ರಷ್ಯಾ ತೈಲ ಖರೀದಿಗೆ ರಿಯಾಯಿತಿ ನೀಡಲು ಆರಂಭಿಸಿದಾಗ ಅದರ ಲಾಭಗಿಟ್ಟಿಸಿಕೊಂಡಿದ್ದು ಮುಕೇಶ್ ಅಂಬಾನಿಯವರ ರಿಲಯನ್ಸ್ ಸಂಸ್ಥೆ. 2022ರ ಬಳಿಕ ರಷ್ಯಾದಿಂದ ತೈಲ ಆಮದು ಪ್ರಮಾಣವು ಸುಮಾರು 13 ಪಟ್ಟು ಹೆಚ್ಚಾಯಿತು. ಅಂದರೆ 2.5 ಶತಕೋಟಿ ಡಾಲರ್ನಿಂದ 31 ಶತಕೋಟಿ ಡಾಲರ್ಗೆ ಏರಿಕೆಯಾಯಿತು. 2023ರ ಮೇ ವೇಳೆಗೆ ಭಾರತದ ಒಟ್ಟು ತೈಲ ಆಮದಿನಲ್ಲಿ ರಷ್ಯಾದ ಪಾಲು ಸುಮಾರು ಶೇ.40ರಷ್ಟು!
ಪರ ದೇಶಗಳ ಆಡಳಿತಾತ್ಮಕ ತೀರ್ಮಾನಗಳನ್ನು ತಾವೇ ಘೋಷಿಸುವುದು, ಅದಕ್ಕೆ ಉಪ್ಪು-ಖಾರ ಸವರಿ, ಮಸಾಲೆ ರುಬ್ಬಿ ಸೇರಿಸಿ ಹೇಳುವುದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚಾಳಿ. “ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವನ್ನು ನಿಲ್ಲಿಸಿದ್ದು ನಾನೇ. ಇದಲ್ಲದೆ ಒಟ್ಟು ಏಳು ಯುದ್ಧಗಳನ್ನು ನಾನು ನಿಲ್ಲಿಸಿದ್ದೇನೆ” ಎಂದು ಪದೇ ಪದೇ ಹೇಳುತ್ತಾ ಬರುತ್ತಿರುವ ಟ್ರಂಪ್ ಇದೀಗ ಭಾರತ ರಷ್ಯಾದಿಂದ ತೈಲ ಆಮದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಿದೆ ಎಂದು ಹೇಳುತ್ತಿದ್ದಾರೆ. ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಈ ಮಾಹಿತಿ ನೀಡಿರುವುದಾಗಿ ಟ್ರಂಪ್ ಹೇಳಿಕೊಳ್ಳುತ್ತಿದ್ದಾರೆ.
ರಷ್ಯಾದೊಂದಿಗೆ ಭಾರತ ಉತ್ತಮ ವಹಿವಾಟು ಸಂಬಂಧವನ್ನು ಹೊಂದಿದ್ದರೂ 2022ರವರೆಗೆ ತೈಲ ಆಮದು ಹೆಚ್ಚಾಗಿ ಇರಲಿಲ್ಲ. ಇರಾಕ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ನಿಂದ ಹೆಚ್ಚಾಗಿ ತೈಲ ಆಮದು ಮಾಡಿಕೊಳ್ಳಲಾಗುತ್ತಿತ್ತು. ರಷ್ಯಾದಿಂದ ಶೇ.2ರಷ್ಟು ಮಾತ್ರ ತೈಲ ಆಮದು ಮಾಡಲಾಗುತ್ತಿತ್ತು. ಆದರೆ 2022ರ ಬಳಿಕ ತೈಲ ಆಮದು ಪ್ರಮಾಣದಲ್ಲಿ ಕ್ಷಿಪ್ರ ಬದಲಾವಣೆ ಕಂಡುಬಂದಿದೆ. ಸದ್ಯ ರಷ್ಯಾ ಭಾರತದ ಅತಿದೊಡ್ಡ ತೈಲ ಪೂರೈಕೆದಾರ ದೇಶ.
