2 ವರ್ಷಕ್ಕೂ ಹೆಚ್ಚುಕಾಲ ಈ ಅಂತರ್ಯುದ್ಧದಲ್ಲಿ ಆಫ್ರಿಕಾದ ಸುಡಾನ್ ನಿಂದ ಎಷ್ಟು ಸಂಪತ್ತು ದೇಶ-ವಿದೇಶಗಳಿಗೆ ರಫ್ತಾಗಿದೆಯೋ, ಅಷ್ಟೆ ಮಟ್ಟಿಗೆ ಸುಡಾನ್ ದೇಶದ ಜನರ ರಕ್ತವು ಹರಿದಿದೆ. ದೊಡ್ಡ ಪ್ರಾಮಾಣದಲ್ಲಿ ಜನರ ನರಮೇಧಗಳು ನಡೆದಿದೆ. ಜಾಗತಿಕ ಶಕ್ತಿಗಳ ಸ್ವ-ಹಿತಾಸಕ್ತಿಯಲ್ಲಿ ಕೇವಲ ಸುಡಾನ್ ನ ನೈಸರ್ಗಿಕ ಸಂಪತ್ತಲ್ಲ. ಅಲ್ಲಿನ ಜನ, ಅಲ್ಲಿನ ಸಂಸ್ಕೃತಿಯು ನಾಶವಾಗಿದೆ.
ಸುಡಾನ್ನಲ್ಲಿ ನಡೆಯುತ್ತಿರುವ ಅಂತರ್ಯುದ್ಧದಿಂದ ಲಕ್ಷಾಂತರ ಸುಡಾನ್ ಜನರು ತತ್ತರಿಸಿದ್ದಾರೆ. ಅಲ್ಲಿನ RSF ಮತ್ತು SAF ನಡುವಿನ ಯುದ್ಧವು ನರಮೇಧ ಮತ್ತು ಕ್ಷಾಮದ ಭೀಕರತೆಯನ್ನು ತಲುಪಿದೆ. ಸುಡಾನ್ ನಗರದ ಅಲ್-ಫಾಶಿರ್ನಲ್ಲಿ ನಡೆಯುತ್ತಿರುವ ದೌರ್ಜನ್ಯಗಳು, ಯುದ್ಧಗಳು, ಯುದ್ದಾಪರಾಧಗಳು ಎಲ್ಲವೂ ಮಾನವೀಯತೆಯ ವಿರುದ್ಧದ ನಡೆಯುತ್ತಿರುವ ಅಪರಾಧಗಳು ಎಂದು ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಹೇಳಿದೆ.
ಜನರಲ್ ಮೊಹಮ್ಮದ್ ಹಮ್ದಾನ್ ದಗಾಲೋ (ಹೆಮೆದ್ತಿ) ನೇತೃತ್ವದ ಅರೆ ಸೇನಾಪಡೆಯಾದ ರ್ಯಾಪಿಡ್ ಸಪೋರ್ಟ್ ಪೋರ್ಸ್ ನ(RSF) ನಿರಂತರ ದಾಳಿಯಿಂದ ಸುಡಾನ್ನ ಅಲ್-ಫಾಶಿರ್ ನಗರದಲ್ಲಿರುವ ಜನರ ಮೇಲೆ ನಿರಂತರ ಬಾಂಬ್ ದಾಳಿ, ಮೂಲಸೌಕರ್ಯ ಪೂರೈಕೆಯನ್ನು ತಡೆಗಟ್ಟಿರುವುದು, ಸಾಮೂಹಿಕ ಅತ್ಯಾಚಾರಗಳು, ಹತ್ಯೆ ಹಾಗೂ ನರಮೇಧ ನಡೆಯುತ್ತಿರುವುದು ಅಮಾನವೀಯ ಎಂದು ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಇದನ್ನು ಓದಿದ್ದೀರಾ? : ಜಾಗತಿಕ ಶಕ್ತಿಗಳ ʼರಾಜಕೀಯ ಯುದ್ಧʼದಲ್ಲಿ ಸುಡಾನ್ ತತ್ತರ
