2024ರ ಜುಲೈನಲ್ಲಿ ಬಾಂಗ್ಲಾದೇಶದಲ್ಲಿ ನಡೆದಿದ್ದ ದಂಗೆಯಲ್ಲಿ ಮುಂಚೂಣಿಯಲ್ಲಿದ್ದ 32 ವರ್ಷದ ಯುವ ನಾಯಕ ಷರೀಫ್ ಒಸ್ಮಾನ್ ಹಾದಿ ಹತ್ಯೆಯಾಗಿದ್ದಾರೆ. ಈ ಕೃತ್ಯ ನಡೆದ ಬೆನ್ನಲ್ಲೆ, ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.
ಬಾಂಗ್ಲಾದೇಶದ ಯುವ ನಾಯಕ ಷರೀಫ್ ಉಸ್ಮಾನ್ ಹಾದಿ ಅವರನ್ನು ಅವರ ಕುಟುಂಬದ ಕೋರಿಕೆಯ ಮೇರೆಗೆ ಶನಿವಾರ ಬಾಂಗ್ಲಾದೇಶದ ರಾಷ್ಟ್ರಕವಿ “ಕಾಜಿ ನಜ್ರುಲ್ ಇಸ್ಲಾಂ” ಅವರ ಸಮಾಧಿಯ ಪಕ್ಕದಲ್ಲಿ ಹಾದಿ ಅವರ ಅಂತ್ಯಕ್ರಿಯೆಯನ್ನು ಮಾಡಲಾಗುವುದು ಎಂದು ಇಂಕಿಲಾಬ್ ಮಂಚ್ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇದೇ 2025ರ ಡಿಸೆಂಬರ್ 12ರಂದು ಬಾಂಗ್ಲಾದೇಶದ ಯುವ ನಾಯಕ ಮತ್ತು ‘ಇಂಕಿಲಾಬ್ ಮಂಚ್’ ಸಂಘಟನೆಯ ಸಂಚಾಲಕರಾಗಿದ್ದ ಷರೀಫ್ ಒಸ್ಮಾನ್ ಹಾದಿ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಆರಂಭದಲ್ಲಿ ಢಾಕಾದಲ್ಲಿ ಚಿಕಿತ್ಸೆ ಪಡೆಯುತ್ತದ್ದ ಷರೀಫ್ ಆರೋಗ್ಯ ಸ್ಥಿತಿ ಹದಗೆಟ್ಟ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಹಾದಿ ಗುರುವಾರ(ಡಿ.18) ಸಾವನ್ನಪ್ಪಿದ್ದಾರೆ.
ಇದನ್ನು ಓದಿದ್ದೀರಾ?: ಬಾಂಗ್ಲಾದೇಶ ಹಿಂಸಾಚಾರ: ಭಾರತದ ವಿರುದ್ಧ ಘೋಷಣೆಗಳು ಕೇಳಿಬರುತ್ತಿರುವುದೇಕೆ?
ಶುಕ್ರವಾರ ಬೆಳಿಗ್ಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಅವರು ಹಾದಿ ಅವರ ಸಾವಿನ ವಿಚಾರವನ್ನು ತಿಳಿಸಿದರು. ಹಾದಿ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಬಾಂಗ್ಲಾದೇಶದಾದ್ಯಂತ ತೀವ್ರ ಹಿಂಸಾಚಾರ, ಪ್ರತಿಭಟನೆಗಳು ಭುಗಿಲೆದ್ದಿದೆ. ಪ್ರತಿಭಟನಾಕಾರರು ಪ್ರಮುಖ ದಿನಪತ್ರಿಕೆಗಳ ಕಚೇರಿಗಳಿಗೆ ಬೆಂಕಿ ಹಚ್ಚಿದ್ದಾರೆ, ಧ್ವಂಸ ಮಾಡಿದ್ದಾರೆ. ಬಾಂಗ್ಲಾದೇಶದ ಸ್ಥಾಪಕ ಪಿತಾಮಹ, ಮೊದಲ ಅಧ್ಯಕ್ಷರು, ಸ್ವಾತಂತ್ರ್ಯ ಹೋರಾಟಗಾರರಾದ ಶೇಖ್ ಮುಜಿಬುರ್ ರೆಹಮಾನ್ ನಿವಾಸಕ್ಕೂ ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ. ಈ ನಡುವೆ ಭಾರತದ ವಿರುದ್ದವೂ ಘೋಷಣೆಗಳು ಕೇಳಿಬಂದಿದೆ.
