ಕೃಷಿ ಸಂಶೋಧನೆಗಳ ಅಧ್ಯಯನಕ್ಕಾಗಿ ಅಧಿಕೃತ ಫಿಲಿಪೈನ್ಸ್ ಪ್ರವಾಸಕ್ಕೆ ತೆರಳಿರುವ ಕೃಷಿ ಸಚಿವ ಎನ್ ಚಲುವರಾಯಸ್ವಾಮಿಯವರು ಅಲ್ಲಿನ ವಿವಿಧ ಕೃಷಿ ವಿವಿಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಅಕ್ಟೋಬರ್ 15ರಂದು ಅಂತಾರಾಷ್ಟ್ರೀಯ ಭತ್ತ ಸಂಶೋಧನೆ ಕೇಂದ್ರಕ್ಕೆ ಭೇಟಿ ನೀಡಿದ್ದ ಸಚಿವರು ಅ.16ರಂದು ರಾಜಧಾನಿ ಮನಿಲಾದ ಡಿಎಲ್ಎಸ್ಎ ಖಾಸಗಿ ಸಮಗ್ರ ಕೃಷಿ ವಿವಿಗೆ ಭೇಟಿ ನೀಡಿ ಮಾಹಿತಿ ಪಡೆದರು.
ಅಲ್ಲಿನ ಕೃಷಿ ಯಾಂತ್ರೀಕರಣ, ರೈತರು ಹಾಗೂ ಕೃಷಿ ಆರ್ಥಿಕತೆ ಅಭಿವೃದ್ಧಿಯ ಮುನ್ನೋಟಗಳು, ಪಶುಸಂಗೋಪನೆಯನ್ನೂ ಒಳಗೊಂಡಂತೆ ಕೃಷಿ, ಆಹಾರ ವಿಜ್ಞಾನ ಅಧ್ಯಯನ ಭೋದನಾ ಕ್ರಮಗಳು, ಸಂಶೋಧನೆ, ಕ್ಷೇತ್ರ ಪ್ರಯೋಗಗಳ ಸ್ವರೂಪಗಳ ಬಗ್ಗೆ ಸಚಿವ ಎನ್ ಚಲುವರಾಯಸ್ವಾಮಿ ಇಲ್ಲಿಯ ತಜ್ಜರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದು ವಿಚಾರ ವಿನಿಮಯ ಮಾಡಿಕೊಂಡರು.

ಇದೇ ವೇಳೆ ರಾಜ್ಯದಲ್ಲಿ ಕೃಷಿ, ತೋಟಗಾರಿಕೆ ಹಾಗೂ ಪಶುಪಾಲನೆ ಕ್ಷೇತ್ರಗಳ ಸಂಶೋಧನೆಗೆ ಹೆಚ್ಚು ಆದ್ಯತೆ ನೀಡುವ ಸಲುವಾಗಿ ಪ್ರತ್ಯೇಕ ಕೃಷಿ ವಿಶ್ವವಿದ್ಯಾಲಯಗಳ ಸ್ಥಾಪನೆ ಮಾಡಿದ್ದು, ಅದರಿಂದಾಗಿರುವ ಪರಿಣಾಮಗಳು, ಯೋಜಿತ ಸುಧಾರಣಾ ಚಿಂತನೆಗಳ ಬಗ್ಗೆ ಸಚಿವರು ಫಿಲಿಪೈನ್ಸ್ನ ವಿಶ್ವವಿದ್ಯಾಲಯದ ತಜ್ಞರೊಂದಿಗೆ ಅಭಿಪ್ರಾಯ ಹಂಚಿಕೊಂಡರು.
ಇದೇ ವೇಳೆ ಕೃಷಿ ಕ್ಷೇತ್ರದ ಸುಧಾರಣೆ, ಸಂಶೋಧನೆ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ವಿನಿಮಯಕ್ಕೆ ಉಭಯ ರಾಷ್ಟ್ರಗಳ ಪ್ರತಿನಿಧಿಗಳು ಒಮ್ಮತ ವ್ಯಕ್ತಪಡಿಸಿದರು.

