ಭಾರತ ಮತ್ತು ಪಾಕಿಸ್ತಾನದ ನಡುವಣ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 70ನೇ ಸಲ ಪುನರುಚ್ಚರಿಸಿದ್ದಾರೆ. ಹೀಗೆ ಪ್ರತಿಬಾರಿಯೂ ಹೇಳುತ್ತಿರುವಾಗ ಭಾರತದ ಪ್ರಧಾನಿ ನರೇಂದ್ರ ಮೋದಿ ಎಂದಿಗೂ ಅಲ್ಲಗಳೆದಿಲ್ಲ.
ಪೆನ್ಸಿಲ್ವೇನಿಯಾದಲ್ಲಿ ನಡೆದ ಆರ್ಥಿಕತೆಯ ಕುರಿತಾದ ಸಮಾವೇಶದಲ್ಲಿ ಮಾತನಾಡಿದ ಟ್ರಂಪ್, “ಕಳೆದ 10 ತಿಂಗಳಲ್ಲಿ ನಾನು ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ. ಇದರಲ್ಲಿ ಕೊಸೊವೊ ಮತ್ತು ಸರ್ಬಿಯಾ, ಭಾರತ ಮತ್ತು ಪಾಕಿಸ್ತಾನ, ಇಸ್ರೇಲ್ ಮತ್ತು ಇರಾನ್, ಈಜಿಪ್ಟ್ ಮತ್ತು ಇಥಿಯೋಪಿಯಾ, ಅರ್ಮೇನಿಯಾ ಮತ್ತು ಅಜರ್ ಬೈಜಾನ್ ಸೇರಿವೆ. ಮುಂದೆ ಕಾಂಬೋಡಿಯಾ ಮತ್ತು ಥಾಯ್ಲೆಂಡ್ ಯುದ್ಧವನ್ನು ನಿಲ್ಲಸುವಲ್ಲಿ ಮಧ್ಯಪ್ರವೇಶಿಸುತ್ತೇನೆ” ಎಂದು ಹೇಳಿದರು.
ಇದೇ ವರ್ಷದ ಏಪ್ರಿಲ್ 22ರಂದು ಪಾಕಿಸ್ತಾನದ ಭಯೋತ್ಪಾದಕರು ಪಹಲ್ಗಾಮ್ ನಲ್ಲಿ 26 ನಾಗರಿಕರನ್ನು ಬಲಿ ಪಡೆದಿದ್ದರು. ಇದಕ್ಕೆ ಪ್ರತಿಕಾರವಾಗಿ ಭಾರತ ಮೇ 7 ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ‘ಆಪರೇಷನ್ ಸಿಂಧೂರ್’ ಹೆಸರಿನ ಸೇನಾ ಕಾರ್ಯಚರಣೆಯನ್ನು ನಡೆಸಿತ್ತು. ಇದರ ಬೆನ್ನಲ್ಲೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವು ತೀವ್ರಗೊಂಡಿತ್ತು.
ಮೇ 10 ರಂದು ಉಭಯ ದೇಶಗಳು ‘ಕದನ ವಿರಾಮ’ ಒಪ್ಪಂದಕ್ಕೆ ಬಂದಿದ್ದವು. ನಾಲ್ಕು ದಿನಗಳು ನಡೆದ ಈ ಯುದ್ಧದಲ್ಲಿ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಲಾಗಿತ್ತು. ಕದನ ವಿರಾಮಕ್ಕೆ ಎರಡೂ ದೇಶಗಳು ಒಪ್ಪಿಗೆ ಸೂಚಿಸಿವೆ ಎಂದು ಮೇ 10 ರಂದು ಟ್ರಂಪ್ ಟ್ವೀಟ್ ಮಾಡಿದ್ದರು. ಆದರೆ ಟ್ರಂಪ್ ಯುದ್ಧ ನಿಲ್ಲಿಸಿದಕ್ಕೆ ಯಾವುದೇ ಪುರಾವೆಗಳಿಲ್ಲ. ಮುಖ್ಯವಾಗಿ ಭಾರತವೇ ಕದನ ವಿರಾಮಕ್ಕೆ ಮೂರನೇ ವ್ಯಕ್ತಿಯ ಹಸ್ತಕ್ಷೇಪವನ್ನು ನಿರಾಕರಿಸುತ್ತಾ ಬಂದಿದೆ. ಇವೆಲ್ಲದರ ನಡುವೆಯೂ ಟ್ರಂಪ್ 70ನೇ ಸಲ ಭಾರತ-ಪಾಕ್ ಯುದ್ಧದವನ್ನು ನಿಲ್ಲಿಸಿದ್ದು ನಾನೇ ಎಂದು ಜಾಗತಿಕ ವೇದಿಕೆಯಲ್ಲಿ ಹೇಳುತ್ತಿರುವಾಗ ಭಾರತದ ಪ್ರಧಾನಿ ಇಂದಿಗೂ ತುಟಿ ಬಿಚ್ಚದೆ ಮೌನವಹಿಸಿದ್ದಾರೆ.
