ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ದಾಳಿ ಆರಂಭಿಸಿ ನಾಲ್ಕು ದಿನಗಳು ಕಳೆಯುತ್ತ ಬಂದಿದೆ. ಇಡೀ ಮಧ್ಯಪ್ರಾಚ್ಯದಲ್ಲಿ ಭಯದ ವಾತಾವರಣ ನಿರ್ಮಾಣ ಆಗಿದೆ. ಸುರಕ್ಷಿತ ದೇಶ ಎಂದು ಹೇಳಿಕೊಳ್ಳುವ ದುಬೈ ಸೇರಿದಂತೆ ಮಧ್ಯಪ್ರಾಚ್ಯದಲ್ಲಿರುವ ದೇಶಗಳಲ್ಲಿ ನೂರಕ್ಕೆ ನೂರರಷ್ಟು ನೆಮ್ಮದಿಯಿಂದ ಉಸಿರಾಡುವ ಪರಿಸ್ಥಿತಿ ಇಲ್ಲವಾಗಿದೆ.
ಮೊದಲ ದಿನದ ದಾಳಿಯಲ್ಲಿ ಇರಾನ್ನ ಪರಮೋಚ್ಚ ನಾಯಕ ಖಮೇನಿಯ ಹತ್ಯೆಯಾಗಿತ್ತು. ಅವರ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳುತ್ತೇವೆ ಎಂದು ಪಣತೊಟ್ಟು ನಿಂತಿರುವ ಇರಾನ್ನ ಸೇನೆ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ ಕ್ರಾಪ್ಸ್ (ಐಆರ್ಜಿಸಿ) ಪ್ರತಿದಾಳಿಯನ್ನು ನಡೆಸುತ್ತಿದೆ. ತಮ್ಮ ನಾಯಕನ ಹತ್ಯೆಯಾದ ನಂತರ ಐಆರ್ಜಿಸಿ ತಾವೇ ಸತಃ ನಿರ್ಧರವನ್ನು ತೆಗೆದುಕೊಂಡು ಪ್ರತಿದಾಳಿಗೆ ಮುಂದಾಗಿತ್ತು. ಈಗ ಇರಾನಿನ ಮಾಜಿ ಸರ್ವೊಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರ ಮಗ ಮೊಜ್ತಬಾ ಖಮೇನಿ ಅವರನ್ನು ಇರಾನಿನ ಸರ್ವೋಚ್ಚ ನಾಯಕನಾಗಿ ನೇಮಕ ಮಾಡಲಾಗಿದೆ. ಇರಾನಿನ ತಜ್ಞರು ಸಭೆಯು ಮೊಜ್ತಬಾ ಅವರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದೆ. ಐಆರ್ಜಿಸಿ ಒತ್ತಡದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ʼಇರಾನ್ ಇಂಟರ್ನ್ಯಾಷನಲ್ʼ ವರದಿ ಮಾಡಿದೆ.
56 ವರ್ಷದ ಮೊಜ್ತಬಾ ಖಮೇನಿ, ದಿವಂಗತ ಅಯಾತೊಲ್ಲಾ ಅಲಿ ಖಮೇನಿ ಅವರ ಎರಡನೇ ಪುತ್ರ. ಹಲವು ವರ್ಷಗಳಿಂದ ತೆರೆಮರೆಯಲ್ಲಿ ಪ್ರಭಾವಿ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು, ಐಆರ್ಜಿಸಿ ಹಾಗೂ ಬಸಿಜ್ ಅರೆಸೈನಿಕ ಜಾಲಗಳ ಮೇಲೆ ಆಳವಾದ ಪ್ರಭಾವ ಹೊಂದಿದ್ದರು. ಇರಾನ್-ಇರಾಕ್ ಯುದ್ಧದ ಅನುಭವಿಯೂ ಆಗಿರುವ ಅವರು, ದೇಶದ ಭದ್ರತಾ ವ್ಯವಸ್ಥೆಯೊಂದಿಗೆ ನಿಕಟ ಸಮನ್ವಯ ಹೊಂದಿದ್ದಾರೆ ಎನ್ನಲಾಗಿದೆ.
