಿಯಿಸಿದ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು, “ಹೆಜ್ಬೊಲ್ಲಾ ತನ್ನ ಶಕ್ತಿಯನ್ನು ಪುನಃ ಸ್ಥಾಪಿಸಲು ಬಿಡುವುದಿಲ್ಲ ಮತ್ತು ಇಸ್ರೇಲ್ ಗೆ ಯಾವುದೇ ಬೆದರಿಕೆ ಹಾಕಲು ಬಂದರೆ ನಾವು ಸುಮ್ಮನಿರುವುದಿಲ್ಲ” ಎಂದು ಹೇಳಿದ್ದಾರೆ.
ಈಗಾಗಲೇ ಇಸ್ರೇಲ್ ನಡೆಸಿದ ದಾಳಿಯಿಂದ ಪ್ಯಾಲೆಸ್ತೀನ್ ಮತ್ತು ಗಾಝಾದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದು, ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದಾರೆ. ಇದು ವಿಶ್ವದ ಅತ್ಯಂತ ಭೀಕರ ಮಾನವೀಯತೆಯ ವಿರುದ್ಧದ ಸಂಘರ್ಷವಾಗಿದೆ.





