ಪುಸ್ತಕ ಪ್ರಕಾಶನ ಸಂಸ್ಥೆ ಶಾಂತಿ ಪ್ರಕಾಶನ ಸಂಸ್ಥೆಯ ವತಿಯಿಂದ ನವೆಂಬರ್ 12ರಂದು ಮಂಗಳೂರಿನ ಪುರಭವನದಲ್ಲಿ ಸಂಜೆ 5 ಗಂಟೆಗೆ ‘ಭಾರತದ ಇತಿಹಾಸ ಮತ್ತು ಮುಸ್ಲಿಮರು’ ವಿಚಾರಗೋಷ್ಠಿ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ದೇಶದ ಖ್ಯಾತ ಇತಿಹಾಸ ತಜ್ಞ ಡಾ. ರಾಮ್ ಪುನಿಯಾನಿಯವರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಯೆನೆಪೊಯ ವಿಶ್ವವಿದ್ಯಾಲಯದ ಸ್ಥಾಪಕ ಉಪಕುಲಪತಿ ಪ್ರೊ. ಸೈಯದ್ ಅಕೀಲ್ ಅಹಮದ್ ಹಾಗೂ ವಾರ್ತಾಭಾರತಿ ದೈನಿಕದ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆಯವರು ಭಾಗವಹಿಸಲಿದ್ದಾರೆ. ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶಾಂತಿ ಪ್ರಕಾಶನದ ವ್ಯವಸ್ಥಾಪಕರಾದ ಮುಹಮ್ಮದ್ ಕುಂಞಿಯವರು ಮಾಧ್ಯಮಗಳ ಮೂಲಕ ವಿನಂತಿಸಿಕೊಂಡಿದ್ದಾರೆ.

ಡಾ. ರಾಮ್ ಪುನಿಯಾನಿಯವರ ಬಗ್ಗೆ
ಡಾ. ರಾಮ್ ಪುನಿಯಾನಿ ಅವರು ಖ್ಯಾತ ಇತಿಹಾಸ ತಜ್ಞ, ಲೇಖಕ, ಅಕಾಡೆಮಿಕ್, ಸಾಮಾಜಿಕ ಚಿಂತಕ ಹಾಗೂ ಮಾನವ ಹಕ್ಕುಗಳ ಹೋರಾಟಗಾರರು. ಮುಂಬೈನ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಯಲ್ಲಿ ಸುಮಾರು ಮೂರು ದಶಕಗಳ ಕಾಲ ಜೈವ ವೈದ್ಯಕೀಯ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ನಂತರ, ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಕೊಂಡಿದ್ದಾರೆ.
ಧರ್ಮದ ಹೆಸರಿನಲ್ಲಿ ನಡೆಯುವ ವಿಭಜನೆ ಮತ್ತು ಅಸಹಿಷ್ಣುತೆ ವಿರುದ್ಧ ಧ್ವನಿಯಾಗಿರುವ ಡಾ. ಪುನಿಯಾನಿ ಅವರು ಧರ್ಮನಿರಪೇಕ್ಷತೆ, ಸಾಮುದಾಯಿಕ ಸಾಮರಸ್ಯ ಮತ್ತು ಮಾನವೀಯ ಮೌಲ್ಯಗಳ ಪರ ಬಲವಾಗಿ ನಿಂತಿದ್ದಾರೆ. ಅವರು ಸೆಂಟರ್ ಫಾರ್ ಸ್ಟಡಿ ಆಫ್ ಸೊಸೈಟಿ ಅಂಡ್ ಸೆಕ್ಯುಲರಿಸಮ್ (CSSS), ಮುಂಬೈ ಸಂಸ್ಥೆಯೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನು ಓದಿದ್ದೀರಾ? ಮಂಗಳೂರು ಹಜ್ ಭವನಕ್ಕೆ 20 ಕೋಟಿ: ವರ್ಷದೊಳಗೆ ತಲೆ ಎತ್ತಲಿದೆ ಕರಾವಳಿಗರ 16 ವರ್ಷದ ‘ಕನಸಿನ ಕಟ್ಟಡ’
ಅವರು ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ ಅನೇಕ ಪ್ರಭಾವಶೀಲ ಕೃತಿಗಳನ್ನು ರಚಿಸಿದ್ದಾರೆ. ಅವರ ಪ್ರಮುಖ ಪುಸ್ತಕಗಳಲ್ಲಿ Communal Politics: Facts Versus Myths, Indian Nationalism versus Hindu Nationalism, ಮತ್ತು Religion, Power and Violence ಪ್ರಮುಖವಾದವು.
ಸಾರ್ವಜನಿಕ ವೇದಿಕೆಗಳು, ಮಾಧ್ಯಮಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಅವರು ನಿರಂತರವಾಗಿ ಭಾಷಣ ಮಾಡುತ್ತಾ ಸಂವಿಧಾನಿಕ ಮೌಲ್ಯಗಳು, ತಾರ್ಕಿಕ ಚಿಂತನೆ ಮತ್ತು ವೈವಿಧ್ಯತೆಯ ಏಕತೆಗಳ ಸಂದೇಶವನ್ನು ಹಂಚಿಕೊಳ್ಳುತ್ತಿದ್ದಾರೆ.