2003 ರಲ್ಲಿ ಸುಡಾನ್ ಮಾಜಿ ಅಧ್ಯಕ್ಷ ಒಮರ್ ಅಲ್-ಬಶೀರ್ ಡಾರ್ಫೌನಲ್ಲಿ ಜಂಜಾವೀಡ್ ಎಂಬ ಸಮುದಾಯವನ್ನು ಬಳಸಿಕೊಂಡು ಅರೆಸೇನಾ ಪ್ಯಾರಾಮಿಲಿಟರಿಯಾದ ರ್ಯಾಪಿಡ್ ಸಪೋರ್ಟ್ ಫೋರ್ಸಸ್(RSF) ಜನರಲ್ ಮೊಹಮ್ಮದ್ ಹಮ್ದಾನ್ ದಗಾಲೋ (ಹೆಮೆದ್ತಿ) ನೇತೃತ್ವದಲ್ಲಿ ಸ್ಥಾಪನೆ ಮಾಡುತ್ತಾನೆ. ಈಗ ಇದೆ ಆರ್ಎಸ್ಎಫ್ ಜನಾಂಗೀಯ ನರಮೇದವನ್ನು ನಡೆಸುತ್ತಿದೆ. ಅಧಿಕಾರಕ್ಕಾಗಿ, ಸುಡಾನ್ ದೇಶದಲ್ಲಿರುವ ನೈಸರ್ಗಿಕ ಸಂಪತ್ತಿಗಾಗಿ ತನ್ನದೇ ದೇಶದಲ್ಲಿರುವ ಇನ್ನೊಂದು ಮಿಲಿಟರಿ ಪಡೆಯಾದ ಎಸ್ಎಎಫ್(SAF) ಪಡೆಯಾದ ಸಾಮಾನ್ಯ ಸೇನೆ ವಿರುದ್ಧ ಅಂತರ್ಯುದ್ಧಕ್ಕೆ ಇಳಿದಿದೆ. ಈ ಎರಡು ಸೇನೆ ಮತ್ತು ಅರೆಸೇನಾ ಪಡೆಗಳ ಯುದ್ಧದಲ್ಲಿ ಲಕ್ಷಾಂತರ ಸುಡಾನಿ ಜನರು ಸ್ಥಳಾಂತರಗೊಂಡಿದ್ದಾರೆ. ಸಾವಿರಾರು ಮಕ್ಕಳು ಅಪೌಷ್ಟಿಕತೆಯಿಂದ ಸಾವನ್ನಪ್ಪಿದ್ದಾರೆ. ಲಕ್ಷಕ್ಕೂ ಹೆಚ್ಚು ಜನರು ಮಿಲಿಟರಿ ಬಂದೂಕುಗಳಿಂದ ಸಾವನ್ನಪ್ಪಿದ್ದಾರೆ.

SAF ಮತ್ತು RSF ಗೆ ಬೆಂಬಲ ನೀಡುತ್ತಿರುವ ದೇಶಗಳು
ಈ ಎರಡು ಮಿಲಿಟರಿ ಪಡೆಗಳು ಈಗಾಗಲೇ ಸುಡಾನ್ ದೇಶದ ಅಧಿಕಾರಕ್ಕಾಗಿ ಪಣತೊಟ್ಟುನಿಂತಿವೆ. ಇದರ ಜೊತೆಗೆ ಜಾಗತಿಕ ಶಕ್ತಿಗಳು ಸಹ ಇದಕ್ಕೆ ಬೆಂಬಲ ಕೊಡುತ್ತಿವೆ. ಆರ್ಥಿಕವಾಗಿ ಮುಂದುವರೆದ ಅನೇಕ ದೇಶಗಳು ಯುದ್ಧ ನಿಲ್ಲಿಸುವ ಬದಲು, ಮಿಲಿಟರಿ ಪಡೆಗಳ ಯುದ್ಧವನ್ನು ಬೆಂಬಲಿಸುತ್ತಿವೆ.
ಭಾರತ-ಪಾಕಿಸ್ತಾನ ಯುದ್ಧವನ್ನು ತಾನೇ ನಿಲ್ಲಿಸಿದ್ದು ಎಂದು ಹೇಳಿಕೊಳ್ಳುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸುಡಾನ್ ದೇಶದಲ್ಲಿ ನಡೆಯುತ್ತಿರುವ ಅಂತರ್ಯುದ್ಧಕ್ಕೆ ಪರೋಕ್ಷವಾಗಿ ಬೆಂಬಲಿಸುತ್ತಿರುವಂತೆ ಕಾಣುತ್ತಿದೆ. ನರಮೇದ ನಡೆಸುತ್ತಿರುವ ಬಂಡುಕೋರ ಆರ್ಎಸ್ಎಫ್ ಮಿಲಿಟರಿ ಪಡೆಯ ಜೊತೆ ಅಮೆರಿಕ ಪರೋಕ್ಷವಾಗಿ ನಿಂತಂತಿದೆ. ಅದೆ ರೀತಿಯಲ್ಲಿ ಚೀನಾ, ಯುನೈಟೆಡ್ ಅರಬ್ ಎಮಿರೇಟ್ಸ್ ತರದ ಆರ್ಥಿಕ ಬಲಿಷ್ಠ ರಾಷ್ಟ್ರಗಳು ಈ ಆರ್ಎಸ್ಎಫ್ ಜೊತೆ ನಿಂತಿದೆ.
