ಇಂದು ವಿಶ್ವಾದ್ಯಂತ ಯುವಜನರು ಎದುರಿಸುತ್ತಿರುವ ಗಂಭೀರ ನೈತಿಕ ಮತ್ತು ಮಾನಸಿಕ ಬಿಕ್ಕಟ್ಟನ್ನು ಪರಿಹರಿಸುವ ಉದ್ದೇಶದಿಂದ, ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್ಐಒ) ‘ಹಯಾ’ವೇ ಜೀವನ: ಅರಿವು, ನೈತಿಕತೆ ಮತ್ತು ಮನಃಶಾಂತಿ ಎಂಬ ಶೀರ್ಷಿಕೆಯಡಿಯಲ್ಲಿ ರಾಷ್ಟ್ರಮಟ್ಟದ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಅಭಿಯಾನವು ಅಕ್ಟೋಬರ್ 12 ರಿಂದ ನವೆಂಬರ್ 10, 2025ರವರೆಗೆ ನಡೆಯಲಿದೆ ಎಂದು ಎಸ್ಐಓ ಕರ್ನಾಟಕ ರಾಜ್ಯ ಅಧ್ಯಕ್ಷ ಎಸ್ ಆದಿ ಅಲ್ ಹಸನ್ ಅವರು ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಅಶ್ಲೀಲತೆ, ಗ್ಯಾಜೆಟ್ ಚಟ, ಅಸಭ್ಯ ವಿಷಯಗಳು ನಮ್ಮ ಸಮಾಜದ ಸಂಸ್ಕೃತಿಯಾಗಿ ಬೆಳೆಯುತ್ತಿರುವುದು ವಿಷಾದನೀಯ. ಕೆಟ್ಟ ಚಟಗಳ ಮೂಲಕ ಜಗತ್ತಿನಲ್ಲಿಂದು ನಮ್ಮ ಯುವಜನರನ್ನು ವ್ಯವಸ್ಥಿತವಾಗಿ ಅರ್ಥಹೀನತೆ ಮತ್ತು ಉದ್ದೇಶರಹಿತತೆಯ ಸ್ಥಿತಿಗೆ ತಳ್ಳಲಾಗುತ್ತಿದೆ. ‘ಹಯಾ’ ಅನ್ನು ಪುನರುಜ್ಜೀವನಗೊಳಿಸುವುದು ಮಾನಸಿಕ ಮತ್ತು ನೈತಿಕ ಆರೋಗ್ಯಕ್ಕೆ ಒಂದು ನಾಗರಿಕ ಅನಿವಾರ್ಯತೆಯಾಗಿದೆ. ಎಸ್ಐಓ ಈ ಅಭಿಯಾನದ ಮೂಲಕ ಯುವಜನರಲ್ಲಿ ಆಂತರಿಕ ಸಂಯಮ, ಘನತೆ ಮತ್ತು ನೈತಿಕ ಮೌಲ್ಯಗಳನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.
ಸಮುದಾಯದ ಬೆಂಬಲ ವ್ಯವಸ್ಥೆಗಳನ್ನು ಬಲಪಡಿಸುವುದು ಮತ್ತು ನೈತಿಕ ಅಧಃಪತನಕ್ಕೆ ಕಾರಣವಾಗುವ ಅಂಶಗಳ ವಿರುದ್ಧ ಬಲವಾದ ಕಾನೂನು ಕ್ರಮಗಳಿಗೆ ಆಗ್ರಹಿಸುವುದು ನಮ್ಮ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಯುವಕರಲ್ಲಿ ಖಿನ್ನತೆಯ ಏರಿಕೆ, ಗುರುತಿನ ಬಿಕ್ಕಟ್ಟುಗಳು ಮತ್ತು ಅರ್ಥಹೀನತೆಯಿಂದ ಗುರುತಿಸಲ್ಪಟ್ಟಿರುವ ಈ ಬಿಕ್ಕಟ್ಟಿಗೆ ಆಧುನಿಕ ಪಾಶ್ಚಾತ್ಯ ತತ್ವಶಾಸ್ತ್ರಗಳಿಂದ ಉಂಟಾದ ಮಾನವ ಉದ್ದೇಶದ ವಿರೂಪವೇ ಕಾರಣವಾಗಿದೆ ಎಂದು ಆದಿ ಅಲ್ ಹಸನ್ ತಿಳಿಸಿದರು.
