ಬಾಂಗ್ಲಾದೇಶವನ್ನು ಐಸಿಸಿ ಅತ್ಯಂತ ತುಚ್ಛವಾಗಿ ನಡೆಸಿಕೊಂಡಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ನಡೆಯುವ 2026ರ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ಭಾಗವಹಿಸುವ ಕುರಿತು ಸರ್ಕಾರವು ನಿರ್ಧಾರ ತೆಗೆದುಕೊಳ್ಳುತ್ತದೆ. ಸರ್ಕಾರದ ನಿರ್ಧಾರದಂತೆ ಪಾಕ್ ತಂಡದ ಮುಂದಿನ ಹೆಜ್ಜೆ ಇರಲಿದೆ ಎಂದು ಹೇಳಿದ್ದಾರೆ. ಅವರ ಹೇಳಿಕೆ ಬೆನ್ನಲ್ಲೇ, ವಿಶ್ವಕಪ್ ಪಂದ್ಯಾವಳಿಯಿಂದ ಪಾಕಿಸ್ತಾನ ತಂಡವೂ ಹೊರಗುಳಿಯಬಹುದು ಎಂಬ ಚರ್ಚೆ ನಡೆಯುತ್ತಿದೆ.
ಕೆಕೆಆರ್ ತಂಡದ ಭಾಗವಾಗಿದ್ದ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿಂದ ಕೈಬಿಟ್ಟ ಬಳಿಕ, ಬಾಂಗ್ಲಾದೇಶವು ತಮ್ಮ ತಂಡವನ್ನು ಟಿ20 ವಿಶ್ವಕಪ್ಗಾಗಿ ಭಾರತಕ್ಕೆ ಕಳುಹಿಸುವುದಿಲ್ಲ ಎಂದು ಘೋಷಿಸಿತು. ಭದ್ರತಾ ಕಾಳಜಿಯು ತಮ್ಮ ನಿರ್ಧಾರಕ್ಕೆ ಮೂಲ ಕಾರಣವೆಂದು ಹೇಳಿದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ, ತಮ್ಮ ತಂಡದ ಆಟಗಳನ್ನು ಭಾರತದಿಂದ ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಐಸಿಸಿಗೆ ಕೇಳಿತು. ಆದರೆ, ಬದಲಾವಣೆ ಮಾಡಲು ಐಸಿಸಿ ನಿರಾಕರಿಸಿದೆ. ಪರಿಣಾಮ, ಬಾಂಗ್ಲಾದೇಶವು 2026 ರ ಟಿ20 ವಿಶ್ವಕಪ್ಅನ್ನು ಬಹಿಷ್ಕರಿಸಿದೆ. ಇದೀಗ, ಬಾಂಗ್ಲಾ ಜಾಗದಲ್ಲಿ ಸ್ಕಾಟ್ಲೆಂಡ್ಅನ್ನು ಆಡಸಲು ಐಸಿಸಿ ನಿರ್ಧರಿಸಿದೆ.
ಬಾಂಗ್ಲಾ ತಂಡದ ಬದಲಿಗೆ ಸ್ಕಾಟ್ಲೆಂಡ್ಅನ್ನು ಸೇರಿಸಿದ ಬಳಿಕ, ಐಸಿಸಿ ನಿರ್ಧಾರದ ವಿರುದ್ಧ ಮೊಹ್ಸಿನ್ ನಖ್ವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಐಸಿಸಿ ದ್ವಿಮುಖ ನೀತಿಗಳನ್ನು ಹೊಂದಿರಲು ಸಾಧ್ಯವಿಲ್ಲ. ಬಾಂಗ್ಲಾದೇಶವನ್ನು ಪಂದ್ಯಾವಳಿಯಲ್ಲಿ ಭಾಗವಹಿಸಲು ಅನುಮತಿಸಬೇಕು” ಎಂದು ಹೇಳಿದ್ದಾರೆ.
“ಬಾಂಗ್ಲಾದೇಶವನ್ನು ಅನ್ಯಾಯವಾಗಿ ನಡೆಸಿಕೊಳ್ಳಲಾಗಿದೆ. ಐಸಿಸಿ ಸಭೆಯಲ್ಲಿಯೂ ನಾನು ಅದನ್ನೇ ಹೇಳಿದ್ದೇನೆ. ನೀವು ದ್ವಿಮುಖ ನೀತಿಗಳನ್ನು ಹೊಂದಲು ಸಾಧ್ಯವಿಲ್ಲ. ಒಂದು ದೇಶವು ಯಾವಾಗ ಬೇಕಾದರೂ ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು. ಆದರೆ, ಇನ್ನೊಂದು ದೇಶಕ್ಕೆ ಅಂತಹ ಅವಕಾಶವೇ ಇಲ್ಲದಂತೆ ಸಂಪೂರ್ಣ ವಿರುದ್ಧವಾಗಿ ವರ್ತಿಸಲಾಗುತ್ತದೆ. ಬಾಂಗ್ಲಾದೇಶಕ್ಕೆ ಅನ್ಯಾಯ ಮಾಡಲಾಗುತ್ತಿದೆ” ಎಂದಿದ್ದಾರೆ.
ಪಾಕಿಸ್ತಾನವು ಬಾಂಗ್ಲಾದೇಶದಂತೆಯೇ ಟಿ20 ವಿಶ್ವಕಪ್ಅನ್ನು ಬಹಿಷ್ಕರಿಸುತ್ತದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ನಖ್ವಿ, “ಈ ಬಗ್ಗೆ ಪಾಕಿಸ್ತಾನ ಸರ್ಕಾರದ ಸೂಚನೆಗಳನ್ನು ಪಿಸಿಬಿ ಅನುಸರಿಸುತ್ತದೆ. ಪ್ರಧಾನಿ ಈಗ ಪಾಕಿಸ್ತಾನದಲ್ಲಿಲ್ಲ. ಅವರು ಹಿಂತಿರುಗಿದ ಬಳಿಕ, ಅವರೊಂದಿಗೆ ಚರ್ಚಿಸಿ ನಮ್ಮ ಅಂತಿಮ ನಿರ್ಧಾರವನ್ನು ತಿಳಿಸುತ್ತೇವೆ. ಅದು ಸರ್ಕಾರದ ನಿರ್ಧಾರ. ನಾವು ಅವರ ನಿರ್ಧಾರವನ್ನು ಪಾಲಿಸುತ್ತೇವೆ” ಎಂದಿದ್ದಾರೆ.