ಇದನ್ನು ಓದಿದ್ದೀರಾ? : ಸುಡಾನ್ ನರಮೇಧಕ್ಕೆ ಕೊನೆಯೆಂದು?
ಸುಡಾನಿನ ಎಸ್ಎಎಫ್ ಮಿಲಿಟರಿ ಪಡೆಯ ಜೊತೆ ಟರ್ಕಿ, ಸೌದಿ ಅರೇಬಿಯಾ ದಂತಹ ರಾಷ್ಟ್ರಗಳಿವೆ. ಸುಡಾನ್ ದೇಶದ ಅಧಿಕಾರವನ್ನು ಹಿಡಿಯಲು ಎಲ್ಲರೂ ಪ್ರಯತ್ನಿಸುತ್ತಿದ್ದಾರೆ. ಮೇಲಿನ ಎಲ್ಲ ದೇಶಗಳು ಈ ಎರಡು ಮಿಲಿಟರಿ ಪಡೆಗಳಿಗೆ ಯುದ್ಧ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಿವೆ. ಈ ಪಾಶ್ಚಿಮಾತ್ಯ ದೇಶಗಳ ಬೆಂಬಲವು ಮಿಲಿಟರಿ ಪಡೆಗಳು ನಡೆಸುತ್ತಿರುವ ಅಂತರ್ಯುದ್ಧಕ್ಕೆ ಮತ್ತಷ್ಟು ಪುಷ್ಠಿಕೊಟ್ಟಿವೆ.
SAF ಗೆ ಬೆಂಬಲಿಸುತ್ತಿರುವ ರಾಷ್ಟ್ರಗಳು
- ಈಜಿಪ್ಟ್ – ಏರ್ಸ್ಟ್ರಿಕ್ಸ್, ಫೈಟರ್ ಜೆಟ್ಗಳು, ಮಿಲಿಟರಿ ತರಬೇತಿ ನೀಡುವುದು – ನೈಲ್ ನದಿ ನೀರಿನ ಸಂಪನ್ಮೂಲಗಳು ಮತ್ತು ಕೆಂಪು ಸಮುದ್ರದ ವ್ಯಾಪರ ಸಂಬಂಧವನ್ನು ನೆಲೆಸುವುದು.
- ಸೌದಿ ಅರೆಬಿಯಾ – ಹಣಕಾಸು ನೆರವು – ಇರಾನಿನ ಪ್ರಭಾವದ ವಿರುದ್ಧ ಮಿಲಿಟರಿ ಪಡೆಯ ಜೊತೆ ಮೈತ್ರಿ ಮತ್ತು ಭದ್ರತೆ, ಹೌತಿ ಬಂಡುಕೋರರನ್ನು ಎದುರಿಸಲು SAF ಮಿತ್ರ ಎಂದು ಸೌದಿ ಬಿಂಬಿಸಿಕೊಳ್ಳುವುದು.
- ರಷ್ಯಾ – ಶಸ್ತ್ರಾಸ್ತ್ರ ಪೂರೈಕೆ, ಮಿಲಿಟರಿ ಸಲಹೆಗಾರರು, ವಿಶ್ವಸಂಸ್ಥೆಯಲ್ಲಿ ರಾಜತಾಂತ್ರಿಕ ವೀಟೋಗಳು ನೇಮಿಸುವುದು – ಪಶ್ಚಿಮ ದೇಶಗಳನ್ನು ಎದುರಿಸಲು ಹಾಗೂ ಕೆಂಪು ಸಮುದ್ರದಲ್ಲಿ ಬಂದರು ನಿರ್ಮಿಸುವುದು.
- ಇರಾನ್ – ಯುದ್ಧಕ್ಕೆ ಡ್ರೋನ್ ಗಳನ್ನು ಪೂರೈಸುವುದು – SAF ಅಧ್ಯಕ್ಷ ಬುರ್ಹಾನ್ ಸಂಬಂಧಗಳನ್ನು ಗಟ್ಟಿಗೊಳಿಸುವುದು.
- ಟರ್ಕಿ – ಯುದ್ಧ ಡ್ರೋನ್ಗಳನ್ನು ಪೂರೈಸುವುದು, ಹಣಕಾಸಿನ ನೆರವು ನೀಡುವುದು – ತನ್ನ ಪ್ರಭಾವವನ್ನು ಹೆಚ್ಚಿಸಿ ಯುಎಇ ಯನ್ನು ಎದುರಿಸುವುದು.
