ಮಂಗಳೂರು ನಗರದ ಪಡೀಲ್-ಪಂಪ್ವೆಲ್ ರಸ್ತೆ ಕಾಮಗಾರಿ ಕೈಗೆತ್ತಿಕೊಂಡಿರುವ ಸ್ವಾರ್ಟ್ಸಿಟಿ ಅಧಿಕಾರಿಗಳು ಈವರೆಗೂ ರಸ್ತೆ ನಿರ್ಮಿಸದೆ ಬೇಜವಾಬ್ದಾರಿ ವಹಿಸಿದ್ದಾರೆ. ಕಳೆದ ಎರಡು ವರ್ಷಗಳಿಂದಲೂ ಅಧಿಕ ಸಮಯದಿಂದ ಈ ರಸ್ತೆ ನಿರ್ಮಾಣ ಕೆಲಸಗಳಿಂದ ದಿನನಿತ್ಯ ಓಡಾಡುವ ಜನ ಪರಿತಪಿಸುವಂತಾಗಿದೆ ಎಂದು ಸಿಪಿಐಎಂನ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ನಾಗುರಿ ಜಂಕ್ಷನ್ನಲ್ಲಿ ಸಿಪಿಐಎಂ ಬಜಾಲ್ ವಿಭಾಗ ಸಮಿತಿ ನೇತೃತ್ವದಲ್ಲಿ ಪಡೀಲ್-ಪಂಪ್ ವೆಲ್ ರಸ್ತೆ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯುವಿನ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, “ಕಳೆದ ಎರಡು ವರ್ಷಗಳಿಂದ ರಸ್ತೆ ನಿರ್ಮಾಣ ಕೆಲಸಗಳಿಂದ ದಿನನಿತ್ಯ ಓಡಾಡುವ ಜನ ಪರಿತಪಿಸುವಂತಾಗಿದೆ. ನಗರದಾದ್ಯಂತ ಅಭಿವೃದ್ಧಿ ಕಾಮಗಾರಿಗಳ ಅವ್ಯವಸ್ಥೆ ನೋಡಿದರೆ ಇದೆಲ್ಲಾ ಶಾಸಕ ವೇದವ್ಯಾಸರ ಮುಖಕ್ಕೆ ಹಿಡಿದ ಕೈಗನ್ನಡಿಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ರಸ್ತೆ ನಿರ್ಮಾಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸದಿದ್ದಲ್ಲಿ ಸಿಪಿಐಎಂ ಪಕ್ಷದ ಕಾರ್ಯಕರ್ತರು ಮೇಯರ್ ಕಚೇರಿಗೆ ಮುತ್ತಿಗೆ ಹೋರಾಟ ಕೈಗೊಳ್ಳಲಿದ್ದಾರೆ” ಎಂದು ಎಚ್ಚರಿಸಿದರು.
ಸಿಪಿಐಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡುತ್ತಾ, “ಪಡೀಲ್-ಪಂಪ್ವೆಲ್ ರಸ್ತೆ ಕಾಮಗಾರಿ ಆಮೆವೇಗ ಮಾತ್ರವಲ್ಲ, ಕಳಪೆ ಗುಣಮಟ್ಟದಿಂದ ಕೂಡಿದೆ. ಅಳಪೆ ಕೆಂಬಾರ್, ರೈಲ್ವೇ ಸ್ಟೇಷನ್ ಬಳಿ ನಿರ್ಮಿಸುವ ರಸ್ತೆಯನ್ನೊಮ್ಮೆ ಗಮನಿಸಬೇಕು. ಒಂದು ಕಡೆ ಎತ್ತರ ಇನ್ನೊಂದೆಡೆ ತಗ್ಗುಗಳಲ್ಲಿ ಸಂಪೂರ್ಣ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ” ಎಂದು ದೂರಿದರು.