ಷರೀಫ್ ಒಸ್ಮಾನ್ ಹಾದಿ ಜನಸಾಮಾನ್ಯರ ನಾಯಕನಾಗಿದ್ದು ಹೇಗೆ?
ಷರೀಫ್ ಉಸ್ಮಾನ್ ಹಾದಿ ಅವರು ದಕ್ಷಿಣ ಬಾಂಗ್ಲಾದೇಶದ ಜಲಕಥಿ ಜಿಲ್ಲೆಯ ನಲ್ಚಿಟಿಯ ನಿವಾಸಿಯಾಗಿದ್ದು, ಅವರ ತಂದೆ ಮದರಸಾದಲ್ಲಿ ಶಿಕ್ಷಕರಾಗಿದ್ದರು. ನೆಸರವಾದ್ ಕಾಮಿಲ ಮದರಸಾದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಹಾದಿ, ನಂತರ ಢಾಕಾ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಪದವಿ ಪಡೆದಿದ್ದರು. ಆನಂತರ ಸ್ಕಾಲರ್ಸ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕೆಲಸ ಆರಂಭಿಸಿದರು.
ಕಳೆದ ವರ್ಷ ಬಾಂಗ್ಲಾದೇಶದಲ್ಲಿ ಅಂದಿನ ಪ್ರಧಾನಿ ಶೇಖ್ ಹಸೀನಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. 2024ರ ಜೂನ್ನಲ್ಲಿ ಬಾಂಗ್ಲಾದೇಶದ ಉಚ್ಚ ನ್ಯಾಯಾಲಯವು ಸರ್ಕಾರಿ ಉದ್ಯೋಗಗಳಲ್ಲಿ 1971ರ ಸ್ವಾತಂತ್ರ್ಯ ಹೋರಾಟಗಾರರ ವಂಶಸ್ಥರಿಗೆ ಶೇ.30ರಷ್ಟು ಮೀಸಲಾತಿಯನ್ನು ಮರುಸ್ಥಾಪಿಸಿತ್ತು. ಆದರೆ ಇದನ್ನು ವಿರೋಧಿಸಿ ವಿದ್ಯಾರ್ಥಿಗಳು ಬೀದಿಗಿಳಿದಿದ್ದರು. ಈ ಪ್ರತಿಭಟನೆ ಜುಲೈ 15ರಂದು ಹಿಂಸಾಚಾರಕ್ಕೆ ತಿರುಗಿತ್ತು. ಇದೇ ವೇಳೆ ಹಾದಿ ‘ಇಂಕ್ವಿಲಾಬ್ ಮಂಚ್’ ಎಂಬ ‘ಸಾಮಾಜಿಕ-ಸಾಂಸ್ಕೃತಿಕ ವೇದಿಕೆ’ಯನ್ನು ಸ್ಥಾಪಿಸಿದ್ದರು. ಇದು ವಿದ್ಯಾರ್ಥಿ ಪ್ರತಿಭಟನೆಯ ನಂತರ ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿತ್ತು.

ಶೇಖ್ ಹಸೀನಾ ಪ್ರತಿಭಟನಾಕಾರರನ್ನು ದೇಶದ್ರೋಹಿಗಳೆಂದು ಕರೆದಿದ್ದು, ಆಡಳಿತಾರೂಢ ಅವಾಮಿ ಲೀಗ್ನ ವಿದ್ಯಾರ್ಥಿ ಘಟಕ ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿತ್ತು. ಇವೆಲ್ಲವೂ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿತ್ತು. ಈ ಹಿಂಸಾಚಾರದಲ್ಲಿ ಜುಲೈ ಮತ್ತು ಆಗಸ್ಟ್ ಅವಧಿಯಲ್ಲಿ ಕನಿಷ್ಠ 650ರಿಂದ 1,400 ಜನರು ಮೃತಪಟ್ಟಿದ್ದರು.