- ಕತಾರ್ – ಆರ್ಥಿಕ ಮತ್ತು ರಾಜಕೀಯವಾಗಿ ಬೆಂಬಲಿಸುವುದು – ಇಸ್ಲಾಮಿಕ್ ಶಕ್ತಿಯನ್ನು ಬಲಪಡಿಸುವುದು.
- ಅಲ್ಜೆರಿಯಾ – ರಿಟೈರ್ಡ್ ಮಿಗ್-29 ಜೆಟ್ ಗಳನ್ನು ಕೊಡುವ ಮೂಲಕ ಬೆಂಬಲ
- ಉಕ್ರೇನ್ – ರಾಜತಾಂತ್ರಿಕ ಬೆಂಬಲ, ಜೆಟ್ ಗಳು – ರಷ್ಯಾ-ಸಂಬಂಧಿತ ವ್ಯಾಗ್ನರ್ ಗ್ರೂಪ್ (ಆರ್ಎಸ್ಎಫ್ ಬೆಂಬಲಿಗ) ಅನ್ನು ವಿರೋಧಿಸುವುದಕ್ಕಾಗಿ ಬೆಂಬಲ ಹಾಗೂ ಸುಡಾನ್ ಭೌಗೋಳಿಕ ರಾಜಕೀಯದಲ್ಲಿ ಪರೋಕ್ಷವಾಗಿ ಹತೋಟಿ ಹಿಡಿಯುವುದು.
RSF ಗೆ ಬೆಂಬಲಿಸುತ್ತಿರುವ ರಾಷ್ಟ್ರಗಳು
- ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್) – ಶಸ್ತ್ರಾಸ್ತ್ರಗಳು (ಚೀನೀ ಡ್ರೋನ್ಗಳು, ಮೆಷಿನ್ ಗನ್ಗಳು, ಚಾಡ್ ಮಾರ್ಗದ ಮೂಲಕ ಫಿರಂಗಿ) ಆರ್ಥಿಕ ನೆರವು ಹಾಗು ಚಿನ್ನದ ವ್ಯಾಪಾರ ಸೌಲಭ್ಯ ಮಾಡಿಕೊಳ್ಳುವುದು – SAF ನಲ್ಲಿ ಇಸ್ಲಾಮಿಕ್ ಪುನರುತ್ಥಾನವನ್ನು ತಡೆಗಟ್ಟುವುದು, ಪ್ಯಾರಾ ಮಿಲಿಟರಿಗಳ ಮೂಲಕ ಪ್ರಭಾವವನ್ನು ವಿಸ್ತರಿಸುವುದು, ಕೃಷಿ ಹೂಡಿಕೆಗಳು ಮತ್ತು ಕೆಂಪು ಸಮುದ್ರದಲ್ಲಿರುವ ಬಂದರುಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದು.
- ಇಥಿಯೋಫಿಯಾ – ಜಂಟಿ ಕಾರ್ಯಚರಣೆ, ರಾಜಕೀಯ ಬೆಂಬಲ
- ಎರಿಟ್ರಿಯಾ – RSF ಮಿಲಿಟರಿಗಳಿಗೆ ತರಬೇತಿ ಶಿಬಿರಗಳನ್ನು ನಡೆಸುವುದು.
- ವ್ಯಾಗ್ನರ್ ಗ್ರೂಪ್ (ರಷ್ಯಾ-ಸಂಬಂಧಿತ ಸೈನಿಕರು) – ಶಸ್ತ್ರಾಸ್ತ್ರ ಕಾರ್ಯಾಚರಣೆಗೆ ಬೆಂಬಲ – ಡಾರ್ಫೌನಲ್ಲಿ ಚಿನ್ನದ ಗಣಿ ಮೇಲೆ ಹಿಡಿತ, ಆಫ್ರಿಕಾದಲ್ಲಿ ರಷ್ಯಾದ ಫ್ರಾಕ್ಸಿ ಪ್ರಭಾವ.
