ಮಂಗಳವಾರ (ನ.11), ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು, ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ. ಈ ದಾಳಿಯ ಹಿಂದೆ ಭಾರತದ ಬೆಂಬಲವಿದೆ ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಆರೋಪಿಸಿದ್ದಾರೆ. ಈ ಆರೋಪವನ್ನು ಭಾರತ ಸರ್ಕಾರ ತಿರಸ್ಕರಿಸಿದೆ. “ಪಾಕಿಸ್ತಾನದ ಭ್ರಮನಿರಸನಗೊಂಡ ನಾಯಕತ್ವವು ತಮ್ಮ ಮನೆಯಲ್ಲಿ ನಡೆಯುತ್ತಿರುವ ಕೃತ್ಯಗಳಲ್ಲಿ ಹೊಣೆಗಾರಿಕೆಯಿಂದ ದೂರವಿರಲು ‘ಆಧಾರಹಿತ, ಸತ್ಯಕ್ಕೆ ದೂರವಾದ’ ಹೇಳಿಕೆಗಳನ್ನು ನೀಡುತ್ತಿದೆ” ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಪಾಕ್ ರಾಜಧಾನಿ ಇಸ್ಲಾಮಾಬಾದ್ನ ಜಿಲ್ಲಾ ನ್ಯಾಯಾಲಯ ಆವರಣದ ಗೇಟ್ ಬಳಿ ಭೀಕರ ಸ್ಪೋಟ ಸಂಭವಿಸಿದೆ. ಇದನ್ನು ಆತ್ಮಹತ್ಯಾ ದಾಳಿ ಎಂದು ಹೇಳಲಾಗಿದೆ. ಈ ದಾಳಿಯ ಹಿಂದೆ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಕೈವಾಡವಿದೆ. ಭಾರತ ಸರ್ಕರದ ಪ್ರಾಯೋಜಕತ್ವವಿದೆ ಎಂದು ಪ್ರಧಾನಿ ಷರೀಫ್ ಹೇಳಿಕೆ ನೀಡಿದ್ದಾರೆ. ಆದರೆ, ಟಿಟಿಪಿ ಈ ದಾಳಿಯ ಹೊಣೆಗಾರಿಕೆಯನ್ನು ನಿರಾಕರಿಸಿದೆ ಎಂದು ವರದಿಯಾಗಿದೆ.
ಷರೀಫ್ ಅವರ ಆರೋಪವನ್ನು ಭಾರತದ ವಿದೇಶಾಂಗ ಸಚಿವಾಲಯವು ತಳ್ಳಿಹಾಕಿದೆ. ಸಚಿವಾಲಯದ ವಕ್ತಾರ ವಕ್ತಾರ ರಣಧೀರ್ ಜೈಸ್ವಾಲ್ ಅವರು, “ಸ್ಪಷ್ಟವಾಗಿ ಭ್ರಮನಿರಸನಗೊಂಡ ಪಾಕಿಸ್ತಾನಿ ನಾಯಕತ್ವವು ಮಾಡುತ್ತಿರುವ ಆಧಾರರಹಿತ ಆರೋಪಗಳನ್ನು ಭಾರತ ನಿಸ್ಸಂದಿಗ್ಧವಾಗಿ ತಿರಸ್ಕರಿಸುತ್ತದೆ” ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಹರಿಯಾಣದ ಮತದಾರೆ ‘ಬ್ರೆಜಿಲ್ ಮಾಡೆಲ್’ ಯಾರು ಗೊತ್ತೇ?
ಪಾಕ್ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರಿಗೆ ಹೆಚ್ಚಿನ ಅಧಿಕಾರ ಮತ್ತು ಕಾನೂನು ವಿನಾಯಿತಿ ನೀಡುವ ಪ್ರಸ್ತಾಪವನ್ನು ಪಾಕಿಸ್ತಾನದ ಸೆನೆಟ್ ಸೋಮವಾರ ಅಂಗೀಕರಿಸಿದೆ. ಈ ವಿವಾದಾತ್ಮಕ ಸಾಂವಿಧಾನಿಕ ತಿದ್ದುಪಡಿಯನ್ನು ಉಲ್ಲೇಖಿಸಿರುವ ಜೈಸ್ವಾಲ್, “ಪಾಕಿಸ್ತಾನದ ನಾಯಕತ್ವವು ತಮ್ಮ ಮನೆಯಲ್ಲಿ ‘ನಡೆಯುತ್ತಿರುವ ಸಾಂವಿಧಾನಿಕ ಉಲ್ಲಂಘನೆ’ಯಿಂದ ಜನರ ಚಿತ್ತವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ” ಎಂದು ಆರೋಪಿಸಿದ್ದಾರೆ.
“ದೇಶದೊಳಗೆ ಮಿಲಿಟರಿ ಪ್ರೇರಿತ ಸಾಂವಿಧಾನಿಕ ವಿಧ್ವಂಸಕತೆ ಮತ್ತು ಅಧಿಕಾರ ದಬ್ಬಾಳಿಕೆ ನಡೆಸಲು ಅಲ್ಲಿನ ಸರ್ಕಾರ ಮುಂದಾಗಿದೆ. ಅದಕ್ಕಾಗಿ, ತಿದ್ದುಪಡಿಗಳನ್ನು ತರುತ್ತಿದೆ. ಈ ಸಾಂವಿಧಾನಿಕ ಉಲ್ಲಂಘನೆಗಳನ್ನು ಜನರು ಪ್ರಶ್ನಿಸದಂತೆ ತಡೆಯಲು, ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಭಾರತದ ವಿರುದ್ಧ ಸುಳ್ಳು ನಿರೂಪಣೆಗಳನ್ನು ರೂಪಿಸುತ್ತಿದೆ. ಆದರೆ, ಪಾಕ್ನ ಧೋರಣೆ ಬಗ್ಗೆ ಅಂತರರಾಷ್ಟ್ರೀಯ ಸಮುದಾಯವು ಚೆನ್ನಾಗಿ ತಿಳಿದಿದೆ. ಪಾಕಿಸ್ತಾನದ ಹತಾಶ ದಿಕ್ಕು ತಪ್ಪಿಸುವ ತಂತ್ರಗಳಿಂದ ಜಗತ್ತು ದಾರಿ ತಪ್ಪುವುದಿಲ್ಲ” ಎಂದು ಅವರು ಹೇಳಿದ್ದಾರೆ.
ದೆಹಲಿಯ ಕೆಂಪು ಕೋಟೆಯ ಬಳಿಯೂ ಸೋಮವಾರ ಕಾರೊಂದು ಸ್ಪೋಟಗೊಂಡಿದೆ. ಘಟನೆಯಲ್ಲಿ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯ ಮರುದಿನವೇ ಇಸ್ಲಾಮಾಬಾದ್ನಲ್ಲಿ ಸ್ಪೋಟ ನಡೆದಿದೆ. ದೆಹಲಿಯಲ್ಲಾದ ಘಟನೆಗೆ ಬಿಜೆಪಿಗರು ಮತ್ತು ಹಲವು ಮಾಧ್ಯಮಗಳು ಪಾಕಿಸ್ತಾನ ಮತ್ತು ಮುಸ್ಲಿಮರನ್ನು ದೂಷಿಸುತ್ತಿದ್ದಾರೆ. ಪಾಕಿಸ್ತಾನದಲ್ಲಾದ ಘಟನೆಗೆ ಅಲ್ಲಿನ ನಾಯಕತ್ವವು ಭಾರತ ಸರ್ಕಾರವನ್ನು ಟೀಕಿಸುತ್ತಿದೆ.




