2021ರಲ್ಲಿ ಅಫ್ಘನ್ ಸರ್ಕಾರವನ್ನು ಉರುಳಿಸಿ, ಅಧಿಕಾರವನ್ನು ತಾಲಿಬಾನ್ ವಶಕ್ಕೆ ಪಡೆದುಕೊಂಡ ಬಳಿಕ, ತಾಲಿಬಾನ್ನ ನಾಯಕರೊಬ್ಬರು ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದಾರೆ. ಭಯೋತ್ಪಾದನೆ ವಿರುದ್ಧ ಇಡೀ ಜಗತ್ತಿಗೆ ಸಂದೇಶ ರವಾನಿಸಲು ನಿಯೋಗಗಳನ್ನು ಕಳಿಸಿದ್ದ ಭಾರತ ಸರ್ಕಾರವು, ತಾಲಿಬಾನ್ ಭಯೋತ್ಪಾದಕ ನಾಯಕರಿಗೆ ಸ್ವಾಗತ ಕೋರಿದ್ದನ್ನು ಖ್ಯಾತ ಗೀತರಚನೆಕಾರ ಜಾವೇದ್ ಅಖ್ತರ್ ಟೀಕಿಸಿದ್ದಾರೆ. ನನ್ನ ತಲೆ ನಾಚಿಕೆಯಿಂದ ತೂಗುತ್ತಿದೆ ಎಂದಿದ್ದಾರೆ.
ಅಫ್ಘನ್ನ ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರು ಭಾರತಕ್ಕೆ ಭೇಟಿ ನೀಡಿದ್ದು, ಆರು ದಿನಗಳ ಪ್ರವಾಸದಲ್ಲಿದ್ದರು. ಶುಕ್ರವಾರ, ದೆಹಲಿಯಲ್ಲಿ ನಡೆದ ಮುತ್ತಕಿ ಅವರ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರನ್ನು ಹೊರಗಿಡಲಾಗಿತ್ತು. ಇದು, ಕೇಂದ್ರ ಸರ್ಕಾರದ ವಿರುದ್ಧ ವ್ಯಾಪಕ ಟೀಕಿ-ಆಕ್ರೋಶಕ್ಕೆ ಕಾರಣವೂ ಆಗಿತ್ತು.
ಇದೀಗ, ಮುತ್ತಕಿಗೆ ಭಾರತ ಸರ್ಕಾರ ಸ್ವಾಗತ ಕೋರಿರುವ ಬಗ್ಗೆ ಮಾತನಾಡಿರುವ ಜಾವೇದ್ ಅಖ್ತರ್, “ಎಲ್ಲ ರೀತಿಯ ಭಯೋತ್ಪಾದಕರ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೇದಿಕೆ ಸಜ್ಜುಗೊಳಿಸ ಹೊರಟವರು, ವಿಶ್ವದ ಕೆಟ್ಟ ಭಯೋತ್ಪಾದಕ ಗುಂಪು ತಾಲಿಬಾನ್ನ ಪ್ರತಿನಿಧಿಗೆ ಗೌರವ ಮತ್ತು ಸ್ವಾಗತವನ್ನು ನೀಡಿದೆ. ಇದನ್ನು ನೋಡಿದಾಗ ನಾಚಿಕೆಯಿಂದ ನನ್ನ ತಲೆಯನ್ನು ನಾನೇ ನೇಣಿಗೇರಿಸಿಕೊಂಡಂತಾಗಿದೆ” ಎಂದು ಅಖ್ತರ್ ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಮಚಾಡೊಗೆ ನೊಬೆಲ್ ಶಾಂತಿ ಪ್ರಶಸ್ತಿ; ತನ್ನ ಅರ್ಥವನ್ನೇ ಕಳೆದುಕೊಂಡ ‘ಶಾಂತಿ’
ಮುತ್ತಕಿ ಅವರನ್ನು ಆಹ್ವಾನಿಸಿದ್ದ ಉತ್ತರ ಪ್ರದೇಶದ ಸಹರಾನ್ಪುರದಲ್ಲಿರುವ ದಾರುಲ್ ಉಲೂಮ್ ದಿಯೋಬಂದ್ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿರುವ ಜಾವೇದ್, “ಹೆಣ್ಣು ಮಕ್ಕಳ ಶಿಕ್ಷಣವನ್ನು ಸಂಪೂರ್ಣವಾಗಿ ನಿಷೇಧಿಸಿದ ‘ಇಸ್ಲಾಮಿಕ್ ಮೂಲಭೂತವಾದಿ’ಗೆ ಇಷ್ಟೊಂದು ಗೌರವಯುತ ಸ್ವಾಗತ ನೀಡಿದ್ದಕ್ಕಾಗಿ ದಿಯೋಬಂದ್ಗೂ ನಾಚಿಕೆಯಾಗಬೇಕು. ನನ್ನ ಭಾರತೀಯ ಸಹೋದರ ಸಹೋದರಿಯರೇ ನಮಗೆ ಏನಾಗುತ್ತಿದೆ” ಎಂದು ಪ್ರಶ್ನಿಸಿದ್ದಾರೆ.