ಜಾಗತಿಕ ಶಕ್ತಿಗಳ ಹಿತಾಸಕ್ತಿ
ಆಫ್ರಿಕಾದ ಅತಿದೊಡ್ಡ ದೇಶಗಳಲ್ಲಿ ಒಂದಾದ ಸುಡಾನ್ ನಲ್ಲಿ 2023 ಏಪ್ರಿಲ್ 15 ರಂದು ಎರಡು ಮಿಲಿಟರಿ ಪಡೆಯಾದ ಜನರಲ್ ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ನೇತೃತ್ವದ SAF ಮತ್ತು ಜನರಲ್ ಮೊಹಮದ್ ಹಮ್ದಾನ್ ದಗಾಲೋ (ಹೆಮೆದ್ತಿ) ನೇತೃತ್ವದ RSF ನಡುವೆ ಅಂತರ್ಯುದ್ಧ ಆರಂಭವಾದ ದಿನದಿಂದ ಅನೇಕ ಜಾಗತಿಕ ಶಕ್ತಿಗಳು ಎರಡೂ ಮಿಲಿಟರಿ ಪಡೆಗಳಿಗೆ ಬೆಂಬಲಿಸಿವೆ ಮತ್ತು ತಮ್ಮ ಅನುಕೂಲಕ್ಕೆ ತಕ್ಕಂತೆ ಬೆಂಬಲವನ್ನು ಬದಲಿಸಿವೆ. ಈ ಯುದ್ಧವು ರಾಜಕೀಯ ಅಧಿಕಾರಕ್ಕಾಗಿ ಆರಂಭವಾಗಿ, ಇಂದು ವಿಶ್ವದ ಅತಿ ಭಯಾನಕ ಮಾನವೀಯ ಸಂಕಷ್ಟವಾಗಿ ಬದಲಾಗಿದೆ. ಜಾಗತಿಕ ಶಕ್ತಿಗಳು ಸುಡಾನ್ ನ ಭೂ-ರಾಜಕೀಯ, ಆರ್ಥಿಕ (ಕೆಂಪು ಸಮುದ್ರದ ಮೂಲಕ ಬಂಧರುಗಳ ಸ್ಥಾಪನೆ ಮತ್ತು ವ್ಯಾಪರ) ಮತ್ತು ನೈಸರ್ಗಿಕ ಸಂಪನ್ಮೂಲ(ಚಿನ್ನ ಮತ್ತು ನೈಲ್ ನದಿಯ ನೀರು)ಕ್ಕಾಗಿ ತಮ್ಮ ಹಿತಾಸಕ್ತಿಗಳಿಗಾಗಿ ಬೆಂಬಲ ನೀಡಿ, ಯುದ್ಧವನ್ನು ಇನ್ನಷ್ಟು ಉದ್ರೇಕಗೊಳಿಸುತ್ತಿವೆ.

RSF (ಹೆಮೆದ್ತಿ) ಬೆಂಬಲ ನೀಡುತ್ತಿರುವ ರಾಷ್ಟ್ರಗಳಲ್ಲಿ ಪ್ರಮುಖವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್. ಅರಬ್ ದೇಶದ ಚಿನ್ನದ ಮೂಲ ಇರುವುದೇ ಸುಡಾನ್ ನಲ್ಲಿ. ಜಗತ್ತಿನ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ ಯುಎಇ ಕೂಡ ಒಂದು. ತನ್ನ ಹಿತಾಸಕ್ತಿಗಾಗಿ RSF (ಹೆಮೆದ್ತಿ)ಗೆ ಹಣಕಾಸು ಮತ್ತು ಸುಡಾನ್ ನೆರೆಯ ರಾಷ್ಟ್ರವಾದ ಚಾದ್ ಮೂಲಕ ಯುದ್ಧ ಶಸ್ತ್ರಾಸ್ತ್ರಗಳನ್ನು ಕೊಟ್ಟು ಬೆಂಬಲಿಸುತ್ತಿದೆ.
