“ಮನೆಯಲ್ಲಿ ತನ್ನ ಬಗ್ಗೆ ಅನುಮಾನಗಳು ಇದೆ. ಹಾಗಾಗಿ ನನಗೆ ಬದುಕಲು ಮನಸ್ಸಿಲ್ಲ. ನಾನು ಸಾಯಲು ಹೊರಟಿದ್ದೇನೆ” ಎಂದು ಪತ್ರ ಬರೆದಿಟ್ಟು, ಮನೆಯಿಂದ ನಾಪತ್ತೆಯಾಗಿದ್ದ ಮಂಡ್ಯ ಜಿಲ್ಲೆಯ ಶಾಲಾ ವಿದ್ಯಾರ್ಥಿನಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.
ಮಂಡ್ಯ ಜಿಲ್ಲೆಯ ಲಿಖಿತ ಪಿ ಗೌಡ(13) ಎಂಬ ವಿದ್ಯಾರ್ಥಿನಿ ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದಳು.
ವಿದ್ಯಾರ್ಥಿನಿ ಲಿಖಿತಾ ಬೆಂಗಳೂರಿನ ಕೇಂಗೇರಿ ಪ್ರದೇಶದ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದು, ಆಕೆ ಸುರಕ್ಷಿತವಾಗಿದ್ದಾಳೆ. ಮಂಡ್ಯಕ್ಕೆ ಕರೆತರಲಾಗಿದೆ ಎಂದು ಮಂಡ್ಯ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.
ಮಂಡ್ಯ ನಗರದ ಹೊಸಳ್ಳಿಯಿಂದ ಲಿಖಿತಾ ನಾಪತ್ತೆಯಾಗಿರುವ ಬಗ್ಗೆ ಮಂಡ್ಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಷಕರಾದ ಪ್ರಕಾಶ್ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಬಾಲಕಿಯ ಪತ್ತೆಗಾಗಿ ಮಂಡ್ಯ ಪೊಲೀಸರು ಮೂರು ತಂಡಗಳನ್ನು ರಚಿಸಿ ಹುಡುಕಾಟ ನಡೆಸಿದ್ದರು.
ಆಕೆಯ ವಿವರಗಳನ್ನು ಎಲ್ಲ ಪೊಲೀಸ್ ಠಾಣೆಗಳಿಗೆ ಕಳುಹಿಸಲಾಗಿತ್ತು. ಪೊಲೀಸರು ಆಕೆಯ ಪತ್ತೆ ನಡೆಸುತ್ತಿರುವಾಗಲೇ ಕೆಂಗೇರಿ ರೈಲ್ವೆ ಸ್ಟೇಷನ್ ಸಮೀಪ ಆಟೋ ಚಾಲಕರೋರ್ವರಿಗೆ ಪತ್ತೆಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬಾಲಕಿಯ ಫೋಟೊ ಹಾಗೂ ವಿಡಿಯೋ ಗಮನಿಸಿದ್ದ ರಿಕ್ಷಾ ಚಾಲಕ, ಬಾಲಕಿ ಪತ್ತೆಯಾಗಿರುವ ವಿಚಾರವನ್ನು ಕೆಂಗೇರಿ ಪೊಲೀಸರಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಪತ್ರದ ಮೂಲಕ ತನ್ನ ನೋವು ತಿಳಿಸಿದ್ದ ಬಾಲಕಿ
ತಾನು ಸಾಯುವುದಾಗಿ ಪತ್ರ ಬರೆದಿದ್ದ ಬಾಲಕಿ, ಪತ್ರದಲ್ಲಿ ತಾನು ಮನೆಯಲ್ಲಿ ಅನುಭವಿಸುತ್ತಿರುವ ನೋವನ್ನು ಬರೆದಿಟ್ಟಿದ್ದಾಳೆ.
“ನನ್ನ ಈ ನಿರ್ಧಾರಕ್ಕೆ ಅನುಮಾನ ಕಾರಣ. ನನ್ನ ನೋವು ಕೇಳುವವರು ಯಾರೂ ಇಲ್ಲ” ಎಂದು ಪೋಷಕರಿಗೆ ತಿಳಿಸಿದ್ದಾಳೆ. ಬಾಲಕಿ ಬರೆದಿರುವ ಪತ್ರದ ಪ್ರತಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದ್ದು, “ಮಂಡ್ಯದಲ್ಲಿ ಮನೆ ಬಿಟ್ಟು ಹೋಗಿ ದುಡುಕಿನ ನಿರ್ಧಾರ ಮಾಡಿದ್ದ ಈ ಪುಟಾಣಿ ಹೆಣ್ಣು ಮಗಳು ವಾಪಾಸ್ ಸಿಕ್ಕಿ ತಮ್ಮ ತಂದೆ ತಾಯಿಯ ಮಡಿಲು ಸೇರಿದ್ದಾಳೆ. ದಯವಿಟ್ಟು ಪೋಷಕರು ಮಕ್ಕಳ ಮೇಲೆ ಒತ್ತಡ ಹಾಕಬೇಡಿ. ಮಕ್ಕಳ ಬೇಕು- ಬೇಡಗಳಿಗೂ ಪ್ರೀತಿಯಿಂದ ಸ್ಪಂದಿಸಿ. ಬಹಳ ಕಷ್ಟಪಟ್ಟು ಬೆಳೆಸಿರುತ್ತೀರಿ. ಎಳೆಯ ವಯಸ್ಸಿನ ಮಕ್ಕಳು ದುಡುಕಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ, ಪೋಷಕರು ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳಬೇಕು” ಎಂದು ಹಲವಾರು ಮಂದಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.





