ಭಾರತದ ಕೇಂದ್ರ ಸರ್ಕಾರವು ‘ವಕ್ಫ್ ತಿದ್ದುಪಡಿ ಕಾಯ್ದೆ-2025’ಅನ್ನು ಜಾರಿಗೊಳಿಸಿದೆ. ಈ ಮೂಲಕ, ಭಾರತದಾದ್ಯಂತ ವಕ್ಫ್ ಭೂಮಿಯಲ್ಲಿ ಬಿಜೆಪಿ ದೇವಾಲಯ ಕಟ್ಟುವ ಹುನ್ನಾರ ಹೊಂದಿದೆ. ಮುಸ್ಲಿಮರನ್ನು ದಮನ ಮಾಡಲು ಯತ್ನಿಸುತ್ತಿದೆ ಎಂದು ಬಾಂಗಾದೇಶದ ಮುಸ್ಲಿಂ ಸಂಘಟನೆಗಳು ಆರೋಪಿಸಿವೆ. ಕಾಯ್ದೆಯಲ್ಲಿ ಹಿಂಪಡೆದುಕೊಳ್ಳುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಿವೆ.
ಬಾಂಗ್ಲಾ ರಾಜಧಾನಿ ಢಾಕಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಬಳಿ ಬಲಪಂಥೀಯ ಇಸ್ಲಾಮಿಸ್ಟ್ ಪಕ್ಷ ‘ಖಿಲಾಫತ್ ಮಜ್ಲಿಸ್’ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ‘ಭಾರತದಲ್ಲಿ ಮುಸ್ಲಿಮರಿಗೆ ಸೇರಿದ ಭೂಮಿಯನ್ನು ಅತಿಕ್ರಮಿಸಲಾಗುತ್ತಿದೆ’ ಎಂದು ಆರೋಪಿಸಿದೆ.
ಪ್ರತಿಭಟನೆಯಲ್ಲಿ ಮಾತನಾಡಿರುವ ಪಕ್ಷದ ಮುಖ್ಯಸ್ಥ ಮೌಲಾನಾ ಮಾಮುನುಲ್ ಹಕ್, “ಮುಸ್ಲಿಮರ ಖಾಸಗಿ ಮತ್ತು ವಕ್ಫ್ ಆಸ್ತಿಗಳನ್ನು ಅತಿಕ್ರಮಿಸಿಕೊಂಡು ಅಥವಾ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡು ಅವರು (ಬಿಜೆಪಿ) ದೇವಾಲಯ ಕಟ್ಟುತ್ತಿದ್ದಾರೆ. ಈ ಅತಿಕ್ರಮಣ ಮತ್ತು ಸ್ವಾಧೀನಗಳಿಗೆ ಕಾನೂನು ಚೌಕಟ್ಟನ್ನು ನೀಡಲು ವಕ್ಫ್ ತಿದ್ದುಪಡಿ ಕಾಯ್ದೆ-2025ಯನ್ನು ಅಂಗೀಕರಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
ಈ ವರದಿ ಓದಿದ್ದೀರಾ?: ವಕ್ಫ್ ತಿದ್ದುಪಡಿ ಕಾಯ್ದೆ | ಮೂಗಿಗೆ ತುಪ್ಪ ಹಚ್ಚಲು ಮನೆ ಬಾಗಿಲಿಗೆ ಬರುತ್ತಿದೆ ಬಿಜೆಪಿ!
“ಹಿಂದುತ್ವವಾದಿ ಬಿಜೆಪಿ ಸರ್ಕಾರವು ಭಾರತದಾದ್ಯಂತ ಹಿಂದಿನಿಂದಲೂ ಮುಸ್ಲಿಮರನ್ನು ಕೊಲ್ಲುತ್ತಿದೆ. ಅವರು ಮುಸ್ಲಿಮರ ಮೇಲೆ ದಾಳಿ ಮಾಡಲು ಹಿಂದುತ್ವವಾದಿಗಳನ್ನು ಪ್ರಚೋದಿಸುತ್ತಿದ್ದಾರೆ” ಎಂದು ದೂರಿದ್ದಾರೆ.
“ಭಾರತದಾದ್ಯಂತ ಕಾಯ್ದೆಯ ವಿರುದ್ಧ ಮುಸ್ಲಿಮರು ಪ್ರತಿಭಟನೆಯಲ್ಲಿ ಸಿಡಿದಿದ್ದಾರೆ. ಕಾಯ್ದೆಯು ಮುಸ್ಲಿಮರ ಧಾರ್ಮಿಕ ಕಾನೂನುಗಳು ಮತ್ತು ಹಕ್ಕುಗಳ ಮೇಲೆ ಹಸ್ತಕ್ಷೇಪ ಮಾಡುತ್ತದೆ. ಭಾರತದಲ್ಲಿ ಮುಸ್ಲಿಮರ ಹತ್ಯೆ ಮತ್ತು ಮುಸ್ಲಿಮರ ಧಾರ್ಮಿಕ ಭಾವನೆಗೆಳಿಗೆ ಧಕ್ಕೆ ತರಲು ಯತ್ನಿಸುತ್ತಿರುವ ಭಾರತದ ಸರ್ಕಾರ ವಿರುದ್ಧ ಮುಸ್ಲಿಂ ಜಗತ್ತು ಧ್ವನಿ ಎತ್ತಬೇಕು” ಎಂದು ಹೇಳಿದ್ದಾರೆ.