ಭಾರತ, ಪಾಕಿಸ್ತಾನ ಕದನ ವಿರಾಮಕ್ಕೆ ತಾನೇ ಕಾರಣ ಎಂಬುದನ್ನು ಟ್ರಂಪ್ ಹತ್ತಾರು ಬಾರಿ ಹೇಳಿದ್ದಾರೆ. ಮುಂದೆಯೂ ಹೇಳಬಹುದು. ಈ ಹೇಳಿಕೆ ಸುಳ್ಳು ಎಂಬುದನ್ನು ಭಾರತದ ಅಧಿಕಾರಿಗಳು ಹೇಳಿದ್ದಾರೆಯೇ ಹೊರತು, ಈವರೆಗೂ ಪ್ರಧಾನಿ ಮೋದಿ ಸ್ಪಷ್ಟನೆ ನೀಡಿಲ್ಲ, ಟ್ರಂಪ್ ವಾದವನ್ನೂ ಖಂಡಿಸಿಲ್ಲ. ಇದೀಗ ರಷ್ಯಾ ತೈಲ ಆಮದು ವಿಚಾರದಲ್ಲಿಯೂ ನಡೆಯುತ್ತಿರುವುದು ಇದುವೇ. ಇವೆಲ್ಲವುದರ ನಡುವೆ ನಿಜವಾಗಿಯೂ ಭಾರತ ರಷ್ಯಾದಿಂದ ತೈಲ ಆಮದು ನಿಲ್ಲಿಸುತ್ತದೆಯೇ? ನಿಲ್ಲಿಸಿದರೆ ನಮಗಿರುವ ಸವಾಲುಗಳೇನು? ಪ್ರಧಾನಿ ಮೋದಿ ಸರ್ಕಾರದ ನಿಲುವೇನು ಎಂಬುದನ್ನು ಈವರೆಗೂ ‘ರಾಜರಹಸ್ಯ’ವಾಗಿ ಇಡಲಾಗಿದೆ.

ಇದನ್ನು ಓದಿದ್ದೀರಾ? ರಷ್ಯಾದಿಂದ ಕಚ್ಚಾ ತೈಲ ಆಮದು: ಕನಿಷ್ಠ ಬೆಲೆಗೆ ಸಿಕ್ಕರೂ ಪೆಟ್ರೋಲ್-ಡೀಸೆಲ್ ಬೆಲೆ ಏಕೆ ಕಡಿಮೆಯಾಗಿಲ್ಲ?
ಸೋವಿಯತ್ ಒಕ್ಕೂಟದ ಕಾಲದಿಂದಲೂ ಉಭಯ ದೇಶಗಳು ವ್ಯಾಪಾರ ವಾಣಿಜ್ಯ ಸಂಬಂಧ ಹೊಂದಿವೆ. ರಷ್ಯಾ ಭಾರತದ ಮಿತ್ರ ರಾಷ್ಟ್ರ ಎನ್ನುವುದು ವಾಸ್ತವ. ಸೋವಿಯತ್ ವಿಘಟನೆಯ ನಂತರವೂ ಭಾರತ-ರಷ್ಯಾ ವ್ಯಾಪಾರ ಸಂಬಂಧ ಬೆಳೆಯುತ್ತಲೇ ಇದೆ. 1995ರಲ್ಲಿ 1.4 ಶತಕೋಟಿ ಯುಎಸ್ ಡಾಲರ್ನಿಂದ 2024-25ರ ಹಣಕಾಸು ವರ್ಷದಲ್ಲಿ 68.7 ಶತಕೋಟಿ ಯುಎಸ್ ಡಾಲರ್ ಮೌಲ್ಯದವರೆಗೆ ವಹಿವಾಟು ಏರಿದೆ. ಭಾರತೀಯ ಕಂಪನಿಗಳು ರಷ್ಯಾದ ತೈಲ ಮತ್ತು ಅನಿಲ, ಔಷಧ ಮತ್ತು ಐಟಿ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುತ್ತಿವೆ. ಹಾಗೆಯೇ ರಷ್ಯಾದ ಕಂಪನಿಗಳು ಭಾರತದ ಇಂಧನ, ಮೂಲಸೌಕರ್ಯ ಮತ್ತು ಉತ್ಪಾದನಾ ವಲಯಗಳಲ್ಲಿ ಹೂಡಿಕೆ ಮಾಡುತ್ತಿವೆ. ಆದರೆ ಇವೆಲ್ಲವುದಕ್ಕೂ ವಿರೋಧ ಆರಂಭವಾಗಿದ್ದು, ರಷ್ಯಾ-ಉಕ್ರೇನ್ ಯುದ್ಧ ಆರಂಭವಾದ ಬಳಿಕ.
