ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ ಎಂದು ಟೆಹ್ರಾನ್ ದೃಢಪಡಿಸಿದೆ. ಇರಾನ್ ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದೆ. ಅಮೆರಿಕ ಮತ್ತು ಇಸ್ರೇಲ್ ಟೆಹ್ರಾನ್ನಲ್ಲಿ ಆಡಳಿತ ಬದಲಾವಣೆಗೆ ಒತ್ತಾಯಿಸುತ್ತಿದ್ದರೆ, ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಅಧಿಕಾರವನ್ನು ವಶಪಡಿಸಿಕೊಳ್ಳಲು ಯತ್ನಿಸುತ್ತಿದೆ.
ಇರಾನ್ ಭವಿಷ್ಯದ ನಾಯಕತ್ವದ ಕುರಿತು ತಮ್ಮ ‘ಟ್ರೂತ್’ ಸೋಶಿಯಲ್ನಲ್ಲಿ ಬರೆದಿಕೊಂಡಿರುವ ಅಮೆರಿಕ ಅಧ್ಯಕ್ಷ ಟ್ರಂಪ್, “ಇರಾನ್ನ ಸರ್ವೋಚ್ಚ ನಾಯಕ ಹತ್ಯೆಯಾಗಿದೆ. ಟೆಹ್ರಾನ್ ಅನ್ನು ಮುನ್ನಡೆಸಲು ಕೆಲವು ಉತ್ತಮ ಅಭ್ಯರ್ಥಿಗಳಿದ್ದಾರೆ. ನನಗೆ ನಿಖರವಾಗಿ ಯಾರು ಎಂಬುದು ತಿಳಿದಿದೆ. ಆದರೆ, ಈಗ ನಾನು ನಿಮಗೆ ಹೇಳಲು ಸಾಧ್ಯವಿಲ್ಲ” ಎಂದಿದ್ದಾರೆ.
ಇರಾನ್ ತನ್ನ ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೂ, ಅಧ್ಯಕ್ಷರು, ನ್ಯಾಯಾಂಗದ ಮುಖ್ಯಸ್ಥರು ಮತ್ತು ಗಾರ್ಡಿಯನ್ ಕೌನ್ಸಿಲ್ನ ನ್ಯಾಯಶಾಸ್ತ್ರಜ್ಞರನ್ನು ಒಳಗೊಂಡ ನಾಯಕತ್ವದ ಮಂಡಳಿಯು ಇರಾನ್ ಆಡಳಿತವನ್ನು ತಾತ್ಕಾಲಿಕವಾಗಿ ನಿರ್ವಹಿಸಲಿದೆ ಎಂದು ಇರಾನ್ನ ಸುದ್ದಿ ಸಂಸ್ಥೆ ಐಆರ್ಎನ್ಎ ವರದಿ ಮಾಡಿದೆ.
ಈ ಮಧ್ಯೆ, ಇರಾನ್ನ ಇಬ್ಬರು ಪ್ರತಿಸ್ಪರ್ಧಿ ವಿರೋಧ ಪಕ್ಷದ ನಾಯಕರು ಇರಾನ್ ಅಧಿಕಾರವನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅಮೆರಿಕದ ದಾಳಿಯ ನಂತರ, ವಿರೋಧ ಪಕ್ಷದ ನಾಯಕಿ ಮರಿಯಮ್ ರಜವಿ ಮತ್ತು ದೇಶಭ್ರಷ್ಟರಾಗಿರುವ ಯುವರಾಜ ರೆಜಾ ಪಹ್ಲವಿ ಇಬ್ಬರೂ ಇರಾನಿಯನ್ನರಿಗೆ ಒಗ್ಗಟ್ಟಾಗಿರುವಂತೆ ಕರೆ ನೀಡಿದ್ದಾರೆ. ಇದೇ ಸಮಯದಲ್ಲಿ ಇಸ್ಲಾಮಿಕ್ ಗಣರಾಜ್ಯದ (ಇರಾನ್) ಭವಿಷ್ಯದ ಬಗ್ಗೆ ತಮ್ಮ ವಿಭಿನ್ನ ದೃಷ್ಟಿಕೋನಗಳನ್ನು ಇಬ್ಬರೂ ಸ್ಪಷ್ಟಪಡಿಸಿದ್ದಾರೆ.
