ಬೈಕ್ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಇಬ್ಬರು ವ್ಯಕ್ತಿಗಳನ್ನು ಗುಂಪೊಂದು ಮರಕ್ಕೆ ಕಟ್ಟಿ ಮನಬಂದಂತೆ ಥಳಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಹಲ್ಲೆಗೈದ ಘಟನೆಯು ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರೋಡಿ ಎಂಬಲ್ಲಿ ನಡೆದಿರುವುದಾಗಿ ವರದಿಯಾಗಿದ್ದು, ಮಂಗಳೂರಿನ ಬೆಂಗ್ರೆ ಕಸಬಾ ನಿವಾಸಿಗಳಾದ ಮೊಯ್ದಿನ್ ನಾಸಿರ್ ಹಾಗೂ ಅಬ್ದುಲ್ ಸಮದ್ ಹಲ್ಲೆಗೊಳಗಾದವರು ಎಂದು ಗುರುತಿಸಲಾಗಿದೆ.
ಈ ಸಂಬಂಧ ಹಲ್ಲೆಗೊಳಗಾದ ಮೊಯ್ದಿನ್ ನಾಸಿರ್ ಅವರ ಮಗಳು ನೀಡಿರುವ ದೂರಿನ ಆಧಾರದ ಮೇಲೆ ಸ್ಥಳೀಯರಾದ ಎಂಟು ಮಂದಿ ಹಾಗೂ ಇತರರ ವಿರುದ್ಧ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೊತೆಗೆ, ಹಲ್ಲೆಗೊಳಗಾದವರ ಮೇಲೆ ಬೈಕ್ ಕಳವಿಗೆ ಯತ್ನಿಸಿದ ಬಗ್ಗೆಯೂ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡೂ ಪ್ರಕರಣಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆಯ ವಿವರ:
ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಪಳಾರಗೋಳಿ ಎಂಬಲ್ಲಿ ಜ.20ರಂದು ಬೆಳಗ್ಗಿನ ಜಾವ 2:30ರ ಸುಮಾರಿಗೆ ಈ ಘಟನೆ ನಡೆದಿದೆ. ಬೈಕ್ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಮೊಯ್ದಿನ್ ನಾಸಿರ್ ಹಾಗೂ ಅಬ್ದುಲ್ ಸಮದ್ರನ್ನು ಸುಮಾರು 25-30 ಜನರಿದ್ದ ಗುಂಪೊಂದು ಹಿಡಿದು ಮರಕ್ಕೆ ಕಟ್ಟಿ ಥಳಿಸಿದೆ.
ಘಟನೆಯ ಮಾಹಿತಿ ಪಡೆದ ವೇಣೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಅವರಿಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದರು.
ಇಬ್ಬರನ್ನೂ ಮರಕ್ಕೆ ಹಗ್ಗದಲ್ಲಿ ಕಟ್ಟಿರುವ ಫೋಟೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.