ತೀವ್ರ ಪ್ರತಿಭಟನೆಗೆ ಮಣಿದ ಪ್ರಧಾನಿ ಶೇಖ್ ಹಸೀನಾ 2024ರ ಆಗಸ್ಟ್ 5ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನಗೊಂಡಿದ್ದಾರೆ. ಈ ಮೂಲಕ ಹಸೀನಾರ 15 ವರ್ಷಗಳ ಆಡಳಿತ ಅಂತ್ಯವಾಯಿತು. ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನುಸ್ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆಯಾಯಿತು. ಪ್ರಸ್ತುತ ಅವರೇ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶೇಖ್ ಹಸೀನಾ ಅವರ ಸರ್ವಾಧಿಕಾರ ಸರ್ಕಾರವನ್ನು ಉರುಳಿಸಿದ ಪ್ರಬಲ ಹೋರಾಟದ ಮುಂಚೂಣಿಯಲ್ಲಿ ಷರೀಫ್ ಉಸ್ಮಾನ್ ಹಾದಿ ಇದ್ದರು. ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ‘ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ’ ಹಸೀನಾ ಅವರಿಗೆ ಮರಣದಂಡನೆ ವಿಧಿಸಿರುವುದನ್ನು ಉಸ್ಮಾನ್ ಹಾದಿ ಸ್ವಾಗತಿಸಿದ್ದರು. ಈ ತೀರ್ಪು ಇಡೀ ಜಗತ್ತಿಗೆ ಮಾದರಿ ಎಂದು ಹೇಳಿದ್ದರು. ಇದರ ಜೊತೆಗೆ ಉಸ್ಮಾನ್ ಹಾದಿ ಬಾಂಗ್ಲಾದೇಶದ ಸೇನೆ ಮತ್ತು ಯೂನುಸ್ ನೇತೃತ್ವದ ಸರ್ಕಾರವನ್ನು ಸಹ ಟೀಕೆ ಮಾಡುತ್ತಿದ್ದರು.
ಹಾದಿ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬಲ್ಲ ಸಂಘಟನಾ ಚಾತುರ್ಯ ಹೊಂದಿದ್ದರು. ಹಾದಿ ಅವರ ಧೈರ್ಯವನ್ನು ಕಂಡ ಢಾಕಾದ ಯುವಪಡೆ ಅವರ ಬೆಂಬಲಕ್ಕೆ ನಿಂತಿತ್ತು. ರಾಜಕೀಯವಾಗಿಯೂ ಹಾದಿ ಅವರಿಗೆ ಭವಿಷ್ಯವಿದೆ ಎಂದು ಹಲವಾರು ಜನರು ಹೇಳುತ್ತಿದ್ದರು.

ಹಾದಿ ತಾನು ಬಂಗಾಳಿ ಮುಸ್ಲಿಂ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಈ ವರ್ಷದ ಆರಂಭದಲ್ಲಿ ಮಾಡಿದ ಅವರ ಭಾಷಣದಲ್ಲಿ, 2013ರ ಶಹಬಾಗ್ ಚಳವಳಿಯ ಸಮಯದಲ್ಲಿ ಢಾಕಾ ವಿಶ್ವವಿದ್ಯಾಲಯದಲ್ಲಿ ಟೋಪಿ ಧರಿಸಿದ್ದ ನನ್ನನ್ನು “ಹೆಫಾಜತ್” ಎಂದು ಕರೆದಿದ್ದರು. ಇದು ಉಗ್ರಗಾಮಿ ಗುಂಪು ಹೆಫಾಜತ್-ಇ-ಇಸ್ಲಾಂನ ಅವಹೇಳನಕಾರಿ ಸಂಕ್ಷಿಪ್ತ ರೂಪವಾಗಿದೆ ಎಂದು ಹಾದಿ ನೆನಪಿಸಿಕೊಂಡಿದ್ದರು. “ಬಾಂಗ್ಲಾದೇಶದ ಮೇಲೆ ಭಾರತದ ಸಾಂಸ್ಕೃತಿಕ ಪ್ರಾಬಲ್ಯ” ಇದೊಂದು ದಕ್ಷಿಣ ಏಷ್ಯಾದ ವಸಾಹತುಶಾಹಿ ಪರಂಪರೆ ಎಂದು ಟೀಕಿಸಿದ್ದರು. ಇನ್ನು ಪ್ಯಾಲೆಸ್ತೀನ್ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ನಡೆಸಿತ್ತಿರುವ ಬಾಂಬ್ ದಾಳಿಯ ವಿರುದ್ಧ ಅಕ್ರೋಶದಿಂದ ಮಾತನಾಡಿದ್ದರು.