ಎಸ್ಐಓ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಹಯ್ಯಾನ್ ಅವರು, ಅಭಿಯಾನದ ಉದ್ದೇಶಗಳನ್ನು ಪರಿಚಯಿಸುತ್ತಾ “ಆಧುನಿಕ ಮಾನವತಾವಾದವು ಮನುಷ್ಯನ ಆಸೆಯನ್ನು ಪರಮ ಅಧಿಕಾರವನ್ನಾಗಿ ಎತ್ತಿ ಹಿಡಿಯುತ್ತದೆ. ಹಾಗೆಯೇ, ಉದಾರವಾದವು ‘ನನ್ನ ದೇಹ, ನನ್ನ ಆಯ್ಕೆ’ ಎಂಬ ಘೋಷಣೆಗಳೊಂದಿಗೆ ಸಂಪೂರ್ಣ ಸ್ವಾಯತ್ತತೆಯನ್ನು ಪ್ರತಿಪಾದಿಸುತ್ತದೆ. ಇದು ಸಂತೃಪ್ತಿಯನ್ನು ವೈಭವೀಕರಿಸುವ ಮತ್ತು ಕೇವಲ ಪ್ರಯೋಜನವನ್ನು ಆಧರಿಸಿದ ನೈತಿಕತೆಯನ್ನು ಅವಲಂಬಿಸುವ ಸಂಸ್ಕೃತಿಯನ್ನು ಪೋಷಿಸಿದೆ. ಇದು ಅಂತಿಮವಾಗಿ ನೈತಿಕ ಮಿತಿಗಳನ್ನು ಸವಕಳಿಸಿ, ಕುಟುಂಬ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಆಸೆಯ ಶಸ್ತ್ರಾಸ್ತ್ರೀಕರಣದ ಬಗ್ಗೆ ಯುವಜನತೆ ಎಚ್ಚೆತ್ತುಕೊಳ್ಳಬೇಕು” ಎಂದು ಕರೆ ನೀಡಿದರು.

ಡಿಜಿಟಲ್ ಸಂಸ್ಕೃತಿ, ಒಟಿಟಿ ವಿಷಯ, ಅತೀ ಲೈಂಗಿಕ ಮಾಧ್ಯಮ ಮತ್ತು ಪ್ರಭಾವಿಗಳ ಜೀವನಶೈಲಿಯು ಯುವಜನತೆಯ ಜೀವನಶೈಲಿಯ ಮೇಲೆ ವಿಪರೀತ ಕೆಟ್ಟ ಪರಿಣಾಮ ಬೀರುತ್ತಿದೆ. ಈ ಪ್ರವೃತ್ತಿಗಳು ಲೈಂಗಿಕ ಅನೈತಿಕತೆಯನ್ನು ಸಾಮಾನ್ಯಗೊಳಿಸುತ್ತಿವೆ ಮತ್ತು ದೇಹವನ್ನು ವಸ್ತುವನ್ನಾಗಿ ಪರಿವರ್ತಿಸುತ್ತಿವೆ. ಆನ್ಲೈನ್ ಅಶ್ಲೀಲತೆಯ ಅತಿ ದೊಡ್ಡ ಗ್ರಾಹಕರಲ್ಲಿ ಭಾರತವು ಕೂಡ ಸ್ಥಾನ ಪಡೆದಿರುವುದರಿಂದ, ಈ ನೈತಿಕ ವಿಪತ್ತಿನ ಪರಿಣಾಮಗಳು ಮುಂದಿನ ಪೀಳಿಗೆಗೆ ತೀವ್ರವಾಗಿವೆ. ಈ ಬಗ್ಗೆ ಯುವಜನತೆಯಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಎಸ್ಐಓ ಈ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಹಾಸ್ಟೆಲ್ನಲ್ಲಿ ರ್ಯಾಗಿಂಗ್: ಬ್ಯಾಟ್-ಬೆಲ್ಟ್ ನಿಂದ ಹೊಡೆದಾಡಿರುವ ವಿಡಿಯೋ ವೈರಲ್
