ಭಾರತದ ಕಳಪೆ ಗುಣಮಟ್ಟದ ಕೆಮ್ಮಿನ ಸಿರಪ್ಗಳಾದ ಕೋಲ್ಡ್ರಿಫ್, ರಿಸ್ಪಿಫ್ರೆಶ್ ಟಿಆರ್ ಮತ್ತು ರೀಲೈಫ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ(WHO) ವಿಶ್ವಕ್ಕೆ ಎಚ್ಚರಿಕೆ ನೀಡಿದೆ. ಹಾಗೆಯೇ ಯಾವುದೇ ದೇಶದಲ್ಲಿ ರಾಷ್ಟ್ರೀಯ ನಿಯಂತ್ರಕ ಅಧಿಕಾರಿಗಳು ಈ ಮೂರು ಸಿರಪ್ಗಳನ್ನು ಕಂಡರೆ ಅದರಿಂದಾಗಿ ಆದ ಕೆಟ್ಟ ಪರಿಣಾಮಗಳ ಬಗ್ಗೆ ತಕ್ಷಣವೇ ತಿಳಿಸುವಂತೆ ಹೇಳಿದೆ.
ಮಧ್ಯಪ್ರದೇಶದಲ್ಲಿ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಸೇವಿಸಿದ ಬಳಿಕ ಕನಿಷ್ಠ 22 ಮಕ್ಕಳು ಮೃತಪಟ್ಟಿದ್ದಾರೆ. ಹೆಚ್ಚಾಗಿ ಐದು ವರ್ಷದೊಳಗಿನ ಮಕ್ಕಳು ಹೆಚ್ಚಾಗಿ ಮೃತಪಟ್ಟಿದ್ದು, ಮೂತ್ರಪಿಂಡ ವೈಫಲ್ಯಗೊಂಡಿದೆ ಎಂದು ಹೇಳಲಾಗಿದೆ. ಇದಲ್ಲದೆ ರಾಜಸ್ಥಾನದಲ್ಲಿ ಕನಿಷ್ಠ ಮೂರು ಮಕ್ಕಳು ಇದೇ ಕೆಮ್ಮಿನ ಸಿರಪ್ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೆಡಿಕಲ್ ಮಾಫಿಯಾಗೆ ಅಮಾಯಕ ಮಕ್ಕಳು ಬಲಿ; ಸರ್ಕಾರಗಳೇ ಜವಾಬ್ದಾರಿ
ಇದಾದ ಬಳಿಕವೇ ದೇಶದಲ್ಲಿ ಕೋಲ್ಡ್ರಿಫ್, ರಿಸ್ಪಿಫ್ರೆಶ್ ಟಿಆರ್ ಮತ್ತು ರೀಲೈಫ್ ಸಿರಪ್ಗಳನ್ನು ನಿಷೇಧಿಸಲಾಗಿದೆ. ಈ ಮೂರು ಸಿರಪ್ಗಳಲ್ಲಿ ಯಾವುದನ್ನೂ ರಫ್ತು ಮಾಡಲಾಗಿಲ್ಲ. ಆದರೂ ನಕಲಿ ಅಥವಾ ಹೆಸರು ಬದಲಾಯಿಸಿ ಇದೇ ಸಿರಪ್ನ ಕಾನೂನುಬಾಹಿರ ವ್ಯಾಪಾರ ನಡೆಯುವ ಸಾಧ್ಯತೆಯಿದೆ ಎಂದು ಈ ಹಿಂದೆಯೇ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಸಾಮಾನ್ಯ ಶೀತ, ಜ್ವರ ಅಥವಾ ಕೆಮ್ಮು ನಿವಾರಣೆಗಾಗಿ ಈ ಸಿರಪ್ ಅನ್ನು ಬಳಸಲಾಗುತ್ತದೆ. ಆದರೆ ಈ ಸಿರಪ್ಗಳಲ್ಲಿ ಡೈಥಿಲೀನ್ ಗ್ಲೈಕಾಲ್ (DEG) ಎಂಬ ಅಪಾಯಕಾರಿ ರಾಸಾಯನಿಕ ಇರುವುದು ಕೇಂದ್ರ ಔಷಧ ನಿಯಂತ್ರಕ, ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್(CDSCO) ಪರೀಕ್ಷಿಸಿದಾಗ ಬಹಿರಂಗವಾಗಿದೆ. ಸಣ್ಣ ಪ್ರಮಾಣದಲ್ಲಿ ಈ ರಾಸಾಯನಿಕ ದೇಹಕ್ಕೆ ಸೇರಿದರೂ ಮೂತ್ರಪಿಂಡಗಳು ಮತ್ತು ಯಕೃತ್ತಿಗೆ ಹಾನಿಯಾಗುತ್ತದೆ, ಸಾವೂ ಸಂಭವಿಸಬಹುದು ಎಂದು ಹೇಳಲಾಗಿದೆ.