ಶೇಖ್ ಹಸೀನಾ ವಿರುದ್ಧದ ದಂಗೆಯನ್ನು ನಡೆಸಿದ ವಿದ್ಯಾರ್ಥಿ ಕಾರ್ಯಕರ್ತರು ಬಾಂಗ್ಲಾದೇಶದ ಪ್ರಮುಖ ಎರಡು ರಾಜಕೀಯ ಧಾರೆಗಳನ್ನು ರೂಪಿಸಿದ್ದಾರೆ. ಆಸಿಫ್ ಮಹ್ಮದ್ ಶಾಜಿಬ್ ಭುಯಾನ್, ಮಹ್ಫುಜ್ ಆಲಂ ಮತ್ತು ನಹಿದ್ ಇಸ್ಲಾಂ ನೇತೃತ್ವದ ಒಂದು ಗುಂಪು ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವನ್ನು ಸೇರಿಕೊಂಡರೆ, ಹಸ್ನತ್ ಅಬ್ದುಲ್ಲಾ ಮತ್ತು ಸರ್ಜಿಸ್ ಆಲಂ ಅವರನ್ನು ಒಳಗೊಂಡ ಇನ್ನೊಂದು ಪಡೆ ಫೆಬ್ರವರಿ 2025 ರಲ್ಲಿ ಪ್ರಾರಂಭವಾದ ರಾಷ್ಟ್ರೀಯ ನಾಗರಿಕ ಪಕ್ಷಕ್ಕೆ (NCP) ಬೆಂಬಲ ನೀಡಿತು.
ಹಾದಿ ಇವೆರಡಕ್ಕೂ ಸೇರದ ಮೂರನೇ ಗುಂಪಿನ ರೀತಿಯಲ್ಲಿ ವಿದ್ಯಾರ್ಥಿ ಸಂಘಟನೆಯನ್ನು ರಚಿಸುತ್ತಿದ್ದರು. ಹಾದಿಯ ಜೊತೆಗೆ ಬಾಂಗ್ಲಾದೇಶ ಬಹುತೇಕ ಯುವಪಡೆ ಬೆಂಬಲವಾಗಿ ನಿಂತಿತ್ತು. ಇದರಿಂದ ತೋಳ್ಬದಲ್ಲಿ ಗಟ್ಟಿಯಾದ ಯುವಕರೇ ಇದ್ದರು. ಉಸ್ಮಾನ್ ಹಾದಿಯ ಜೊತೆಗಿದ್ದ ಅನೇಕ ಯುವಕರು ಹಸೀನಾ ವಿರೋಧಿ ಚಳವಳಿಗೆ ಸ್ವಯಂಸೇವಕರಂತೆ ಕೆಲಸ ಮಾಡತೊಡಗಿದರು. ಇದು ಉಸ್ಮಾನ್ ಹಾದಿ ಅವರ ಸಂಘಟನ ಚತುರತೆಯನ್ನು ತೋರಿಸುತ್ತಿತ್ತು.