2022ರ ಫೆಬ್ರವರಿಯಲ್ಲಿ ಉಕ್ರೇನ್-ರಷ್ಯಾ ಯುದ್ಧ ಆರಂಭವಾಗಿದೆ. ಇಂದಿಗೂ ಕೊನೆಯಾಗಿಲ್ಲ. ಈ ಯುದ್ಧ ಆರಂಭವಾದ ಬಳಿಕ ಅಮೆರಿಕ, ಯುರೋಪ್ ದೇಶಗಳು, ಕೆನಡಾ, ಬ್ರಿಟನ್, ಜಪಾನ್ ಮೊದಲಾದ ದೇಶಗಳು ರಷ್ಯಾದ ಮೇಲೆ ನಿರ್ಬಂಧಗಳನ್ನು ಹೇರಿವೆ. ರಷ್ಯಾದ ಮೇಲೆ ಆರ್ಥಿಕ ಒತ್ತಡ ಹೇರಿ ಯುದ್ಧವನ್ನು ನಿಲ್ಲಿಸುವುದೇ ಈ ನಿರ್ಬಂಧದ ಉದ್ದೇಶ ಎಂಬುದು ಅಮೆರಿಕ ಸೇರಿದಂತೆ ಇತರೆ ದೇಶಗಳ ಹೇಳಿಕೆ. ಈ ನಿರ್ಬಂಧಗಳು 100 ಬಿಲಿಯನ್ ಡಾಲರ್ಗಿಂತ ಅಧಿಕ ನಷ್ಟ ಉಂಟುಮಾಡಿವೆ ಎಂದು ಹೇಳಲಾಗಿದೆ. ಆದರೆ ಭಾರತ ಮಾತ್ರ ರಷ್ಯಾದೊಂದಿಗೆ ವ್ಯಾಪಾರ ವಹಿವಾಟನ್ನು ಹೆಚ್ಚಿಸಿಕೊಂಡು, ಪರೋಕ್ಷವಾಗಿ ಯುದ್ದಕ್ಕೆ ಸಹಾಯ ಮಾಡುತ್ತಿದೆ ಎಂಬುದು ಅಮೆರಿಕದ ಆರೋಪ. ಇದನ್ನೇ ನೆಪವಾಗಿಟ್ಟುಕೊಂಡು ಭಾರತದಿಂದ ತಾನು ಆಮದು ಮಾಡಿಕೊಳ್ಳುವ ಸರಕು ಸಾಮಗ್ರಿಗಳ ಮೇಲೆ ಶೇಕಡ 50ರಷ್ಟು ಆಮದು ಸುಂಕ ವಿಧಿಸಿದೆ ಅಮೆರಿಕ.
ರಷ್ಯಾ, ಭಾರತದ ನಡುವಿನ ತೈಲ ವಹಿವಾಟು
ವೆನೆಜುವೆಲಾ, ಸೌದಿ ಅರೇಬಿಯಾ, ಇರಾನ್, ಇರಾಕ್, ಕೆನಡಾಗೆ ಹೋಲಿಸಿದರೆ ಕೊಂಚ ಕಡಿಮೆ ತೈಲ ಸಂಪನ್ಮೂಲಗಳನ್ನು ಹೊಂದಿರುವ ದೇಶ ರಷ್ಯಾ. ಆದರೆ ಕಡಿಮೆ ಸಂಪನ್ಮೂಲದಲ್ಲೇ ಹೆಚ್ಚು ತೈಲವನ್ನು ಉತ್ಪಾದಿಸುತ್ತಿದೆ. ತೈಲ ಉತ್ಪಾದನೆಯಲ್ಲಿ ಅಮೆರಿಕ, ಸೌದಿ ಅರೇಬಿಯಾ ಬಳಿಕ ಮೂರನೇ ಸ್ಥಾನದಲ್ಲಿದೆ. ಉಕ್ರೇನ್ ಯುದ್ಧದ ಕಾರಣ ಹಲವು ದೇಶಗಳು ರಷ್ಯಾದ ಮೇಲೆ ನಿರ್ಬಂಧ ವಿಧಿಸಿದ ಬಳಿಕ ರಷ್ಯಾ ಕೊಂಚ ಕಡಿಮೆ ಬೆಲೆಗೆ ತೈಲ ಮಾರಾಟ ಮಾಡುತ್ತಿದೆ. ಸದ್ಯ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಪ್ರಮುಖ ದೇಶಗಳು ಚೀನಾ, ಭಾರತ, ಟರ್ಕಿ.
