“ಗ್ರಾಮ ಪಂಚಾಯತ್ ನೌಕರರಿಗೆ ಈವರೆಗೆ ನ್ಯಾಯಯುತ ವೇತನವಿಲ್ಲದೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಕೂಡಲೇ ಕನಿಷ್ಠ ವೇತನ ಜಾರಿ, ಪಿಂಚಣಿ ಒಳಗೊಂಡಂತೆ 19 ಬೇಡಿಕೆ ಈಡೇರಿಸಲು ಒತ್ತಾಯಿಸಿ ಜು. 23ರಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು” ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ (ಸಿಐಟಿಯು) ನೌಕರರ ಸಂಘದ ರಾಜ್ಯ ಖಜಾಂಚಿ ಆರ್.ಎಸ್. ಬಸವರಾಜ್ ತಿಳಿಸಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ಮಾತನಾಡಿದ ಅವರು, ಅಂದು ನಡೆಯುವ ಹೋರಾಟದಲ್ಲಿ ದಾವಣಗೆರೆ ಜಿಲ್ಲೆಯ ಒಂದು ಸಾವಿರ ನೌಕರರು ಸೇರಿದಂತೆ ಎಲ್ಲಾ ಜಿಲ್ಲೆಗಳ 30 ಸಾವಿರದಷ್ಟು ನೌಕರರು ಭಾಗವಹಿಸಲಿದ್ದಾರೆ. ಸರ್ಕಾರ ಎಲ್ಲ ಬೇಡಿಕೆ ಈಡೇರಿಸುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
2022 ರಿಂದಲೂ ಗ್ರಾಮ ಪಂಚಾಯತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೀರಗಂಟಿ, ಬಿಲ್ ಕಲೆಕ್ಟರ್, ಕಂಪ್ಯೂಟರ್ ಆಪರೇಟರ್, ಜವಾನ, ಕ್ಲರ್ಕ್ಗಳಿಗೆ ಕನಿಷ್ಠ 31 ಸಾವಿರ ವೇತನ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ಹೋರಾಟ ನಡೆಸಲಾಗುತ್ತಿದೆ. ಯಾವ ಸರ್ಕಾರವೂ ಈವರೆಗೆ ಬೇಡಿಕೆ ಈಡೇರಿಸಿಲ್ಲ. ಕಳೆದ ಜನವರಿಯಲ್ಲಿ ಹೋರಾಟ ನಡೆಸಿದ ಸಂದರ್ಭದಲ್ಲಿ ಸಚಿವ ಪ್ರಿಯಾಂಕ ಖರ್ಗೆಯವರೇ ಭೇಟಿ ನೀಡಿ, ಭರವಸೆ ನೀಡಿದ್ದರೂ ಜಾರಿಗೆ ಬಂದಿಲ್ಲ. ಹಾಗಾಗಿ ಬೇಡಿಕೆ ಈಡೇರಿಸುವ ತನಕ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ನಿವೃತ್ತರಾದ ಗ್ರಾಮ ಪಂಚಾಯತಿ ನೌಕರರಿಗೆ ವರ್ಷಕ್ಕೆ 15 ದಿನಗಳ ವೇತನದ ಆಧರಿಸಿ ಪಿಂಚಣಿ ನೀಡಬೇಕು. ಆದರೆ, ಪಿಂಚಣಿ ನೀಡಲಾಗುತ್ತಿಲ್ಲ.ಕನಿಷ್ಠ ಆರು ಸಾವಿರ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಗೌರವಾಧ್ಯಕ್ಷ ಕೆ.ಎಚ್. ಆನಂದರಾಜ್, ಶ್ರೀನಿವಾಸಾಚಾರಿ, ಬಸವ ರಾಜ್ ಬೇತೂರು, ಚಂದ್ರಪ್ಪ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.





