ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಿಂದಾಗಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದಾರೆ. “ಈ ಹತ್ಯೆಯು ಮುಸ್ಲಿಮರ ವಿರುದ್ಧ ಯುದ್ಧ ಘೋಷಣೆ” ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಭಾನುವಾರ ಹೇಳಿದ್ದಾರೆ.
ಈ ಬಗ್ಗೆ ಇರಾನ್ ಟಿವಿಗೆ ಅಧ್ಯಕ್ಷ ಪೆಜೆಶ್ಕಿಯಾನ್ ಹೇಳಿಕೆ ನೀಡಿದ್ದು, “ಇರಾನ್ ಇಸ್ಲಾಮಿಕ್ ಗಣರಾಜ್ಯದ ಅತ್ಯುನ್ನತ ಅಧಿಕಾರಿ ಮತ್ತು ವಿಶ್ವಾದ್ಯಂತ ಶಿಯಾ ಧರ್ಮದ ಪ್ರಮುಖ ನಾಯಕನ ಹತ್ಯೆ ನಡೆಸಲಾಗಿದೆ. ಇದು ಮುಸ್ಲಿಮರ ವಿರುದ್ಧ, ವಿಶೇಷವಾಗಿ ಪ್ರಪಂಚದಾದ್ಯಂತ ಶಿಯಾಗಳ ವಿರುದ್ಧ ಬಹಿರಂಗ ಯುದ್ಧ ಘೋಷಣೆ ಎಂದು ಪರಿಗಣಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಖಮೇನಿ ಹತ್ಯೆ: ಇರಾನ್ನ ಮುಂದಿನ ನಾಯಕ ಯಾರು? ಸಂಭಾವ್ಯ ಉತ್ತರಾಧಿಕಾರಿಗಳು ಇವರು!
ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಬೃಹತ್ ಸೇನಾ ದಾಳಿ ನಡೆಸಿವೆ. ಈ ಕಾರ್ಯಾಚರಣೆಗೆ ಅಮೆರಿಕ ‘ಆಪರೇಷನ್ ಎಪಿಕ್ ಫ್ಯೂರಿ’ ಮತ್ತು ಇಸ್ರೇಲ್ ‘ರೋರಿಂಗ್ ಲಯನ್’ ಎಂದು ಹೆಸರಿಟ್ಟಿವೆ. ಈ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತರಾಗಿದ್ದಾರೆ. ಜತೆಗೆ ಅವರ ಕುಟುಂಬಸ್ಥರು ಮೃತಪಟ್ಟಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ಖಚಿತಪಡಿಸಿವೆ.
ಇರಾನ್ನ ಅರೆಸೈನಿಕ ಕ್ರಾಂತಿಕಾರಿ ಗಾರ್ಡ್ನ ಮುಖ್ಯಸ್ಥ ಮತ್ತು ಭದ್ರತಾ ಸಲಹೆಗಾರ ಅಲಿ ಶಮ್ಖಾನಿ ಅವರೊಂದಿಗೆ ಸಭೆ ನಡೆಸುತ್ತಿದ್ದ ಜನರಲ್ ಅಬ್ದುಲ್ ರಹೀಮ್ ಮೌಸವಿ ಮತ್ತು ರಕ್ಷಣಾ ಸಚಿವ ಜನರಲ್ ಅಜೀಜ್ ನಾಸಿರ್ಜಾದೆ ಹತರಾಗಿದ್ದಾರೆ ಎಂದೂ ಇರಾನ್ ಮಾಧ್ಯಮಗಳು ವರದಿ ಮಾಡಿದೆ.
ಇಸ್ರೇಲ್-ಅಮೆರಿಕ ದಾಳಿಗೆ ಪ್ರತಿಯಾಗಿ ಇರಾನ್ ಕೂಡ ಇಸ್ರೇಲ್ನ ಟೆಲ್ ಅವಿವ್ ಮತ್ತು ಮಧ್ಯಪ್ರಾಚ್ಯ ಕತಾರ್, ಯುಎಇ, ಬಹ್ರೇನ್, ಕುವೈತ್ ಮತ್ತು ಜೋರ್ಡಾನ್ನಲ್ಲಿರುವ ಅಮೆರಿಕದ ಮಿಲಿಟರಿ ಬೇಸ್ಗಳ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದೆ.
ಇವೆಲ್ಲವುದರ ನಡುವೆ ವಿವಿಧ ದೇಶಗಳಲ್ಲಿ ಖಮೇನಿ ಹತ್ಯೆ ಖಂಡಿಸಿ ಪ್ರತಿಭಟನೆ, ಶೋಕಾಚಾರಣೆ ನಡೆಸಲಾಗುತ್ತಿದೆ. ಪಾಕಿಸ್ತಾನದಲ್ಲಿ ಪ್ರತಿಭಟನೆ ವೇಳೆ 12 ಮಂದಿ ಸಾವನ್ನಪ್ಪಿದ್ದಾರೆ. ಜಮ್ಮು ಮತ್ತು ಕಾಶ್ಮೀರ, ಲಡಾಖ್ನಲ್ಲಿ ಶಿಯಾ ಮುಸ್ಲಿಮರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನು ಶಿಯಾ ಮುಸ್ಲಿಮರ ಸಂಖ್ಯೆ ಅಧಿಕವಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಅಲಿಪುರ ಗ್ರಾಮದಲ್ಲಿ ಜನರು ಖಮೇನಿ ಹತ್ಯೆಗೆ ಸಂತಾಪ ಸೂಚಿಸಲು ಸ್ವಯಂಪ್ರೇರಿತವಾಗಿ ಮೂರು ದಿನಗಳ ಕಾಲ ಶೋಕಾಚರಣೆ ನಡೆಸಲು ತೀರ್ಮಾನಿಸಿದ್ದಾರೆ.