ಈಜಿಪ್ಟ್, ಸೌದಿ ಅರೆಬಿಯಾ, ರಷ್ಯಾ, ಟರ್ಕಿ, ಇರಾನ್, ಕತಾರ್ ತರದ ರಾಷ್ಟ್ರಗಳು SAF (ಬುರ್ಹಾನ್) ಗೆ ಬೆಂಬಲ ನೀಡುತ್ತಿವೆ. ಈ ಮೇಲಿನ ಎಲ್ಲ ರಾಷ್ಟ್ರಗಳ ಪ್ರಮುಖ ಗುರಿ, ಸುಡಾನ್ ನಲ್ಲಿ ಹರಿಯುವ ನೈಲ್ ನದಿ, ಅಲ್ಲಿನ ಚಿನ್ನದ ನಿಪೇಕ್ಷಗಳು, ಕೆಂಪು ಸಮುದ್ರದಲ್ಲಿ ಬಂದರು ನಿರ್ಮಾಣ ಮತ್ತು ಅದರ ಮೂಲಕ ವ್ಯಾಪರ ಹಾಗೂ ಭೂ-ಅಧಿಕಾರವನ್ನು ಪಡೆಯುವುದೆ ಆಗಿದೆ. ಈ ರಾಷ್ಟ್ರಗಳು ಸುಡಾನ್ ಮಿಲಿಟರಿ ಪಡೆಗಳಿಗೆ ಯುದ್ಧ ಶಸ್ತ್ರಾಸ್ತ್ರಗಳು, ಡ್ರೋನ್ಗಳು, ಹಣಕಾಸಿನ ವ್ಯವಸ್ಥೆಯನ್ನು ಮಾಡುತ್ತಿವೆ. ಇದರ ಜೊತೆಗೆ ಜಾಗತಿಕವಾಗಿಯೂ ರಾಜಕೀಯ ಬೆಂಬಲವಾಗಿ ನಿಂತಿವೆ. ಇದರಲ್ಲಿ ಕೆಲ ರಾಷ್ಟ್ರಗಳು ಯುಎಇ ವಿರುದ್ಧ ಒಳಸಂಚಿಗೆ ಸುಡಾನ್ ದೇಶದ ಮಿಲಿಟರಿಯನ್ನು ಬಳಸಿಕೊಳ್ಳುತ್ತಿವೆ. ಆರ್ಥಿಕವಾಗಿ ಬಲಿಷ್ಠವಾಗಿರುವ ರಾಷ್ಟ್ರಗಳು ಸುಡಾನ್ನಲ್ಲಿ ತಮ್ಮ ಆರ್ಥಿಕತೆಯನ್ನು ಹೂಡುವ ಮೂಲಕ ಬೆಂಬಲ ಕೊಡುತ್ತಿವೆ. ಟರ್ಕಿ, ಸೌದಿ ಅರೆಬಿಯಾ, ಕತಾರ್ ನಂತಹ ರಾಷ್ಟ್ರಗಳು ಇಸ್ಲಾಮಿಕ್ ನೆಟ್ ವರ್ಕ್ ಗಳನ್ನು ಬೆಳೆಸುವಲ್ಲಿ ಪ್ರಯತ್ನಿಸುತ್ತಿವೆ.
ಶಕ್ತಿ ಕೇಂದ್ರವಾಗಿ ಮಾರ್ಪಡುತ್ತಿರುವ ಯುಎಇ(ಯುನೈಟೆಡ್ ಅರಬ್ ಎಮಿರೇಟ್ಸ್/ದುಬೈ)
1900 ರಿಂದಲೂ ‘ದುಬೈ’ ಚಿನ್ನದ ನಗರವಾಗಿ ಬೆಳೆಯುತ್ತ ಬಂದಿದೆ. 1970 ರ ದಶಕದಲ್ಲಿ ಅರಬ್ ದೇಶವು ಅತಿ ಹೆಚ್ಚು ತೈಲ ನಿಪೇಕ್ಷಗಳು ಹೊಂದಿದ್ದರಿಂದ ಇಡೀ ಜಗತ್ತನ್ನು ತನ್ನೆಡೆಗೆ ಸೆಳೆಯಿತು. ವಿಮಾನ ನಿಲ್ದಾಣ, ಪ್ರಸಿದ್ಧ ಆಟದ ಮೈದಾನ(ಕ್ರಿಕೆಟ್ ಆಟದ ಮೈದಾನ), ವ್ಯಾಪರ-ವಹಿವಾಟುಗಳಿಗೆ ಸಂಬಂಧಿಸಿದಂತೆ ಬಂದರು ನಿರ್ಮಾಣ ಜೊತೆಗೆ ಚಿನ್ನದ ಮಾರುಕಟ್ಟೆಯನ್ನು ತೆರೆಯಿತು. 0% ಸುಂಕದೊಂದಿಗೆ ಚಿನ್ನವನ್ನು ಖರೀದಿ ಮಾಡುವಲ್ಲಿ ಜೊತೆಗೆ ಸಂಸ್ಕರಿಸಿ, ಮಾರಾಟ ಮಾಡಲು ಜಗತ್ತಿಗೆ ಸೂಕ್ತ ಸ್ಥಳವಾಯಿತು. ಜಗತ್ತಿನಲ್ಲಿ ಯುಎಇ ‘ಚಿನ್ನದ ನಗರ’ವೆಂದು ಕರೆಸಿಕೊಂಡಿತು.
