ವರ್ಷಂಪ್ರತಿ ಆಯೋಜಿಸುವ ವಿಶೇಷ ಪರಿಕಲ್ಪನೆಯ ‘ಸಾಂತ್ವನದ ಸಂಚಾರ’ ಕಾರ್ಯಕ್ರಮವು ಡಿಸೆಂಬರ್ 7ರ ರವಿವಾರ ನಡೆಯಲಿದೆ ಎಂದು ಕೋಸ್ಟಲ್ ಫ್ರೆಂಡ್ಸ್ ಅಧ್ಯಕ್ಷ ಷರೀಫ್ ಅಬ್ಬಾಸ್ ವಳಾಲು ಹೇಳಿದ್ದಾರೆ.
ಮಂಗಳೂರಿನಖಾಸಗಿ ಹೊಟೇಲ್ ಹಾಲಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2023ರಲ್ಲಿ ಮೊದಲ ವರ್ಷದ `ಸಾಂತ್ವನದ ಸಂಚಾರ’ (A Day with Bedridden) ಮತ್ತು 2024ರಲ್ಲಿ ‘ಸಾಂತ್ವನದ ಸಂಚಾರ’ (A day with orphans) ಯಶಸ್ವಿಯಾಗಿ ನಡೆದಿತ್ತು. ಎರಡು ವರ್ಷಗಳ ಹಿಂದೆ ಹಾಸಿಗೆ ಪೀಡಿತರ ಜೊತೆ ಆರಂಭವಾದ ನಮ್ಮ ಸಾಂತ್ವನದ ಸಂಚಾರವು ಕಳೆದ ಬಾರಿ ಅನಾಥ ಮಕ್ಕಳ ಜೊತೆ ಮುಂದುವರಿದು ಈ ಬಾರಿ ವಿಶೇಷ ಚೇತನ ಮಕ್ಕಳ ಜೊತೆ ಸಾಗಲಿದೆ ಅಂದರು.

ಇನ್ನು ಸಾಂತ್ವನದ ಸಂಚಾರ 3.O ( A Day with Special Kids)’ ಹೆಸರಿನ ಕಾರ್ಯಕ್ರಮ ಡಿಸೆಂಬರ್ 7ರ ಭಾನುವಾರ ಮಂಗಳೂರಿನಲ್ಲಿ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯ 100 ವಿಶೇಷ ಚೇತನ ಮಕ್ಕಳನ್ನು ಸಾಂತ್ವನದ ಸಂಚಾರಕ್ಕೆ ಆಯ್ದುಕೊಂಡಿದ್ದೇವೆ. (ಎರಡು ಕೇಂದ್ರಗಳಿಂದ 90 ಮಕ್ಕಳು ಮತ್ತು ಹೊರಗಿನಿಂದ 10 ಮಕ್ಕಳು) ಎಂದು ಮಾಹಿತಿ ನೀಡಿದರು.
ಇಬ್ಬರು ಮಕ್ಕಳಿಗೆ ಒಬ್ಬರಂತೆ 100 ಮಕ್ಕಳಿಗೆ 50 ಮಂದಿ ಕೇರ್ ಟೇಕರ್ಸ್ ನಿಯೋಜಿಸಲಾಗಿದೆ ಮತ್ತು CFM ಸಂಸ್ಥೆಯ 60 ಮಂದಿ ಸದಸ್ಯರು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. 4 ಬಸ್ಗಳಲ್ಲಿ ವಿಶೇಷ ಚೇತನ ಮಕ್ಕಳ ಸಂಚಾರ ನಡೆಯಲಿದ್ದು, ತುರ್ತು ಸೇವೆಗಾಗಿ ಎರಡು ಅಂಬುಲೆನ್ಸ್, ಇಬ್ಬರು ವೈದ್ಯರು ಮತ್ತು ಒಬ್ಬರು ಫಿಸಿಯೋ ಥೆರಪಿಸ್ಟ್ ಇರುತ್ತಾರೆ. ವಿಶೇಷ ಚೇತನ ಮಕ್ಕಳು ಮತ್ತು ಸಂಸ್ಥೆಯ ಸದಸ್ಯರಿಗೆ ಸಮವಸ್ತ್ರ ಮಾದರಿ ಟಿ-ಶರ್ಟ್ ವಿತರಿಸಲಾಗುವುದು ಎಂದರು.
ಸಮಾರೋಪ ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಝಕರಿಯಾ ಜೋಕಟ್ಟೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎ.ಕೆ ಕುಕ್ಕಿಲ, ಝಿಯಾ ವೆಲ್ನೆಸ್, ಮಹಮ್ಮದ್ ಉಚ್ಷಿಲ, ಹಸೈನಾರ್ ತಾಳಿತ್ತನೂಜಿ ಮತ್ತು ಉಬಾರ್ ಡೋನರ್ಸ್ ಇವರನ್ನು ಸನ್ಮಾನಿಸಲಾಗುವುದು.
ಸುದ್ದಿಗೋಷ್ಠಿಯಲ್ಲಿ ಶೌಕತ್ ಅಲಿ, CFM ಪ್ರಧಾನ ಕಾರ್ಯದರ್ಶಿ ಅಫ್ತಾಬ್ ಬಸ್ತಿಕಾರ್, ಕಾರ್ಯಕ್ರಮದ ಪ್ರಧಾನ ಸಂಚಾಲಕ ಮುನ್ನ ಕಮ್ಮರಡಿ, ಕಾರ್ಯಕ್ರಮದ ಸಂಚಾಲಕ ಜುನೈದ್ ಬಂಟ್ವಾಳ, CFM ಕಾರ್ಯದರ್ಶಿ ಇಮ್ತಿಯಾಝ್ ಎಸ್.ಎಂ, CFM ಖಜಾಂಚಿ ಸಮೀರ್ ಲಕ್ಕಿಸ್ಟಾರ್, CFM ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.





