“ನಾನು ನನ್ನ ಮಕ್ಕಳಿಗೆ ಕನ್ನಡ ಮತ್ತು ತಮಿಳು ಭಾಷೆಯನ್ನು ಕಲಿಸುತ್ತಿದ್ದೇನೆ. ಏಕೆಂದರೆ, ಮಾತೃಭಾಷೆಯಲ್ಲಿ ಅರ್ಥವಾಗುವಷ್ಟು ಇನ್ಯಾವುದೇ ಭಾಷೆಯಲ್ಲಿ ಅರ್ಥವಾಗುವುದಿಲ್ಲ. ನನಗೆ ಕನ್ನಡ ಭಾಷೆಯ ಮೇಲಿ ಪ್ರೀತಿ ಇದೆ. ಹೀಗಾಗಿ ನಾನು ಕನ್ನಡ ಕಲಿತಿದ್ದೇನೆ. ಇದೇ ರೀತಿ ಕರ್ನಾಟಕಕ್ಕೆ ಬರುವ ಪರ ಭಾಷಿಗರು ಇಲ್ಲಿಗೆ ಬಂದ ಮೇಲೆ ಕನ್ನಡ ಕಲಿಯುವ ಪ್ರಯತ್ನ ಮಾಡಬೇಕು” ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡಬ್ಲ್ಯೂ ಎಸ್ಎಸ್ಬಿ) ಅಧ್ಯಕ್ಷರಾದ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಹೇಳಿದರು.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡಬ್ಲ್ಯೂ ಎಸ್ಎಸ್ಬಿ) ಹಾಗೂ ಮಂಡಳಿಯ ನೌಕರರ ಸಂಘದ ವತಿಯಿಂದ ಮಲ್ಲೇಶರಂನಲ್ಲಿರುವ ಮಂಡಳಿಯ ರಜತ ಭವನದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯದಲ್ಲಿ ಎಲ್ಲವೂ ಇದೆ; ಅಪಾರ ಶ್ರೀಮಂತ್ರಿಕೆ ರಾಜ್ಯ ಇದಾಗಿದೆ. ಧೈರ್ಯ,ಶಕ್ತಿ, ಶಾಂತಿ ಸಮೃದ್ಧಿಯ ಹಾದಿಯಲ್ಲಿ ಕನ್ನಡ ರಾಜ್ಯ ಬೆಳೆಯುತ್ತಿದೆ. ಕನ್ನಡ ನಾಡಿನಲ್ಲಿ ಹುಟ್ಟುವ ಭಾಗ್ಯ ಸಿಗದಿದ್ದರೂ ಇಲ್ಲಿ ಬೆಳೆಯುವ ಭಾಗ್ಯ ನನಗೆ ಸಿಕ್ಕಿದೆ ಎಂದು ತಿಳಿಸಿದರು.

“ನಾನು ನಿರುದ್ಯೋಗಿಯಾಗಿದ್ದ ಕಾಲದಲ್ಲಿ ನನಗೆ ಅನ್ನ ನೀಡಿ ಆಶ್ರಯ ನೀಡಿದ್ದು ಈ ಕರ್ನಾಟಕ. ಇದರ ಋಣ ತೀರಿಸುವ ಜವಾಬ್ದಾರಿ ನನ್ನ ಮೇಲಿದೆ. ನಾನು ಯುಪಿಎಸ್ಸಿ ಪರೀಕ್ಷೆ ಪಾಸಾಗುವ ಮುನ್ನ ನಿರುದ್ಯೋಗಿಯಾಗಿದ್ದ ವೇಳೆಯಲ್ಲಿ ಬೆಂಗಳೂರಿನ ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನಲ್ಲಿ ಗೌರವ ಅತಿಥಿಯಾಗಿ ದಿನಕ್ಕೆ 300 ರೂ.ಗೆ ಸಂಭಾವನೆ ಪಡೆಯುತ್ತಿದ್ದೆ. ಆನಂತರ ಯಾವ ಋಣವೋ.. ಏನೋ 2010ರ ಅವಧಿಗೆ ಇದೇ ರಾಜ್ಯಕ್ಕೆ ಐಎಎಸ್ ಅಧಿಕಾರಿಯಾಗಿ ಕೆಲಸ ಮಾಡುವ ಭಾಗ್ಯ ನನಗೆ ಸಿಕ್ಕಿತ್ತು. ಹೀಗಾಗಿ ಕರ್ನಾಟಕ ನನಗೆ ಅನ್ನ ನೀಡಿದೆ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆಯಾಗುತ್ತದೆ” ಎಂದರು.
