- ಬೆಂಗಳೂರಿನ ವೈಟ್ಫೀಲ್ಡ್ ಸೆನ್ ಪೊಲೀಸ್ ಠಾಣೆಯ ನಾಲ್ವರು ಸಿಬ್ಬಂದಿ ಅಮಾನತು
- ಅಮಾನತುಗೊಳಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಆದೇಶ
ಪ್ರಕರಣವೊಂದರ ತನಿಖೆಗೆ ಕೇರಳಕ್ಕೆ ಹೋಗಿ, ಆರೋಪಿಗಳಿಂದ ಸ್ವೀಕರಿಸಿದ್ದ ಲಂಚದ ಹಣದೊಂದಿಗೆ ಸಿಕ್ಕಿಬಿದ್ದು, ಕೇರಳ ಪೊಲೀಸರ ವಶದಲ್ಲಿದ್ದ ಬೆಂಗಳೂರಿನ ನಾಲ್ವರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ವೈಟ್ಫೀಲ್ಡ್ ಸೆನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶಿವಪ್ರಕಾಶ್ ಸೇರಿ ನಾಲ್ವರನ್ನು ಅಮಾನತು ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಆದೇಶ ಹೊರಡಿಸಿದ್ದಾರೆ.
ಇನ್ಸ್ಪೆಕ್ಟರ್ ಶಿವಪ್ರಕಾಶ್, ಹೆಡ್ ಕಾನ್ಸ್ಟೇಬಲ್ಗಳಾದ ಶಿವಾನಿ, ವಿಜಯ್ ಕುಮಾರ್ ಹಾಗೂ ಕಾನ್ಸ್ಟೇಬಲ್ ಸಂದೇಶ್ ಅಮಾನತು ಸಸ್ಪೆಂಡ್ ಮಾಡಲಾಗಿದೆ. ಘಟನೆ ಕುರಿತು ಎಸಿಪಿ ವರದಿ ಆಧರಿಸಿ ಪ್ರಕರಣದ ತನಿಖೆ ಕಾರ್ಯವಿಧಾನದಲ್ಲಿ ಲೋಪಗೈದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಏನಿದು ಘಟನೆ?
ಉದ್ಯೋಗ ಕೊಡಿಸುವುದಾಗಿ ಹೇಳಿ ಸಾಫ್ಟ್ವೇರ್ ಇಂಜಿನಿಯರ್ ಬಳಿ ಆನ್ಲೈನ್ ಮೂಲಕ 26 ಲಕ್ಷ ರೂ. ಹಣವನ್ನು ಪಡೆದು ವಂಚನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಚಂದಕ್ ಶ್ರೀಕಾಂತ್ ಎಂಬುವವರು ವೈಟ್ ಫೀಲ್ಡ್ ಸೈಬರ್ ಠಾಣೆಗೆ ದೂರು ಕೊಟ್ಟಿದ್ದರು.
ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಇಎನ್ ಪೊಲೀಸರಿಗೆ ಸಿಕ್ಕ ಸುಳಿವಿನ ಮೇರೆಗೆ ಮಡಿಕೇರಿಯ ಆರೋಪಿ ಐಸಾಕ್ ಬಳಿ ಹೋಗಿ ಪರಿಶೀಲನೆ ನಡೆಸಿದಾಗ ಐಸಾಕ್ ಅಕೌಂಟ್ನಲ್ಲಿ ಎರಡು ಕೋಟಿ ಹಣ ವರ್ಗಾವಣೆ ಆಗಿರುವುದು ಪತ್ತೆಯಾಗಿತ್ತು. ಇದರ ಜಾಡು ಹಿಡಿದು ವೈಟ್ ಫೀಲ್ಡ್ ಸಿಇಎನ್ ಇನ್ಸ್ಪೆಕ್ಟರ್ ಶಿವಪ್ರಕಾಶ್ ಹಾಗೂ ಅವರ ತಂಡ ಕೇರಳದ ಕೊಚ್ಚಿ ನಗರದ ಕಳಮಶ್ಶೇರಿಗೆ ಹೋಗಿದ್ದರು. ಅಲ್ಲಿ ಆರೋಪಿಗಳಾದ ನೌಶಾದ್ ಹಾಗೂ ಅಕೀಲ್ ಎಂಬುವವರಿಂದ ಆನ್ ಲೈನ್ ಫ್ರಾಡ್ ಆಗಿರುವ ಬಗ್ಗೆ ಸಾಕ್ಷಿ ಸಿಕ್ಕಿತ್ತು. ಈ ಹಿನ್ನೆಲೆ ಅರೆಸ್ಟ್ ಮಾಡಲು ಪೊಲೀಸರು ತೆರಳಿದ್ದರು. ಬಿಡುಬೇಕಾದರೆ 25 ಲಕ್ಷಕ್ಕೆ ಮೊದಲು ಬೇಡಿಕೆ ಇಟ್ಟಿದ್ದ ಆರೋಪ ಕೇಳಿಬಂದಿದೆ. ಆ ಬಳಿಕ ಆರೋಪಿಗಳಿಂದ 3,95,000 ಹಣ ಪಡೆದಿದ್ದರು.
ಇದನ್ನು ಓದಿದ್ದೀರಾ? ಲಂಚದ ಹಣದೊಂದಿಗೆ ಸಿಕ್ಕಿ ಬಿದ್ದ ಕರ್ನಾಟಕ ಪೊಲೀಸರ ಬಿಡುಗಡೆಗೆ ಕೇರಳ ಪೊಲೀಸರ ತೀರ್ಮಾನ!
ಆರೋಪಿಗಳಿಂದ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ, ಕೇರಳದ ಕಳಮಶ್ಶೇರಿ ಪೊಲೀಸರಿಗೆ ಆರೋಪಿಗಳ ಕುಟುಂಬಸ್ಥರು ದೂರು ನೀಡಿದ್ದರು. ಈ ದೂರಿನನ್ವಯ ಕೊಚ್ಚಿಯ ಕಳಮಶ್ಶೇರಿ ಪೊಲೀಸರು, ಆರೋಪಿಗಳಿಂದ ಹಣ ವಸೂಲಿ ಮಾಡಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ವೈಟ್ಫೀಲ್ಡ್ನ ಸೆನ್ ಪೊಲೀಸ್ ಠಾಣೆಯ ಎಸ್ ಐ ಹಾಗೂ ಮೂವರು ಕಾನ್ಸ್ಟೆಬಲ್ ಸಹಿತ ನಾಲ್ವರನ್ನು ಬಂಧಿಸಲಾಗಿತ್ತು.
ಕರ್ತವ್ಯದ ವೇಳೆಯಲ್ಲಿರುವಾಗಲೇ ತಪ್ಪು ಮಾಡಿರುವ ಹಿನ್ನೆಲೆಯಲ್ಲಿ ಬಂಧನವಿಲ್ಲದೆ ಬಿಡುಗಡೆ ಮಾಡಬೇಕೆಂಬುದು ಕಾನೂನು ಸಲಹೆ ಎಂಬುದನ್ನು ಗಮನಿಸಿದ ಬಳಿಕ ಅಲ್ಲಿನ ಪೊಲೀಸರು ಬಿಡುಗಡೆಗೊಳಿಸಿದ್ದರು. ಅಲ್ಲದೇ, ತನಿಖಾ ತಂಡ ಕೋರಿದರೆ ಹಾಜರಾಗುವಂತೆ ಸೂಚಿಸಿದ್ದಾರೆ.