ರಜವಿ ಅವರು ಪ್ಯಾರಿಸ್ ಮೂಲದ ನ್ಯಾಷನಲ್ ಕೌನ್ಸಿಲ್ ಆಫ್ ರೆಸಿಸ್ಟೆನ್ಸ್ ಆಫ್ ಇರಾನ್ನ (NCRI) ನೂತನ ಅಧ್ಯಕ್ಷರಾಗಿದ್ದಾರೆ. ಈ ಎನ್ಸಿಆರ್ಐ 1979ರ ಇಸ್ಲಾಮಿಕ್ ಕ್ರಾಂತಿಯ ನಂತರ ಹುಟ್ಟಿಕೊಂಡ ಪಕ್ಷವಾಗಿದೆ. ಈಗ ಖಮೇನಿ ಹತ್ಯೆಯ ಬೆನ್ನಲ್ಲೇ, ಆಡಳಿತ ರಚನೆಗೆ ಮುಂದಾಗಿದೆ. ಪಕ್ಷವು ಆರು ತಿಂಗಳ ಪರಿವರ್ತನಾ ಆಡಳಿತಕ್ಕಾಗಿ ಸಿದ್ಧ ಯೋಜನೆಯನ್ನು ರೂಪಿಸಿಕೊಂಡಿದೆ. ಈ ಅವಧಿಯಲ್ಲಿ ಮುಕ್ತ ಚುನಾವಣೆಗಳನ್ನು ನಡೆಸಲಾಗುತ್ತದೆ. ದೇಶದ ಭವಿಷ್ಯವನ್ನು ನಿರ್ಧರಿಸುವ ಸಾರ್ವಭೌಮತ್ವವನ್ನು ಜನರಿಗೆ ವರ್ಗಾಯಿಸುತ್ತದೆ ಎಂದು ಎನ್ಸಿಆರ್ಐ ಹೇಳಿಕೊಂಡಿದೆ.
ರಜವಿ ಅವರು ಆಡಳಿತ ಚುಕ್ಕಾಣಿ ಹಿಡಿಯಲು ಮುಂದಾಗಿದ್ದಾರೆ. ಅವರು ಇರಾನಿಯನ್ನರಿಗೆ ಅವರು ನೀಡಿದ ಸಂದೇಶದಲ್ಲಿ, “ನಮ್ಮ ತಾಯ್ನಾಡು ಧಾರ್ಮಿಕ ಫ್ಯಾಸಿಸಂನ ಆಳ್ವಿಕೆಯಲ್ಲಿ ಹೆಚ್ಚಿನ ನೋವು ಮತ್ತು ವಿನಾಶವನ್ನು ಅನುಭವಿಸಿದೆ. ಇನ್ನು ರಾಜ ಪ್ರಭುತ್ವಕ್ಕೆ ಯಾವುದೇ ಅವಕಾಶವಿಲ್ಲ. ದೇಶದ ಆಡಳಿತಾರೂಢ ಧಾರ್ಮಿಕ ಆಡಳಿತವನ್ನು ಉರುಳಿಸಿ, ಪ್ರಜಾಪ್ರಭುತ್ವ ಗಣರಾಜ್ಯವನ್ನು ಸ್ಥಾಪಿಸಬೇಕಿದೆ. ದೇಶದ ಧೈರ್ಯಶಾಲಿ ಯುವಜನರು ನಾಗರಿಕರನ್ನು ರಕ್ಷಿಸಬೇಕು” ಎಂದು ಕರೆ ನೀಡಿದ್ದಾರೆ.
ಈ ನಡುವೆ, ಇರಾನ್ನ ಕೊನೆಯ ರಾಜನ ಮಗ ರೆಜಾ ಪಹ್ಲವಿ ಕೂಡ, ಇಸ್ಲಾಮಿಕ್ ಗಣರಾಜ್ಯ ಕುಸಿದರೆ ಪ್ರಜಾಪ್ರಭುತ್ವದ ಪರಿವರ್ತನೆಗಾಗಿ ತಾವೂ ಯೋಜನೆಗಳನ್ನು ಹೊಂದಿರುವುದಾಗಿ ಎಂದು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಮೆರಿಕ ದಾಳಿಯನ್ನು ‘ಮಾನವೀಯ ಹಸ್ತಕ್ಷೇಪ’ ಎಂದು ಬಣ್ಣಿಸಿರುವ ಪಹ್ಲವಿ, “ಈ ದಾಳಿಯು ಇರಾನಿನ ಜನರಿಗೆ ಅಲ್ಲ, ಆಡಳಿತವನ್ನು ಕಸಿದುಕೊಂಡು ಇರಾನ್ಅನ್ನು ವಶವಾಗಿಸಿಕೊಳ್ಳುವ ಗುರಿ ಹೊಂದಿದೆ” ಎಂದು ಆರೋಪಿಸಿದ್ದಾರೆ.