ಬೆಂಗಳೂರು ಜಲಮಂಡಳಿಯನ್ನು ಸಶಕ್ತಗೊಳಿಸುವಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪ್ರಯತ್ನ ಅತ್ಯಂತ ಶ್ಲಾಘನೀಯ. ಅವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಬೆಂಗಳೂರು ಜಲಮಂಡಳಿ ಮಹಾನಗರಕ್ಕೆ ಸಮರ್ಪಕವಾಗಿ ಶುದ್ಧ ಕುಡಿಯುವ ನೀರನ್ನು ಪೂರೈಸುವ ಕೆಲಸ ಮಾಡುತ್ತಿದೆ ಮತ್ತು ಅನೇಕ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ ಎಂದರು.
“ರಾಜ್ಯದಲ್ಲಿ ಸೂಕ್ತ ಕಾಲಕ್ಕೆ ಮಳೆ ಬಂದ ಹಿನ್ನೆಲೆಯಲ್ಲಿ ನಗರಕ್ಕೆ ನೀರಿನ ಬರ ಬಂದಿಲ್ಲ. ನಮ್ಮ ನೌಕರರಿಗೆ ಹೊಸ ವರ್ಷದ ಗಿಫ್ಟ್ ನೀಡುವ ಉದ್ದೇಶದಿಂದ ಜನವರಿ ಮೊದಲ ವೇತನದ ಬಾಕಿಮೊತ್ತವನ್ನು ಬಿಡುಗಡೆ ಮಾಡಲಾಗುವುದು” ಎಂದು ಇದೇ ವೇಳೆ ಡಾ.ವಿ.ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮುಖ್ಯ ಭಾಷಣ ಮಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, “ದೇಶದಲ್ಲಿ 19 ಸಾವಿರಕ್ಕೂ ಹೆಚ್ಚಿನ ಭಾಷೆಗಳಿವೆ. ಪ್ರತಿ ವರ್ಷ ಸಾಕಷ್ಟು ಭಾಷೆಗಳು ಸಾವನಪ್ಪುತ್ತಿವೆ. ಆದರೆ, ಈವರೆಗೆ ಭಾಷಾ ಸಂರಕ್ಷಣೆಗಾಗಿ ಪ್ರತ್ಯೇಕ ನೀತಿ ಜಾರಿಗೆ ತರಲು ಸಾಧ್ಯವಾಗದೇ ಇರುವುದು ಬೇಸರದ ಸಂಗತಿಯಾಗಿದೆ. ನಾವು ಭಾಷೆಯನ್ನು ಉಳಿಸಿಕೊಳ್ಳಬೇಕಾದರೆ, ನಾವು ಪ್ರತಿನಿತ್ಯ ಕನ್ನಡ ಭಾಷೆಯಲ್ಲಿ ಮಾತನಾಡಬೇಕು. ಕನಿಷ್ಠ 6 ತಿಂಗಳು ಮೇಲ್ಪಟ್ಟು ನಮ್ಮ ರಾಜ್ಯದಲ್ಲಿ ವಾಸಿಸುವವರು ಕಡ್ಡಾಯವಾಗಿ ವ್ಯವಹಾರಕ್ಕಾಗಿ ಕನ್ನಡ ಕಲಿಯುವಂತೆ ನಾವು ತಿಳಿಸಬೇಕು. ಬೆಂಗಳೂರಿನಲ್ಲಿ ಕನ್ನಡ ಭಾಷೆ ಮಾತನಾಡುವವರ ಸಂಖ್ಯೆ ಶೇ.30 ಇದೆ. ಇದು ಮೆಟ್ರೋ ಸಿಟಿಯಾಗಿರುವುದಕ್ಕೆ ಈ ಪ್ರಮಾಣದಲ್ಲಿ ಕನ್ನಡ ಬಳಕೆ ಇದೆ. ಇದನ್ನು ಮತ್ತಷ್ಟು ಹೆಚ್ಚುಗೊಳಿಸಲು ಪ್ರತಿಯೊಬ್ಬರು ಕೈ ಜೋಡಿಸಬೇಕು” ಎಂದರು.

