ಮಹಿಳಾ ಪ್ರಯಾಣಿಕರೋರ್ವರ ಮೇಲೆ ಬಿಎಂಟಿಸಿ ಕಂಡಕ್ಟರ್ ಓರ್ವ ಹಿಗ್ಗಾಮುಗ್ಗಾ ಹಲ್ಲೆಗೈದ ಘಟನೆ ಇಂದು (ಮಾ.26) ಬೆಳಗ್ಗೆ ಬೆಂಗಳೂರಿನಲ್ಲಿ ನಡೆದಿದೆ.
ಟಿಕೆಟ್ ವಿಚಾರವಾಗಿ ಮಹಿಳೆ ಪ್ರಶ್ನಿಸಿದ್ದಕ್ಕೆ ಆಕ್ರೋಶಗೊಂಡ ಕಂಡಕ್ಟರ್, ಬಸ್ನಲ್ಲಿಯೇ ಹಲ್ಲೆ ಮಾಡಿದ್ದಾನೆ. ಮಹಿಳಾ ಪ್ರಯಾಣಿಕರ ಜೊತೆಗೆ ನಡೆಯುತ್ತಿದ್ದ ವಾಗ್ವಾದವನ್ನು ಬಸ್ನಲ್ಲಿದ್ದ ಇನ್ನೋರ್ವ ಪ್ರಯಾಣಿಕರು ಮೊಬೈಲ್ನಲ್ಲಿ ಸೆರೆ ಹಿಡಿಯುತ್ತಿದ್ದಾಗಲೇ, ಹಲ್ಲೆಗೈದಿದ್ದಾನೆ.
ಈ ಘಟನೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಕಂಡಕ್ಟರ್ನಿಂದ ಹಲ್ಲೆಗೊಳಗಾದ ಮಹಿಳೆಯನ್ನು ತಂಝೀನಾ ಇಸ್ಮಾಯೀಲ್ ಎಂದು ಗುರುತಿಸಲಾಗಿದೆ. ಹೊನ್ನಪ್ಪ ಹಲ್ಲೆಗೈದ ಕಂಡಕ್ಟರ್ ಎಂದು ತಿಳಿದುಬಂದಿದೆ. ಮಾತಿನ ಚಕಮಕಿಯ ವೇಳೆ ಮಹಿಳೆಯೂ ಕೂಡ ಕಂಡಕ್ಟರ್ ಕೆನ್ನೆಗೆ ಬಾರಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಇವರಿಬ್ಬರ ವಾಗ್ವಾದದ ನಡುವೆ ಸೀಟಿನಲ್ಲಿ ಕುಳಿತಿದ್ದ ಇನ್ನೋರ್ವ ಮಹಿಳೆಯು, ಕಂಡಕ್ಟರ್ ಅನ್ನು ತಡೆಯುತ್ತಿರುವ ದೃಶ್ಯ ಕೂಡ ಸೆರೆಯಾಗಿದೆ.
ಬಿಎಂಟಿಸಿಯ ಡಿಪೋ ಸಂಖ್ಯೆ 34ಕ್ಕೆ ಸೇರಿದ KA 57 F 1602 ಬಸ್ನಲ್ಲಿ ಈ ಘಟನೆ ನಡೆದಿದೆ. ಇಂದು ಬೆಳಗ್ಗೆ 10 ಗಂಟೆಗೆ ಬಿಳೇಕಲ್ಲಹಳ್ಳಿ-ಶಿವಾಜಿ ನಗರ ರೂಟ್ನಲ್ಲಿ ಈ ಕೃತ್ಯ ನಡೆದಿರುವುದಾಗಿ ತಿಳಿದುಬಂದಿದೆ. ಈ ಘಟನೆಯ ಸಂಬಂಧ 28 ಸೆಕೆಂಡ್ನ ವಿಡಿಯೋ ಆಧರಿಸಿ, ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬೆಂಗಳೂರು | ಮಹಿಳೆಯ ಮೇಲೆ ಹಿಗ್ಗಾಮುಗ್ಗಾ ಹಲ್ಲೈಗೈದ @BMTC_BENGALURU ಕಂಡಕ್ಟರ್; ವಿಡಿಯೋ ವೈರಲ್
ಬಸ್ ನಲ್ಲಿಯೇ ಹಲ್ಲೆ ಮಾಡಿ ಅಟ್ಟಹಾಸ. ಟಿಕೆಟ್ ವಿಚಾರವಾಗಿ ಹಲ್ಲೆ: ಇಂದು ಬೆಳಗ್ಗೆ 10 ಗಂಟೆಗೆ ನಡೆದ ಕೃತ್ಯ. ಘಟನೆಯ ದೃಶ್ಯ ಮೊಬೈಲ್ ನಲ್ಲಿ ಸೆರೆ.
ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ FIR@zoo_bear @CPBlr @BlrCityPolice pic.twitter.com/9XKI3W0gBd
— eedina.com (@eedinanews) March 26, 2024
ಈ ಬಗ್ಗೆ ಈದಿನ.ಕಾಮ್ ಸಿದ್ದಾಪುರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದಾಗ, “ಬಿಳೇಕಲ್ಲಹಳ್ಳಿ-ಶಿವಾಜಿ ನಗರ ರೂಟ್ನ ಬಿಎಂಟಿಸಿ ಬಸ್ನಲ್ಲಿ ಟಿಕೆಟ್ ವಿಚಾರಕ್ಕೆ ಬಸ್ನಲ್ಲಿದ್ದ ಪ್ರಯಾಣಿಸುತ್ತಿದ್ದ ಮಹಿಳೆ ಹಾಗೂ ಕಂಡಕ್ಟರ್ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಕಂಡಕ್ಟರ್ ಹಲ್ಲೆ ಮಾಡಿರುವುದಾಗಿ ಹಲ್ಲೆಗೊಳಗಾದ ಮಹಿಳೆ ತಂಝೀನಾ ಇಸ್ಮಾಯೀಲ್ ಎಂಬುವವರು ನಮ್ಮ ಠಾಣೆಯಲ್ಲಿ ದೂರು ನೀಡಿದ್ದಾರೆ. ಘಟನೆಯನ್ನು ಇನ್ನೋರ್ವ ಪ್ರಯಾಣಿಕರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಈ ಸಂಬಂಧ ಬಿಎಂಟಿಸಿ ಅಧಿಕಾರಿಗಳನ್ನು ಈಗಾಗಲೇ ಸಂಪರ್ಕಿಸಿದ್ದು, ಕಂಡಕ್ಟರ್ನ ವಿವರಗಳನ್ನು ಕಲೆ ಹಾಕುತ್ತಿದ್ದೇವೆ. ಐಪಿಸಿ ಸೆಕ್ಷನ್ನ 354 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದೇವೆ. ತಪ್ಪಿತಸ್ಥ ಕಂಡಕ್ಟರ್ನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಮಂಡ್ಯದಿಂದ ಮೈತ್ರಿ ಅಭ್ಯರ್ಥಿಯಾಗಿ ಎಚ್ ಡಿ ಕುಮಾರಸ್ವಾಮಿ ಸ್ಪರ್ಧೆ
ಘಟನೆಯ ಬಗ್ಗೆ ಈ ದಿನ.ಕಾಮ್ ಬಸ್ ಕಂಡಕ್ಟರ್ ಹೊನ್ನಪ್ಪ ಅವರನ್ನು ಸಂಪರ್ಕಿಸಿತು. ಈ ವೇಳೆ ಮಾತನಾಡಿದ ಅವರು, “ಮಹಿಳೆಯು ಬಿಳೇಕಲ್ಲ ಹಳ್ಳಿಯಲ್ಲಿ ಹತ್ತಿದ್ದರು. ಗುರಪ್ಪನ ಪಾಳ್ಯ ಬಂದಾಗ ನಾನು ಟಿಕೆಟ್ಗಳನ್ನು ಪರಿಶೀಲನೆ ನಡೆಸಿದೆ. ಆಗ ಮಹಿಳೆ ಟಿಕೆಟ್ ತೆಗೆದಿರಲಿಲ್ಲ ಎಂಬುದು ನನ್ನ ಗಮನಕ್ಕೆ ಬಂತು. ಈ ಬಗ್ಗೆ ನಾನು ಕೇಳಿದಾಗ, ನನ್ನೊಂದಿಗೆ ವಾಗ್ವಾದ ನಡೆಸಿದರು. ಮೊದಲಿಗೆ ಅವರೇ ನನ್ನ ಮೇಲೆ ಹಲ್ಲೆ ನಡೆಸಿದ್ದು. ಎಲ್ಲ ದೃಶ್ಯವು ಬಸ್ನಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ದಾಖಲಾಗಿದೆ” ಎಂದು ತಿಳಿಸಿದ್ದಾರೆ.