“ಈ ಅಂತಿಮ ಯುದ್ಧದಲ್ಲಿ ವಿಜಯವನ್ನು ನಾವೇ ಸಾಧಿಸುತ್ತೇವೆ. ಇರಾನ್ನ ಜನರೇ ಜಯಿಸುತ್ತಾರೆ. ಇರಾನಿಯನ್ನರು ಬೀದಿಗಿಳಿಯುವ ಸಮಯ ಹತ್ತಿರವಾಗುತ್ತಿದೆ” ಎಂದಿದ್ದಾರೆ.
ಈ ಲೇಖನ ಓದಿದ್ದೀರಾ?: ಜೋರ್ಡನ್, ಬಹ್ರೇನ್, ಕತಾರ್, ರಿಯಾದ್, ಯುಎಇ ಮೇಲೇಕೆ ದಾಳಿ ನಡೆಸಿದೆ ಇರಾನ್!
ಇಬ್ಬರೂ ನಾಯಕರು ಇರಾನ್ನ ಮಿಲಿಟರಿ ಮತ್ತು ಭದ್ರತಾ ಪಡೆಗಳಿಗೆ ಪ್ರಜಾಪ್ರಭುತ್ವದ ಅಧಿಕಾರ ವರ್ಗಾವಣೆಗೆ ದಾರಿ ಮಾಡಿಕೊಡುವಂತೆ ನೇರವಾಗಿ ಮನವಿ ಮಾಡಿದ್ದಾರೆ. ರಜವಿ ಅವರು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಮತ್ತು ಇತರ ಭದ್ರತಾ ಸಂಸ್ಥೆಗಳ ಸದಸ್ಯರಿಗೆ ತಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿಳಿಸಿ ಜನರೊಂದಿಗೆ ನಿಲ್ಲುವಂತೆ ಕೇಳಿದ್ದಾರೆ. ಅಂತೆಯೇ, ಪಹ್ಲವಿ ಕೂಡ ಭದ್ರತಾ ಪಡೆಗಳು ಆಡಳಿತವನ್ನು ರಕ್ಷಿಸುವುದನ್ನು ಮುಂದುವರಿಸಿದರೆ ‘ಖಮೇನಿಯ ಹಡಗಿನೊಂದಿಗೆ ಮುಳುಗುತ್ತಾರೆ’ ಎಂದು ಎಚ್ಚರಿಕೆ ನೀಡಿದ್ದಾರೆ.
ಖಮೇನಿ ಅನುಪಸ್ಥಿತಿಯಲ್ಲಿ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಕೂಡ ಅಧಿಕಾರವನ್ನು ವಶಪಡಿಸಿಕೊಳ್ಳಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಖಮೇನಿ ಅವರು ತಮ್ಮ ಉತ್ತರಾಧಿಕಾರಿ ಯಾರೆಂದು ಎಂದಿಗೂ ಬಹಿರಂಗಪಡಿಸಲಿಲ್ಲ. ಆದರೆ, ಅವರ ಎರಡನೇ ಮಗ ಮೊಜ್ತಬಾ ಖಮೇನಿ ದೀರ್ಘಕಾಲದಿಂದ ಇಸ್ಲಾಮಿಕ್ ಆಡಳಿತಕ್ಕೆ ತಾರ್ಕಿಕ ಉತ್ತರಾಧಿಕಾರಿಯಾಗಿ ಕಾಣುತ್ತಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
56 ವರ್ಷದ ಮೊಜ್ತಬಾ ತನ್ನ ತಂದೆಯ ಕಠಿಣ ನೀತಿಗಳಿಗೆ ಬದ್ಧರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ನಡುವೆ, ಇನ್ನೊಬ್ಬ ಸಂಭಾವ್ಯ ಆಡಳಿತಗಾರನಾಗಿ ಹಸನ್ ಖಮೇನಿ ಹೆಸರು ಕೂಡ ಕೇಳಿಬರುತ್ತಿದೆ. ಹಸನ್ ಅವರು ಇಸ್ಲಾಮಿಕ್ ಕ್ರಾಂತಿಯ ಪಿತಾಮಹ ರುಹೊಲ್ಲಾ ಖಮೇನಿಯ ಮೊಮ್ಮಗ. 53 ವರ್ಷದ ಹಸನ್ ಖಮೇನಿ ಕಳೆದ ಒಂದು ತಿಂಗಳಲ್ಲಿ ಪ್ರಭಾವಿ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಅವರು ಖಮೇನಿಗಿಂತ ಅಂತಾರಾಷ್ಟ್ರೀಯವಾಗಿ ಮತ್ತು ದೇಶೀಯವಾಗಿ ಹೆಚ್ಚು ಸೌಹಾರ್ದಯುತ ಆಯ್ಕೆಯನ್ನು ಪ್ರತಿನಿಧಿಸುತ್ತಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.




