ಇರಾನ್ನ ನೂತನ ಪರಮೋಚ್ಛ ನಾಯಕನಾಗಿ ಆಯ್ಕೆಯಾಗಿರುವ ಮೊಜ್ತಬಾ ಖಮೇನಿ ಅವರ ಮೊದಲ ಅಧಿಕೃತ ಸಂದೇಶವನ್ನು ಇರಾನ್ನ ಸರ್ಕಾರಿ ಟಿವಿಯಲ್ಲಿ ಪ್ರಸಾರ ಮಾಡಲಾಗಿದೆ. ತಮ್ಮ ತಂದೆ ಅಯತೊಲ್ಲಾ ಅಲಿ ಖಮೇನಿ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾದ ಬಳಿಕ ಅವರು ನೀಡಿರುವ ಮೊದಲ ಹೇಳಿಕೆ ಇದಾಗಿದೆ.
ಮಾಧ್ಯಮಗಳು ವರದಿ ಮಾಡಿರುವ ಈ ಸಂದೇಶದ ಪ್ರಕಾರ, “ಹಾರ್ಮುಜ್ ಜಲಸಂಧಿಯನ್ನು ನಿರ್ಬಂಧಿಸುವ ಅಸ್ತ್ರವನ್ನು” ಇರಾನ್ ಮುಂದುವರಿಸಬೇಕು ಎಂದು ಖಮೇನಿ ಪ್ರತಿಪಾದಿಸಿದ್ದಾರೆ. ನೆರೆಯ ರಾಷ್ಟ್ರಗಳೊಂದಿಗೆ ಇರಾನ್ ‘ಸ್ನೇಹಮಯ’ ನೀತಿಯನ್ನು ಹೊಂದಿದೆ. ಆದರೆ, ಆ ರಾಷ್ಟ್ರಗಳು ತಮ್ಮಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಮುಚ್ಚಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಅಲ್ಲದೆ, ಆ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ತನ್ನ ದಾಳಿಯನ್ನು ಮುಂದುವರಿಸಲಿದೆ ಎಂದೂ ಅವರು ಎಚ್ಚರಿಸಿದ್ದಾರೆ.
ಯುದ್ಧದಲ್ಲಿ ಹತ್ಯೆಗೀಡಾದ “ಇರಾನಿಯನ್ನರ ರಕ್ತಕ್ಕೆ ಪ್ರತೀಕಾರ ತೀರಿಸಿಕೊಳ್ಳಲು” ಇರಾನ್ ಎಂದಿಗೂ ಹಿಂಜರಿಯುವುದಿಲ್ಲ ಎಂದು ಮೊಜ್ತಬಾ ಖಮೇನಿ ಗುಡುಗಿದ್ದಾರೆ. ಮಿನಾಬ್ನಲ್ಲಿ ಶಾಲೆಯೊಂದರ ಬಳಿ ಅಮೆರಿಕ ನಡೆಸಿದ ದಾಳಿಯಲ್ಲಿ ಸುಮಾರು 110 ಮಕ್ಕಳು ಸೇರಿದಂತೆ ಒಟ್ಟು 168 ಜನರು ಸಾವನ್ನಪ್ಪಿರುವ ಘಟನೆಗೆ ಪ್ರತೀಕಾರದ ಎಚ್ಚರಿಕೆ ಅನ್ವಯಿಸುತ್ತದೆ ಎಂದು ಅವರು ವಿಶೇಷವಾಗಿ ಉಲ್ಲೇಖಿಸಿದ್ದಾರೆ.
ಇದನ್ನು ಓದಿದ್ದೀರಾ? ಮೊಜ್ತಬಾ ಖಮೇನಿ | ತೆರೆಯ ಹಿಂದಿದ್ದ ‘ಗೇಟ್ಕೀಪರ್’ ಈಗ ಇರಾನ್ನ ಪರಮೋಚ್ಚ ನಾಯಕ
ಅಮೆರಿಕದ ಕ್ಷಿಪಣಿಯೇ ಈ ಶಾಲೆಗೆ ಅಪ್ಪಳಿಸಿದೆ ಎಂದು ಇರಾನ್ ಆರೋಪಿಸಿದೆ. ಈ ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ಕಳೆದ ವಾರ ಬಿಬಿಸಿಯ ವರದಿಗಾರರಿಗೆ ತಿಳಿಸಿದ್ದರು.
ಇದೇ ವೇಳೆ, ತನ್ನ ಭೂಪ್ರದೇಶದತ್ತ ಇರಾನ್ ಕ್ಷಿಪಣಿಗಳನ್ನು ಉಡಾವಣೆ ಮಾಡಿರುವುದನ್ನು ಪತ್ತೆ ಹಚ್ಚಿರುವುದಾಗಿ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಹೇಳಿದೆ. “ಸ್ವಲ್ಪ ಸಮಯದ ಹಿಂದೆ ಇರಾನ್ನಿಂದ ಇಸ್ರೇಲ್ ದೇಶದ ಭೂಪ್ರದೇಶದತ್ತ ಕ್ಷಿಪಣಿಗಳನ್ನು ಉಡಾವಣೆ ಮಾಡಿರುವುದನ್ನು ಐಡಿಎಫ್ ಗುರುತಿಸಿದೆ. ಈ ದಾಳಿಯನ್ನು ಹಿಮ್ಮೆಟ್ಟಿಸಲು ನಮ್ಮ ರಕ್ಷಣಾ ವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತಿವೆ” ಎಂದು ಐಡಿಎಫ್ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.





