ಕೆಎಸ್ಆರ್ಟಿಸಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ನೌಕರರಿಗಾಗಿ ಹಮ್ಮಿಕೊಂಡಿದ್ದ ಕ್ರೀಡಾ ಸ್ಪರ್ಧೆಗೆ ಶಟಲ್ ಬ್ಯಾಡ್ಮಿಂಟನ್, ಕೇರಂ, ಚೆಸ್ ಮತ್ತು ಟೇಬಲ್ ಟೆನ್ನಿಸ್ ಆಡುವ ಮೂಲಕ ಕ್ರೀಡಾ ಸ್ಪರ್ಧೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ ನೀಡಿದರು. ಇದೇ ವೇಳೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದ ಅಧಿಕಾರಿ, ಸಿಬ್ಬಂದಿಗಳಿಗೆ ಬಹುಮಾನ ವಿತರಿಸಿದರು.
ಬಳಿಕ ಮಾತನಾಡಿದ ಸಚಿವರು, ನಿಗಮದಲ್ಲಿ ಅಧಿಕಾರಿ, ಸಿಬ್ಬಂದಿಗಳ ಉತ್ತಮ ಆರೋಗ್ಯ, ಒತ್ತಡ ನಿವಾರಣೆ ಹಾಗೂ ಕ್ರೀಡಾ ಮನೋರಂಜನೆಗಾಗಿ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪ್ರತಿ ವರ್ಷವು ಘಟಕ, ವಿಭಾಗ, ಪ್ರಾದೇಶಿಕ ಕಾರ್ಯಗಾರ ಮತ್ತು ಕೇಂದ್ರ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ನೌಕರರು ಹಾಗೂ ಅವರ ಮಕ್ಕಳಿಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ. ಈ ಸಂಬಂಧ ಕ್ರೀಡಾ ಮತ್ತು ಸಾಂಸ್ಕೃತಿಕ ನಿಧಿಯಿಂದ ವಿಭಾಗ/ಕಾರ್ಯಾಗಾರಗಳಿಗೆ ತಲಾ ರೂ. 40,000/- ರಂತೆ 17 ವಿಭಾಗಗಳಿಗೆ ಎರಡು ಕಾರ್ಯಾಗಾರಗಳಿಗೆ ಅನುದಾನವನ್ನು ಪ್ರತಿ ವರ್ಷ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಕಳೆದ ವರ್ಷವಷ್ಟೇ ಶಾಂತಿನಗರ ಕ್ರೀಡಾ ಸಂಕೀರ್ಣವನ್ನು ಮೇಲ್ದರ್ಜೆಗೇರಿಸಲಾಗಿತ್ತು. ನೌಕರರು ಪ್ರತಿನಿತ್ಯ ಈ ಕ್ರೀಡಾ ಸಂಕೀರ್ಣವನ್ನು ಕೆಲವೊಂದು ಆಟಗಳನ್ನು ನಿತ್ಯ ಆಡುವ ಮೂಲಕ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಗೆಲುವು ಸೋಲು ಮುಖ್ಯವಲ್ಲ, ಭಾಗವಹಿಸುವಿಕೆ ಎಂಬುದು ಪ್ರಮುಖವಾದ್ದದ್ದು. ನೌಕರರು ಅತೀ ಒತ್ತಡದ ಕಾರ್ಯಶೈಲಿಯಲ್ಲಿ ಈ ರೀತಿಯ ಚಟುವಟಿಕೆ ಆಹ್ಲಾದಕರ ವಾತಾವರಣವನ್ನು ನಿರ್ಮಿಸಲು ಸಹಕಾರಿಯಾಗುತ್ತದೆ ಎಂದು ಸಚಿವರು ತಿಳಿಸಿದರು.
ನೌಕರರಿಗೆ ಮತ್ತು ಅಧಿಕಾರಿಗಳಿಗೆ ಚೆಸ್, ಕೇರಂ, ಶೆಟಲ್, ಟೇಬಲ್ ಟೆನ್ನಿಸ್ , ಸಂಗೀತ ಸ್ಪರ್ಧೆಗಳು, ಸಂಗೀತ ಕುರ್ಚಿ, ಗುಂಡು ಎಸೆತ, ವೇಗ ನಡಿಗೆ, ಮಡಿಕೆ ಹೊಡೆಯುವ ಆಟ ಇತ್ಯಾದಿಗಳನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಕೆಎಸ್ಆರ್ಟಿಸಿಯ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂ ಪಾಷ, ಸಿಬ್ಬಂದಿ & ಜಾಗೃತ ವಿಭಾಗದ ನಿರ್ದೇಶಕಿ ಡಾ. ನಂದಿನಿ ದೇವಿ, ಮಾಹಿತಿ ತಂತ್ರಜ್ಞಾನ ವಿಭಾಗದ ನಿರ್ದೇಶಕರಾದ ಇಬ್ರಾಹಿಂ ಮೈಗೂರ, ಮಂಡಳಿ ಕಾರ್ಯದರ್ಶಿ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಲತಾ ಟಿ. ಎಸ್ ಹಾಗೂ ನಿಗಮದ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.