ಡಿಎಲ್ಎಸ್ಎ ವಿಶ್ವವಿದ್ಯಾಲಯದ ಕುಲಪತಿ ಡಾ. ಮ್ಯಾರಿ ಅಲಿಷನ್, ಉಪ ಕುಲಪತಿ ಡಾ ಜನ್ನಿಫರ್ ರೇಯಸ್, ಉಪಾಧ್ಯಕ್ಷ ಕ್ರಿಸ್ಟೋಪರ್ ಪೊಲೊಂಕೋ, ಕಾರ್ಯಕ್ರಮದ ಮುಖ್ಯಸ್ಥ ಎಲ್ಮರ್ ಮೊಂಟೆಬಾನ್, ಸಮನ್ವಯ ಮುಖ್ಯಸ್ಥೆ ಮರಿಯಾ ರೊವೆನಾ ಟೆಸ್ಸರಿಯಾ ಅವರು ಕೃಷಿ ಸಚಿವ ಎನ್ ಚಲುವರಾಯಸ್ವಾಮಿಯವರನ್ನು ಆತ್ಮೀಯವಾಗಿ ಸ್ವಾಗತಿಸಿ ಅಲ್ಲಿನ ಕೃಷಿ ವಿವಿಯ ಯೋಜನೆ, ಸಾಧನೆ, ಸ್ವರೂಪಗಳ ಪರಿಚಯ ಮಾಡಿಕೊಟ್ಟರು.
ನೇರ ವಿಮಾನ ಯಾನ ಪ್ರಯತ್ನ
ಮನಿಲಾದಿಂದ ಬೆಂಗಳೂರಿಗೆ ನೇರ ವಿಮಾನ ಸಂಪರ್ಕ ವ್ಯವಸ್ಥೆಯಿಂದ ಕೃಷಿ ಉತ್ಪನ್ನಗಳ ಆಮದು ರಫ್ತು ಸುಗಮವಾಗಲಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳಿಗೆ ಕೋರಿ ಕೇಂದ್ರ ಸರ್ಕಾರ ವಿಮಾನಯಾನ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿ ತಮಗೂ ಪ್ರತಿ ಕಳಿಸಿಕೊಟ್ಟಲಿ ತಾವೂ ಕೇಂದ್ರಕ್ಕೆ ಮನವಿ ಸಲ್ಲಿಸುವುದಾಗಿ ಸಚಿವ ಎನ್ ಚಲುವರಾಯಸ್ವಾಮಿ ಫಿಲಿಪೈನ್ಸ್ನ ಭಾರತೀಯ ರಾಯಭಾರಿ ಕಚೇರಿ ಪ್ರತಿನಿಧಿ ಜೀವನ್ ಅವರಿಗೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಅನಧಿಕೃತವಾಗಿ ಮಳಿಗೆ ನಿರ್ಮಾಣ: ತೆರವುಗೊಳಿಸದಂತೆ ಮಾಲೀಕರ ಪ್ರತಿಭಟನೆ
ಮಂಡ್ಯ ಕೃಷಿ ವಿವಿ ವಿಶೇಷಾಧಿಕಾರಿ ಡಾ ಕೆ ಎಂ ಹರಿಣಿ ಕುಮಾರ್, ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ. ಎ ಬಿ ಪಾಟೀಲ್ ರಾಜ್ಯದ ಕೃಷಿ ವಿವಿಗಳ ಸ್ವರೂಪ ಕರ್ನಾಟಕ ರಾಜ್ಯದ ಕೃಷಿ ನೀತಿಗಳ ಬಗ್ಗೆ ಸಂಕ್ಷಿಪ್ತ ಪರಿಚಯ ಮಾಡಿಕೊಟ್ಟರು. ರಾಜ್ಯದ ಅಧ್ಯಯನ ತಂಡದೊಂದಿಗೆ ತೆರಳಿರುವ ಡಾ. ವೇಣು ಪ್ರಸಾದ್, ಡಾ ಮಲ್ಲಿಕಾರ್ಜುನ ಸ್ವಾಮಿ, ವಿ ಸಿ ಫಾರಂನ ಭತ್ತದ ತಳಿ ವಿಜ್ಞಾನಿ ಡಾ. ದೀಪಕ್, ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಿ ಡಾ ಸುಜಯ್ ಸೇರಿದಂತೆ ಇತರರು ಇದ್ದರು.