ಷರೀಫ್ ಉಸ್ಮಾನ್ ಹಾದಿ ಭಾರತವನ್ನು ಟೀಕೆ ಮಾಡುತ್ತಲೆ ಇದ್ದರು. ಬಾಂಗ್ಲಾದೇಶದಲ್ಲಿ ಭಾರತದ ಮೇಲೆ ಟೀಕೆ ಮಾಡಲೆಂದೇ, ‘ಅಮರ್ ದೇಶ್’ ಎನ್ನುವ ಪತ್ರಿಕೆ ನಡೆಯುತ್ತಿತ್ತು. ಈ ಪತ್ರಿಕೆಯಲ್ಲಿ ಹಾದಿ ಅವರು ಭಾರತವನ್ನು ಟೀಕಿಸಿದ್ದು, ರಾತ್ರೋರಾತ್ರಿ ಉತ್ಕಟ ಧ್ವನಿಯಾಗಿ ರೂಪುಗೊಂಡಿತು. ಇದರಿಂದ ಅವರಿಗೆ ದೊಡ್ಡ ಅನುಯಾಯಿಗಳನ್ನು ನೀಡಿತು.
ಇಂಕ್ವಿಲಾಬ್ ಮಂಚ್ ಸ್ಥಾಪನೆ
ಜಿಯಾವುಲ್ ಹಸನ್, ರಫೆ ಸಲ್ಮಾನ್ ರಿಫತ್ ಮತ್ತು ಅಫ್ರೋಜಾ ತುಲಿ ಅವರೊಂದಿಗೆ ಸೇರಿ, ‘ಇಂಕ್ವಿಲಾಬ್ ಮಂಚ್’ ಎನ್ನುವ ‘ಸಾಂಸ್ಕೃತಿಕ-ಸಾಮಾಜಿಕ ವೇದಿಕೆ’ಯನ್ನು ಉಸ್ಮಾನ್ ಹಾದಿ ಸ್ಥಾಪಿಸಿದರು. ಇದರಿಂದ ಹಾದಿಯವರ ವಿಚಾರ ಧಾರೆಗಳು ಜನಸಾಮಾನ್ಯರಿಗೆ ತಿಳಿಯಲು ಆರಂಭವಾದವು. ಕಳೆದ 16 ವರ್ಷದಿಂದ ಬಾಂಗ್ಲಾದೇಶವು “ಸಾಂಸ್ಕೃತಿಕ ಫ್ಯಾಸಿಸಂ”ನಿಂದ ಆಳಾಲ್ಪಡುತ್ತಿದೆ ಎಂದು ಹೇಳುತ್ತಿದ್ದರು. ಇದಕ್ಕೆ ಭಾರತದ ಬೆಂಬಲವಿದೆ ಎಂದು ಟೀಕಿಸುತ್ತಿದ್ದರು.

ಮುಂಬರುವ ಚುನಾವಣೆಗೆ ಢಾಕಾದಿಂದ ಪ್ರಚಾರವನ್ನು ಹಾದಿ ಆರಂಭಿಸಿದ್ದರು. ಢಾಕಾ ಕ್ಷೇತ್ರದಲ್ಲಿ ಹಾದಿ ಅವರು ಬಿಎನ್ಪಿ ಪ್ರಬಲ ನಾಯಕ ಮಿರ್ಜಾ ಅಬ್ಬಾಸ್ ವಿರುದ್ಧ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದರು. 2001-06ರ ಖಲೀದಾ ಜಿಯಾ ಸರ್ಕಾರದಲ್ಲಿ ಅಬ್ಬಸ್ ಸಚಿವರಾಗಿದ್ದರು. ಹಾದಿ ಜನಸಾಮಾನ್ಯರ ನಾಯಕರಂತೆ ಢಾಕಾದಲ್ಲಿ ಕಾಣಿಸುತ್ತಿದ್ದರು.