ಆದರೆ ಧರ್ಮಗುರುಗಳ ವಲಯದಲ್ಲಿ ವಂಶಪಾರಂಪರ್ಯವಾಗಿ ಉತ್ತರಾಧಿಕಾರಿಯಾಗುವ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ. ಸರ್ವೋಚ್ಚ ನಾಯಕನ ಸ್ಥಾನಕ್ಕೇರಲು ಸಾಂಪ್ರದಾಯಿಕವಾಗಿ ಅಗತ್ಯವಿರುವ ಉನ್ನತ ಧಾರ್ಮಿಕ ಪದವಿ ಹಾಗೂ ಔಪಚಾರಿಕ ನಾಯಕತ್ವದ ಅನುಭವ ಮೊಜ್ತಬಾ ಅವರಿಗೆ ಇಲ್ಲ ಎಂಬ ಟೀಕೆಗಳು ಸಹ ಕೇಳಿ ಬರುತ್ತಿವೆ.
ಇರಾನ್ನ ಸರ್ವೋಚ್ಚ ನಾಯಕ ಸ್ಥಾನವು ಶಿಯಾ ಸಮುದಾಯದ ಕೇಂದ್ರ ಬಿಂದುವಾಗಿರುತ್ತದೆ. ಅದರ ಜೊತೆಗೆ ದೇಶದ ಎಲ್ಲಾ ಪ್ರಮುಖ ವಿಷಯಗಳ ಮೇಲೆ ಅಂತಿಮ ನಿರ್ಧಾರದ ಅಧಿಕಾರ ಹೊಂದಿರಬೇಕಾಗುತ್ತದೆ. ಈ ಹುದ್ದೆಯಲ್ಲಿ ಸಶಸ್ತ್ರ ಪಡೆಗಳು ಹಾಗೂ ಐಆರ್ಜಿಸಿಯ ಕಮಾಂಡರ್-ಇನ್-ಚೀಫ್ ಆಗಿ ಕಾರ್ಯನಿರ್ವಹಿಸುವ ಜವಾಬ್ದಾರಿಯೂ ಇರುತ್ತದೆ.
ಬಹಳ ಮುಖ್ಯವಾಗಿ ಸಶಸ್ತ್ರ ಪಡೆಗಳ ಕಮಾಂಡರ್ ಆಗಿರುವ ಸರ್ವೋಚ್ಚ ನಾಯಕರು, ವಿದೇಶಾಂಗ ನೀತಿಯನ್ನು ನಿರ್ಧರಿಸುತ್ತಾರೆ. ಸರ್ಕಾರದ ಎಲ್ಲಾ ಇಲಾಖೆಗಳ ಬಗ್ಗೆ ಅವರು ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಾಗಿರುತ್ತದೆ. ಸರ್ವೋಚ್ಚ ನಾಯಕ ಸಂವಿಧಾನಬದ್ಧವಾಗಿ ಆಯ್ಕೆಯಾಗಿದ್ದರೂ, ಧಾರ್ಮಿಕ ಅಧಿಕಾರ, ರಾಜಕೀಯ ಒಮ್ಮತ ಮತ್ತು ಸಾಂಸ್ಥಿಕ ಶಕ್ತಿಯನ್ನು ಒಳಗೊಂಡು ಅತ್ಯಂತ ಸೂಕ್ಷ್ಮತೆಯಿಂದ ವರ್ತಿಸಬೇಕಾಗುತ್ತದೆ. ಇಷ್ಟೆಲ್ಲ ಗುಣಗಳು ಅವರಲ್ಲಿ ಇದೆಯಾ ಎಂಬ ಟೀಕೆಗಳು ಸಹ ಕೇಳಿ ಬಂದಿವೆ.
ಆದರೆ, ಇಂತಹ ಯುದ್ಧದ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ದೇಶಕ್ಕೆ ಒಬ್ಬ ನಾಯಕ ಬೇಕು ಎಂದು ʼಐಆರ್ಜಿಸಿʼಯ ಒತ್ತಡಕ್ಕೆ ಖಮೇನಿ ಅವರ ಮಗ ಮೊಜ್ತಬಾ ಖಮೇನಿ ಅವರನ್ನು ಆಯ್ಕೆ ಮಾಡಲಾಗಿದೆ. ಇವರ ತಂದೆ ಖಮೇನಿ 1989ರಲ್ಲಿ ಇಸ್ಲಾಮಿಕ್ ಗಣರಾಜ್ಯದ ಸ್ಥಾಪಕ ಅಯತುಲ್ಲಾ ರುಹೊಲ್ಲಾ ಖಮೇನಿ ಅವರ ನಿಧನದ ಬಳಿಕ ದೇಶದ ನೇತೃತ್ವ ವಹಿಸಿಕೊಂಡಿದ್ದರು. ಈಗ ಮೊಜ್ತಬಾ ಖಮೇನಿ ದೇಶವನ್ನು ಮುನ್ನಡೆಸಲು ಸಿದ್ದರಾಗಿದ್ದಾರೆ.