ಪ್ರಸ್ತುತ ಅರಬ್ ದೇಶದಲ್ಲಿ 20ಕ್ಕೂ ಹೆಚ್ಚು ಚಿನ್ನದ ಸಂಸ್ಕರಣಾ ಘಟಕಗಳು ಜೊತೆಗೆ 7000 ಕ್ಕೂ ಹೆಚ್ಚು ಚಿನ್ನದ ವ್ಯಾಪರಿಗಳಿದ್ದಾರೆ. ಇದು ಪ್ರತಿವರ್ಷ ಸಾವಿರ ಟನ್ ಗಳಿಗಿಂತ ಹೆಚ್ಚು ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ. ಅದರಲ್ಲಿ 2/3 ರಷ್ಟು ಚಿನ್ನವು ಆಫ್ರಿಕಾ ದೇಶದಿಂದ ಬರುತ್ತದೆ. ಆದರೆ ಸಮಸ್ಯೆ ಆರಂಭವಾಗುವುದು ಇಲ್ಲಿಂದಲೆ.
ಆಫ್ರಿಕಾ ದೇಶದಿಂದ ಬರುವ ಚಿನ್ನವು ನೈಸರ್ಗಿಕವಾಗಿ ದೊರೆಯುತ್ತಿದ್ದು, ಇದನ್ನು ಅರಬ್ ದೇಶಗಳಿಗೆ ಸಾಗಿಸಲು ಮುಕ್ತವಾತಾವರಣವಿದೆ. ಇದಕ್ಕೆ ಬೆಂಬಲವಾಗಿ ನಿಂತಿರುವುದೇ, ಕೆಲ ಮಿಲಿಟರಿ ಪಡೆಗಳು. ಈ ಮಿಲಿಟರಿ ಪಡೆಗಳ ಸ್ಥಾಪನೆಯ ಹಿಂದಿರುವ ಶಕ್ತಿಗಳು ಮತ್ತದೆ ಸಾಮ್ರಾಜ್ಯಶಾಹಿಗಳು(ನವವಸಹತು ಶಕ್ತಿಗಳಾಗಳು ಪ್ರಯತ್ನಿಸುತ್ತರುವ ದೇಶಗಳು) . ಈ ಮಿಲಿಟರಿ ಪಡೆಗಳಿಗೆ ಆರ್ಥಿಕವಾಗಿ ಹಾಗು ಯುದ್ಧದ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿರುವುದಕ್ಕೆ, ಅವುಗಳು ಸಹ ಸಾಮ್ರಾಜ್ಯಶಾಹಿಗಳ ಬೆಂಬಲಕ್ಕೆ ನಿಲ್ಲುತ್ತವೆ.
ಇಲ್ಲಿ ಗಮನಿಸಬೇಕಾದ ಮುಖ್ಯಸಂಗತಿಯೆಂದರೆ, ಸುಡಾನ್ ಆಗಲಿ, ಆಫ್ರಿಕಾ ಆಗಲಿ ದೊಡ್ಡ ಪ್ರಮಾಣದ ಯಾವ ಶಸ್ತ್ರಾಸ್ತ್ರಗಳನ್ನು ತಯಾರಿಸುವುದಿಲ್ಲ. ಇವೆಲ್ಲವೂ ಸಾಮ್ರಾಜ್ಯಶಾಹಿ ಶಕ್ತಿಗಳು ಮತ್ತು ಅವುಗಳನ್ನು ನಿಯಂತ್ರಿಸುವ ಶಸ್ತ್ರಾಸ್ತ್ರ ಕಂಪನಿಗಳ ತಯಾರಿಸಿ, ನವವಸಹತುಗಳಾಗಿ ಸೃಷ್ಟಿಯಾಗಲು ಪೈಪೊಟಿಯಲ್ಲಿರುವ ರಾಷ್ಟ್ರಗಳೇ ದೊಡ್ಡ ದೊಡ್ಡ ಶಸ್ತ್ರಾಸ್ತ್ರಗಳನ್ನು ಆಫ್ರಿಕಾಗೆ ದೇಶದ ಮೇಲೆ ಸುರಿಯುತ್ತಿದ್ದಾರೆ.
ಅಂತರರಾಷ್ಟ್ರೀಯ ಪ್ರತಿಕ್ರಿಯೆ
ಸುಡಾನ್ ಸಶಸ್ತ್ರಪಡೆ (SAF) ಯೊಂದಿಗೆ ಎರಡು ವರ್ಷಕ್ಕು ಹೆಚ್ಚು ಕಾಲ ಅರೆಸೇನಾಪಡೆಯಾದ ರ್ಯಾಪಿಡ್ ಸಪೋರ್ಟ್ ಫೋರ್ಸಸ್ (RSF) ಜೊತೆ ಅಂತರ್ಯುದ್ಧ ನಡೆಸಿದ ನಂತರ ಕದನ ವಿರಾಮಕ್ಕೆ ಅಮೆರಿಕ ಪ್ರಸ್ತಾವನೆ ಕಳುಹಿಸಿದೆ. ಈ ಪ್ರಸ್ತಾವನೆಗೆ ಆರ್ಎಸ್ಎಫ್ ಒಪ್ಪಿಕೊಂಡಿರುವುದಾಗಿ ಹೇಳಿದ ಎಂದು ಅಲ್ ಜಜೀರ ವರದಿ ಮಾಡಿದೆ.