ಟ್ರಂಪ್ ಮತ್ತು ಮೋದಿ “ಆತ್ಮೀಯ ಸ್ನೇಹಿತರು” ಎಂದು ಈ ಇಬ್ಬರು ನಾಯಕರುಗಳೇ ಹಲವಾರು ವೇದಿಕೆಗಳಲ್ಲಿ ಹೇಳಿಕೊಂಡಿದ್ದಾರೆ. ಇದೇ ಅಕ್ಟೋಬರ್ ನಲ್ಲಿ “ಭಾರತವು ಒಂದು ಉತ್ತಮ ದೇಶ, ನನ್ನ ಒಬ್ಬ ಉತ್ತಮ ಸ್ನೇಹಿತ ಉನ್ನತ ಸ್ಥಾನದಲ್ಲಿದ್ದಾರೆ ಮತ್ತು ಅವರು ಅದ್ಭುತ ಕೆಲಸ ಮಾಡಿದ್ದಾರೆ” ಎಂದು ಟ್ರಂಪ್ ಹೇಳಿದ್ದಾರೆ.
ಇವೆಲ್ಲದರ ನಡುವೆ, ಭಾರತ-ಪಾಕ್ ಯುದ್ಧ ನಿಲ್ಲಸಲು ಕಾರಣ ನಾನೇ ಎಂದು ಹೇಳುತ್ತಿರುವಾಗಲೂ ಮೋದಿ ಮೌನವಹಿಸಿದ್ದಾರೆ. ಆದರೆ ಜೂನ್ ತಿಂಗಳಲ್ಲಿ ಭಾರತದ ವಿದೇಶಾಂಗ ಸಚಿವರಾದ ಎಸ್ ಜೈ ಶಂಕರ್ ಅವರು ರಾಜ್ಯಸಭೆಯಲ್ಲಿ ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನದೊಂದಿಗಿನ ದ್ವಿಪಕ್ಷೀಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಭಾರತವು ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಇದೊಂದು ರೀತಿಯಲ್ಲಿ ಟ್ರಂಪ್ ಹೇಳಿಕೆಗೆ ವಿರುದ್ಧವಾಗಿದೆ.
ಪಾಕಿಸ್ತಾನದ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವ ಮೊಹಮ್ಮದ್ ಇಶಾಕ್ ದಾರ್ ಅವರು ಅಲ್ ಜಜೀರಾಗೆ ನೀಡಿದ ಸಂದರ್ಶನದಲ್ಲಿ ‘ಭಾರತ-ಪಾಕಿಸ್ತಾನ ಯುದ್ಧ ನಿಲ್ಲಲು ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯಿದೆ’ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷವು ಟ್ರಂಪ್ ಹೇಳಿಕೆಯ ವಿರುದ್ಧವಾಗಿ ಮೋದಿ ಯಾಕೆ ಮೌನವಹಿಸಿದ್ದಾರೆ ಎಂದು ಪ್ರಶ್ನಿಸಿದೆ. “ಯುದ್ಧವು ಪರಮಾಣು ಸಂಘರ್ಷವಾಗಿ ಉಲ್ಬಣಗೊಳ್ಳುವ ಹಂತದಲ್ಲಿತ್ತು. ನಾನೇ ಮಧ್ಯಸ್ಥಿಕೆ ವಹಿಸಿ ಯುದ್ಧ ನಿಲ್ಲಿಸಿದ್ದೇನೆ” ಎಂದು ಹೇಳಿದಾಗಲೂ ಮೋದಿಯ ಮೌನ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಭಾರತದ ವಿಚಾರಲ್ಲಿ ಟ್ರಂಪ್ ಹಲವು ಸಲ ತಮಗೆ ಮನಸೋ ಇಚ್ಚೆ ನಿಲುವನ್ನು ತೆಗೆದುಕೊಂಡಿದ್ದಾರೆ. ರಷ್ಯಾದಿಂದ ಭಾರತವು ತೈಲ ಖರೀದಿಸುವ ವಿಚಾರವಾಗಿ ಅಮೆರಿಕ ಭಾರತದ ಮೇಲೆ ಬೆದರಿಕೆಯನ್ನು ಹಾಕುತ್ತದೆ. ಇದಕ್ಕೆ ಭಾರತ ಮಣಿಯದ ಬೆನ್ನಲ್ಲೇ, ಅಮೆರಿಕ ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಹೆಚ್ಚುವರಿಯಾಗಿ ಮೊದಲು ಶೇಕಡಾ 25ರಷ್ಟು ಸುಂಕವನ್ನು ಹೇರುವ ಟ್ರಂಪ್ ನಿರ್ಧಾರದ ಕುರಿತಾಗಿಯೂ ಭಾರತ ಪ್ರಧಾನಿ ಮೌನವಹಿಸುತ್ತಾರೆ. ಟ್ರಂಪ್ ಅವರು ಈ ನಡೆ ಭಾರತದ ಜವಳಿ, ಚರ್ಮ, ಯಂತ್ರೋಪಕರಣಗಳ ರಫ್ತಿನ ಮೇಲೆ ನೇರ ಪರಿಣಾಮ ಬೀರುತ್ತದೆ.
ಆದಾಗಿ ಕೆಲವೇ ದಿನಗಳ ನಂತರ ಟ್ರಂಪ್ ಮತ್ತೆ ಹೆಚ್ಚುವರಿಯಾಗಿ ಶೇಕಡಾ 25 ರಷ್ಟು ಸುಂಕವನ್ನು, ಅಲ್ಲಿಗೆ ಒಟ್ಟು ಶೇಕಡಾ 50 ರಷ್ಟು ಸುಂಕವನ್ನು ಭಾರತದಿಂದ ರಫ್ತಾಗುವ ವಸ್ತುಗಳ ಮೇಲೆ ವಿಧಿಸುತ್ತದೆ. ರಷ್ಯಾ-ಉಕ್ರೇನ್ ಯುದ್ಧಕ್ಕೆ ಭಾರವು ಹಣವನ್ನು ವಿನಿಯೋಗ ಮಾಡುತ್ತಿದೆ. ಭಾರತವು ರಷ್ಯಾದಿಂದ ತೈಲವನ್ನು ಖರೀದಿಸಿ ಯುದ್ಧಕ್ಕೆ ಪ್ರೋತ್ಸಾಹಿಸುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದರು.
ಟ್ರಂಪ್ ನ ಇಲ್ಲಿಯವರೆಗಿನ ಯುದ್ಧ ನಿಲ್ಲಿಸಿದ ಬಗ್ಗೆಯ ಹೇಳಿಕೆಗಳಾಗಲಿ, ಸುಂಕ ನೀತಿಗಳಾಗಲಿ ಯಾವುದಕ್ಕೂ ಮೋದಿ ಮಾತನಾಡದೆ ಮೌನವಹಿಸಿದ್ದಾರೆ. ಈ ಮೌನ ದೇಶದ ಆರ್ಥಿಕತೆಯ ವಿಚಾರದಲ್ಲಿ ಮತ್ತು ಭದ್ರತೆಯ ವಿಚಾರದಲ್ಲಿ ಪ್ರಧಾನಿಯ ಮೌನವು ಸಾಕಷ್ಟು ಗೊಂದಲಗಳಿಗೆ ಎಡೆಮಾಡಿಕೊಡುತ್ತದೆ. ಒಂದು ಕಡೆ ಆತ್ಮೀಯ ಸ್ನೇಹಿತನೆಂದು, ನಮಸ್ತೆ ಟ್ರಂಪ್ ಕಾರ್ಯಕ್ರಮ ಮಾಡಿರುವುದು. ಇನ್ನೊಂದು ಕಡೆ ಅದೇ ಟ್ರಂಪ್ ಭಾರತದ ಆರ್ಥಿಕತೆಗೆ ಇಷ್ಟೊಂದು ದೊಡ್ಡ ಹೊಡೆತ ಕೊಡುವಾಗಲೂ ಮೌನವಹಿಸುವುದು, ದೇಶದಲ್ಲಿರುವ 140 ಕೋಟಿ ಜನರಿಗೆ ಅವಮಾನ ಮಾಡಿದಂತೆ.