ಶನಿವಾರ ಇಸ್ರೇಲ್-ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ದಾಳಿಯಿಂದ ಇಡೀ ಮಧ್ಯಪ್ರಾಚ್ಯ ತೀವ್ರ ಸಂಘರ್ಷದ ದಿಕ್ಕಿಗೆ ತೆಗೆದುಕೊಂಡು ಹೋಗಿದೆ.
ಇರಾನ್ನ ಸರ್ವೋಚ್ಚ ನಾಯಕನ ಆಯ್ಕೆಯ ಪ್ರಕ್ರಿಯೆ
ಸರ್ವೋಚ್ಛ ನಾಯಕನ ಆಯ್ಕೆಯ ಬಗ್ಗೆ ಇರಾನ್ನ ಸಂವಿಧಾನದಲ್ಲಿ ಹೇಳಲಾಗಿದೆ. 88 ಹಿರಿಯ ಶಿಯಾ ಮುಸ್ಲಿಂ ಧರ್ಮಗುರುಗಳನ್ನೊಳಗೊಂಡ “ಅಸೆಂಬ್ಲಿ ಆಫ್ ಎಕ್ಸ್ಪರ್ಟ್ಸ್’ (ತಜ್ಞರ ಮಂಡಳಿ) ಹೊಸ ನಾಯಕನನ್ನು ಆಯ್ಕೆ ಮಾಡುತ್ತದೆ. ಸಂವಿಧಾನದ 111 ನೇ ವಿಧಿಯ ಪ್ರಕಾರ, ಸರ್ವೋಚ್ಚ ನಾಯಕನ ನಿಧನ, ರಾಜೀನಾಮೆ ಅಥವಾ ಅಸಮರ್ಥತೆಯ ಸಂದರ್ಭದಲ್ಲಿ ಮಂಡಳಿಯು ಹೊಸ ನಾಯಕನನ್ನು ಆಯ್ಕೆ ಮಾಡಬೇಕು. ಕಡಿಮೆ ಅವಧಿಯಲ್ಲಿ ಆಯ್ಕೆ ಮಾಡಬೇಕು ಎನ್ನುವುದು ಇರಾನ್ ಸಂವಿಧಾನದ ನಿಯಮ.
ಇರಾನ್ನ ಪರಮೋಚ್ಚ ನಾಯಕನಾಗಿ ಆಯ್ಕೆಯಾಗುವವರು ಒಂದಿಷ್ಟು ಅರ್ಹತೆಗಳನ್ನು ಹೊಂದಿರಬೇಕೆಂದು ಸಂವಿಧಾನ ಹೇಳುತ್ತದೆ. ಮೊದಲು ಆತ ಪುರುಷ ಮುಸ್ಲಿಂ ಧರ್ಮಗುರುವಾಗಿರಬೇಕು. ಇಸ್ಲಾಮಿಕ್ ನ್ಯಾಯಶಾಸ್ತ್ರದಲ್ಲಿ, ವಿಶೇಷವಾಗಿ ಶಿಯಾ ಫಿಕ್ಹ್ನಲ್ಲಿ (ಕರ್ಮಶಾಸ್ತ್ರ) ಆಳವಾದ ಜ್ಞಾನಹೊಂದಿರಬೇಕು. ರಾಜಕೀಯ ಸಾಮರ್ಥ್ಯ ಮತ್ತು ಆಳ್ವಿಕೆ ನಡೆಸುವ ಕೌಶಲ್ಯ ಇರಬೇಕು. ಉನ್ನತ ನೈತಿಕ ಗುಣ ಮತ್ತು ಧರ್ಮನಿಷ್ಠೆ ಹೊಂದಿರಬೇಕು. ಜೊತೆಗೆ ಇಸ್ಲಾಮಿಕ್ ಗಣರಾಜ್ಯ ಮತ್ತು ಅದರ ಮೂಲ ತತ್ವಗಳಿಗೆ ಬದ್ಧರಾಗಿರಬೇಕು. ಇಷ್ಟು ಗುಣಗಳನ್ನು ಅರ್ಹತೆಗಳನ್ನು ಹೊಂದಿರುವವರಿಗೆ ಪರಮೋಚ್ಚ ನಾಯಕನ ಸ್ಥಾನಕ್ಕೆ ಆಯ್ಕೆ ಮಾಡುತ್ತಾರೆ.