ಎಸ್ಐಓ ಕರ್ನಾಟಕ ರಾಜ್ಯ ಕಾರ್ಯದರ್ಶಿ ಯೂಸುಫ್ ಸಖ್ಲೈನ್ ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿಯಿಂದ ಉಂಟಾದ ಅವನತಿಯು ಯುವ ಮನಸ್ಸುಗಳನ್ನು ಯಶಸ್ವಿಯಾಗಿ ನಾಶಪಡಿಸುತ್ತಿದೆ. ಉತ್ತಮ ಸಮಾಜವನ್ನು ರೂಪಿಸಲು ಸ್ಫೂರ್ತಿ ಮತ್ತು ಆಸ್ತಿಯಾಗಬಲ್ಲ ಯುವ ಮನಸ್ಸುಗಳನ್ನು ಸೃಷ್ಟಿಸಲು ನೈತಿಕತೆಯ ಅಗತ್ಯವಿದೆ ಎಂದು ತಿಳಿಸುತ್ತಾ, ಅಭಿಯಾನ ಹಿನ್ನೆಲೆಯಲ್ಲಿ ಎಸ್ಐಓ ವತಿಯಿಂದ ರಾಜ್ಯದಲ್ಲಿ ಯೋಜಿಸಲಾದ ಅಭಿಯಾನದ ಚಟುವಟಿಕೆಗಳ ಬಗ್ಗೆ ಅವರು ವಿವರಿಸಿದರು.

ಅಭಿಯಾನದ ಹಿನ್ನೆಲಯಲ್ಲಿ ಎಸ್ಐಒ ಕರ್ನಾಟಕವು ರಾಜ್ಯಾದ್ಯಂತ ರಾಜ್ಯ ಮತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ‘ಹಯಾ’ ಪರಿಕಲ್ಪನೆಯ ಕುರಿತು ಕ್ಯಾಂಪಸ್ ಉಪನ್ಯಾಸಗಳು, ಪ್ರಮುಖ ಸ್ಥಳಗಳಲ್ಲಿ ಕಾರ್ನರ್ ಸಭೆಗಳು, ಮಸೀದಿಗಳಲ್ಲಿ ಶುಕ್ರವಾರದ ವಿಶೇಷ ಪ್ರವಚನಗಳು, ನೈತಿಕ ಜೀವನದ ಮೌಲ್ಯವನ್ನು ತಿಳಿಸುವ ಸಾರ್ವಜನಿಕ ಸಮ್ಮೇಳನಗಳು, ಮನಶ್ಶಾಸ್ತ್ರಜ್ಞರು ಮತ್ತು ಪ್ರಭಾವಿ ವ್ಯಕ್ತಿಗಳೊಂದಿಗೆ ಸಂವಾದ ಮತ್ತು ಸಮಾಲೋಚನೆ, ಯುವಜನರ ಸಮಸ್ಯೆಗಳು, ಸವಾಲುಗಳು ಮತ್ತು ಪರಿಹಾರಗಳನ್ನು ಬಿಂಬಿಸುವ ಕಲಾ ಪ್ರದರ್ಶನಗಳು, ಸಮಾಲೋಚನಾ ಅವಧಿಗಳು ಮತ್ತು ಸಂವಾದಾತ್ಮಕ ಚಟುವಟಿಕೆಗಳು, ಹದಿಹರೆಯದ ಸಮಸ್ಯೆಗಳ ಕುರಿತು ವಿಶೇಷ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಯೂಸುಫ್ ಸಖ್ಲೈನ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಎಸ್ಐಒ ಕರ್ನಾಟಕ ರಾಜ್ಯ ಸಲಹಾ ಸಮಿತಿ ಸದಸ್ಯ ಪೀರ್ ಲಟಗೇರಿ, ಪ್ರಧಾನ ಕಾರ್ಯದರ್ಶಿ ಜೋಹರ್ ಕಾಶಿಫ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.





