ವ್ಯಾಟಿಕನ್ನ ಉನ್ನತ ರಾಜತಾಂತ್ರಿಕ ಕಾರ್ಡಿನಲ್ ಪಿಯೆತ್ರೋ ಪ್ಯಾರೋಲಿನ್, ಗಾಜಾದಲ್ಲಿ ನಡೆಯುತ್ತಿರುವ ಹತ್ಯಾಕಾಂಡವನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಯುದ್ಧದಲ್ಲಿ ಸಾವಿರಾರು ನಾಗರಿಕರ ಸಾವನ್ನು ಕಡೆಗಣಿಸುವುದು ಸಂಪೂರ್ಣ ಸ್ವೀಕಾರಾರ್ಹವಲ್ಲ ಎಂದು ಅವರು ಹೇಳಿದ್ದಾರೆ.
ವ್ಯಾಟಿಕನ್ ಮಾಧ್ಯಮದೊಂದಿಗೆ ಮಾತನಾಡಿದ ಪ್ಯಾರೋಲಿನ್, ಗಾಜಾದಲ್ಲಿ ಪ್ರತಿದಿನ ನಡೆಯುತ್ತಿರುವ ನಿರ್ದಯ ಹತ್ಯಾಕಾಂಡವನ್ನು ನರಮೇಧ ಎಂದು ಆತಂಕ ವ್ಯಕ್ತಪಡಿಸಿದರು. “ಅಲ್ಲಿ ಪ್ರತಿದಿನ ಸಾವನ್ನಪ್ಪುತ್ತಿರುವವರ ಸಂಖ್ಯೆ, ವಿಶೇಷವಾಗಿ ಮಕ್ಕಳ ಸಾವುಗಳು, ಮಾನವತೆಯ ಮನಸ್ಸಿಗೆ ಆಘಾತ ಉಂಟುಮಾಡುವಂತಹವು” ಎಂದು ಅವರು ವಿಷಾದ ವ್ಯಕ್ತಪಡಿಸಿದರು
“ಪ್ರತಿದಿನ ಸಾವಿರಾರು ಪ್ಯಾಲೆಸ್ತೀನಿಯರು, ವಿಶೇಷವಾಗಿ ಮಕ್ಕಳು, ಈ ಯುದ್ಧದಲ್ಲಿ ಬಲಿಯಾಗುತ್ತಿದ್ದಾರೆ. ಅವರ ಏಕೈಕ ತಪ್ಪು ಅಲ್ಲಿ ಜನಿಸಿದ್ದು ಎಂಬಂತಿದೆ. ಈ ಹತ್ಯಾಕಾಂಡದ ಬಗ್ಗೆ ನಾವು ಭಾವನಾಶೂನ್ಯರಾಗುವ ಭಯವಿದೆ. ಮನುಷ್ಯರನ್ನು ಕೇವಲ ಅನಾಹುತ ಎಂದು ಕಡೆಗಣಿಸುವುದು ಅನ್ಯಾಯ ಮತ್ತು ಅಸಮರ್ಥನೀಯ” ಎಂದು ಅವರು ಒತ್ತಿ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸಮುದಾಯವು ಈ ಹತ್ಯಾಕಾಂಡವನ್ನು ತಡೆಯಲು ಅಸಹಾಯಕವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಕಾರ್ಡಿನಲ್, “ಪ್ರಭಾವ ಬೀರಲು ಸಮರ್ಥವಾದ ದೇಶಗಳು ಇದನ್ನು ತಡೆಯಲು ಇದುವರೆಗೆ ವಿಫಲವಾಗಿವೆ. ಇದು ಸ್ವೀಕಾರಾರ್ಹವಲ್ಲ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಸೋಮಣ್ಣ, ಡಿಕೆಶಿ ಉದ್ಧಟತನ ಅಕ್ಷಮ್ಯ
ಗಾಜಾದ ಪರವಾಗಿ ವಿಶ್ವದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳನ್ನು ಸ್ವಾಗತಿಸಿರುವ ಅವರು, “ಇದು ನಾವು ಉದಾಸೀನರಾಗಿಲ್ಲ ಎಂಬುದನ್ನು ತೋರಿಸುತ್ತದೆ” ಎಂದಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಶಾಂತಿ ಯೋಜನೆಯ ಕುರಿತು ಪ್ರತಿಕ್ರಿಯಿಸಿದ ಪ್ಯಾರೋಲಿನ್, “ಪ್ಯಾಲೆಸ್ತೀನಿಯರನ್ನು ತಮ್ಮ ಭವಿಷ್ಯದ ತೀರ್ಮಾನಗಳಲ್ಲಿ ಒಳಗೊಂಡಿರುವ, ಒತ್ತೆಯಾಳುಗಳ ಬಿಡುಗಡೆ ಮತ್ತು ದೈನಂದಿನ ಸಾವುಗಳನ್ನು ತಡೆಯುವ ಯಾವುದೇ ಯೋಜನೆಯನ್ನು ಸ್ವಾಗತಿಸಬೇಕು ಮತ್ತು ಬೆಂಬಲಿಸಬೇಕು,” ಎಂದು ಹೇಳಿದ್ದಾರೆ.
ಪೋಪ್ ಲಿಯೋ XIV ಕೂಡ ಕೆಲ ತಿಂಗಳ ಹಿಂದೆ ಈ ಯುದ್ಧದ ಕ್ರೂರತೆಯನ್ನು ಖಂಡಿಸಿದ್ದು, ಪ್ಯಾಲೆಸ್ಟೀನಿಯರನ್ನು “ತಮ್ಮ ಭೂಮಿಯಿಂದ ಬಲವಂತವಾಗಿ ಸ್ಥಳಾಂತರಗೊಳ್ಳುತ್ತಿರುವುದಕ್ಕೆ ಆಕ್ಷೇಪಿಸಿದ್ದರು. ವ್ಯಾಟಿಕನ್ ಕೂಡ ಹತ್ತು ವರ್ಷಗಳ ಹಿಂದೆಯೇ ಪ್ಯಾಲೆಸ್ತೀನ್ ರಾಷ್ಟ್ರವೆಂದು ಅಧಿಕೃತ ರಾಷ್ಟ್ರವೆಂದು ಮಾನ್ಯತೆ ನೀಡಿತ್ತು.
ಇಸ್ರೇಲ್ನ ಆಕ್ರಮಣಕಾರಿ ದಾಳಿಗಳಿಂದ ಕನಿಷ್ಠ 67,160 ಪ್ಯಾಲೆಸ್ತೀನ್ಯರು ಮೃತಪಟ್ಟಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯದ ಅಂಕಿಅಂಶಗಳನ್ನು ಉಲ್ಲೇಖಿಸಿ ವಿಶ್ವಸಂಸ್ಥೆ ದೃಢೀಕರಿಸಿದೆ.