ಎಲ್ಲ ಸಂಸ್ಕೃತಿಗಳು ಸೇರಿ ಕನ್ನಡ ಸಂಸ್ಕೃತಿ ಬೆಳೆದಿದೆ. ಇದೆಲ್ಲವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಭಾಷಾ ದುರಾಭಿಮಾನ ಬೇಡ;ಭಾಷಾಭಿಮಾನ ರೂಢಿಸಿಕೊಳ್ಳಬೇಕು. ಮಾತೃಭಾಷೆಯನ್ನು ಕಣ್ಮುಚ್ಚಿಸುವುದು ಬೇಡ;ರಾಜ್ಯಭಾಷೆಯನ್ನು ಉಳಿಸಿಕೊಳ್ಳಬೇಕು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲಿಕ್ಕೆ ಇಂಗ್ಲಿಷ್ ಭಾಷೆಯೂ ಅಗತ್ಯ, ಇದನ್ನು ಅರ್ಥ ಮಾಡಿಕೊಂಡು ಸಮತೋಲಿತ ದೃಷ್ಟಿಯಿಂದ ಕನ್ನಡ ಸಂಸ್ಕೃತಿಯನ್ನು ಬೆಳೆಸೋಣ. ಕನ್ನಡ ಬಳಸುವ ಮತ್ತು ಬೆಳೆಸುವ ಸಂಭ್ರಮದ ಈ ಕಾಯಕ ನಿರಂತರವಾಗಿ ಮುಂದುವರಿಸೋಣ ಎಂದರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ ಅವರು ಸುಮಧುರ ಕನ್ನಡ ಗೀತೆಗಳನ್ನು ಹಾಡುವುದರ ಮೂಲಕ ಎಲ್ಲರನ್ನು ಮನರಂಜಿಸಿದರು.
ಬೆಂಗಳೂರು ಜಲಮಂಡಳಿ ನೌಕರರ ಸಂಘದ ಅಧ್ಯಕ್ಷ ಎ.ಗೋವಿಂದರಾಜು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಧೈಯೋದ್ಧೇಶಗಳು ಹಾಗೂ ಸಲ್ಲಿಸುತ್ತಿರುವ ಸೇವೆಗಳ ಬಗ್ಗೆ ವಿವರಿಸಿದರು.
ಇದೇ ವೇಳೆ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುನಲ್ಲಿ ಹೆಚ್ಚಿನ ಅಂಕಗಳಿಸಿದ ಮಂಡಳಿಯ ನೌಕರರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು. ರಾಜ್ಯೋತ್ಸವ ಪ್ರಯುಕ್ತ ಏರ್ಪಡಿಸಿದ್ದ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ನೌಕರರಿಗೆ ಬಹುಮಾನವನ್ನು ಗಣ್ಯರು ವಿತರಿಸಿದರು.
ಇದನ್ನು ಓದಿದ್ದೀರಾ? ಕೊಲೆ ಪ್ರಕರಣದಲ್ಲಿ ಅಪರಾಧ ಸಾಬೀತಾದರೂ ಮಹಿಳೆಗೆ ಇಲ್ಲ ‘ಶಿಕ್ಷೆ’: ಮಂಗಳೂರು ನ್ಯಾಯಾಲಯದಿಂದ ವಿಶಿಷ್ಟ ತೀರ್ಪು!
ಈ ಸಂದರ್ಭದಲ್ಲಿ ಪ್ರಧಾನ ಮುಖ್ಯ ಅಭಿಯಂತರರಾದ ಬಿ.ಎಸ್.ದಲಾಯತ್, ಆರ್ಥಿಕ ಸಲಹೆಗಾರರು ಹಾಗೂ ಮುಖ್ಯ ಲೆಕ್ಕಾಧಿಕಾರಿಗಳಾದ ಜೆ.ಎಸ್.ಸುಬ್ಬರಾಮಯ್ಯ, ಜಲಮಂಡಳಿ ಕಾನೂನು ಅಧಿಕಾರಿ ಎಂ.ಮಹಾದೇವಯ್ಯ,ಸ್ಯಾನಿಟರಿ ಯೂನಿಯನ್ ವರ್ಕರ್ಸ್ ಅಧ್ಯಕ್ಷ ಸಿದ್ದಪ್ಪ, ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೂಡಲಸಂಗಪ್ಪ ಸೇರಿದಂತೆ ಮುಖ್ಯ ಎಂಜನಿಯರ್ಗಳು,ಅಪರ ಮುಖ್ಯ ಎಂಜನಿಯರ್ ಗಳು, ಅಧಿಕಾರಿಗಳು ಹಾಗೂ ನೌಕರರು ಪಾಲ್ಗೊಂಡಿದ್ದರು.






