ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದ್ದ ಆರೋಪದ ಮೇಲೆ ಶುಕ್ರವಾರ ಸಂಜೆ ಬಂಧಿತರಾಗಿದ್ದ ಬಿಗ್ ಬಾಸ್ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ವಕೀಲ ಕೆ ಎನ್ ಜಗದೀಶ್ ಅವರಿಗೆ ಬೆಂಗಳೂರಿನ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಈ ಬಗ್ಗೆ ಸ್ವತಃ ತನ್ನ ಫೇಸ್ಬುಕ್ನಲ್ಲಿ ಮಾಹಿತಿ ಹಂಚಿಕೊಂಡಿರುವ ವಕೀಲ ಜಗದೀಶ್, “ಕೊಡಿಗೇಹಳ್ಳಿ ಪೊಲೀಸರು ನನ್ನ ಮೇಲೆ ಸುಳ್ಳು ದೂರು ದಾಖಲಿಸಿ, ಪೊಲೀಸರು ನನ್ನನ್ನು ವಶಕ್ಕೆ ಪಡೆದಿದ್ದರು. ನನ್ನ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ 7 ವರ್ಷಕ್ಕಿಂತಲೂ ಕಡಿಮೆ ಶಿಕ್ಷೆ ಇದೆ. ಹಾಗಾಗಿ, ನನಗೆ ನ್ಯಾಯಾಲಯವು ನನಗೆ ಜಾಮೀನು ಮಂಜೂರು ಮಾಡಿದೆ” ಎಂದು ತಿಳಿಸಿದ್ದಾರೆ.
ಎರಡು ಭಿನ್ನ ಸಮುದಾಯಗಳ ನಡುವೆ ದ್ವೇಷ ಉಂಟು ಮಾಡಲು ಪ್ರಯತ್ನಿಸಿದ ಆರೋಪದ ಮೇರೆಗೆ ವಕೀಲ ಜಗದೀಶ್ ವಿರುದ್ಧ ಮಂಜುನಾಥ್ ಎಂಬುವವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೊಡಿಗೇಹಳ್ಳಿ ಪೊಲೀಸರು ವಕೀಲ ಜಗದೀಶ್ ಅವರನ್ನು ಶುಕ್ರವಾರ ಮನೆಯಿಂದಲೇ ಬಂಧಿಸಿದ್ದರು.
ಇದನ್ನು ಓದಿದ್ದೀರಾ? ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ ಜಾಮೀನು
“ಧರ್ಮಸ್ಥಳ ಹತ್ಯಾಕಾಂಡದ ವಿರುದ್ಧ ಹೋರಾಟ ಮಾಡಿದ ಕಾರಣಕ್ಕೆ ನನ್ನ ಮೇಲೆ ಸುಳ್ಳು ದೂರು ದಾಖಲಿಸಿ, ಪೊಲೀಸರು ನನ್ನನ್ನು ವಶಕ್ಕೆ ಪಡೆದಿದ್ದರು. ಆದರೆ, ನಮ್ಮ ದೇಶದ ಸಂವಿಧಾನ ಇನ್ನೂ ಬದುಕಿದೆ. ನಮ್ಮ ಹೋರಾಟಗಾರರಿಗೆ ಸಂವಿಧಾನವೇ ರಕ್ಷಣೆ. ನ್ಯಾಯಕ್ಕೆ ಜಯ ಇದೆ. ಇಂದು ನನಗೆ ಬೆಲ್ ಸಿಕ್ಕಿದೆ. ನನ್ನ ಹೋರಾಟ ಸತ್ಯದ ಪರ. ನನ್ನ ಹೋರಾಟ ನ್ಯಾಯದ ಪರ. ನನ್ನ ಹೋರಾಟ ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂದುವರೆಯುತ್ತದೆ. ಸತ್ಯದ ಗೆಲುವು ಖಚಿತ” ಎಂದು ಜಗದೀಶ್ ಫೇಸ್ಬುಕ್ನಲ್ಲಿ ತಿಳಿಸಿದ್ದಾರೆ.
“ಉಪಮುಖ್ಯಮಂತ್ರಿಗಳು ನಿನ್ನೆ ತಿಮರೋಡಿಯವರನ್ನು ಬಂಧಿಸಿದ್ದಕ್ಕೆ ಒದ್ದು ಒಳಗೆ ಹಾಕಿದ್ದೇವೆ ಎಂದು ಹೇಳಿಕೆ ನೀಡಿದ್ದರು. ನನ್ನ ಮೇಲೂ ಕೂಡ ಸುಳ್ಳು ಮೊಕದ್ದಮೆ ಹಾಕಿ, ಬಂಧಿಸಿದ್ದರು. ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಎಂಬುದನ್ನು ಅಧಿಕಾರದಲ್ಲಿದ್ದವರು ತಿಳಿದುಕೊಳ್ಳಬೇಕು. ಪೊಲೀಸರಲ್ಲಿ ಕೇಳಿದರೆ, ಮೇಲಿನವರ ಒತ್ತಡ ಎಂದು ತಿಳಿಸುತ್ತಾರೆ. ಸರಿಯಾಗಿ ನೋಟಿಸ್ ನೀಡಿ 24 ಗಂಟೆ ಆಗಿಲ್ಲದಿದ್ದರೂ ಕಾನೂನುಬಾಹಿರವಾಗಿ ಬಂಧಿಸಿದ್ದಾರೆ. ಈ ಎಲ್ಲ ವಿಚಾರವನ್ನು ನಮ್ಮ ವಕೀಲರ ತಂಡ ನ್ಯಾಯಾಲಯದ ಗಮನಕ್ಕೆ ತಂದಿದ್ದರಿಂದ ಜಾಮೀನು ಸಿಕ್ಕಿದೆ. ಜಾಮೀನಿಗೆ ಶ್ರಮಿಸಿದ ವಕೀಲರಿಗೆ ಧನ್ಯವಾದ ಸಲ್ಲಿಸುತ್ತೇನೆ. ಸಮಾಜದಲ್ಲಿ ತಪ್ಪು ನಡೆದಾಗ ಧ್ವನಿ ಎತ್ತುವುದು ನಮ್ಮ ಸಾಂವಿಧಾನಿಕ ಹಕ್ಕು. ನ್ಯಾಯಕ್ಕಾಗಿ ಹೋರಾಡುವುದು ಅಪರಾಧವಲ್ಲ” ಎಂದು ವಕೀಲ ಕೆ ಎನ್ ಜಗದೀಶ್ ಕಾರಿನಲ್ಲಿ ಕುಳಿತುಕೊಂಡು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.