“ಯುದ್ಧದ ದುರಂತ ಮಾನವೀಯ ಪರಿಣಾಮಗಳನ್ನು ಪರಿಹರಿಸಲು ಮತ್ತು ನಾಗರಿಕರ ರಕ್ಷಣೆಯನ್ನು ಮುಂದುವರೆಸಲು” ಸೌದಿ ಅರೇಬಿಯಾ, ಈಜಿಪ್ಟ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ ಅಮೆರಿಕ ನೇತೃತ್ವದ “ಕ್ವಾಡ್” ಮಧ್ಯವರ್ತಿ ಗುಂಪು ಪ್ರಸ್ತಾಪಿಸಿದ “ಮಾನವೀಯ ಕದನ ವಿರಾಮ”ವನ್ನು ಸ್ವೀಕರಿಸುವುದಾಗಿ ಅರೆಸೇನ ಪಡೆಯಾದ RSF ಹೇಳಿಕೊಂಡಿದೆ.
2 ವರ್ಷಕ್ಕೂ ಹೆಚ್ಚುಕಾಲ ಈ ಅಂತರ್ಯುದ್ಧದಲ್ಲಿ ಆಫ್ರಿಕಾದ ಸುಡಾನ್ ನಿಂದ ಎಷ್ಟು ಸಂಪತ್ತು ದೇಶ-ವಿದೇಶಗಳಿಗೆ ರಫ್ತಾಗಿದೆಯೋ, ಅಷ್ಟೆ ಮಟ್ಟಿಗೆ ಸುಡಾನ್ ದೇಶದ ಜನರ ರಕ್ತವು ಹರಿದಿದೆ. ದೊಡ್ಡ ಪ್ರಾಮಾಣದಲ್ಲಿ ಜನರ ನರಮೇಧಗಳು ನಡೆದಿದೆ. ಜಾಗತಿಕ ಶಕ್ತಿಗಳ ಸ್ವ-ಹಿತಾಸಕ್ತಿಯಲ್ಲಿ ಕೇವಲ ಸುಡಾನ್ನ ನೈಸರ್ಗಿಕ ಸಂಪತ್ತಲ್ಲ. ಅಲ್ಲಿನ ಜನ, ಅಲ್ಲಿನ ಸಂಸ್ಕೃತಿಯು ನಾಶವಾಗಿದೆ.
ಈ ಎಲ್ಲ ದೇಶಗಳು ತಮ್ಮ ಪರೋಕ್ಷ ಹಿತಾಸಕ್ತಿಯ ಮೂಲಕ ಸುಡಾನ್ ಯುದ್ಧವನ್ನು ಬೆಂಬಲಿಸುವುದನ್ನು ಬಿಟ್ಟು, ಮಾನವೀಯ ನೆಲೆಯಿಂದ ಯೋಚಿಸಿ, ಸುಡಾನಿನಲ್ಲಿ ಶಾಂತಿ ನೆಲೆಸಲು ಅನುವು ಮಾಡಿಕೊಬೇಕಾಗಿದೆ.
ಇಲ್ಲಿ ನಡೆಯುತ್ತಿರುವ ನರಮೇಧಕ್ಕೆ ಭಾರತ ತಕ್ಷಣವೆ ಪ್ರತಿಕ್ರಿಯಿಸಬೇಕಿದೆ. ಶಾಂತಿ ನೆಲೆಸಲು ಭಾರತವು ಮುಂದೆ ಬರಬೇಕಿದೆ. ಈಗಾಗಲೇ ಸುಡಾನ್ ತೀವ್ರ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಗಾಝಾ ಮತ್ತು ಪ್ಯಾಲೆಸ್ತೀನ್ ನಲ್ಲಿ ಸಾವಿರಾರು ಜನರ ನರಮೇಧ ನಡೆಯುತ್ತಿರುವ ಸಂದರ್ಭದಲ್ಲಿ ಮೌನವಹಿಸಿದ್ದ ವಿಶ್ವಸಂಸ್ಥೆ ಇಲ್ಲಿಯಾದರೂ ಮಾತನಾಡಬೇಕು. ಜಗತ್ತಿನ ದೊಡ್ಡಣ್ಣನಾದ ಅಮೆರಿಕವು ಸಹ ಯುದ್ಧ ನಿಲ್ಲಿಸಲು ಮುಂದೆ ಬರೆಬೇಕಿದೆ.





