ಅಮೆರಿಕದ ಫ್ಲೋರಿಡಾದಲ್ಲಿ ನಡೆದ ಇಬ್ಬರು ವಿವಾದಾತ್ಮಕ ನಾಯಕರ ಈ ಸಮಾಗಮದಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ತಮ್ಮ ಹಳೆಯ ರಾಗ ಹಾಡಿದ್ದಾರೆ.
“ನಾನಿಲ್ಲದಿದ್ದರೆ ಜಗತ್ತು ಸರ್ವನಾಶವಾಗುತ್ತಿತ್ತು,” ಎಂದು ಬಡಾಯಿ ಕೊಚ್ಚಿಕೊಂಡಿರುವ ಟ್ರಂಪ್, “ನನ್ನ ಮಧ್ಯಸ್ಥಿಕೆಯಿಂದಲೇ ಭಾರತ ಮತ್ತು ಪಾಕಿಸ್ತಾನದ ನಡುವಿನ ಭೀಕರ ಅಣುಯುದ್ಧ ತಪ್ಪಿತು. ಇಲ್ಲದಿದ್ದರೆ ಲಕ್ಷಾಂತರ ಜನ ಸಾಯುತ್ತಿದ್ದರು,” ಎಂದು ಹೇಳಿದ್ದಾರೆ.
ಈ ಭೇಟಿಯು ಕೇವಲ ಟ್ರಂಪ್ ಅವರ ಬಡಾಯಿಗೆ ಸೀಮಿತವಾಗಿರಲಿಲ್ಲ. ಗಾಜಾದಲ್ಲಿ ಸಾವಿರಾರು ಅಮಾಯಕ ಮಕ್ಕಳ ಸಾವಿಗೆ ಕಾರಣರಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ‘ಯುದ್ಧಾಪರಾಧಿ’ ಎಂಬ ಹಣೆಪಟ್ಟಿ ಹೊತ್ತಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಟ್ರಂಪ್ ಕೆಂಪು ಹಾಸಿನ ಸ್ವಾಗತ ಕೋರಿದ್ದು ಪ್ರಜಾಪ್ರಭುತ್ವವಾದಿಗಳಿಗೆ ಆಘಾತ ತಂದಿದೆ. ಜಗತ್ತೇ ಛೀಮಾರಿ ಹಾಕುತ್ತಿರುವ ನಾಯಕನನ್ನು ಟ್ರಂಪ್ ಅಪ್ಪಿಕೊಂಡು, “ಇಸ್ರೇಲ್ ಉಳಿದಿದ್ದೇ ಇವರಿಂದ” ಎಂದು ಹೊಗಳಿದ್ದು ವಿಪರ್ಯಾಸವೇ ಸರಿ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಇನ್ನಾದರೂ ಪ್ರೀತಿ ಬಿತ್ತೋಣ, ಮಾನವೀಯತೆ ಮೆರೆಯೋಣ…
ಗಾಜಾದಲ್ಲಿ ರಕ್ತದೋಕುಳಿ ಹರಿಸುತ್ತಿರುವ ನೆತನ್ಯಾಹು, ತಮ್ಮ ಅಧಿಕಾರ ಉಳಿಸಿಕೊಳ್ಳಲು ಟ್ರಂಪ್ ಅವರಂತಹ ‘ಅಹಂಕಾರದ ಮೂರ್ತಿ’ಯ ಮೊರೆ ಹೋಗಿದ್ದಾರೆ. ಇತ್ತ ಟ್ರಂಪ್, ಇರಾನ್ ಮೇಲೆ ಯುದ್ಧದ ಭೀತಿ ಹುಟ್ಟುಹಾಕುವ ಮೂಲಕ ಮತ್ತೊಂದು ಸಂಘರ್ಷಕ್ಕೆ ನಾಂದಿ ಹಾಡಲು ಪ್ರಚೋದಿಸುತ್ತಿದ್ದಾರೆ. ಶಾಂತಿಯ ಬಗ್ಗೆ ಮಾತನಾಡಬೇಕಾದ ನಾಯಕರು, ಕೇವಲ ತಮ್ಮ ವೈಯಕ್ತಿಕ ವರ್ಚಸ್ಸು ಮತ್ತು ಅಧಿಕಾರದ ದಾಹಕ್ಕಾಗಿ ಜಾಗತಿಕ ಭದ್ರತೆಯನ್ನೇ ಪಣಕ್ಕಿಡುತ್ತಿದ್ದಾರೆ ಎಂಬ ಆತಂಕ ವ್ಯಕ್ತವಾಗಿದೆ.
“ಭಾರತ-ಪಾಕ್ ಯುದ್ಧ ನಿಲ್ಲಿಸಿದೆ” ಎಂಬ ಟ್ರಂಪ್ ಅವರ ಬಾಲಿಶ ಹೇಳಿಕೆ ಮತ್ತು ನೆತನ್ಯಾಹು ಅವರೊಂದಿಗಿನ ಈ ಸ್ನೇಹ, ಜಗತ್ತನ್ನು ಶಾಂತಿಯ ಕಡೆಗಲ್ಲ, ಬದಲಿಗೆ ಮತ್ತಷ್ಟು ಅರಾಜಕತೆಯತ್ತ ತಳ್ಳುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.