ಇದನ್ನು ಓದಿದ್ದೀರಾ? ರಷ್ಯಾ-ಭಾರತ ಸಂಬಂಧ ಮುರಿಯುವುದೇ ಅಮೆರಿಕದ ಆಸೆ ಮತ್ತು ಆದ್ಯತೆ: ಗೆಲ್ಲುವವರು ಯಾರು?
ಪಾಶ್ಚಿಮಾತ್ಯ ದೇಶಗಳು ರಷ್ಯಾದ ತೈಲವನ್ನು ನಿಷೇಧಿಸಿದಾಗ, ರಷ್ಯಾ ತೈಲ ಖರೀದಿಸುವವರಿಗೆ ಭಾರಿ ರಿಯಾಯಿತಿಗಳನ್ನು ನೀಡತೊಡಗಿತು. ಇದರ ಲಾಭ ಪಡೆದಿದ್ದು, ಭಾರತ ಎಂಬುದು ಜನಜನಿತ ವಿಚಾರ. ಆದರೆ ನಿಜವಾಗಿಯೂ ಈ ರಿಯಾಯಿತಿ ತೈಲದ ಲಾಭ ಭಾರತೀಯರಿಗೆ ಸಿಕ್ಕಿದೆಯೇ? ಖಂಡಿತವಾಗಿಯೂ ಇಲ್ಲ. ಅಗ್ಗ ತೈಲದ ಫಾಯಿದೆ ನೇರವಾಗಿ ಸೇರುತ್ತಿರುವುದು ಅಂಬಾನಿ ಜೇಬಿಗೆ. ರಷ್ಯಾ ಅಗ್ಗ ದರದಲ್ಲಿ ತೈಲ ನೀಡಿದೆಯೆಂದು ದೇಶದಲ್ಲಿ ಇಂಧನ ದರವನ್ನು ಇಳಿಸಲಾಗಿಲ್ಲ.
ರಷ್ಯಾ ತೈಲ ಖರೀದಿಗೆ ರಿಯಾಯಿತಿ ನೀಡಲು ಆರಂಭಿಸಿದಾಗ ಅದರ ಲಾಭಗಿಟ್ಟಿಸಿಕೊಂಡಿದ್ದು ಮುಕೇಶ್ ಅಂಬಾನಿಯವರ ರಿಲಯನ್ಸ್ ಸಂಸ್ಥೆ. 2022ರ ಬಳಿಕ ರಷ್ಯಾದಿಂದ ತೈಲ ಆಮದು ಪ್ರಮಾಣವು ಸುಮಾರು 13 ಪಟ್ಟು ಹೆಚ್ಚಾಯಿತು. ಅಂದರೆ 2.5 ಶತಕೋಟಿ ಡಾಲರ್ನಿಂದ 31 ಶತಕೋಟಿ ಡಾಲರ್ಗೆ ಏರಿಕೆಯಾಯಿತು. 2023ರ ಮೇ ವೇಳೆಗೆ ಭಾರತದ ಒಟ್ಟು ತೈಲ ಆಮದಿನಲ್ಲಿ ರಷ್ಯಾದ ಪಾಲು ಸುಮಾರು ಶೇ.40ರಷ್ಟು.
ಇದು ಅಮೆರಿಕ ಸೇರಿದಂತೆ ಹಲವು ದೇಶಗಳ ಕಣ್ಣುಕುಕ್ಕುವಂತೆ ಮಾಡಿದೆ. ಇದನ್ನೇ ಮುಂದಿಟ್ಟುಕೊಂಡು ಟ್ರಂಪ್ ಭಾರತದ ಮೇಲೆ ಸುಂಕ ಪ್ರಹಾರ ಮಾಡಿದ್ದಾರೆ. ಭಾರತವು (ಉಕ್ರೇನ್ ವಿರುದ್ಧ) ಯುದ್ಧಕ್ಕೆ ನೆರವಾಗುತ್ತಿರುವ ದೇಶ ಎಂದು ಬಿಂಬಿಸುತ್ತಿದ್ದಾರೆ ಟ್ರಂಪ್. ದೇಶದ ಮುಖ್ಯಸ್ಥರಾಗಿ ಸ್ಪಷ್ಟನೆಯನ್ನು ನೀಡಬೇಕಾದ ನಮ್ಮ ಪ್ರಧಾನಿ ಬೆನ್ನು ತಿರುಗಿಸಿ ಪಲಾಯನ ಮಾಡುತ್ತಿರುವುದು ಯಾಕಾಗಿ?
