ಪಾಕಿಸ್ತಾನ ಸರ್ಕಾರದ ಶಿಕ್ಷಣ ನೀತಿಗಳ ವಿರುದ್ಧ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಭಾದ ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿದಿದ್ದಾರೆ. ಶೆಹಬಾಜ್ ಷರೀಫ್ ಅವರ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳ ಜನರಲ್ ಝಡ್ (ಜೆನ್ ಝಡ್) ಪ್ರತಿಭಟನೆಯಿಂದಾಗಿ ಪಿಒಕೆ ಉದ್ವಿಗ್ನಗೊಂಡಿದೆ.
ವಿಶ್ವವಿದ್ಯಾಲಯಗಳ ದುಬಾರಿ ಶುಲ್ಕಗಳು ಮತ್ತು ದೋಷಪೂರಿತ ಪರೀಕ್ಷಾ ಪ್ರಕ್ರಿಯೆಯನ್ನು ಖಂಡಿಸಿ ಪಾಕ್ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಶಾಂತಿಯುತ ಪ್ರತಿಭಟನೆ ಆರಂಭಿಸಿದ್ದರು. ಆದರೆ, ಕೆಲವು ವ್ಯಕ್ತಿಗಳು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದು ಒಬ್ಬ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರಿಂದಾಗಿ, ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ಈ ಹಿಂದೆ, ತೆರಿಗೆ ಪರಿಹಾರ, ಅಗ್ಗದ ವಿದ್ಯುತ್ ಮತ್ತು ಅಭಿವೃದ್ಧಿ ಯೋಜನೆಗಳು ಹಾಗೂ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದು ಪಿಒಕೆ ಪ್ರದೇಶದಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ಇದೀಗ, ವಿದ್ಯಾರ್ಥಿಗಳ ಪ್ರತಿಭಟನೆ ಭುಗಿಲೆದ್ದಿದೆ.
ವಿದ್ಯಾರ್ಥಿಗಳ ಪ್ರತಿಭಟನೆ ಯಾಕಾಗಿ?
ಮುಜಫರಾಬಾದ್ನಲ್ಲಿರುವ ‘ಆಜಾದ್ ಜಮ್ಮು ಮತ್ತು ಕಾಶ್ಮೀರ ವಿಶ್ವವಿದ್ಯಾಲಯ’ದಲ್ಲಿ (ಯುಎಜೆಕೆ) ಮೆಟ್ರಿಕ್ಯುಲೇಷನ್ ಮತ್ತು ಮಧ್ಯಂತರ ಹಂತಗಳಲ್ಲಿ ನಡೆಯುವ ಪರೀಕ್ಷೆಗಳನ್ನು ಮೌಲ್ಯಮಾಪನಕ್ಕೆ ಹೊಸ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯನ್ನು ಪರಿಚಯಿಸಲಾಗಿತ್ತು.ಅಲ್ಲದೆ, ಆರು ತಿಂಗಳ ವಿಳಂಬದ ಬಳಿಕ ಪರೀಕ್ಷಾ ಫಲಿತಾಂಶವನ್ನು ಯುಎಜೆಕೆ ಪ್ರಕಟಿಸಿತ್ತು. ಅದರಲ್ಲಿ, ಹಲವು ವಿದ್ಯಾರ್ಥಿಗಳು ಅನಿರೀಕ್ಷಿತವಾಗಿ ಕಡಿಮೆ ಅಂಕ ಪಡೆದಿದ್ದರು. ಮರುಮೌಲ್ಯಮಾಪನ ಬಯುಸವವರು ಪ್ರತಿ ವಿಷಯಕ್ಕೆ 1,500 ರೂ. ಶುಲ್ಕ ಪಾವತಿಸಬೇಕೆಂದು ಸೂಚಿಸಲಾಗಿತ್ತು.
ಈ ಲೇಖನ ಓದಿದ್ದೀರಾ?: ಉಮಾಶ್ರೀ ಬಾಳಿಗೆ ತಿರುವು ಕೊಟ್ಟ ‘ಒಡಲಾಳ’; ಸವೆಸಿದ ಹಾದಿ ಹೇಗಿತ್ತು ಗೊತ್ತೇ?
ಪರಿಣಾಮವಾಗಿ, ಹೊಸ ಮೌಲ್ಯಮಾಪನ ವ್ಯವಸ್ಥೆ, ತೀವ್ರ ಶುಲ್ಕ ಹೆಚ್ಚಳ ಹಾಗೂ ಪರೀಕ್ಷಾ ಫಲಿತಾಂಶಗಳಲ್ಲಿ ವ್ಯತ್ಯಾಸಗಳ ವಿರುದ್ಧ ಯುಎಜೆಕೆ ವಿದ್ಯಾರ್ಥಿಗಳು ನವೆಂಬರ್ ಆರಂಭದಲ್ಲಿ ಪ್ರತಿಭಟನೆ ಆರಂಭಿಸಿದ್ದರು. ಆದರೆ, ಪ್ರತಿಭಟನೆ ವೇಳೆ, ವ್ಯಕ್ತಿಯೊಬ್ಬ ವಿದ್ಯಾರ್ಥಿಳ ಮೇಲೆ ಗುಂಡು ಹಾರಿಸಿದ್ದು, ಪ್ರತಿಭಟನೆಯನ್ನು ತೀವ್ರಗೊಳಿಸಿದೆ.
ಈ ಪ್ರತಿಭಟನೆಗಳು ಪಿಒಕೆಯಲ್ಲಿ ಮಾತ್ರವಲ್ಲದೆ ಪಾಕಿಸ್ತಾನದ ಉಳಿದ ಭಾಗಗಳಿಗೂ ವ್ಯಾಪಿಸುವ ಆಂತಕವಿದೆ. ಹೀಗಾಗಿ, ಷರೀಫ್ ಸರ್ಕಾರವು ಪ್ರತಿಭಟನೆಗಳನ್ನು ಹತ್ತಿಕ್ಕಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ನೋಡುತ್ತಿದೆ ಎಂದು IANS ವರದಿ ಮಾಡಿದೆ.
ಪಿಒಕೆಯಲ್ಲಿನ ಅಶಾಂತಿಯು ನೇಪಾಳದಲ್ಲಿ ನಡೆದ ಜನರಲ್ ಝಡ್ ಪ್ರತಿಭಟನೆಯನ್ನು ಹೋಲುತ್ತದೆ. ಅಲ್ಲಿ ಸರ್ಕಾರ ಸಾಮಾಜಿಕ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿದ ಬಳಿಕ, ವಿದ್ಯಾರ್ಥಿಗಳು ಸರ್ಕಾರದ ಭ್ರಷ್ಟಾಚಾರ ಮತ್ತು ಅವಕಾಶಗಳ ಕೊರತೆ ಹಾಗೂ ಅಭಿವೃದ್ಧಿ ವೈಫಲ್ಯದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದರು. ಪರಿಣಾಮ, ಪ್ರಧಾನಿ ಕೆ.ಪಿ ಒಲಿ ಶರ್ಮಾ ಅವರು ರಾಜೀನಾಮೆ ನೀಡಿದರು.