“ಬಿಜೆಪಿ ಆಡಳಿತದಲ್ಲಿ ಯಾವೊಂದು ಕಾಮಗಾರಿಗಳನ್ನು ಸರಿಯಾಗಿ ನಿರ್ಮಿಸುತ್ತಿಲ್ಲ. ಜನರ ಭಾವನಾತ್ಮಕ ಪ್ರಶ್ನೆಯನ್ನಿಟ್ಟು ಇತ್ತೀಚೆಗೆ ನಿರ್ಮಿಸಿದ ರಾಮ ಮಂದಿರವೇ ಸೋರುತ್ತಿವೆ. ದೆಹಲಿ ವಿಮಾನ ನಿಲ್ದಾಣ ಕುಸಿದಿದೆ. ಬಿಹಾರದಲ್ಲಿ 17 ದಿನಕ್ಕೆ 13 ಸೇತುವೆಗಳು ಬಿದ್ದು ಹೋಗಿವೆ. ಇನ್ನು ಮಂಗಳೂರು ಕೂಡ ಇಂತಹ ಘಟನೆಗಳಿಗೆ ಹೊರತಾಗಿಲ್ಲ. ಈ ರೀತಿ ಜನರ ತೆರಿಗೆ ಹಣವನ್ನು ಪೋಲು ಮಾಡಿ, ಅಭಿವೃದ್ಧಿ ಕಾಮಗಾರಿಯ ಬೇಜಬಾವ್ದಾರಿಗೆ ಯಾರ ಕೆನ್ನೆಗೆ ಬಾರಿಸಬೇಕೆಂಬುದನ್ನು ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಉತ್ತರಿಸಬೇಕು” ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯರಾದ ಬಿ.ಕೆ ಇಮ್ತಿಯಾಝ್, ಯೋಗೀಶ್ ಜಪ್ಪಿನಮೊಗರು, ನಗರ ಸಮಿತಿ ಸದಸ್ಯರಾದ ಸಾದಿಕ್ ಕಣ್ಣೂರು, ಡಿವೈಎಫ್ಐ ಮುಖಂಡ ಜಗದೀಶ್ ಬಜಾಲ್, ದಲಿತ ಸಂಘಟನೆಯ ಮುಖಂಡರಾದ ಕಮಲಾಕ್ಷ ಬಜಾಲ್, ಮದರ್ ತೆರೇಸಾ ವಿಚಾರ ವೇದಿಕೆಯ ಡೋಲ್ಪಿ ಡಿಸೋಜ, ಬ್ಯಾಂಕ್ ನೌಕರರ ಸಂಘಟನೆಯ ಮುಖಂಡರಾದ ಬಿ.ಎಮ್ ಮಾಧವ, ಮಹಿಳಾ ಮುಖಂಡರಾದ ಅಸುಂತ ಡಿಸೋಜ, ಪ್ರಮಿಳಾ ದೇವಾಡಿಗ, ಯೋಗಿತಾ ಜಪ್ಪಿನಮೊಗರು ಮುಂತಾದವರು ಉಪಸ್ಥಿತರಿದ್ದರು.
ಪ್ರತಿಭಟನೆಯ ನೇತೃತ್ವವನ್ನು ಸಿಪಿಐಎಂ ಬಜಾಲ್ ವಿಭಾಗ ಸಮಿತಿಯ ಸಂಚಾಲಕರಾದ ದೀಪಕ್ ಬಜಾಲ್, ವರಪ್ರಸಾದ್, ಅಶೋಕ್ ಸಾಲ್ಯಾನ್, ಜಯಪ್ರಕಾಶ್ ಜಲ್ಲಿಗುಡ್ಡೆ, ಧೀರಾಜ್ ಬಜಾಲ್, ಉದಯಚಂದ್ರ ರೈ, ಇಸಾಕ್ ಕಣ್ಣೂರು, ಅಶೋಕ, ಆನಂದ ಎನೆಲ್ಮಾರ್, ಸಿಂಚನ್, ತೇಜಸ್ವಿನಿ ವಹಿಸಿದ್ದರು.