ಭಾರತ ಈ ಹಿಂದಿನಿಂದಲೂ ಯಾವುದೇ ಯುದ್ಧಕ್ಕೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆಂಬಲ ನೀಡಿಲ್ಲ. ಶೀತಲ ಸಮರದ ಸಂದರ್ಭದಲ್ಲಿ ಅಮೆರಿಕ ಅಥವಾ ಸೋವಿಯತ್ ಒಕ್ಕೂಟದಂತಹ ಯಾವುದೇ ದೇಶಗಳ ಬೆಂಬಲಕ್ಕೆ ನಿಲ್ಲದೆ ಭಾರತ ಅಲಿಪ್ತ ನೀತಿಯನ್ನು ತಾಳುತ್ತ ಬಂದಿದೆ. ಪ್ರತಿ ದೇಶದ ಸಾರ್ವಭೌಮತ್ವ ಮತ್ತು ಸ್ವ-ನಿರ್ಣಯದ ಹಕ್ಕನ್ನು ಗೌರವಿಸುವುದೇ ಈ ಅಲಿಪ್ತ ನೀತಿಯ ಮೂಲ ಎನ್ನಬಹುದು. ಆದರೆ ಇದೀಗ ಉಕ್ರೇನ್-ರಷ್ಯಾ ಯುದ್ಧ ವಿಚಾರದಲ್ಲಿ ಭಾರತ ಪರೋಕ್ಷವಾಗಿ ರಷ್ಯಾದ ಬೆಂಬಲಕ್ಕೆ ನಿಂತಿದೆ ಎಂಬ ಆರೋಪವನ್ನು ಎದುರಿಸಬೇಕಾಗಿ ಬಂದಿದೆ.
ಆದರೆ ಇದು ನಿಜವಾಗಿಯೂ ಭಾರತದ ನಿಲುವೇ? ಅಥವಾ ಮೋದಿ ಸ್ನೇಹಿತರ ಹಿತವೇ? ಯಾವ ಮಗ್ಗುಲಲ್ಲಿ ನೋಡಿದರೂ ತೈಲ ಆಮದಿನಿಂದ ಸಂಪಾದನೆ ಮಾಡಿಕೊಳ್ಳುತ್ತಿರುವುದು ಅಂಬಾನಿ. ತನ್ನ ಆಪ್ತ ಸ್ನೇಹಿತರ ವ್ಯಾಪಾರ-ವಹಿವಾಟನ್ನು ಉಳಿಸಿಕೊಳ್ಳಲು ಮೋದಿ ಭಾರತದ ವಿದೇಶಾಂಗ ನೀತಿಯನ್ನೇ ಬುಡಮೇಲು ಮಾಡಿರುವಂತಿದೆ. ಅಮೆರಿಕದ ಹಿಂಡನ್ಬರ್ಗ್ ಏಟಿಗೆ ತತ್ತರಿಸಿದ್ದ ತಮ್ಮ ಆಪ್ತ ಸ್ನೇಹಿತ ಅದಾನಿ ಉಳಿಸುವುದೇ ಅಥವಾ ತಮ್ಮ ಇನ್ನೋರ್ವ ಸ್ನೇಹಿತ ಅಂಬಾನಿಯ ವ್ಯಾಪಾರವನ್ನು ಉಳಿಸುವುದೇ ಎಂಬ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದಂತಿದೆ ಮೋದಿ! ಏನೇ ಆದರೂ ಈ ಬಗ್ಗೆ ದೇಶದ ಜನರಿಗೆ ಸ್ಪಷ್ಟನೆ ನೀಡಬೇಕಾಗಿರುವುದು ಪ್ರಧಾನಿ ಮೋದಿ ಅವರೇ. ಅಷ್ಟಕ್ಕೂ ತಮ್ಮ ಸ್ನೇಹಿತರಿಗಾಗಿ ಪ್ರಧಾನಿ ದೇಶದ ಸಾರ್ವಭೌಮತ್ವವನ್ನು ಒತ್ತೆಯಿಡುವುದು ಎಷ್ಟು ಸರಿ? ಜತೆಗೆ ಅಮೆರಿಕದ ಟ್ರಂಪ್ನ ‘ಸುಂಕ ಬೆದರಿಕೆ’ಯಿಂದಾಗಿ ದೇಶದ ವಿದೇಶಾಂಗ ನೀತಿಯ ಕಣ್ಣು ಕಟ್ಟಿ ಕತ್ತಲಲ್ಲಿ ಬಿಡಲಾಗಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