ನಾಯಕನ ಸ್ಥಾನ ತೆರವಾದಾಗ ಆಯ್ಕೆ ಮಂಡಳಿಯು ತಕ್ಷಣವೇ ಸಭೆ ಸೇರಬೇಕು. ಇಂತಹ ಸಂದರ್ಭದಲ್ಲಿ ಯಾವುದೇ ಪ್ರಚಾರ ಅಥವಾ ಸಾರ್ವಜನಿಕ ಮತದಾನವಿರುವುದಿಲ್ಲ. ಬಹಳ ಮುಖ್ಯವಾಗಿ ರಹಸ್ಯ ಮಂಡಳಿಯ ಚರ್ಚೆಗಳು ಮತ್ತು ನಡಾವಳಿಗಳು ಅತ್ಯಂತ ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತದೆ. ಹೊಸ ನಾಯಕ ಆಯ್ಕೆ ಆಗುವವರೆಗೆ ಅಧ್ಯಕ್ಷ, ನ್ಯಾಯಂಗದ ಮುಖ್ಯಸ್ಥ ಮತ್ತು ಗಾರ್ಡಿಯನ್ ಕೌನ್ಸಿಲ್ನ ಒಬ್ಬ ಸದಸ್ಯರನ್ನೊಳಗೊಂಡ ನಾಯಕತ್ವದ ಮಂಡಳಿ ದೇಶದ ಜವಾಬ್ದಾರಿಯನ್ನು ವಹಿಸಿಕೊಂಡಿರುತ್ತದೆ.
ಇಸ್ಲಾಮಿಕ್ ಗಣರಾಜ್ಯ ಸ್ಥಾಪನೆ ಆದಾಗಿನಿಂದ ಸರ್ವೋಚ್ಚ ನಾಯಕನ ಅಧಿಕಾರ ಕೇವಲ ಒಂದು ಭಾರಿ ಮಾತ್ರ ಬದಲಾವಣೆ ಆಗಿದೆ. ಇಸ್ಲಾಮಿಕ್ ಕ್ರಾಂತಿಯ ಪಿತಾಮಹಾ ರುಹೊಲ್ಲಾ ಖಮೇನಿ ಸಾವನ್ನಪ್ಪಿದಾಗ, ಅಲಿ ಖಮೇನಿ ಅವರನ್ನು ಅವರ ಉತ್ತರಾಧಿಕಾರಿಯನ್ನಾಗಿ ಮಾಡಲಾಗಿತ್ತು. ಇಸ್ಲಾಮಿಕ್ ಕ್ರಾಂತಿಯ ನಂತರ ಮೂರನೇ ನಾಯಕನಾಗಿ ಮೊಜ್ತಬಾ ಖಮೇನಿ ಆಯ್ಕೆಯಾಗಿದ್ದಾರೆ.
ಇಸ್ರೇಲ್ ಮತ್ತು ಅಮೆರಿಕ, ಇರಾನ್ ಮೇಲೆ ನಡೆಸಿದ ಭೀಕರ ದಾಳಿ, ಈಗ ಇರಾನ್ನ ಪ್ರತಿದಾಳಿಗೆ ಇಡೀ ಮಧ್ಯಪ್ರಾಚ್ಯ ನಲುಗಿ ಹೋಗಿದೆ. ಎಂದಿಗೂ ಅಮೆರಿಕ-ಇಸ್ರೇಲ್ ನಡೆಗೆ ಬಗ್ಗದ ನಾಯಕ ಖಮೇನಿ ಹತ್ಯೆಯ ನಂತರ ಉತ್ತರಾಧಿಕಾರಿಯಾಗಿ ಬಂದಿರುವ ಮೊಜ್ತಬಾ ಖಮೇನಿ ನಡೆಯ ಬಗ್ಗೆ ಇಡೀ ಜಗತ್ತು ನೋಡುತ್ತಿದೆ.