ಡಿಸೆಂಬರ್ 18 ರಂದು ಹತ್ಯೆಗೀಡಾದ ಹಾದಿ ಪ್ರಕರಣದ ಪ್ರಮುಖ ಆರೋಪಿ ಫೈಸಲ್ ಕರೀಮ್ ಮಸೂದ್ ಗೆ ಭಾರತ ಆಶ್ರಯ ನೀಡುತ್ತಿದೆ ಎಂಬುದು ಪ್ರತಿಭಟನಾಕಾರರ ಆರೋಪವಾಗಿದೆ. ಮಸೂದ್ ಗೆ ಸಹಾಯ ಮಾಡಿದ ಆರೋಪದ ಮೇಲೆ ರಾಪಿಡ್ ಆಕ್ಷನ್ ಬೆಟಾಲಿಯನ್ ಸಂಜಯ್ ಚಿಸಿಮ್ ಮತ್ತು ಶಿಬಿಯಾನ್ ಡಿಯು ಅವರನ್ನು ಸಹ ಬಂಧಿಸಿಬೇಕು ಎಂದು ಪ್ರತಿಭಟನಾಕಾರರ ಆರೋಪವಾಗಿದೆ.
ಬಾಂಗ್ಲಾ ರಾಷ್ಟ್ರಕವಿ ಕಾಜಿ ನಜ್ರುಲ್ ಇಸ್ಲಾಂ ಸಮಾಧಿ ಪಕ್ಕದಲ್ಲಿ ಹಾದಿಯ ಅಂತ್ಯಕ್ರಿಯೆ
ಬಾಂಗ್ಲಾದೇಶದ ಯುವ ನಾಯಕ ಷರೀಫ್ ಉಸ್ಮಾನ್ ಹಾದಿ ಅವರನ್ನು ಅವರ ಕುಟುಂಬದ ಕೋರಿಕೆಯ ಮೇರೆಗೆ ಶನಿವಾರ ದೇಶದ ರಾಷ್ಟ್ರಕವಿ ಕಾಜಿ ನಜ್ರುಲ್ ಇಸ್ಲಾಂ ಅವರ ಪಕ್ಕದಲ್ಲಿ ಸಮಾಧಿ ಮಾಡಲಾಗುವುದು ಎಂದು ಇಂಕಿಲಾಬ್ ಮಂಚ್ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಹಾದಿ ಅವರ ಮೃತದೇಹವನ್ನು ಶುಕ್ರವಾರ ಸಂಜೆ ಸಿಂಗಾಪುರದಿಂದ ಢಾಕಾಗೆ ತರಲಾಯಿತು. ಅವರ ಅಂತ್ಯಕ್ರಿಯೆಯ ಪ್ರಾರ್ಥನೆ ಶನಿವಾರ ಮಧ್ಯಾಹ್ನ 2 ಗಂಟೆಗೆ ಜಾತಿಯಾ ಸಂಸದ್ ಭವನ್ನ ದಕ್ಷಿಣ ಪ್ಲಾಜಾದಲ್ಲಿ ನಡೆಯಲಿದೆ ಎಂದು ಮುಹಮ್ಮದ್ ಯೂನಸ್ ‘X’ ನಲ್ಲಿ ಪೋಸ್ಟ್ನಲ್ಲಿ ತಿಳಿಸಿದ್ದಾರೆ.

ಈ ಹಿಂದೆ, ಅಂತ್ಯಕ್ರಿಯೆಯ ಪ್ರಾರ್ಥನೆಯ ಸಮಯವನ್ನು ಮಧ್ಯಾಹ್ನ 2:30 ಎಂದು ಘೋಷಿಸಲಾಗಿತ್ತು, ನಂತರ ಅದನ್ನು ಮಧ್ಯಾಹ್ನ 2.00 ಕ್ಕೆ ಬದಲಾಯಿಸಲಾಯಿತು.
“ಹಾದಿ ಅವರ ಅಂತ್ಯಕ್ರಿಯೆಯ ವೇಳೆಯಲ್ಲಿ ಭಾಗವಹಿಸುವವರು ಯಾವುದೇ ಚೀಲಗಳು ಅಥವಾ ಭಾರವಾದ ವಸ್ತುಗಳನ್ನು ತರಬಾರದು ಎಂದು ವಿನಂತಿಸಲಾಗಿದೆ. ಅದೇ ಸಮಯದಲ್ಲಿ, ಸಂಸತ್ ಭವನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡ್ರೋನ್ಗಳನ್ನು ಹಾರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ” ಎಂದು ಯೂನಸ್ ಹೇಳಿದ್ದಾರೆ.





